ಅರುಣಾಚಲ ಪ್ರದೇಶದ ತವಾಂಗ್ನಲ್ಲಿ ಚೀನಾದ ಸೈನಿಕರನ್ನು ಸಮರ್ಥವಾಗಿ ಭಾರತೀಯ ಸೇನೆ ಹಿಮ್ಮೆಟ್ಟಿದ್ದು, ಈ ದೇಶದ ಒಂದು ತುಂಡು ಭೂಮಿಯನ್ನು ಸಹ ನುಂಗಿ ಹಾಕಲು ಚೀನಾಗೆ ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದ್ದಾರೆ.
ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತವಾಂಗ್ನಲ್ಲಿ ಭಾರತೀಯ ಸೇನೆ ಧೈರ್ಯ ಮತ್ತು ಶೌರ್ಯದ ಜೊತೆಗೆ, ಚೀನಾದ ಸೇನೆಗೆ ತಕ್ಷಣದ ಪ್ರತಿಕ್ರಿಯೆ ನೀಡಿದೆ. ಆ ಮೂಲಕ ತಕ್ಕ ಉತ್ತರ ನೀಡಿದ್ದು, ಚೀನಾಗೆ ಭಾರತದ ಒಂದಿಂಚು ಭೂಮಿಯನ್ನು ಸಹ ಕಬಳಿಸಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.
ಹಾಗೆಯೇ, ಈ ಸಂಬಂಧ ಸಂಸತ್ತಿನಲ್ಲಿ ದೇಶದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಉತ್ತರಿಸುವುದಕ್ಕೆ , ವಿಪಕ್ಷಗಳು ಗದ್ದಲ ಎಬ್ಬಿಸುತ್ತಾರೆ. ಒಂದು ವೇಳೆ ವಿಪಕ್ಷಗಳು ಮಾತನಾಡಲು ಅವಕಾಶ ನೀಡಿದಲ್ಲಿ, ನಾನವರಿಗೆ ತಕ್ಕ ಉತ್ತರ ನೀಡುವುದಕ್ಕೆ ಸಿದ್ಧ ಎಂಬುದಾಗಿ ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.
ರಾಜೀವ್ ಗಾಂಧಿ ಫೌಂಡೇಷನ್ 2005 – 2006, 2006 – 2007 ನೇ ವರ್ಷದಲ್ಲಿ ಚೀನಾದ ರಾಯಭಾರಿ ಕಚೇರಿಯಿಂದ 1. 35 ಕೋಟಿ ರೂ. ಅನುದಾನ ಪಡೆದಿತ್ತು. ಇದು ಎಫ್ಸಿಆರ್ಎ ನಿಯಮದ ಉಲ್ಲಂಘನೆ ಆಗಿದ್ದು, ಇದರ ರಿಜಿಸ್ಟ್ರೇಷನ್ ಅನ್ನು ಗೃಹ ಸಚಿವಾಲಯ ರದ್ದುಪಡಿಸಿದೆ ಎಂದು ಶಾ ಅವರು ಹೇಳಿದ್ದಾರೆ.
ಇನ್ನು ಈ ಸಂಬಂಧ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಂಸತ್ ನಲ್ಲಿ ಮಾಹಿತಿ ನೀಡಿದ್ದು, ಭಾರತದ ಭೂಭಾಗವನ್ನು ಕಬಳಿಸಲು ಪ್ರಯತ್ನ ನಡೆಸುವ ಸಂದರ್ಭದಲ್ಲಿ ಭಾರತೀಯ ಸೈನಿಕರು ಚೀನಾದ ಸೈನಿಕರನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿದ್ದಾರೆ. ಇದರಲ್ಲಿ ಭಾರತದ ಯಾವುದೇ ಯೋಧರು ಸಾವನ್ನಪ್ಪಿಲ್ಲ, ಗಂಭೀರವಾಗಿ ಗಾಯಗೊಂಡಿಲ್ಲ.ಭಾರತದ ಸೈನಿಕರು ಸಾಹಸ ಪ್ರದರ್ಶನ ಮಾಡಿದ್ದಾರೆ. ಅವರನ್ನು ಅಭಿನಂದಿಸಬೇಕು. ಭಾರತೀಯ ಸೈನಿಕರು ಚೀನಾದ ಸೈನಿಕರ ಸಂಚನ್ನು ವಿಫಲಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ಭಾರತೀಯ ಸೇನಾ ಕಮಾಂಡರ್ಗಳು ಚೀನಾದೊಂದಿಗೆ ಮಾತುಕತೆ ನಡೆಸಿದ್ದು, ಆ ಪರಿಣಾಮ ಚೀನೀಯರು ವಾಪಾಸ್ಸಾಗಿದ್ದಾರೆ.
ಇದರ ನಡುವೆ, ಈ ಘಟನೆಯನ್ನೇ ಅಸ್ತ್ರವಾಗಿಸಿಕೊಂಡ ವಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಗೂಬೆ ಕೂರಿಸುವ ಕೆಲಸ ಮಾಡುತ್ತಿವೆ ಎಂದು ಸಿಂಗ್ ಹೇಳಿದ್ದಾರೆ.