ಪಾಕಿಸ್ಥಾನ ಕೊನೆಗೂ ಕುಲಭೂಷಣ್ ಜಾಧವ್ ಅವರನ್ನು ಸಂದರ್ಶಿಸಲು ಅವಕಾಶ ನೀಡಿದೆ! ಇಷ್ಟು ವರ್ಷಗಳ ಕಾಲವೂ, ಭಾರತ ರಾಯಭಾರಿಯ ಪ್ರವೇಶಕ್ಕೂ
ಅವಕಾಶ ನೀಡದಿದ್ದ ಪಾಕಿಸ್ಥಾನ ಸರಕಾರ, ವಶದಲ್ಲಿರುವ ಸೇನಾಧಿಕಾರಿ ಕುಲಭೂಷಣ್ ಜಾಧವ್ ಅವರ ಭೇಟಿಗೆ ಕುರಿತು ದೆಹಲಿ ಸರಕಾರದಿಂದ ಕಳಿಸಿದ್ದ
ವಿನಂತಿಗಳನ್ನು ತಿರಸ್ಕರಿಸುತ್ತಲೇ ಬಂದಿತ್ತು. ನೆನ್ನೆ ಶುಕ್ರವಾರ, Indian High Commission ಗೆ ಪಾಕಿಸ್ಥಾನ ಜಾಧವ್ ಅವರ ಪತ್ನಿಗೆ ಸಂದರ್ಶನದ
ಅವಕಾಶ ನೀಡುವುದಾಗಿ ತಿಳಿಸಿದೆ.
ಪಾಕಿಸ್ಥಾನದ ವಿದೇಶಾಂಗ ಸಚಿವ ವಕ್ತಾರರಾದ ಡಾ.ಮಹಮ್ಮದ್ ಫೈಸಲ್, “ಇಸ್ಲಾಮಾಬಾದ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಮೌಖಿಕವಾದ ಸಂದೇಶವನ್ನು ಕಳುಹಿಸಿಕೊಟ್ಟಿದ್ದೇವೆ. ಪಾಕಿಸ್ಥಾನ ಸರಕಾರ, ಕುಲಭೂಷಣ್ ಜಾಧವ್ ಹಾಗೂ ಅವರ ಪತ್ನಿಯ ಸಂದರ್ಶನಕ್ಕೆ ಅವಕಾಶ ಮಾಡಿಕೊಡಲು ನಿರ್ಧರಿಸಿದ್ದು, ಈ ನಿರ್ಣಯ ಮಾನವೀಯತೆಯ ದೃಷ್ಟಿಯಿಂದ ಮಾತ್ರ!” ಎಂದು ಹೇಳಿದ್ದಾರೆ.
ಪಾಕಿಸ್ಥಾನದ ವಿದೇಶಾಂಗ ಸಚಿವರಾದ ಖ್ವಾಜಾ ಮುಹಮ್ಮದ್ ಆಸಿಫ್ ಅಮೇರಿಕಾದ ಜೊತೆ ಮಾತುಕಥೆಗಿಳಿದ ಮೇಲೆ ಈ ನಡೆ ಕಂಡು ಬಂದಿದೆ. ಅಲ್ಲದೇ, ಕುಲಭೂಷಣ್ ಜಾಧವ್ ಅವರ ಪ್ರಕರಣದ ಬಗ್ಗೆ ಹಿಂದಿನ ತಿಂಗಳು ಈ ಎರಡೂ ರಾಷ್ಟ್ರಗಳು ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಜೊತೆ ಚರ್ಚಿಸಿದ್ದರೆನ್ನಲಾಗಿದ್ದು, ದೆಹಲಿಯ ಪಾಕಿಸ್ಥಾನದ ಹೊಸ ರಾಯಭಾರಿಯಾದ ಸೋಹೈಲ್ ಮಹ್ಮೂದ್ ಅವರು ಪ್ರಕರಣವನ್ನು ಗಂಭೀರವಾಗಿ ಗಣನೆಗೆ ತೆಗೆದುಕೊಂಡಿದ್ದರೆನ್ನಲಾಗಿದೆ!
ಪಾಕಿಸ್ಥಾನದ ವರದಿಗಳ ಪ್ರಕಾರ, ಕುಲಭೂಷಣ್ ಜಾಧಬ್ ಅವರನ್ನು ಮಾರ್ಚ್ 3, 2016 ರಂದು ಬಲೂಚಿಸ್ತಾನದ ಮಶ್ಕೆಲ್ ಪ್ರದೇಶದಲ್ಲಿ ಬಂಧಿಸಲಾಗಿತ್ತು. ಆದರೆ, ಭಾರತ ಇದನ್ನು ಅಲ್ಲಗಳೆದಿದ್ದು, ಜಾಧವ್ ಅವರು ನಿವೃತ್ತ ನೌಕಾ ಪಡೆಯ ಅಧಿಕಾರಿ ಹಾಗೂ ಅವರನ್ನು ಪಾಕಿಸ್ಥಾನ ವಶಕ್ಕೆ ಪಡೆದುಕೊಂಡಿದ್ದು ಇರಾನ್ ನಲ್ಲಿ ಎಂದು ಭಾರತ ಸರಕಾರ ಹೇಳಿದೆ.
ಪಾಕಿಸ್ಥಾನದ ಮಿಲಿಟರಿ ಕೋರ್ಟ್, ಕುಲಭೂಷಣ್ ಜಾಧವ್ ಅವರನ್ನು ‘ಗೂಢಚಾರಿ ಹಾಗೂ ಪಾಕಿಸ್ಥಾನದಲ್ಲಿ ನಿಷೇಧಿತ ಮಾಹಿತಿ ಕಲೆಹಾಕುತ್ತಿದ್ದಾರೆ’ ಎಂಬ ಆರೋಪದ ಮೇರೆಗೆ ಬಂಧಿಸಿ ಗಲ್ಲುಶಿಕ್ಷೆಯನ್ನು ಇದೇ ವರ್ಷದ ಏಪ್ರಿಲ್ ನಂದು ಪ್ರಕಟಿಸಿತ್ತು. ತಕ್ಷಣವೇ ಅಂತರಾಷ್ಟ್ರೀಯ ನ್ಯಾಯಾಲಯ ಮಧ್ಯ ಪ್ರವೇಶಿಸಿ ಗಲ್ಲುಶಿಕ್ಷೆಯನ್ನು ತಡೆಹಿಡಿದಿದ್ದಲ್ಲದೇ, ಪಾಕಿಸ್ಥಾನಕ್ಕೆ ಛೀಮಾರಿಯನ್ನು ಹಾಕಿತ್ತು.
ಜಾಧವ್ ಅವರ ಸಂದರ್ಶನಕ್ಕೆ ಅವಕಾಶ ಮಾಡಿಕೊಡಲು ಮೇಲಿಂದ ಮೇಲೆ ಭಾರತ ವಿನಂತಿಸುತ್ತಿದ್ದರೂ ಸಹ ತಿರಸ್ಕರಿಸಿದ್ದ ಪಾಕಿಸ್ಥಾನದ ಸರಕಾರ, ನೆನ್ನೆಯಷ್ಟೇ ಸಂದರ್ಶನಕ್ಕೆ ಅವಕಾಶ ಕೊಡುವುದಾಗಿ ಧೃಢೀಕರಿಸಿದೆ.
ಎಂದೂ ಮೃದುವಾಗದ ಪಾಕಿಸ್ಥಾನ ಈಗ ಜಾಧವ್ ರ ಸಂದರ್ಶನಕ್ಕೆ ಅನುಮತಿ ನೀಡಿ ಮಾನವೀಯತೆಯ ಬಗ್ಗೆ ಮಾತನಾಡಿರುವುದು ಸಹಜವಾಗಿಯೇ ಆಶ್ಚರ್ಯಕ್ಕೆ ಕಾರಣವಾಗಿದೆ. ಅಲ್ಲದೇ, ಈ ಹಿಂದೆಯೂ ಸಹ, ಅಮೇರಿಕಾ ಬಹಿರಂಗವಾಗಿಯೇ ಪಾಕಿಸ್ಥಾನಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಲ್ಲದೇ, ಭಾರತದ ತಂಟೆಗೆ ಬಂದರೆ ಪಾಕಿಸ್ಥಾನ ಇಲ್ಲವಾಗುತ್ತದೆಂಬ ಸಂದೇಶವನ್ನೂ ಕಳುಹಿಸಿದ್ದರಷ್ಟೇ. ಅಷ್ಟಾದ ಮೇಲೆ ಪಾಕಿಸ್ಥಾನ ತೀರಾ ತಗಾದೆ ತೆಗೆಯದಿದ್ದರೂ ಸಹ, ಈಗ ಮೋದಿಯ ಸರಕಾರದಿಂದ ಮೇಲಿಂದ ಮೇಲೆ ಬಿದ್ದ ಒತ್ತಡದಿಂದ ಪಾಕಿಸ್ಥಾನ ಈ ನಿರ್ಧಾರ ತೆಗೆದುಕೊಂಡಿರುವುದು ಮೋದಿ ಸರಕಾರದ ಕಾರ್ಯಶೈಲಿಗೆ ಹಿಡಿದ ಕನ್ನಡಿ.
– ಪೃಥು ಅಗ್ನಿಹೋತ್ರಿ