ಸರಕಾರ ರಚನೆ ಮಾಡುತ್ತೇವೆ ಎಂದು ಮೈತ್ರಿ ಮಾಡಿಕೊಂಡ ಕಾಂಗ್ರೆಸ್ ಮತ್ತು ಜೆಡಿಎಸ್ ಕಳೆದ ಕೆಲ ದಿನಗಳಿಂದ ಕೇವಲ ಸಚಿವ ಸಂಪುಟದ ಖಾತೆ ಹಂಚಿಕೆಯ ವಿಚಾರದಲ್ಲೇ ಮುಳುಗಿದೆ ಹೊರತು ಇನ್ನೂ ಸರಕಾರ ಮಾಡಬೇಕಾದ ಕರ್ತವ್ಯಗಳನ್ನು ಮರೆತಂತಿದೆ. ಯಾಕೆಂದರೆ ಇತ್ತ ಕಾಂಗ್ರೆಸ್ ತಮ್ಮ ಶಾಸಕರ ಸಂಖ್ಯೆ ಹೆಚ್ಚಿರುವುದರಿಂದ ನಮಗೇ ಸಚಿವ ಸ್ಥಾನ ನೀಡಬೇಕು ಎಂದು ಒತ್ತಡ ಹೇರುತ್ತಿದ್ದರೆ, ಇತ್ತ ಜೆಡಿಎಸ್ ಶಾಸಕರೂ ಕೂಡಾ ದೇವೇಗೌಡರ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ಬೆನ್ನ ಹಿಂದೆ ಬಿದ್ದು , ಮಂತ್ರಿ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹೇಳಿಕೊಂಡಿರುವ ಪ್ರಕಾರ ನಾಳೆ ಸಚಿವ ಸಂಪುಟ ರಚನೆಯಾಗಲಿದ್ದು ಎಲ್ಲಾ ಸಮಸ್ಯೆ ಬಗೆಹರಿಯಲಿದೆ ಎಂದಿದ್ದಾರೆ. ಆದರೆ ಸಚಿವ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿರುವ ಎರಡೂ ಪಕ್ಷಗಳ ಶಾಸಕರು ಒಬ್ಬರಿಗೊಬ್ಬರು ತಿರುಗಿಬಿದ್ದಿದ್ದು, ತಮ್ಮ ತಮ್ಮಲ್ಲೇ ಕಿತ್ತಾಟ ನಡೆಸುತ್ತಿದ್ದಾರೆ..!
ಇಂಧನ ಖಾತೆಗಾಗಿ ಡಿಕೆಶಿ-ರೇವಣ್ಣ ಬಿಗ್ಫೈಟ್..!
ಡಿಕೆ ಶಿವಕುಮಾರ್ ಈ ಹಿಂದಿನ ಸಿದ್ದರಾಮಯ್ಯ ಸರಕಾರದಲ್ಲೂ ಇಂಧನ ಸಚಿವರಾಗಿ ಕಾರ್ಯ ನಿರ್ವಹಿಸಿದವರು, ಆದ್ದರಿಂದ ಇದೀಗ ಮೈತ್ರಿ ಸರಕಾರದಲ್ಲೂ ನನಗೇ ಇಂಧನ ಖಾತೆ ಸಿಗಬೇಕೆಂದು ಪಟ್ಟುಹಿಡಿದಿದ್ದಾರೆ. ಆದರೆ ಡಿಕೆಶಿ ವಿರುದ್ಧ ಈ ಖಾತೆಗಾಗಿ ಪೈಪೋಟಿಗೆ ಇಳಿದಿರುವ ಜೆಡಿಎಸ್ ಮುಖಂಡ ಎಚ್ಡಿ ರೇವಣ್ಣ , ಇಂಧನ ಖಾತೆ ಜೊತೆಗೆ ಲೋಕೋಪಯೋಗಿ ಇಲಾಖೆಯೂ ತಮಗೇ ಸಿಗಬೇಕೆಂದು ಕುಮಾರಸ್ವಾಮಿ ಮತ್ತು ದೇವೇಗೌಡರಿಗೆ ಒತ್ತಡ ಹೇರುತ್ತಿದ್ದಾರೆ. ಡಿಕೆಶಿ ಹೇಳುವ ಪ್ರಕಾರ, ನಾನು ಈ ಹಿಂದೆ ಇಂಧನ ಸಚಿವನಾಗಿ ಐದು ವರ್ಷ ಸೇವೆ ಸಲ್ಲಿಸಿದ್ದೇನೆ ನನಗೆ ಇನ್ನೂ ಅನೇಕ ಕೆಲಸಗಳು ಬಾಕಿ ಇದೆ , ಆದ್ದರಿಂದ ಈ ಸ್ಥಾನ ನನಗೇ ಸಿಗಬೇಕು ಎಂದು ರೇವಣ್ಣ ವಿರುದ್ಧ ತೊಡೆತಟ್ಟಿದ್ದಾರೆ.
ಇಂಧನ ಖಾತೆ ಯಾವುದೇ ಕಾರಣಕ್ಕೂ ಜೆಡಿಎಸ್ ಕೈಗೆ ಸೇರಲು ಬಿಡುವುದಿಲ್ಲ ಎಂದು ಪಣತೊಟ್ಟಿರುವ ಕಾಂಗ್ರೆಸ್ , ಈ ಬಾರಿಯೂ ಇಂಧನ ಸ್ಥಾನವನ್ನು ತನ್ನದಾಗಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಈಗಾಗಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡರೂ ಕೂಡ ಒಳಗಿಂದೊಳಗೆ ಸಮರ ನಡೆಯುತ್ತಲೇ ಇದೆ. ಆದರೆ ಈವರೆಗೂ ಸುಮ್ಮನಿದ್ದ ಶಾಸಕರು ಇದೀಗ ಸಚಿವ ಸಂಪುಟ ವಿಸ್ತರಣೆ ದಿನ ನಿಗಧಿಯಾಗುತ್ತಿದ್ದಂತೆ ಶಾಸಕರ ಪೈಪೋಟಿ ಬಹಿರಂಗವಾಗಿದೆ.!
ಕಾಂಗ್ರೆಸ್ ಶಾಸಕರ ಮಧ್ಯೆ ಜಂಜಾಟ..!
ಕಾಂಗ್ರೆಸ್ ಶಾಸಕರಾದ ಈಶ್ವರ್ ಖಂಡ್ರೆ ಮತ್ತು ರಾಜಶೇಖರ್ ಪಾಟೀಲ್ ಮಧ್ಯೆ ಜಂಜಾಟ ಆರಂಭವಾಗಿದ್ದು, ಸಚಿವ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ. ಈ ಇಬ್ಬರೂ ಕೂಡ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರವಾಗಿ ಹೋರಾಟ ನಡೆಸಿದವರಾಗಿದ್ದರೂ ಕೂಡ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಮೂಡಿಬಂದಿತ್ತು. ಅದೇ ರೀತಿ ಇದೀಗ ಸಚಿವ ಸ್ಥಾನಕ್ಕಾಗಿ ಮುಗಿಬಿದ್ದಿರುವ ಈಶ್ವರ್ ಖಂಡ್ರೆ ಮತ್ತು ರಾಜಶೇಖರ್ ಪಾಟೀಲ್ ಸಿದ್ದರಾಮಯ್ಯನವರ ಮೇಲೆ ಒತ್ತಡ ಹೇರಿ ತಮ್ಮ ಬೇಡಿಕೆ ಮುಂದಿಟ್ಟಿದ್ದಾರೆ.!
ಮತ್ತೊಂದೆಡೆ ಎಂ ಬಿ ಪಾಟೀಲ್ ಮತ್ತು ಶಿವಾನಂದ್ ಪಾಟೀಲ್ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದು, ಸಚಿವ ಸ್ಥಾನಕ್ಕಾಗಿ ಸಿದ್ದರಾಮಯ್ಯನವರ ಹಿಂದೆ ಬಿದ್ದಿದ್ದಾರೆ. ಎಂ ಬಿ ಪಾಟೀಲ್ ಕೂಡಾ ಲಿಂಗಾಯತ ಧರ್ಮದ ವಿಭಜನೆಗಾಗಿ ಹೋರಾಟ ನಡೆಸಿದ್ದು, ಕೇವಲ ತಮ್ಮ ರಾಜಕೀಯ ಲಾಭವನ್ನಷ್ಟೇ ನೋಡಿಕೊಂಡವರು. ಆದ್ದರಿಂದ ಇದೀಗ ಮೈತ್ರಿ ಸರಕಾರದಲ್ಲೂ ಸಚಿವ ಸ್ಥಾನಕ್ಕಾಗಿ ಹೋರಾಟ ನಡೆಸುತ್ತಿದ್ದು, ಎಂ ಬಿ ಪಾಟೀಲ್ ಅವರಿಗೆ ಸಚಿವ ಸ್ಥಾನ ಸಿಗದಂತೆ ಶಿವಾನಂದ ಪಾಟೀಲ್ ಅವರು ಒತ್ತಡ ಹೇರುತ್ತಿದ್ದಾರೆ.ಶಾಸಕ ರೋಷನ್ಬೇಗ್ ಅವರಿಗೂ ಸಚಿವ ಸ್ಥಾನ ಸಿಗದಂತೆ ಕಾಂಗ್ರೆಸ್ ನ ಹಿರಿಯ ಶಾಸಕರು ಒತ್ತಡ ಹೇರುತ್ತಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗೊಂದಲಕ್ಕೀಡಾಗಿದ್ದಾರೆ.!
ಸದನದಲ್ಲಿ ಹಿರಿಯ ಶಾಸಕರ ಅವಶ್ಯಕತೆಯ ಬಗ್ಗೆ ಸಿಎಂ ಕುಮಾರಸ್ವಾಮಿ ಅವರು ಪದೇ ಪದೇ ಹೇಳುತ್ತಿದ್ದರೂ ಕೂಡಾ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ತಮಗೆ ಅಧಿಕಾರ ಸಿಗಬೇಕೆಂದು ಪಟ್ಟು ಹಿಡಿದಿದ್ದಾರೆ. ಆದ್ದರಿಂದ ಕುಮಾರಸ್ವಾಮಿ ಅವರಿಗೆ ಸಚಿವ ಸಂಪುಟ ವಿಸ್ತರಣೆಯೇ ಒಂದು ದೊಡ್ಡ ತಲೆನೋವಾಗಿದ್ದು, ಈ ಎರಡೂ ಪಕ್ಷಗಳ ಶಾಸಕರ ನಡೆಗೆ ಬೇಸತ್ತು ಹೋಗುವಂತಾಗಿದೆ..!
–ಅರ್ಜುನ್