ಗಾಲಿ ಜನಾರ್ಧನ ರೆಡ್ಡಿ. ಒಂದು ಕಾಲದಲ್ಲಿ ಈ ಹೆಸರೆಂದರೆ ಇಡೀ ರಾಜ್ಯವೇ ಒಮ್ಮೆ ಹಿಂತಿರುಗಿ ನೋಡುತ್ತಿತ್ತು. ರಾಜ್ಯದ ರಾಜಕಾರಣಿಗಳು ಇವರನ್ನು ನೋಡಿ ಬೆಚ್ಚಿ ಬೀಳುತ್ತಿದ್ದರು. ಗಣಿಧನಿಯಾಗಿದ್ದ ಜನಾರ್ಧನ ರೆಡ್ಡಿ ಅಗರ್ಭ ಶ್ರೀಮಂತರು. ಹಿಂದಿನ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಅದರಲ್ಲಿ ಜನಾರ್ಧನ ರೆಡ್ಡಿಯವರ ಕೆಲಸ ಭಾರೀ ಪ್ರಾಶಸ್ತ್ಯವನ್ನು ಪಡೆದಿಯತ್ತು. ಭಾರತೀಯ ಜನತಾ ಪಕ್ಷದ ಸರ್ಕಾರದಲ್ಲಿ ಬಹುಪಾಲು ಕ್ರೆಡಿಟ್ ಸಲ್ಲಬೇಕಾಗಿದ್ದುದು ಅದು ಜನಾರ್ಧನ ರೆಡ್ಡಿಗೆ.
ಆದರೆ ಅಂದು ಕೇಂದ್ರದಲ್ಲಿ ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ, ಸಿಬಿಐಯನ್ನು ತನ್ನ ಕಪಿಮುಷ್ಟಿಯಲ್ಲಿ ಬಳಸಿಕೊಂಡು ಜನಾರ್ಧನ ರೆಡ್ಡಿಯವರನ್ನು ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಬಂಧಿಸಿ ಜೈಲಿನಲ್ಲಿಡಲಾಯಿತು. ಈ ಮೂಲಕ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಜನಾರ್ಧನ ರೆಡ್ಡಿ ತನ್ನ ಅಧಿಕಾರವನ್ನು ಚಲಾಯಿಸಬಾರದು ಎಂದು ಹಾಗೂ ಈ ಮೂಲಕ ಭಾರತೀಯ ಜನತಾ ಪಕ್ಷ ಸೋಲಬೇಕು ಎಂದು ಪಣ ತೊಟ್ಟಿದ್ದರು. ಅಂತೆಯೇ ಚುನಾವಣೆ ಮುಗಿಯೋವರೆಗೂ ಜನಾರ್ಧನ ರೆಡ್ಡಿಯವರನ್ನು ಜೈಲು ಹಕ್ಕಿಯನ್ನಾಗಿ ಮಾಡಲಾಯಿತು. ಭಾರತೀಯ ಜನತಾ ಪಕ್ಷ ಸೋಲಬೇಕಾಯಿತು.
ಗಣಿಗಾರಿಕೆ ಕೇಸ್ನಲ್ಲಿ ಅರೆಸ್ಟ್ ಆಗಿದ್ದರು ರೆಡ್ಡಿಗಾರು!
ಅಕ್ರಮ ಗಣಿಗಾರಿಕೆ ಕೇಸ್ನ್ನು ಕಾಂಗ್ರೆಸ್ ಪ್ರೇರಿತ ಸಿಬಿಐ ಅಧಿಕಾರಿಗಳು ದಾಖಲಿಸಿದ್ದು, ಜನಾರ್ಧನ ರೆಡ್ಡಿ ವರ್ಷಕ್ಕೂ ಅಧಿಕ ಭಾರಿ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗಿ ಬಂದಿತ್ತು. 2013ರ ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಸೋಲಬೇಕು, ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎನ್ನುವ ಧೃಷ್ಟಿಯಲ್ಲಿ ಕುತಂತ್ರ ನೀತಿ ಅನುಸರಿಸಿ, ಸಿಬಿಐಯನ್ನು ಛೂ ಬಿಟ್ಟು ಜನಾರ್ಧನ ರೆಡ್ಡಿಯವರನ್ನು ಜೈಲಿನಲ್ಲಿಟ್ಟು ತಮ್ಮ ಬೇಳೆಯನ್ನು ಬೇಯಿಸಿಕೊಂಡಿದ್ದರು.
ಸೋಲುಂಡಿತ್ತು ಕಮಲ..!
ಹೌದು. 2013ರ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಹೀನಾಯವಾಗಿ ಸೋಲುಂಡಿತ್ತು. ಇದಕ್ಕೆ ಕಾರಣ ಆರಂಭದಲ್ಲಿ ಇದ್ದಂತಹಾ ಭಾರತೀಯ ಜನತಾ ಪಕ್ಷ ಛಿದ್ರವಾಗಿ ಹೋಗಿದ್ದು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ತೆಂಗಿನ ಕಾಯಿ ಹಿಡಿದುಕೊಂಡು ಕೆಜೆಪಿ ಎಂಬ ಪಕ್ಷವನ್ನು ಸ್ಥಾಪಿಸಿಸುತ್ತಾರೆ, ಹಾಗೂ ಮಾಜಿ ಸಚಿವ ಶ್ರೀ ರಾಮುಲು ಬಿಎಸ್ಆರ್ ಎಂಬ ಪಕ್ಷವನ್ನು ಸ್ಥಾಪಿಸುತ್ತಾರೆ. ಹೇಳಿ ಕೇಳಿ ಶ್ರೀ ರಾಮುಲು ಅಂದರೆ ಜನಾರ್ಧನ ರೆಡ್ಡಿಯವರ ಪ್ರಾಣ ಸ್ನೇಹಿತ. ಅವರಿಬ್ಬರು ತಮ್ಮ ಕುಟುಂಬವನ್ನಾದರೂ ಬಿಟ್ಟಾರು ಆದರೆ ತಮ್ಮ ಸ್ನೇಹವನ್ನು ಮಾತ್ರ ಬಿಡೋದಿಲ್ಲ. ಅಂತಹಾ ಸ್ನೇಹ ಅವರದ್ದು. ಆದ್ದರಿಂದ ಜನಾರ್ಧನ ರೆಡ್ಡಿ ಜೈಲಿನಲ್ಲಿದ್ದರೂ ಕೂಡಾ ಶ್ರೀ ರಾಮುಲು ಅವರ ಪಕ್ಷಕ್ಕೆ ರೆಡ್ಡಿ ಜೀವ ತುಂಬಿದ್ದರು. ಇದು ಭಾರತೀಯ ಜನತಾ ಪಕ್ಷಕ್ಕೆ ಭಾರೀ ಆಘಾತವನ್ನೇ ತಂದು ಬಿಟ್ಟಿತ್ತು. ಛಿದ್ರವಿದ್ದ ಭಾರತೀಯ ಜನತಾ ಪಕ್ಷ ಹೀನಾಯವಾಗಿ ಸೋಲುಂಡಿತ್ತು.
ಅಂದು ಜನಾರ್ಧನ ರೆಡ್ಡಿಯ ಮಹತ್ವ ಅಕ್ಷರಶಃ ಸಾಭೀತಾಗಿತ್ತು. ನಂತರ ನಡೆದಿದ್ದೇ ಮಹಾಪರ್ವ. 2014ರ ಲೋಕಸಭಾ ಚುನಾವಣೆ. ಮತ್ತೆ ಒಂದಾಗಿತ್ತು ಭಾರತೀಯ ಜನತಾ ಪಕ್ಷ. ಬಿಎಸ್ ಯಡಿಯೂರಪ್ಪನವರು ಮೋದಿಯನ್ನು ಪ್ರಧಾನಿ ಮಾಡಬೇಕೆಂದು ಮತ್ತೆ ತನ್ನ ತವರಿಗೆ ವಾಪಾಸಾದರು. ಅತ್ತ ಬಳ್ಳಾರಿ ಬ್ರದರ್ಸ್ ಶ್ರೀರಾಮುಲು ಹಾಗೂ ಜನಾರ್ಧನ ರೆಡ್ಡಿ ಮತ್ತೆ ಕಮಲದತ್ತ ಮುಖ ಮಾಡಿದ್ದರು. ಯಡಿಯೂರಪ್ಪನವರಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಸಿಕ್ಕರೆ ಶ್ರೀರಾಮುಲು ಅವರಿಗೆ ಬಳ್ಳಾರಿ ಲೋಕ ಸಭಾ ಕ್ಷೇತ್ರದಿಂದ ಟಿಕೆಟ್ ಸಿಕ್ಕಿತ್ತು. ಪಕ್ಷ ಮತ್ತೆ ಒಗ್ಗಟ್ಟಾಗಿ ಕರ್ನಾಟಕವನ್ನೇ ಗೆದ್ದು ತೋರಿಸಿತ್ತು. 19 ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಮೂಲಕ ಭಾರತೀಯ ಜನತಾ ಪಕ್ಷ ಅಂದೇ ತನ್ನ ಸಾಮಾಥ್ರ್ಯವನ್ನು ಸಾರಿತ್ತು. ಎಲ್ಲರೂ ಒಂದಾಗಿದ್ದರೆ ಪಕ್ಷವನ್ನು ಸೋಲಿಸಲು ಸಾಧ್ಯವೇ ಇಲ್ಲ ಎಂಬ ಸಂದೇಶವನ್ನು ವಿರೋಧಿಗಳಿಗೆ ರವಾನಿಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರಕ್ಕೆ ಅಂದೇ ಭಯ ಅನ್ನೋದು ಆವರಿಸಿಬಿಟ್ಟಿತ್ತು.
ಭರ್ಜರಿ ರೀ ಎಂಟ್ರಿಗೆ ರೆಡ್ಡಿಗಾರು ಸಿದ್ದ..!
ಕೆಲವು ಆರೋಪಗಳು ಇದ್ದಿದ್ದರಿಂದ ಜನಾರ್ಧನ ರೆಡ್ಡಿಯವರನ್ನು ಈವರೆಗೂ ಭಾರತೀಯ ಜನತಾ ಪಕ್ಷಕ್ಕೆ ಸೇರಿಸಿರಲಿಲ್ಲ. ಆದರೆ ಅವರದ್ದು ಎಂದಿಗಿದ್ದರೂ ಕಾಂಗ್ರೆಸ್ ಮುಕ್ತ ಕರ್ನಾಟಕದ್ದೇ ಕನಸು. ಇದೀಗ ಮತ್ತೆ ಬಿಜೆಪಿಗೆ ಭರ್ಜರಿ ಎಂಟ್ರಿ ನೀಡಲು ಸಿದ್ಧರಾಗಿದ್ದಾರೆ. ಮುಂದಿನ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ತನ್ನನ್ನು ಮೋಸದಿಂದ ಜೈಲಿನಲ್ಲಿ ಕೂರಿಸಿದ್ದ ಕಾಂಗ್ರೆಸ್ ಪಕ್ಷಕ್ಕೆ ಮಣ್ಣು ಮುಕ್ಕಿಸಿ ಮತ್ತೆ ಅಧಿಕಾರಕ್ಕೆ ಬಾರದಂತೆ ತಡೆಯಲು ಶಸ್ತ್ರ ಸಜ್ಜಿತರಾಗಿ ನಿಂತಿದ್ದಾರೆ. ಈ ಮೂಲಕ ಮತ್ತೆ ಕರ್ನಾಟಕದಲ್ಲಿ ಬಳ್ಳಾರಿ ಬ್ರದರ್ಸ್ ಅಖಾಡಕ್ಕೆ ಇಳಿದಿದ್ದಾರೆ. ಭ್ರಷ್ಟಾಚಾರದ ಆರೋಪವನ್ನು ಹೊರಿಸಿದ್ದ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠವನ್ನೇ ಕಲಿಸಿದ್ದ ರೆಡ್ಡಿ ಕೋರ್ಟ್ನಲ್ಲೇ ಆರೋಪ ಮುಕ್ತರಾಗಿ ಬಂದಿದ್ದಾರೆ.
ವರಿಷ್ಟರಿಂದಲೇ ಸೂಚನೆ..!
ಹಿಂದಿನಿಂದಲೂ ಶ್ರೀ ರಾಮುಲು ಅವರನ್ನು ಮತ್ತೆ ಪಕ್ಷಕ್ಕೆ ಸೇರ್ಪಡೆಗೊಳಿಸಬೇಕು ಎಂದು ಬಳ್ಳಾರಿ ಸಂಸದ ಶ್ರೀರಾಮುಲು ಹೈಕಮಾಂಡ್ ಮುಂದೆ ಹೇಳುತ್ತಾ ಇದ್ದರು. ಆದರೆ ಸಮಯ ನೋಡಿ ಬಾಣ ಬಿಡುವ ತಂತ್ರಗಾರಿಕೆ ಬಿಜೆಪಿ ಹೈಕಮಾಂಡ್ರದ್ದು. ಅದು ಇದೀಗ ಸನ್ನಿಹಿತವಾಗಿದೆ. ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿಯವರನ್ನು ಮರಳಿ ಪಕ್ಷಕ್ಕೆ ಕರೆ ತರಲು ವೇದಿಕೆ ಸಿದ್ದವಾಗಿದೆ. ಸ್ವತಃ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೇ ಈ ಬಗ್ಗೆ ಜನಾರ್ಧನ ರೆಡ್ಡಿಗೆ ಸೂಚನೆ ನೀಡಿದ್ದಾರೆ. ಎಲ್ಲಾ ಆರೋಪವೂ ಮುಕ್ತರಾಗಿ ಶುರ್ದಧಹಸ್ತರಾಗಿರುವ ಜನಾರ್ಧನ ರೆಡ್ಡಿಯವರನ್ನು ಮತ್ತೆ ಪಕ್ಷದ ತೆಕ್ಕೆಗೆ ಸೇರಿಸಲು ತಯಾರಾಗಿ ನಿಂತಿದ್ದಾರೆ.
ಮಾಜಿ ಸಚಿವ ಜನಾರ್ಧನ ರೆಡ್ಡಿಯವರಿಗೆ ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಟಿಕೆಟ್ ನೀಡದಿದ್ದರೂ ಮಹತ್ವದ ಜವಬ್ಧಾರಿಯನ್ನು ನೀಡಲು ಪಕ್ಷದ ಹೈಕಮಾಂಡ್ ಸಿದ್ದವಾಗಿದೆ. ಈ ಬಗ್ಗೆ ಸೂಚನೆ ನೀಡಿದ ಶಾ “ಈ ಬಾರಿಯ ಚುನಾವಣೆಯ ಸಂಪೂರ್ಣ ಜವಬ್ಧಾರಿ ನಿಮ್ಮ ಮೇಲಿದೆ. ರಾಜ್ಯದಲ್ಲಿ ಮತ್ತೆ ಭಾರತೀಯ ಜನತಾ ಪಕ್ಷವನ್ನು ಅಧಿಕಾರಕ್ಕೆ ತರಲು ಕೆಲಸ ಮಾಡಿ. ಇದು ನಿಮಗೆ ನೀಡುತ್ತಿರುವ ಮಹತ್ವದ ಜವಬ್ಧಾರಿ. ಇದನ್ನು ನೀವು ಮಾಡಿ ತೋರಿಸುತ್ತೀರಿ ಎಂಬ ನಂಬಿಕೆ ಇದೆ” ಎಂದು ಹೇಳಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಮುಕ್ತ ಕರ್ನಾಟಕವೇ ನನ್ನ ಗುರಿ-ರೆಡ್ಡಿ…
“ಕಾಂಗ್ರೆಸ್ ಮುಕ್ತ ಕರ್ನಾಟಕವೇ ನನ್ನ ಗುರಿ. ದೇಶದಲ್ಲಿ ಆಡಳಿತ ಬದಲಾಗುತ್ತಿರುವಾಗ ಕರ್ನಾಟಕ ಮಾತ್ರವೇ ಯಾಕೆ ಹೀಗಿರಬೇಕು. ಕರ್ನಾಟಕವನ್ನೂ ಬದಲಾವಣೆ ಮಾಡಬೇಕಾಗಿದೆ. ಇಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ದುಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೆಸೆಯಬೇಕಾಗಿದೆ. ಇದಕ್ಕಾಗಿ ನಾವು ನಿರಂತರ ಕೆಲಸ ಮಾಡಬೇಕಾಗಿದೆ. ಎಲ್ಲಾರೂ ಸೇರಿ ಕಾಂಗ್ರೆಸ್ ಮುಕ್ತ ಕರ್ನಾಟಕ ಕನಸನ್ನು ನನಸು ಮಾಡಬೇಕು” ಎಂದು ಜನಾರ್ಧನ ರೆಡ್ಡಿ ಅಬ್ಬರಿಸಿದ್ದರು.
ಬಳ್ಳಾರಿಯಲ್ಲೇ ಸವಾಲು.!
ಈ ಬಾರಿ ತಮ್ಮ ಜಿಲ್ಲೆಯಲ್ಲೇ ಬಳ್ಳಾರಿ ಸಹೋದರರಿಗೆ ಸವಾಲು ಎದುರಾಗಲಿದೆ. ಭಾರತೀಯ ಜನತಾ ಪಕ್ಷದ ಶಾಸಕರಾಗಿದ್ದ ಮಾಜಿ ಶಾಸಕ ಆನಂದ್ ಸಿಂಗ್ ಇದೀಗ ಕಾಂಗ್ರೆಸ್ ಹಕ್ಕಿ. ಅವರನ್ನು ಕಾಂಗ್ರೆಸ್ಗೆ ಸೇರ್ಪಡೆಗೊಳಿಸಿ ಕಾಂಗ್ರೆಸ್ ತನ್ನ ರಾಜಕೀಯ ಚಾಣಾಕ್ಷತೆಯನ್ನು ಮೆರೆದಿತ್ತು. ಆದರೆ ಅವರ ಮೇಲೆ ಭ್ರಷ್ಟಾಚಾರದ ಆರೋಪಗಳು ಇರುವುದರಿಂದ ಕಾಂಗ್ರೆಸ್ನಲ್ಲಿ ಜಯ ಗಳಿಸುವುದು ಕಷ್ಟ ಎಂದು ಹೇಳಲಾಗುತ್ತಿದೆ. ಇದನ್ನು ಜನಾರ್ಧನ ರೆಡ್ಡಿ ಹಾಗೂ ಶ್ರೀ ರಾಮುಲು ಯಾವ ರೀತಿ ಮುನ್ನಡೆಸುತ್ತಾರೆ ಎಂಬ ಸವಾಲು ಎದುರಾಗಿದೆ. ರೆಡ್ಡಿಗೆ ಕೇವಲ ಬಳ್ಳಾರಿ ಮಾತ್ರವಲ್ಲದೆ ರಾಜ್ಯದ ಎಲ್ಲಾ ಕ್ಷೇತ್ರಗಳ ಮೇಲೂ ಜವಬ್ಧಾರಿಯನ್ನು ಹೈಕಮಾಂಡ್ ನೀಡಿದ್ದು, ಬಳ್ಳಾರಿಯಲ್ಲೇ ಅವರು ತಮ್ಮ ಹೆಚ್ಚಿನ ಸಮಯವನ್ನು ನೀಡಬೇಕಾಗಿದೆ.
ಕಳೆದ ಬಾರಿ ರೆಡ್ಡಿ ಇಲ್ಲದೆ ಕಳೆಗುಂದಿದ್ದ ಚುನಾವಣಾ ಅಖಾಡ ಇದೀಗ ಮತ್ತೆ ಗರಿಗೆದರಿದೆ. 50 ಸಾವಿರಕ್ಕಿಂತಲೂ ಅಧಿಕ ಬಡ ಹೆಣ್ಣು ಮಕ್ಕಳಿಗೆ ಮದುವೆ ಮಾಡಿದ ಪುಣ್ಯವೋ ಅಥವಾ 3000 ಮಕ್ಕಳ ಅನ್ನವನ್ನು ಕಸಿದ ಕಾಂಗ್ರೆಸ್ ಸರ್ಕಾರಕ್ಕೆ ಸೆಡ್ಡು ಹೊಡೆದು, ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರಕ್ಕೆ ಅನ್ನ ನೀಡಿದ ಪುಣ್ಯವೋ, ಮತ್ತೆ ಭಾರತೀಯ ಜನತಾ ಪಕ್ಷದ ಸರದಾರನಾಗಿ ಹೊರಹೊಮ್ಮಲು ಸಿದ್ಧರಾಗಿ ನಿಂತಿದ್ದಾರೆ. ಅದ್ಧೂರಿಯಾಗಿ ಕಮ್ ಬ್ಯಾಕ್ ಮಾಡಲಿರುವ ಗಾಲಿ ಜನಾರ್ಧನೆ ರೆಡ್ಡಿಯವರಿಂದ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಬಹುಮತದಿಂದ ಅಧಿಕಾರಕ್ಕೆ ಬರೋದು ಮಾತ್ರ ಅಷ್ಟೇ ಸತ್ಯ.
-ಸುನಿಲ್ ಪಣಪಿಲ