ಬ್ರಿಟನ್ನಿನ ಲಂಡನ್ನಲ್ಲಿರುವ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಕಾಂಗ್ರೆಸ್ನ ಯುವ ನಾಯಕ ಎಂದೇ ಕರೆಸಿಕೊಳ್ಳುವ ರಾಹುಲ್ ಗಾಂಧಿ ಅವರು ಭಾರತ, ಭಾರತದ ಪ್ರಜಾಪ್ರಭುತ್ವವನ್ನು ಅವಮಾನ ಮಾಡಿರುವ ಘಟನೆ ಮಾಸುವ ಮೊದಲೇ, ಬ್ರಿಟನ್ನಿನಲ್ಲಿ ಭಾರತೀಯರ ಮನಸ್ಸಿಗೆ ನೋವಾಗುವಂತಹ ಮತ್ತೊಂದು ಘಟನೆ ನಡೆದಿದೆ.
ಬ್ರಿಟನ್ನಿನ ಭಾರತೀಯ ಹೈಕಮಿಷನ್ನಿನಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಖಲಿಸ್ತಾನಿ ಪರ ಪ್ರತ್ಯೇಕವಾದಿಗಳ ಪ್ರತಿಭಟನೆಯ ಸಂದರ್ಭದಲ್ಲಿ ಕೆಳಗಿಳಿಸಿದ್ದು, ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಭಾರತ ಭಾನುವಾರ ರಾತ್ರಿಯೇ ದೆಹಲಿಯ ಹಿರಿಯ ಬ್ರಿಟಿಷ್ ರಾಜತಾಂತ್ರಿಕರನ್ನು ಕರೆಸಿಕೊಂಡು ವಿವರಣೆಯನ್ನು ಸಹ ಕೇಳಿರುವುದಾಗಿ ತಿಳಿದುಬಂದಿದೆ.
ಲಂಡನ್ನಿನಲ್ಲಿರುವ ಭಾರತೀಯ ರಾಜತಾಂತ್ರಿಕ ಸ್ಥಳಗಳು ಮತ್ತು ಸಿಬ್ಬಂದಿ ಭದ್ರತೆ ಬಗ್ಗೆ ಬ್ರಿಟನ್ ಸರ್ಕಾರದ ಉದಾಸೀನತೆ ಸ್ವೀಕಾರಾರ್ಹವಲ್ಲ ಎಂಬುದಾಗಿಯೂ ವಿದೇಶಾಂಗ ಸಚಿವಾಲಯ ತಿಳಿಸಿದೆ. ಪ್ರತಿಭಟನಾಕಾರರಿಗೆ ಹೈಕಮಿಷನ್ ಆವರಣಕ್ಕೆ ಪ್ರವೇಶಿಸಲು ಅವಕಾಶ ಮಾಡಿಕೊಟ್ಟ ಭದ್ರತಾ ಲೋಪದ ಬಗೆಗೂ ವಿವರಣೆ ಕೇಳಿರುವುದಾಗಿ ಸಚಿವಾಲಯ ಮಾಹಿತಿ ನೀಡಿದೆ.
ಒಟ್ಟಿನಲ್ಲಿ ಬ್ರಿಟನ್ನಿನಲ್ಲಿ ಭಾರತೀಯರ ಭಾವನೆಗಳ ಮೇಲೆ ದಾಳಿಯಾಗುತ್ತಿದ್ದು, ಬ್ರಿಟನ್ ಸರ್ಕಾರ ಇದರ ವಿರುದ್ಧ ಕ್ರಮ ಕೈಗೊಳ್ಳುವುದೇ ಎಂದು ಕಾದು ನೋಡಬೇಕಿದೆ.