ಅಚಲವಾದ ಶ್ರದ್ಧೆ ಪರಿಶ್ರಮ ಒಂದಿದ್ದರೆ ವ್ಯಕ್ತಿ ಏನು ಬೇಕಾದರೂ ಸಾಧನೆ ಮಾಡಬಲ್ಲ ಎನ್ನುವುದಕ್ಕೆ ಈಗಾಗಲೇ ನಾವು ದೇಶದ ಗಣ್ಯರ ಉದಾಹರಣೆಗಳನ್ನು ತೆಗೆದುಕೊಳ್ಳುತ್ತೇವೆ!! ಆದರೆ ಉತ್ತರಾಖಂಡದಲ್ಲಿ ಭಾರಿ ಮಳೆಯಾದ ಸಂದರ್ಭದಲ್ಲಿ ಇಡೀ ಉತ್ತರಾಖಂಡವೇ ನೀರಿನಲ್ಲಿ ಮುಳುಗಿ ಹೋಗಿತ್ತು!! ಆ ಸಂದರ್ಭದಲ್ಲಿ ಲಕ್ಷಾಂತರ ಜನರು ಪ್ರವಾಹಕ್ಕೆ ಸಿಲುಕಿ ನಲುಗಿಹೋಗಿದ್ದರು. ಆ ವೇಳೆ ಭಾರತೀಯ ರಕ್ಷಣಾ ಪಡೆಗಳು ಕೈಗೊಂಡ ರಕ್ಷಣಾ ಕಾರ್ಯವನ್ನೇ ಸ್ಫೂರ್ತಿಯನ್ನಾಗಿಸಿರುವ ಭಾರತೀಯ ಹೆಣ್ಣು ಮಗಳೊಬ್ಬಳು ಇಂದು ಭಾರತೀಯ ವಾಯುಪಡೆಗೆ(ಐಎಎಫ್) ಆಯ್ಕೆಯಾಗಿದ್ದಾರೆ ಎಂದರೆ ಅದಕ್ಕಿಂತಲೂ ಹೆಮ್ಮೆಯ ವಿಚಾರ ಇನ್ನೊಂದಿಲ್ಲ.
ಹೌದು…. ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಯಾವ ಉನ್ನತ ಸಾಧನೆಯಾದರೂ ಮಾಡಬಹುದಾಂದಂತಹ ರಾಷ್ಟ್ರ!! ಟೀ ಮಾರುವವರೊಬ್ಬರು ಪ್ರಧಾನಿಯಾಗಬಹುದು. ಯೋಗಿಯೊಬ್ಬರು ಮುಖ್ಯಮಂತ್ರಿಯಾಗಬಹುದು. ಸಮುದ್ರದ ದಂಡೆಯಲ್ಲಿ ನಿಂತು ಪಾನಿಪೂರಿ ಮಾರುವವರು ದೇಶದ ನಂಬರ್ ಒನ್ ಉದ್ಯಮಿಯಾಗಬಹುದು. ಇಂತಹ ಹಲವು ಉದಾಹರಣೆಗಳಿಗೆ ಭಾರತ ಇಂದು ಸಾಕ್ಷಿಯಾಗಿದೆ. ಈಗ ಇಂತಹುದೇ ಸಾಕ್ಷಿಯೊಂದು ಲಭಿಸಿದ್ದು, ಮಧ್ಯಪ್ರದೇಶದಲ್ಲಿ ಟೀ ಮಾರುವ ವ್ಯಕ್ತಿಯೊಬ್ಬರ ಮಗಳು ವಾಯುಸೇನೆಗೆ ಆಯ್ಕೆಯಾಗುವ ಮೂಲಕ ದೇಶದ ಕೀರ್ತಿ ಹೆಚ್ಚಿಸಿದ್ದಾರೆ!!
ಅಚಲವಾದ ಗುರಿಯೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಸ್ಫೂರ್ತಿಯಾಗಿ ನಿಂತಿರುವವರು ಬೇರಾರು ಅಲ್ಲ, ಮಧ್ಯಪ್ರದೇಶದಿಂದ ಭಾರತೀಯ ಏರ್ ಫೋರ್ಸ್ ನ ಹಾರಾಟ ವಿಭಾಗಕ್ಕೆ ನೇಮಕವಾದ ಏಕೈಕ ಸಾಧಕಿ ಅಂಚಲ್ ಗಂಗ್ವಾಲ್ !! ವಾಯುಪಡೆಗೆ ಆಯ್ಕೆಯಾಗಿದಕ್ಕೆ ಪ್ರತಿಕ್ರಿಯಿಸಿರುವ ಅವರು ಉತ್ತರಾಖಂಡದ 2013ರ ಪ್ರವಾಹದಲ್ಲಿ ಭಾರತೀಯ ಸೇನಾಪಡೆಗಳು ನಡೆಸಿದ ರಕ್ಷಣಾ ಕಾರ್ಯಾಚರಣೆ ಅವರಿಗೆ ಸ್ಫೂರ್ತಿ ಎಂದು ಆಂಚಲ್ ಹೇಳಿದ್ದಾರೆ. “ನಾನು 12 ನೇ ತರಗತಿಯಲ್ಲಿದ್ದಾಗ ಉತ್ತರಾಖಂಡದಲ್ಲಿ ಪ್ರವಾಹ ಉಂಟಾದಾಗ ಸಶಸ್ತ್ರ ಪಡೆಗಳು ಪ್ರವಾಹ ನಿರಾಶ್ರಿತರನ್ನು ರಕ್ಷಿಸಿದ್ದು ತಮ್ಮನ್ನು ವಾಯುಸೇನೆಗೆ ಸೇರುವ ಹಾಗೆ ಮಾಡಿತು. ಆದರೆ ಆ ಸಮಯದಲ್ಲಿ ಕುಟುಂಬದ ಪರಿಸ್ಥಿತಿಯು ಅನುಕೂಲಕರವಾಗಿರಲಿಲ್ಲ” ಎಂದು ಆಂಚಲ್ ಹೇಳಿದ್ದಾರೆ!!
ಇತ್ತೀಚೆಗೆ ವಾಯುಸೇನೆ ಹಾರಾಟ ವಿಭಾಗಕ್ಕೆ ನಡೆಸಿದ ಪ್ರವೇಶ ಪರೀಕ್ಷೆಯಲ್ಲಿ ಆಂಚಾಲ್ ಗಂಗ್ವಾಲ್ ಆಯ್ಕೆಯಾಗುವ ಮೂಲಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮಧ್ಯಪ್ರದೇಶದ ಏಕೈಕ ಮಹಿಳೆ ಎನಿಸಿದ್ದಾರೆ. ಏರ್ ಫೋರ್ಸ್ ಕಾಮನ್ ಅಡ್ಮಿಷನ್ ಟೆಸ್ಟ್ ಅನ್ನು ತೆರವುಗೊಳಿಸುವುದು ಸುಲಭದ ಕೆಲಸವಲ್ಲ ಎಂದು ಹೇಳಿರುವ ಆಂಚಲ್, ಈ ಹಿಂದೆ ಐದು ಬಾರಿ ಸಂದರ್ಶನವನ್ನು ಎದುರಿಸಿದ್ದರು. ಆದರೆ ಆರನೆಯ ಬಾರಿ ಮಾತ್ರ ಯಶಸ್ವಿಯಾಗಲು ಸಾಧ್ಯವಾಯಿತು ಎಂದು ತಿಳಿಸಿದ್ದಾರೆ!!
ತಂದೆಯ ಟೀ ಮಾರುವವರಾಗಿದ್ದರೂ, ಹಲವು ತಾಪತ್ರಯಗಳ ಮಧ್ಯೆ ಏರ್ ಫೋರ್ಸ್ ಹಾರಾಟ ವಿಭಾಗದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಮಧ್ಯಪ್ರದೇಶದ ಅಂಚಲ್ ಗಂಗ್ವಾಲ್ ಮಹಿಳೆಯರು ಮತ್ತು ಟೀ ಮಾರುವವರನ್ನು ಹೀಯಾಳಿಸುವವರಿಗೆ ಮಾದರಿಯಾಗಿ ನಿಂತಿರುವುದಂತೂ ಅಕ್ಷರಶಃ ನಿಜ!! ಯಾಕೆಂದರೆ, ಸಂಕಷ್ಟದಲ್ಲಿ ಶಿಕ್ಷಣ ಪೂರೈಸಿರುವ ಅಂಚಲ್ ಗಂಗ್ವಾಲ್, ತಾವು 12ನೇ ತರಗತಿಯಲ್ಲಿದ್ದಾಗ ಉತ್ತರಾಖಂಡದಲ್ಲಿ ಉಂಟಾದ ಪ್ರವಾಹದ ವೇಳೆ ಸೈನಿಕ ಪಡೆಗಳ ರಕ್ಷಣಾ ಕಾರ್ಯವನ್ನು ನೋಡಿ, ಸ್ಫೂರ್ತಿ ಪಡೆದಿರುವುದು ನಿಜಕ್ಕೂ ಕೂಡ ಹೆಮ್ಮೆಯ ಸಂಗತಿ.
ದೇಶಾದ್ಯಂತ ಸುಮಾರು 6 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು, ಇದರಲ್ಲಿ ಆಯ್ಕೆಯಾಗಿದ್ದು ಕೇವಲ 22 ಜನ!! ಅದರಲ್ಲಿ ಮಧ್ಯ ಪ್ರದೇಶದಿಂದ ಆಯ್ಕೆಯಾದ ಏಕೈಕ ಮಹಿಳೆಯಾಗಿದ್ದಾರೆ ಅಂಚಲ್ ಗಂಗ್ವಾಲ್ !! ತಂದೆ ಸುರೇಶ್ ಗಂಗ್ವಾಲ್ ಹಾಗೂ ಕುಟುಂಬ ಮಧ್ಯಪ್ರದೇಶದ ಮಿಮುಜ್ ಜಿಲ್ಲೆಯಲ್ಲಿ ವಾಸಿಸುತ್ತಿದ್ದು, ಜಿಲ್ಲೆಯ ನೀಮಚ್ ಬಸ್ ನಿಲ್ದಾಣದಲ್ಲಿ ಚಹಾ ಅಂಗಡಿಯನ್ನು ನಡೆಸುತ್ತಿರುವ ಅವರು ಇದಕ್ಕೆ ಪ್ರತಿಕ್ರಿಯಿಸುತ್ತಾ “ಈ ಪ್ರದೇಶದಲ್ಲಿ ಎಲ್ಲರಿಗೂ ‘ನಾಮದೇವ್ ಚಹಾದ ಅಂಗಡಿ ಗೊತ್ತು. ಆದ್ದರಿಂದ ಅವರೆಲ್ಲರೂ ಬಂದು ನನ್ನನ್ನು ಅಭಿನಂದಿಸುತ್ತಿದ್ದಾರೆ ನನಗೆ ತುಂಬಾ ಸಂತೋಷವಾಗಿದೆ.” ಎಂದು ತಿಳಿಸಿದರು. ಅಲ್ಲದೆ ತಮ್ಮ ಆರ್ಥಿಕ ಸ್ಥಿತಿಯ ಕಾರಣದಿಂದಾಗಿ ತಮ್ಮ ಮಕ್ಕಳ ಶಿಕ್ಷಣ ಎಂದು ಹಿಂದುಳಿಯಲು ಅವಕಾಶ ನೀಡಲಿಲ್ಲ” ಎಂದು ಅವರು ತಿಳಿಸಿದ್ದಾರೆ!!
ಒಟ್ಟಿನಲ್ಲಿ ಛಲ ಒಂದಿದ್ದರೆ ಏನು ಬೇಕಾದರೂ ಸಾಧಿಸಬಲ್ಲದು ಎನ್ನುವುದಕ್ಕೆ ಉತ್ತಮ ನಿದರ್ಶನವಾಗಿರುವ ಆಂಚಾಲ್ ಗಂಗ್ವಾಲ್, ಎಲ್ಲ ಭಾರತೀಯರಿಗೂ ಸ್ಫೂರ್ತಿಯಾಗಿರುವುದಂತೂ ಅಕ್ಷರಶಃ ನಿಜ!! ಯಾಕೆಂದರೆ ಹಲವು ಬಾರಿ ವಾಯುಸೇನೆ ಪರೀಕ್ಷೆ ಬರೆದು ಅದರಲ್ಲಿ ತೇರ್ಗಡೆ ಹೊಂದದಿದ್ದಾಗಲೂ ತನ್ನ ಛಲ ಬಿಡದೆ, ಇದೀಗ ಉತ್ತೀರ್ಣಳಾಗಿ ಮಧ್ಯ ಪ್ರದೇಶದಿಂದ ವಾಯುಪಡೆಗೆ ಆಯ್ಕೆಯಾದ ಏಕೈಕ ಮಹಿಳೆಯಾಗಿದ್ದಾರೆ ಎಂದರೆ ಇದಕ್ಕಿಂತಲೂ ಹೆಮ್ಮೆಯ ವಿಚಾರ ಮತ್ತೊಂದಿಲ್ಲ ಎಂದೆನಿಸುತ್ತದೆ.
– ಅಲೋಖಾ