ರಾಜ್ಯ ವಿಧಾನ ಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ವಿವಿಧ ರಾಜಕೀಯ ಪಕ್ಷಗಳ ಚಟುವಟಿಕೆಗಳೂ ಗರಿಗೆದರಿವೆ. ಈ ಮಧ್ಯೆ ಮುಂದಿನ ವಿಧಾನ ಸಭಾ ಚುನಾವಣೆಯ ಕಲಿಗಳು ಯಾರೆಂಬ ಕುತೂಹಲವೂ ಹುಟ್ಟುಹಾಕಿದೆ. ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳ ಲಿಸ್ಟ್ ಹೈಕಮಾಂಡ್ ಕೈನಲ್ಲಿದ್ದು ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಬಿಎಸ್ವೈ ಗೆ ಗುಡ್ ನ್ಯೂಸ್..!
ಇನ್ನು ಮಾಜಿ ಮುಖ್ಯಮಂತ್ರಿ ಹಾಗೂ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರಿಗೆ ಟಿಕೆಟ್ ಇಲ್ಲ ಎನ್ನುವ ಸುದ್ಧಿ ಈ ಹಿಂದಿನಿಂದಲೂ ಭಾರೀ ಜೋರಾಗಿ ಹರಿದಾಡುತ್ತಿತ್ತು. ವಿಧಾನ ಸಭಾ ಚುನಾವಣೆಯ ಟಿಕೆಟ್ ನೀಡದೆ ನೇರವಾಗಿ ಲೋಕಸಭೆಯಲ್ಲಿ ಸಂಸದನಾಗಿರುವಗಲೇ ಮುಖ್ಯಮಂತ್ರಿ ಸ್ಥಾನವನ್ನು ಕಲ್ಪಿಸಿ ಕೊಡೋದು ಭಾರತೀಯ ಜಮನತಾ ಪಕ್ಷದ ಹೈಕಮಾಂಡ್ ಚಿಂತನೆ ಆಗಿತ್ತು. ಉತ್ತರ ಪ್ರದೇಶದ ರೀತಿಯಲ್ಲೇ ಮುಖ್ಯಮಂತ್ರಿ ಆಯ್ಕೆಯ ಕಸರತ್ತನ್ನು ಕಮಲದ ಹೈಕಮಾಂಡ್ ನಡೆಸಿತ್ತು. ಉತ್ತರ ಪ್ರದೇಶದಲ್ಲಿ ಚುನಾವಣೆ ನಡೆದು ಭಾರತೀಯ ಜನತಾ ಪಕ್ಷಕ್ಕೆ ಬಹುಮತ ಬಂದ ನಂತರ ಸಂಸದನಾಗಿದ್ದ ಯೋಗಿ ಆದಿತ್ಯನಾಥ್ ಅವರನ್ನು ಮುಖ್ಯಮಂತ್ರಿ ಮಾಡಿ ಭಾರತೀಯ ಜನತಾ ಪಕ್ಷ ಘೋಷಿಸಿತ್ತು.
ಅಂತೆಯೇ ಕರ್ನಾಟಕದಲ್ಲೂ ನಡೆಸುವ ಚಿಂತನೆ ನಡೆಸಿತ್ತು ಭಾರತೀಯ ಜನತಾ ಪಕ್ಷದ ಹೈಮಾಂಡ್. ಕರ್ನಾಟಕ ವಿಧಾನ ಸಭಾ ಚುನಾವಣೆಯ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಎಂದು ಅದಾಗಲೇ ಘೋಷಿಸಿದ್ದರಿಂದ ಈ ಬಗ್ಗೆ ಯಾವುದೇ ಗೊಂದಲಗಳು ಇಲ್ಲ. ಆದರೆ ಅವರು ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದು ಬೇಡ ಎಂಬ ನಿರ್ಧಾರ ಬಿಜೆಪಿ ಹೈಕಮಾಂಡ್ದ್ದು ಆಗಿತ್ತು. ಚುನಾವಣೆಗೆ ಸ್ಪರ್ಧಿಸದೆ, ಬಹುಮತ ಬಂದರೆ ನೇರವಾಗಿ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವುದೂ ಹಾಗೂ ನಂತರ ಮತ್ತೆ ಲೋಕಸಭಾ ಚುನಾವಣೆಗೆ ತೆರಳುವುದು ಎಂಬ ನಿರ್ಧಾರವನ್ನು ಭಾರತೀಯ ಜನತಾ ಪಕ್ಷದ ಹೈಕಮಾಂಡ್ ತಳೆದಿತ್ತು.
ಆದರೆ ಇದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಇಷ್ಟವಿರಲಿಲ್ಲ. ಈ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂಬ ಇಂಗಿತವನ್ನು ವ್ಯಕ್ತಪಡಿಸಿದ್ದರು. ಕೆಲ ಬೇಡಿಕೆಗಳ ನಂತರ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಟಿಕೆಟ್ ನೀಡುತ್ತೇವೆ ಎಂದು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಶಿವಮೊಗ್ಗದಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾಗಿದ್ದು ಅಂತಿಮ ನಿರ್ಧಾರವನ್ನು ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.
ಶಿಕಾರಿಪುರದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಅವಕಾಶ ನೀಡುತ್ತೇವೆ ಎಂಬ ಭರವಸೆಯ ನಡುವೆ ಮತ್ತೊಂದು ಷರತ್ತನ್ನು ಶಾ ಇಟ್ಟಿದ್ದಾರೆ. ಅದು ಯಡಿಯೂರಪ್ಪರವರ ಮಗ ರಾಘವೇಂದ್ರ ಅವರ ಟಿಕೆಟ್ ವಿಚಾರ. ಬಿಎಸ್ವೈ ಗೆ ಟಿಕೆಟ್ ಬೇಕಾದರೆ ಅವರ ಮಗ ರಾಘವೇಂದ್ರಗೆ ವಿಧಾನ ಸಭಾ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದು ಶಾ ಹೇಳಿದ್ದಾರೆ. ಇದಕ್ಕೆ ಒಪ್ಪಿಗೆ ಸೂಚಿಸಿದ ಯಡಿಯೂರಪ್ಪನವರು, “ವಿಧಾನ ಸಭಾ ಚುನಾವಣೆಯಲ್ಲಿ ಟಿಕೆಟ್ ವಂಚಿತನಾದರೂ ತೊಂದರೆ ಇಲ್ಲ. ಆದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಬೇಕು” ಎಂಬ ಬೇಡಿಕೆ ಇಟ್ಟಿದ್ದಾರೆ. ಇದಕ್ಕೂ ಅಮಿತ್ ಶಾ ಓಕೆ ಅಂದಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಮಾಜಿ ಮುಖ್ಯಮಂತ್ರಿ ಯಡಯೂರಪ್ಪ, “2 ದಿನಗಳಲ್ಲಿ ನಮ್ಮ ಮೊದಲ ಪಟ್ಟಿ ಸಿದ್ದವಾಗಲಿದೆ. ನಾನು ದೆಹಲಿಗೆ ತೆರಳಿ ಪಟ್ಟಿಯನ್ನು ಹೈಕಮಾಂಡ್ ಜೊತೆಗೆ ಚರ್ಚಿಸಿ ಅಂತಿಮಗೊಳಿಸಲಿದ್ದೇವೆ. 4-5 ದಿನಗಳಲ್ಲಿ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ” ಎಂದು ಹೇಳಿದ್ದಾರೆ.
ಒಟ್ಟಾರೆ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಬಿಎಸ್ ಯಡಿಯೂರಪ್ಪನವರಿಗೆ ಟಿಕೆಟ್ ಖಾತ್ರಿಗೊಳಿಸಿದ್ದು, ಬಿಎಸ್ವೈ ಫುಲ್ ಖುಷ್ ಆಗಿದ್ದಾರೆ. ಮಾತ್ರವಲ್ಲದೆ ಮುಂದಿನ ಚುನಾವಣೆಯಲ್ಲಿ ಮತ್ತಷ್ಟು ಹುಮ್ಮಸ್ಸಿನಿಂದ ಕಾರ್ಯ ನಿರ್ವಹಿಸಬಹುದು ಎಂಬ ಮಹತ್ವಾಕಾಂಕ್ಷೆಯನ್ನೂ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ.
source: public tv
-ಸುನಿಲ್ ಪಣಪಿಲ