ಇತ್ತೀಚೆಗೆ ಭಾರತ ಮತ್ತು ಚೀನಾದ ಸೈನಿಕರ ನಡುವೆ ಅರುಣಾಚಲ ಪ್ರದೇಶದ ತವಾಂಗ್ನಲ್ಲಿ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ ವಿವಾದಾತ್ಮಕ ಹೇಳಿಕೆಗೆ ಲೋಕಸಭೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಪ್ರತಿಕ್ರಿಯೆ ನೀಡಿದ್ದಾರೆ.
ಭಾರತೀಯ ಯೋಧರಿಗೆ ಹೊಡೆಯಲಾಗಿದೆ ಎನ್ನುವ ಪದವನ್ನು ರಾಹುಲ್ ಗಾಂಧಿ ಅವರು ಹೇಳಿರುವುದು ಸಮಂಜಸ ಅಲ್ಲ. ರಾಜಕೀಯ ಟೀಕೆಗಳಿಂದ ಯಾವುದೇ ಸಮಸ್ಯೆ ಇಲ್ಲ. ಆದರೆ ನಮ್ಮ ಯೋಧರಿಗೆ ಅಗೌರವ ನೀಡಬಾರದು ಎಂದು ರಾಹುಲ್ ಗಾಂಧಿ ಅವರಿಗೆ ಪರೋಕ್ಷವಾಗಿ ಹೇಳಿದ್ದಾರೆ. ನನ್ನ ಸ್ವಂತ ತಿಳುವಳಿಕೆಯನ್ನು ವೃದ್ಧಿಸಿಕೊಳ್ಳಬೇಕು. ಈ ಸಲಹೆಯನ್ನು ನಾನು ಕೇಳಿದೆ. ಆದರೆ ಸಲಹೆ ನೀಡುವವರು ಯಾರು ಎಂಬುದು ತಿಳಿಯದಿದ್ದಾಗ, ಏನೂ ತೋಚದಿದ್ದರೂ ಅದಕ್ಕೆ ಗೌರವ ನೀಡಿದೆ. ಆದರೆ ನಮ್ಮ ಯೋಧರಿಗೆ ಹೊಡೆಯಲಾಗಿದೆ ಎನ್ನುವ ಪದ ಬಳಕೆ ಸರಿಯಲ್ಲ ಎಂದು ಅವರು ರಾಹುಲ್ಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ರಾಹುಲ್ ಗಾಂಧಿ ತನ್ನ ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ಹೇಳಿದ್ದ ‘ಚೀನಾ ಯುದ್ಧದ ತಯಾರಿ ನಡೆಸುತ್ತಿದೆ. ಅರುಣಾಚಲ ಪ್ರದೇಶದಲ್ಲಿ ಚೀನಾದ ಯೋಧರು ಭಾರತೀಯ ಯೋಧರನ್ನು ಹೊಡೆದು ಹಾಕುತ್ತಿದ್ದಾರೆ ಎಂದು ಹೇಳಿದ್ದು ,ಇದಕ್ಕೆ ಸಚಿವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ಚೀನಾಲ ಬಗ್ಗೆ ಅಸಡ್ಡೆ ಮನೋಭಾವ ಹೊಂದಿದ್ದರೆ, ಭಾರತೀಯ ಯೋಧರನ್ನು ಗಡಿ ರಕ್ಷಣೆಗೆ ಅಲ್ಲಿಗೆ ಕಳುಹಿಸುತ್ತಿತ್ತೇ? ಇಂದು ಚೀನಾವನ್ನು ಪ್ರೇರೇಪಿಸುವುದರಿಂದ ಮತ್ತು ನಿಯೋಜನೆಯಿಂದ ಹಿಂದೆ ಸರಿಯುವಂತೆ ತಾಕೀತು ಮಾಡುತ್ತಿದ್ದೆವೇ?, ನಮ್ಮ ಸಂಬಂಧಗಳು ಸರಿಯಾಗಿಲ್ಲ ಎಂಬುದನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುತ್ತಿದ್ದೆವೇ ಎಂದು ಅವರು ರಾಹುಲ್ ಗಾಂಧಿಯ ಮಾತುಗಳಿಗೆ ಸ್ಪಷ್ಟ ಪ್ರತ್ಯುತ್ತರ ನೀಡಿದ್ದಾರೆ.