ಈ ವರೆಗೆ ಈ ದೇಶದ ಆಡಳಿತ ಚುಕ್ಕಾಣಿ ಹಿಡಿದ ಯಾವ ಪ್ರಧಾನಿಯೂ ಮಾಡಿರದಷ್ಟು ಅಭಿವೃದ್ಧಿ ಪರ, ಜನಸ್ನೇಹಿ ಯೋಜನೆಗಳನ್ನು ಜಾರಿಗೆ ತಂದು, ಅದನ್ನು ಸಮರ್ಪಕವಾಗಿ ಜನರಿಗೆ ತಲುಪುವಂತಹ ಕೆಲಸವನ್ನು ಪ್ರಧಾನಿ ಮೋದಿ ಮತ್ತು ಅವರ ಸರ್ಕಾರ ಮಾಡಿದೆ. ಜನರ ಹಿತದೃಷ್ಟಿಯಿಂದ ಜಾರಿಗೆ ತಂದ ಅದೆಷ್ಟೋ ಯೋಜನೆಗಳು ಇಂದು ಭಾರತದ ಜನರಿಗೆ ಹಲವಾರು ರೀತಿಯಲ್ಲಿ ಉಪಯೋಗವಾಗಿವೆ, ಕೆಲ ಯೋಜನೆಗಳಿಂದ ಜನರ ಜೀವನ ಮಟ್ಟದ ಸುಧಾರಣೆಯಾಗಿದೆ ಎನ್ನುವ ಅಂಶವನ್ನು ನಾವು ಒಪ್ಪಿಕೊಳ್ಳಲೇ ಬೇಕು.
ಇದೇ ತಿಂಗಳ 13 ರಂದು ಕೇಂದ್ರ ಸರ್ಕಾರವು ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೆ ತಂದಿತು. ಆಯುಷ್ಮಾನ್ ಭವ ಎಂಬ ಹೆಸರಿನ ಈ ಯೋಜನೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಚಾಲನೆ ನೀಡುವ ಮೂಲಕ ದೇಶಾದ್ಯಂತ ಜಾರಿಗೆ ಬಂದಿತ್ತು. ಈ ಅಭಿಯಾನ ಆರಂಭವಾದ ಕೇವಲ ನಾಲ್ಕೇ ದಿನಗಳಲ್ಲಿ, ಇದಕ್ಕೆ ಭರ್ಜರಿ ಪ್ರತಿಕ್ರಿಯೆ ದೊರೆತಿದೆ.
ಕೇವಲ ನಾಲ್ಕೇ ನಾಲ್ಕು ದಿನಗಳಲ್ಲಿ ಐದು ಲಕ್ಷಕ್ಕೂ ಅಧಿಕ ಆಯುಷ್ಮಾನ್ ಕಾರ್ಡ್ಗಳನ್ನು ಈ ಯೋಜನೆಯಡಿ ತಯಾರಿಸಲಾಗಿದೆ ಎಂದು ಸರ್ಕಾರದ ಮೂಲಗಳು ಮಾಹಿತಿ ನೀಡಿವೆ. ಹಾಗೆಯೇ ಇಪ್ಪತ್ತು ಲಕ್ಷಕ್ಕೂ ಹೆಚ್ಚು ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ ಐಡಿ ಗಳನ್ನು ರಚನೆ ಮಾಡಲಾಗಿದೆ ಎಂದೂ ಸರ್ಕಾರ ತಿಳಿಸಿದೆ.
ಈಯೋಜನೆ ಆರಂಭವಾದ ಕೇವಲ ನಾಲ್ಕೇ ನಾಲ್ಕು ದಿನಗಳಲ್ಲಿ ಸುಮಾರು ಇಪ್ಪತ್ತು ಲಕ್ಷಕ್ಕೂ ಅಧಿಕ ಮಂದಿ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಚಿಕಿತ್ಸೆ ಮತ್ತು ಸ್ಕ್ರೀನಿಂಗ್ ಸೌಲಭ್ಯ ಪಡೆಯಲು ಮುಂದಾಗಿರುವುದಾಗಿಯೂ ಸರ್ಕಾರದ ಮೂಲಗಳು ಮಾಹಿತಿ ಬಿಡುಗಡೆ ಮಾಡಿವೆ. ಈ ಯೋಜನೆಯನ್ನು ಭಾರತದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದ ಹಾಗೆ ಜಾರಿಗೆ ತರಲಾಗಿದೆ.
ಈ ಯೋಜನೆಗೆ ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಉತ್ತಮ ಸಹಕಾರ ದೊರೆತಿದೆ. ಇದು ಪ್ರಾಥಮಿಕ ಮತ್ತು ಮಾದ್ಯಮಿಕ ಹಂತದಲ್ಲಿ ಆರೋಗ್ಯ ಸೇವೆಗಳನ್ನು ಸ್ವಚ್ಛ, ಶುದ್ಧವಾಗಿ ನೀಡುವುದು ಮುಖ್ಯವಾಗಿದೆ ಎಂದೂ ಸರ್ಕಾರ ತಿಳಿಸಿದೆ. ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯದ ದೇಶವ್ಯಾಪಿ ಉಪಕ್ರಮ ಇದಾಗಿದ್ದು, ದೇಶದ ಪ್ರತಿ ಹಳ್ಳಿ, ಪಟ್ಟಣಗಳನ್ನು ತಲುಪುವ ಬಹುಮುಖ್ಯ ಗುರಿಯ ಜೊತೆಗೆ ಆರಂಭವಾಗಿದೆ.