ನಮ್ಮ ಆಪತ್ಭಾಂಧವರು ಅವರು, ನಿಷ್ಕಲ್ಮಶ ಮನಸ್ಸಿನ ನಿಸ್ವಾರ್ಥದ ನಿಜವಾದ ಅರ್ಥದಲ್ಲಿ ದೇಶಭಕ್ತರವರು. ನಮ್ಮ ಜವಾನರ ಕುರಿತಾಗಿ ವರ್ಣಿಸಬೇಕಾದರೆ ಯುಗಯುಗಗಳೇ ಬೇಕು. ಪ್ರತಿ ದಿವಸ ಅವರಾಡುವುದು ಒಂದೇ ಮಾತು, ” ನೀವು ನಿಶ್ಚಿಂತೆಯಿಂದ ರಾತ್ರಿ ನಿದ್ದೆ ಮಾಡಿ, ಶತ್ರುಗಳಿಂದ ನಿಮ್ಮನ್ನು ಕಾಪಾಡಲು ನಾವಿದ್ದೇವೆ”.
ನಮ್ಮ ಸೈನಿಕರ ಧಮನಿಧಮನಿಯಲ್ಲಿ ರಾಷ್ಟ್ರೀಯತೆಯೇ ತುಂಬಿವೆ. ದೇಶಕ್ಕೋಸ್ಕರ ತಮ್ಮ ಪ್ರಾಣವನ್ನೇ ಅರ್ಪಿಸಲು ಸಿದ್ಧರಿರುವ ಮಹಾನ್ ಚೇತನಗಳು..!! ನಮ್ಮ ದೇಶದ ಸೈನಿಕರ ವೀರಗಾಥೆಗಳನ್ನು ಕೇಳುತ್ತಾ ಹೋದರೆ ರೋಮಾಂಚನವಾಗುತ್ತೆ.
ಮೇಜರ್ ಮನೋಜ್ ಕುಮಾರ್ ಪಾಂಡೆ.. ಕಾರ್ಗಿಲ್ ಯುದ್ಧದಲ್ಲಿ ಹೋರಾಡುತ್ತಿರುವಾಗ ತಮ್ಮ ಶಕ್ತಿಯುತವಾಗಿದ್ದ ಬಲಗೈ ಶತ್ರುಗಳ ಗುಂಡಿನೇಟಿಕೆ ಸಿಲುಕಿ ಛಿದ್ರಛಿದ್ರವಾಗಿತ್ತು. ಆದರೆ ನಮ್ಮ ಸೈನಿಕರಿಗೆ ಕೈಯಲ್ಲಿ ಮಾತ್ರ ಶಕ್ತಿಯಿರುವುದಲ್ಲ, ಅವರ ಆತ್ಮಬಲ, ಇಚ್ಛಾಶಕ್ತಿಯ ಮುಂದೆ ಯಾವ ಕ್ಷುದ್ರಶಕ್ತಿಯೂ ಗೆಲ್ಲರಾರವು. ಬಲಗೈಯನ್ನು ಕಳೆದುಕೊಂಡ ಮನೋಜ್ ಪಕ್ಕದ ಮರೆಯಲ್ಲಿ ಅವಿತು ಸೊಂಟದಲ್ಲಿದ್ದ ಬೆಲ್ಟನ್ನು ತೆಗೆದು ಬಲಗೈಯನ್ನು ಸೊಂಟಕ್ಕೆ ಗಟ್ಟಿಯಾಗಿ ಕಟ್ಟಿದ ನಂತರ, ಯುದ್ಧಕ್ಕೆ ಮರಳಿ ತನ್ನ ಬಳಿ ಇದ್ದ ಗ್ರೆನೇಡ್ ಅನ್ನು ಶತ್ರು ಪಡೆಗೆ ಎಸೆದ.ತಮ್ಮ ಸ್ಥಾನದಿಂದ ಪರಾರಿಯಾಗುತ್ತಿರುವ ಶತ್ರುಗಳನ್ನು ನೋಡುತ್ತಾ ಈತ ಹೇಳ್ತಾನೆ.. “ನ ಛೋಡ್ನೋ!! ಬಿಡಬೇಡಿ ಪಾಪಿಗಳನ್ನು” ಅದು ಆತನ ಅಂತಿಮ ಮಾತಾಗಿತ್ತು. ಈತನ ಕುರಿತಾಗಿ ಇನ್ನೊಂದು ವಿಚಾರ ಹೇಳಬೇಕು. ಯುದ್ಧಕ್ಕೆ ಹೊರಡುವ ಮುಂಚೆ ತನ್ನ ಡೈರಿಯಲ್ಲಿ ಈತ ಏನು ಬರೆದಿದ್ದ ಗೊತ್ತಾ?? ” ಅಕಸ್ಮಾತ್, ನಾನು ನನ್ನ ರಕ್ತದ ಸಾಮರ್ಥ್ಯವನ್ನು ಪ್ರದರ್ಶಿಸುವುದಕ್ಕೆ ಮುಂಚೆ ಸಾವು ನನ್ನ ಬಳಿ ಬಂದರೆ ದೇವರಾಣೆಗೂ ಆ ಸಾವನ್ನೂ ಬಿಡಲ್ಲ, ಕೊಂದುಬಿಡುತ್ತೇನೆ.”” ಕಾರ್ಗಿಲ್ ಯುದ್ಧದ ನಂತರ ಈತನಿಗೆ ಮರಣೋತ್ತರ ಪರಮವೀರಚಕ್ರ ಪ್ರಶಸ್ತಿಯೂ ನೀಡಿ ಗೌರವಿಸಲಾಯಿತು. ದೇಶಕ್ಕಾಗಿ ಆತ ತನ್ನ ಪ್ರಾಣವನ್ನೇ ಅರ್ಪಿಸಿದ. ಆದರೆ ಕೆಲವು ಅಂಧರು ಅವರ ಭಾವಚಿತ್ರವನ್ನೇ ಹರಿದು ಬಿಸಾಡಿದರು. ಆತನ ಜೀವಕ್ಕೆ ನಾವು ಕೊಡುತ್ತಿರುವ ಉಡುಗೊರೆಯಿದು.!!
ಸೈನಿಕರು ಎಷ್ಟು ಬಲಶಾಲಿಗಳಾಗಿದ್ದರೂ ಅಷ್ಟೇ ಮನಸ್ಥೈರ್ಯವನ್ನು ಅವರ ಮನೆಯವರಿಗಿದೆಯೆಂದರೆ ನಂಬಲೇಬೇಕು. ಒಬ್ಬ ಯೋಧ ರಾಜೇಶ್ ತನ್ನ ಹೆಂಡತಿಗೆ ಒಂದು ಪತ್ರವನ್ನು ಬರೆಯುತ್ತಾ, ” ನಾನು ಎತ್ತರಕ್ಕೆ ಹೋಗ್ತಾ ಇದ್ದೇನೆ. ವಾಪಾಸು ಬರುತ್ತೇನಾ ಇಲ್ಲವಾ ಅನ್ನುವುದು ಸಂಶಯ.ಆದರೆ ನನ್ನ ಆಸೆಯನ್ನೊಂದು ಪೂರೈಸು. ನೀನು ಈಗ ತುಂಬು ಗರ್ಭಿಣಿ. ನಿನ್ನ ಹೊಟ್ಟೆಯಲ್ಲಿರುವುದು ಗಂಡಾಗಲೀ ಹೆಣ್ಣಾಗಲೀ ,ಮುಂದೆ ಕಾರ್ಗಿಲ್ ಭೂಮಿಗೆ ಕರೆತಂದು ಇಲ್ಲೇ ನಿಮ್ಮಪ್ಪ ರಾಷ್ಟ್ರಕ್ಕೋಸ್ಕರ ಪ್ರಾಣವನ್ನರ್ಪಿಸಿದ್ದೆಂದು ತೋರಿಸ್ತಿಯಾ??”. ಎಂದು ಬರೆದಾಗ ಆತನ ಹೆಂಡತಿ ಬರೆದ ಪ್ರತ್ಯುತ್ತರ ಮನ:ಕಲುಕುವಂತದ್ದು. ಆಕೆ ಬರೀತಾಳೆ,”ರೀ.. ನೀವು ಮಾತೃಭೂಮಿಯ ರಕ್ಷಣೆಗೆ ತಯಾರಾಗಿ ನಿಂತಿದ್ದೀರಿ. ಈ ಯುದ್ಧದಲ್ಲಿ ನೀವು ಬದುಕಿ ಬಂದರೆ ನನ್ನಂತ ಭಾಗ್ಯಶಾಲಿ ಇನ್ನೊಬ್ಬಳಿಲ್ಲ. ಅದೇ ನೀವು ಸಾವನ್ನಪ್ಪಿದರೆ ಹುತಾತ್ಮನ ಹೆಂಡತಿ ಅನ್ನು ಪಟ್ಟ ರೀ,ನನಗೆ!! ಅದಕ್ಕಿಂತ ಭಾಗ್ಯ ಇನ್ನೇನಿದೆ!! ಆದರೆ ಒಂದು ಮಾತಂತೂ ಕೊಡುತ್ತೇನೆ. ಅಕಸ್ಮಾತ್ ನೀವು ಹುತಾತ್ಮರಾದರೆ ನಮಗೆ ಹುಟ್ಟುವ ಮಗುವನ್ನು ಅಲ್ಲಿಗೆ ಕರೆತಂದು ತೋರಿಸುವುದೇನು, ನಿಮ್ಮ ಹಾಗೆಯೇ ಸೈನಿಕನನ್ನಾಗಿ ತಯಾರು ಮಾಡುತ್ತೇನೆಂದು ಮಾತು ಕೊಡ್ತೇನೆ.” ವ್ಹಾ..!! ತಾಯಿ ನೀನು ಬೇರೆಯಲ್ಲ ಶಿವಾಜಿಯನ್ನು ಬೆಳೆಸಿದ ಜೀಜಾಬಾಯಿ ಬೇರೆಯಲ್ಲ. ಇಂತಹ ಅಗಾಧವಾದ ಮನಸ್ಥೈರ್ಯ ನಿಜವಾಗಿಯೂ ದೇಶವನ್ನು ಪ್ರೀತಿಸುವವರಿಗೆ ಮಾತ್ರ ಬರುವುದಕ್ಕೆ ಸಾಧ್ಯವಿದೆ.
ಚೀನಾ- ಭಾರತ ಯುದ್ದದಲ್ಲಿ ಓರ್ವ ಯೋಧ ಜಸ್ವಂತ್ ಸಿಂಗ್ ರಾವತ್ ಬರೋಬ್ಬರಿ 300 ಶತ್ರುಗಳನ್ನು ಯಮನ ಆಸ್ಥಾನಕ್ಕೆ ಏಕಾಂಗಿಯಾಗಿ ಹೋರಾಡಿ ಕಳಿಸಿದ್ದಾನೆ. ಅದರ ಪ್ರತಿಫಲ ಹೇಗಿತ್ತು ಗೊತ್ತೇ?? ಸ್ವತ: ಶತ್ರು ರಾಷ್ಟ್ರವಾದ ಚೀನಾ ಈತನ ಪರಾಕ್ರಮಕ್ಕೆ ತಲೆಬಾಗಿ ಈತನ ಮೂರ್ತಿಯನ್ನು ನಿರ್ಮಿಸಿ ಭಾರತಕ್ಕೆ ಉಡುಗೊರೆಯನ್ನಾಗಿ ನೀಡುತ್ತಾರೆಂದರೆ ಭಾರತೀಯ ಯೋಧರ ಪರಾಕ್ರಮದ ಕುರಿತಾಗಿ ಚಿಂತಿಸಿ.
ಕರ್ನಾಟಕ ಮೂಲದ ಮೇಜರ್ ಸಂದೀಪ್ ಉನ್ನೀಕೃಷ್ಣನ್, ಮುಂಬೈ ಮೇಲೆ ಭಯೋತ್ಪಾದಕರ ದಾಳಿಯಾದಾಗ ತನ್ನವರನ್ನೆಲ್ಲಾ ಹಿಂದೆ ಕಳಿಸಿ ತಾನು ಶತ್ರುಗಳೋಂದಿಗೆ ನೇರವಾಗಿ ಹೋರಾಡಿ ಅಂತಿಮವಾಗಿ ರಾಷ್ಟ್ರ ರಕ್ಷಣೆಗೆ ತನ್ನ ಪ್ರಾಣವನ್ನೇ ಅರ್ಪಿಸಿದ ಹುತಾತ್ಮ..!! ಯೋಧ ಹನುಮಂತ ಕೊಪ್ಪದ್.. 6 ದಿವಸಗಳ ಮಂಜುಗಡ್ಡೆಗಳಲ್ಲಿ ಸಿಕ್ಕಿಬಿದ್ದರೂ ಅಷ್ಟೂ ದಿವಸಗಳ ಬದುಕುಳಿದಿದ್ದ. ಆತನ ಜೀವ ರಾಷ್ಟ್ರಕ್ಕೋಸ್ಕರ ಸಾಧನೆ ಇನ್ನೂ ಮಾಡಬೇಕೆಂದು ಹಪಹಪಿಸಿತ್ತೋ ಏನೋ!! ದುರ್ದೈವ.. ಭಾರತ ಆತನನ್ನು ಕಳೆದುಕೊಂಡಿತು.
ಇಂತಹ ಅದೆಷ್ಟು ವೀರಕಥನಗಳನ್ನು ಹಂಚಲಿ?? ಪ್ರತಿದಿನ ಪಾಕಿಸ್ತಾನ ಹಾಗೂ ಚೀನಾ ಗಡಿಯಲ್ಲಿ ರಾಷ್ಟ್ರವನ್ನು ರಕ್ಷಿಸುತ್ತಾ, ವಂದೇ ಮಾತರಂ ಘೋಷಣೆಯನ್ನು ಶತ್ರು ದೇಶದ ಗಡಿಭಾಗದಲ್ಲಿ ಮೊಳಗಿಸುತ್ತಾ ತಮ್ಮ ಜೀವವನ್ನು ಅರ್ಪಿಸುತ್ತಲೇ ಇದ್ದಾರೆ.
ನಾವು , ನಮ್ಮ ಸರಕಾರ ಅವರಿಗೆ ಕೊಟ್ಟ ಪ್ರತಿಫಲ?? ಛೇ.. ಕರ್ನಾಟಕದಲ್ಲಿ ಯಾವ ರೀತಿಯಾಗಿ ಯೋಧರನ್ನು ಕೆಲವರು ಗೌರವಿಸಿದ್ದರು ನೋಡಿ.
ಸಿಎಂ ಬರುತ್ತಿದ್ದಾರೆ ಎಂದು ಹುತಾತ್ಮ ವೀರ ಯೋಧರ ಭಾವಚಿತ್ರಗಳನ್ನೇ ತುಮಕೂರಿನಲ್ಲಿ ಕಿತ್ತೆಸೆದಿರುವ ಘಟನೆ ನಡೆದಿದೆ. ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಯುವಕರು ಸ್ಕೈ ವಾಕ್, ಲಿಫ್ಟ್ ಗೋಡೆಗಳ ಮೇಲೆ ಸ್ವತಂತ್ರ ಯೋಧರ ಭಾವಚಿತ್ರಗಳನ್ನು ಸಂದೀಪ್ ಉನ್ನಿ ಕೃಷ್ಣನ್ ಸೇರಿದಂತೆ ವೀರ ಯೋಧರ ಭಾವಚಿತ್ರ ಅಳವಡಿಸಿ ಗೌರವಿಸಿದ್ದರು.
ಪ್ರತಿ ನಿತ್ಯ ಕಾಲೇಜು ವಿದ್ಯಾರ್ಥಿಗಳು ಈ ವೀರ ಯೋಧರ ಭಾವಚಿತ್ರಗಳಿಗೆ ಸೆಲ್ಯೂಟ್ ಹೊಡೆದು ಹೋಗುತ್ತಿದ್ದರು. ಆದರೆ ನಿನ್ನೆ ಮುಖ್ಯಮಂತ್ರಿಗಳು ನಗರಕ್ಕೆ ಆಗಮಿಸುತ್ತಾರೆ ಎಂಬ ಒಂದೇ ಕಾರಣಕ್ಕಾಗಿ ಹೆದ್ದಾರಿ ಇಲಾಖೆಯ ಸಿಬ್ಬಂದಿಗಳು ಭಾವಚಿತ್ರಗಳನ್ನು ಕಿತ್ತೆಸೆದು ಅವಮಾನ ಮಾಡಿದ್ದಾರೆ. ಕೂಡಲೇ ಮುಖ್ಯಮಂತ್ರಿಗಳು ವೀರ ಯೋಧರ ಕುಟುಂಬದವರ ಕ್ಷಮೆ ಕೇಳಬೇಕೆಂದು ಆ ಊರಿನ ಯುವಕರು ಒತ್ತಾಯಿಸಿದ್ದಾರೆ.

ಪ್ರತಿ ನಿತ್ಯ ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಈ ವೀರ ಯೋಧರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸುತ್ತಿದ್ದರು. ಸಿಎಂ ಆಗಮನದ ಹಿನ್ನೆಲೆಯಲ್ಲಿ ಭಾವಚಿತ್ರಗಳನ್ನು ಕಿತ್ತೆಸೆದಿರುವ ಸ್ಕೈ ವಾಕ್ ಸಿಬ್ಬಂದಿಗಳು ನಗರದಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದೆ. ಸಿಎಂ ಬರುವಾಗ ನಗರ ಸ್ವಚ್ಛವಾಗಿ ಕಾಣಲಿ ಎಂದು ವೀರ ಯೋಧರ ಭಾವಚಿತ್ರಗಳನ್ನು ತೆಗೆದಿದ್ದಾರೆ. ಆದರೆ ಸ್ವಾಗತ ಕೋರುವ ಫ್ಲೆಕ್ಸ್ಗಳು, ಬ್ಯಾನರ್ಗಳಿಂದ ಸ್ವಚ್ಛವಾಗಿ ಕಾಣುವುದೇ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ಪ್ರಶ್ನೆ ನನಗೂ , ನಿಮಗೂ ಕಾಡಬೇಕಾದ್ದೆ.ಯಾವ ಯೋಧನ ಕುರಿತಾಗಿ ನಾವು ಇಷ್ಟೆಲ್ಲಾ ತಿಳಿದೆವೋ , ಆ ಯೋಧನಿಗೆ ನಾವು ಸಲ್ಲಿಸಿದ ಕೃತಜ್ಞತೆಯಿದು. ದೇಶಕ್ಕೋಸ್ಕರ ಪ್ರಾಣ ಅರ್ಪಿಸುವವರನ್ನು ದೇಶವನ್ನು ಲೂಟಿ ಮಾಡುತ್ತಿರುವವರು ಗೌರವಿಸಲು ಸಾಧ್ಯವೇ?? ಅನ್ನುವುದೇ ನನಗಿರುವ ಸಂಶಯ. ಯೋಧರಿಗಿಂತ ತಮ್ಮ ಪ್ರತಿಷ್ಠೆಯೇ ಇವರಿಗೆ ಮುಖ್ಯವಾಯಿತೆ?? ತಮ್ಮ ಪ್ರಚಾರದ ಹಪಿಹಪಿಗೋಸ್ಕರ ಯೋಧರಿಗೆ ಅವಮಾನ ಮಾಡಿದ ಇವರನ್ನು ಏನು ಮಾಡೋಣ.??!!
– ವಸಿಷ್ಠ