ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡ ದಿನದಿಂದ ಒಂದಲ್ಲಾ ಒಂದು ಕಂಟಕಗಳು ಎದುರಾಗುತ್ತಲೇ ಇದ್ದು, ಇದೀಗ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಬಂಧನದ ಭೀತಿ ಎದುರಾಗಿದೆ. ಒಂದೆಡೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೈತ್ರಿ ಸರಕಾರದ ವಿರುದ್ಧ ಒಳಗಿಂದೊಳಗೆ ಸಮರ ಸಾರುತ್ತಿದ್ದರೆ, ಇತ್ತ ಕಾಂಗ್ರೆಸ್ ಹೈಕಮಾಂಡ್ ಕುಮಾರಸ್ವಾಮಿ ಅವರಿಗೆ ಜೈ ಎಂದಿದೆ.
ಆದ್ದರಿಂದಲೇ ಸಿಎಂ ಕುಮಾರಸ್ವಾಮಿ ಅವರು ಯಾವುದೇ ಆತಂಕ ಇಲ್ಲದೆ ಕುಂತಿದ್ದರು. ಬಜೆಟ್ ಮಂಡನೆ ವಿಚಾರವಾಗಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯನವರ ನಡುವಿನ ಭಿನ್ನಾಭಿಪ್ರಾಯ ತಾರಕಕ್ಕೇರುತ್ತಿದ್ದಂತೆ ಇದೀಗ ಬಜೆಟ್ ಮಂಡನೆ ದಿನವೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಕೋರ್ಟ್ ಸಮನ್ಸ್ ಜಾರಿಗೊಳಿಸಿ , ಕೋರ್ಟ್ಗೆ ಹಾಜರಾಗುವಂತೆ ಆದೇಶ ಹೊರಡಿಸಿದೆ. ಕುಮಾರಸ್ವಾಮಿ ಅವರು ಈಗಾಗಲೇ ಸಿದ್ದರಾಮಯ್ಯನವರ ವಿರುದ್ಧ ತೊಡೆತಟ್ಟಿದ್ದು ಇದೇ ಜುಲೈ ೫ಕ್ಕೆ ಬಜೆಟ್ ಮಂಡನೆ ಮಾಡಿಯೇ ಸಿದ್ಧ ಎಂದಿದ್ದರು. ಆದರೆ ಕೋರ್ಟ್ ನೀಡಿರುವ ಆದೇಶವೂ ಅದೇ ದಿನ ಇರುವುದರಿಂದ ಮುಖ್ಯಮಂತ್ರಿಗಳಿಗೆ ಆತಂಕ ಉಂಟಾಗಿದೆ.!
ಸಮ್ಮಿಶ್ರ ಸರಕಾರ ಮುನ್ನಡೆಸಲು ಹರಸಾಹಸ ಪಡುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ದಿನಕಳೆದಂತೆ ಭಾರೀ ಆಘಾತಗಳು ಎದುರಾಗುತ್ತಿದ್ದು, ಮೈತ್ರಿ ಮಾಡಿಕೊಂಡಿರುವುದೇ ತಪ್ಪು ಎಂಬಂತಾಗಿದೆ ಸದ್ಯದ ಪರಿಸ್ಥಿತಿ. ಯಾಕೆಂದರೆ ಸಮನ್ಸ್ ಜಾರಿಗೊಳಿಸಿರುವ ಕೋರ್ಟ್ ಆದೇಶವನ್ನು ಪಾಲಿಸಲೇಬೇಕಾದ ಅನಿವಾರ್ಯತೆ ಕುಮಾರಸ್ವಾಮಿ ಅವರಿಗಿದ್ದು, ತನಿಖೆಯಲ್ಲಿ ತಪ್ಪು ಸಾಬೀತಾದರೆ ಜೈಲು ಶಿಕ್ಷೆ ಗ್ಯಾರಂಟಿ.!
ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಿಕ್ಕಿಬಿದ್ದ ಕುಮಾರಣ್ಣ..!
ಬೆಂಗಳೂರಿನ ಥಣಿಸಂದ್ರದ ೩.೨೪ ಎಕರೆ ಭೂಮಿಯನ್ನು ಡಿನೋಟಿಫಿಕೇಷನ್ಗೆ ಸಂಬಂಧಿಸಿದ ಹಳೆಯ ಪ್ರಕರಣವೊಂದಕ್ಕೆ ಇದೀಗ ಮತ್ತೆ ಮರುಜೀವ ಬಂದಿದ್ದು, ಕುಮಾರಸ್ವಾಮಿ ಅವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಶ್ರೀರಾಮ್ ಮತ್ತು ರವಿಪ್ರಕಾಶ್ ಎಂಬವರಿಗೆ ಡಿನೋಟಿಫಿಕೇಷನ್ ಮಾಡಿಕೊಟ್ಟಿದ್ದರು. ಈ ಬಗ್ಗೆ ದೂರು ಕೂಡ ದಾಖಲಾಗಿದ್ದರಿಂದ ಇದೀಗ ಕೋರ್ಟ್ ಸಮನ್ಸ್ ಜಾರಿಗೊಳಿಸಿದೆ. ಕುಮಾರಸ್ವಾಮಿ ಅವರು ಡಿನೋಟಿಫಿಕೇಷನ್ ಮಾಡಿಕೊಟ್ಟಿರುವ ಭೂಮಿಯನ್ನು ಬಿಡಿಎ ಸ್ವಾಧೀನಪಡೆದುಕೊಂಡು ಪರಿಹಾರ ನೀಡಲಾಗಿತ್ತು. ಅದೂ ಅಲ್ಲದೇ ನಿವೇಶನಗಳನ್ನು ಕೂಡ ಹಂಚಿಕೆ ಮಾಡಿ ಪರಿಹಾರ ಒದಗಿಸಿತ್ತು. ಆದರೆ ಆಗಿನ ಅರಣ್ಯ ಸಚಿವರಾಗಿದ್ದ ಚೆನ್ನಿಗಪ್ಪ ಅವರು ಕುಮಾರಸ್ವಾಮಿ ಅವರಿಗೆ ಮನವಿ ಮಾಡಿಕೊಂಡಿದ್ದರು ಎಂಬ ಕಾರಣಕ್ಕಾಗಿ ಕುಮಾರಸ್ವಾಮಿ ಅವರು ಡಿನೋಟಿಫಿಕೇಷನ್ ಮಾಡಿಕೊಟ್ಟಿದ್ದರು.
ಆದ್ದರಿಂದ ಡಿನೋಟಿಫಿಕೇಷನ್ ಸಂಬಂಧ ೨೦೧೨ರಲ್ಲಿ ಮಹದೇವಸ್ವಾಮಿ ಎಂಬವರು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಈ ಬಗ್ಗೆ ಕೋರ್ಟ್ ಕೂಡ ತನಿಖೆಗೆ ಆದೇಶಿಸಿದ್ದರಿಂದ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ತಮ್ಮ ಅಧಿಕಾರವನ್ನು ಬಳಸಿಕೊಂಡು ಕೋರ್ಟ್ಗೆ ಪ್ರಕರಣ ರದ್ದು ಮಾಡುವಂತೆ ಕೋರಿ ಅರ್ಜಿ ಕೂಡ ಸಲ್ಲಿಸಿದ್ದರು. ಆದರೆ ಕೋರ್ಟ್ ಯಾವ ಅರ್ಜಿಯನ್ನೂ ಸ್ವೀಕರಿಸದೆ ಲೋಕಾಯುಕ್ತ ಪೊಲೀಸರಿಗೆ ತನಿಖೆಗೆ ಆದೇಶಿಸಿತ್ತು. ಆದ್ದರಿಂದ ತನಿಖೆ ನಡೆಸಿದ ಪೊಲೀಸರು ಆರೋಪ ಪಟ್ಟಿ ಸಲ್ಲಿಕೆ ಮಾಡಿದ್ದರಿಂದ ಇದೀಗ ಕೋರ್ಟ್ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಸಮನ್ಸ್ ಜಾರಿಗೊಳಿಸಿದೆ.!
ಆದ್ದರಿಂದ ಕುಮಾರಸ್ವಾಮಿ ಅವರ ಮೇಲಿರುವ ಈ ಆರೋಪ ಸಾಬೀತಾದರೆ ಜೈಲು ಪಾಲಾಗುವುದು ಖಚಿತ. ಒಂದೆಡೆ ಬಜೆಟ್ ಮಂಡನೆ ಮಾಡಲು ದಿನ ನಿಗಧಿ ಮಾಡಿರುವ ಮೈತ್ರಿ ಸರಕಾರಕ್ಕೆ ಕೋರ್ಟ್ ಆದೇಶ ನೋಡಿ ಗರಬಡಿದಂತಾಗಿದೆ. ಯಾಕೆಂದರೆ ಕುಮಾರಸ್ವಾಮಿ ಅವರು ಜೈಲು ಪಾಲಾದರೆ ಮೈತ್ರಿ ಸರಕಾರ ಕಡಿದು ಬೀಳುವುದು ಗ್ಯಾರಂಟಿ. ಆದ್ದರಿಂದ ಕುಮಾರಸ್ವಾಮಿ ಅವರಿಗೆ ಜುಲೈ ೫ರಂದು ಭಾರೀ ನಿರ್ಣಾಯಕ ದಿನವಾಗಿದ್ದು ಎಲ್ಲರ ಚಿತ್ತ ಕೋರ್ಟ್ ಕಡೆಗೆ ನೆಟ್ಟಿರುವುದರಲ್ಲಿ ಸಂಶಯವಿಲ್ಲ..!
source: https://m.dailyhunt.in/
–ಅರ್ಜುನ್