ಜಗ ಮೆಚ್ಚಿದ ಮಗ ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆಯಷ್ಟೇ ತಮ್ಮ 73 ನೇ ಜನ್ಮದಿನವನ್ನು ಆಚರಣೆ ಮಾಡಿಕೊಂಡಿದ್ದಾರೆ. ದೇಶಾದ್ಯಂತ ಪ್ರಧಾನಿ ಮೋದಿ ಅವರ ಅಭಿಮಾನಿಗಳು, ಅನುಯಾಯಿಗಳು ಅವರ ಜನ್ಮ ದಿನದ ಹಿನ್ನೆಲೆಯಲ್ಲಿ ಹಲವಾರು ಸಮಾಜಮುಖಿ ಕೆಲಸಗಳನ್ನು ಸಹ ಮಾಡಿದ್ದಾರೆ. ಪ್ರಧಾನಿ ಹುಟ್ಟುಹಬ್ಬದ ಪ್ರಯುಕ್ತ ಅಸ್ಸಾಂ ನಲ್ಲಿ ಒಂದು ಕೋಟಿ ಸಸಿಗಳನ್ನು ನೆಡುವ ಮೂಲಕ, ಅವರಿಗೆ ಅರ್ಥಪೂರ್ಣ ಮತ್ತು ಸಮಾಜಮುಖಿಯಾಗಿ ಶುಭಾಶಯಗಳನ್ನು ಸಲ್ಲಿಸುವ ಮಾದರಿ ಕೆಲಸವನ್ನು ಮಾಡಲಾಗಿದೆ.
ಅಸ್ಸಾಂ ರಾಜಧಾನಿ ದಿಸ್ಪುರದಿಂದ ಬೈರಬಕುಂಡದ ವರೆಗೆ ಗಿಡ ನೆಡುವ ಕಾರ್ಯ ನಡೆಸಲಾಗಿದ್ದು, ನೂರಾರು ಜನರು ಈ ಪರಿಸರ ಕಾಳಜಿಯ ಅಭಿಯಾನದಲ್ಲಿ ಭಾಗವಹಿಸುವ ಮೂಲಕ ದೇಶಕ್ಕೆ ಮಾದರಿಯಾದರು. ಅಸ್ಸಾಂ ನಲ್ಲಿ ಒಂದು ಕೋಟಿ ಸಸಿಗಳನ್ನು ನೆಡುವ ಮೂಲಕ ಗಿನ್ನಿಸ್ ದಾಖಲೆ ಬರೆಯುವ ಪ್ರಯತ್ನ ಮಾಡಲಾಗಿದ್ದು, ಪ್ರಧಾನಿ ಮೋದಿ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಈ ಮಹತ್ಕಾರ್ಯ ನಡೆದಿದೆ. ಆ ಮೂಲಕ ಪ್ರಧಾನಿ ಮೋದಿ ಅವರಿಗೆ ಜನ್ಮ ದಿನಕ್ಕೆ ವಿಶೇಷ ರೀತಿಯಲ್ಲಿ ಶುಭಾಶಯ ಕೋರಲಾಗಿದೆ.
ಈ ಬೃಹತ್ ಮಟ್ಟದ ಆಂದೋಲನವನ್ನು ‘ಅಮೃತ ಬ್ರಿಕ್ಷ್ಯ ಜನ ಆಂದೋಲನ’ ಎಂಬ ಹೆಸರಿನಲ್ಲಿ ನಡೆಸಲಾಗಿದೆ.
ಈ ಸಂಬಂಧ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿ ಸೇವಾ ಶರ್ಮಾ ಮಾತನಾಡಿದ್ದು, ಅಸ್ಸಾಂ ಇತಿಹಾಸವನ್ನು ಸೃಷ್ಟಿ ಮಾಡಲಿದೆ. ಈ ದಿನ ನಾನು ರಾಜ್ಯದಲ್ಲಿ ಒಂದು ಕೋಟಿ ಸಸಿಗಳನ್ನು ನೆಡುವ ಮೂಲಕ ಅಮೃತ ಬ್ರಿಕ್ಷ್ಯ ಜನಾಂದೋಲನದಲ್ಲಿ ಭಾಗಿಯಾಗಿದ್ದೇನೆ. ಈ ಕಾರ್ಯಕ್ರಮವು ಮರದ ಆರ್ಥಿಕತೆ, ಪರಿಸರ ನಿರ್ಮಾಣ, ಹಸಿರು ಗ್ರಹದ ಚಾಂಪಿಯನ್ ಎಂದು ಕರೆಯಲ್ಪಡುವ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವನ್ನು ಆಚರಣೆ ಮಾಡುವ ಸಲುವಾಗಿ ಹಮ್ಮಿಕೊಂಡಿರುವುದಾಗಿ ಹೇಳಿದ್ದಾರೆ.
ರಾಜ್ಯಾದ್ಯಂತ ಸುಮಾರು ನಲವತ್ತು ಲಕ್ಷ ಮಹಿಳಾ ಸ್ವಸಹಾಯ ಸಂಘಗಳ ಮಹಿಳೆಯರು ಭಾಗವಹಿಸಿದ್ದಾರೆ. ಇವರೆಲ್ಲರೂ ತಲೆಗೆ ಎರಡು ಸಸಿಗಳ ಹಾಗೆ ಗಿಡಗಳನ್ನು ನೊಟ್ಟಿದ್ದಾರೆ. ಸುಮಾರು ಎಂಬತ್ತು ಲಕ್ಷ ಸಸಿಗಳನ್ನು ಹೀಗೆ ನೀಡಲಾಗಿದೆ. ಉಳಿದಂತೆ ಇಪ್ಪತ್ತು ಲಕ್ಷ ಗಿಡಗಳನ್ನು ಅಂಗನವಾಡಿ ಕಾರ್ಯಕರ್ತೆಯರು, ಟಿ ಎಸ್ಟೇಟ್ ಕೆಲಸಗಾರರು, ಸರ್ಕಾರಿ ಅಧಿಕಾರಿಗಳು, ಪೊಲೀಸರು, ಅರಣ್ಯ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ನೆಡುವ ಮೂಲಕ ಪ್ರಧಾನಿ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ವಿಶೇಷ ರೀತಿಯಲ್ಲಿ ಸಲ್ಲಿಸಲಾಗಿದೆ ಎಂದು ಮುಖ್ಯಮಂತ್ರಿ ಸಂತಸ ಹಂಚಿಕೊಂಡಿದ್ದಾರೆ.