ದೆಹಲಿ ಕ್ರೈಸ್ತ ಧರ್ಮ ಪ್ರಾಂತ್ಯದ ಆರ್ಚ್ ಬಿಷಪ್ ಅನಿಲ್ ಕೌಟೊ, 2019ರಲ್ಲಿ ಮೋದಿ ಸರಕಾರ ಉರುಳಿಸಿ ಹೊಸ ಸರಕಾರ ರಚಿಸಲು ಪ್ರತಿ ಶುಕ್ರವಾರದಂದು ಚರ್ಚಿನಲ್ಲಿ ಪ್ರಾರ್ಥಿಸಲು ಭಾರತದ ಕ್ಯಾಥೋಲಿಕ್ಕರಿಗೆ ಪತ್ರವೊಂದನ್ನು ಬರೆದಿದ್ದಾರೆ. ದೆಹಲಿಯ ಧರ್ಮ ಪ್ರಾಂತ್ಯದಡಿ ಬರುವ ಎಲ್ಲಾ ಚರ್ಚುಗಳಲ್ಲಿ ಪ್ರತಿ ಶುಕ್ರವಾರದಂದು ಪ್ರಾರ್ಥನೆ ಮಾಡಬೇಕು ಮತ್ತು ಉಪವಾಸ ಕೈಗೊಳ್ಳಬೇಕು ಎಂದೂ ಈ ಪತ್ರದಲ್ಲಿ ಬರೆಯಲಾಗಿದೆ. ದೆಹಲಿ ಬಿಷಪ್ ನ ಈ ಕರೆಗೆ ಯಾವ ಸೆಕ್ಯೂಲರ್ ಬ್ರಿಗೇಡಿಗರೂ ಆಕ್ಷೇಪ ಎತ್ತಿಲ್ಲ, ಅವಾರ್ಡ್ ವಾಪಸಿಗಳು ಧೂಳು ಹಿಡಿದ ಪ್ರಶಸ್ತಿಗಳನ್ನು ವಾಪಾಸು ಮಾಡಿರುವ ವರದಿಯಾಗಿಲ್ಲ. ದೇಶದಲ್ಲಿ “ಅಸಹಿಷ್ಣುತೆಯ” ತಾಪ ಯಾವ ನಾಯಕ ನಟ-ನಟಿಯರಿಗೂ ತಟ್ಟಿಲ್ಲ!!
ಪತ್ರದಲ್ಲಿ “ದೇಶದ ರಾಜಕೀಯ ನಾಯಕರುಗಳಿಗಾಗಿ ಪ್ರಾರ್ಥಿಸುವುದು “ಪವಿತ್ರ ಅಭ್ಯಾಸವಾಗಿದೆ” ಮುಂಬರುವ ಸಾರ್ವತ್ರಿಕ ಚುನಾವಣೆಗಳಿಂದಾಗಿ ಈ ಪ್ರಾರ್ಥನೆಯು ಇನ್ನೂ ಹೆಚ್ಚು ಮಹತ್ವ ಹೊಂದಿದೆ” ಎಂದು ಬರೆಯಲಾಗಿದೆ. ಒಂದು ವೇಳೆ ಇದೇ ಕೆಲಸವನ್ನು ಹಿಂದೂ ಮಂದಿರ ಅಥವಾ ಮಠಗಳು ಮಾಡಿದ್ದರೆ ದೇಶದ ಲಿಬರಲ್ ಗ್ಯಾಂಗ್ ಗಂಟಲು ಹರಿದುಕೊಂಡು ಕಿರುಚಾಡುತ್ತಿತ್ತು. ಸಂವಿಧಾನ, ಜಾತ್ಯಾತೀತತೆ ಅಪಾಯದಲ್ಲಿರುತ್ತಿತ್ತು. ಮುಂದಿನ ಬಾರಿ ಮೋದಿ ಭಾರೀ ಬಹುಮತದಿಂದ ಗೆದ್ದು ಬರಲು ಹಿಂದೂಗಳೆಲ್ಲರೂ ದೇವಸ್ಥಾನಗಳಲ್ಲಿ ನಿತ್ಯ ಪೂಜೆ ಮಾಡಿ, ಭಜನೆ ಮಾಡಿ ಎಂದು ಯಾವುದಾದರೂ ಮಂದಿರ ಹೇಳಿದ್ದರೆ ಇಷ್ಟು ಹೊತ್ತಿಗೆ ಆ ಮಂದಿರದ ಮೇಲೆ ಕಲ್ಲು ತೂರುತ್ತಿದ್ದರು. ಆದರೆ ಹೇಳಿದ್ದು ಚರ್ಚ್, ಮತ್ತು ನಮ್ಮದು ತಥಾಕಥಿತ ಜಾತ್ಯಾತೀತ ದೇಶ ಆದ್ದರಿಂದ ಹಿಂದೂಗಳು ಎಲ್ಲವನ್ನೂ ಹೊಟ್ಟೆಗೆ ಹಾಕ್ಕಳಿ…..
ದೆಹಲಿಯ ಆರ್ಚ್ ಡಿಸೋಸ್ ಅನ್ನು ಭಾರತದಲ್ಲಿ ಕ್ಯಾಥೋಲಿಕ್ಕರ ಮುಖ ಎಂದೇ ಪರಿಗಣಿಸಲಾಗುತ್ತದೆ ಮತ್ತು ದೇಶದ ಒಟ್ಟು ಕ್ಯಾಥೋಲಿಕ್ ಜನಸಂಖ್ಯೆಯ ಮೇಲೆ ಆರ್ಚ್ ಬಿಷಪ್ ಗಣನೀಯ ಪ್ರಮಾಣದ ಪ್ರಭಾವವನ್ನು ಹೊಂದಿರುತ್ತಾರೆ ಎನ್ನುವುದು ಇಲ್ಲಿ ಗಮನಿಸಬೇಕಾದ ವಿಷಯ. ಇದಕ್ಕಿಂತಲೂ ಮಹತ್ತರವಾದ ವಿಷಯ ಇದನ್ನು” ದ ವೆಟಿಕನ್ ನ್ಯೂಸ್” ಯಾವ ರೀತಿ ಪ್ರಸ್ತುತ ಪಡಿಸಿದೆ ಎನ್ನುವುದು. ಆರ್ಚ್ ಬಿಷಪ್ ನ ಪತ್ರವನ್ನು ಒಳಗೊಂಡ ವೆಬ್ ಸೈಟಿನ ಲೇಖನದಲ್ಲಿ, ” ಹಿಂದು ಪರ ಭಾರತೀಯ ಜನತಾ ಪಕ್ಷ (ಬಿಜೆಪಿ)ದ ಐದು ವರ್ಷಗಳ ಅಧಿಕಾರವು ಮೇ 2019 ರಲ್ಲಿ ಕೊನೆಗೊಳ್ಳುತ್ತದೆ.” ಎಂದು ಬರೆಯಲಾಗಿದೆ. ತನ್ನ ಲೇಖನದಲ್ಲಿ ಧಾರ್ಮಿಕ ಮತ್ತು ಜನಾಂಗೀಯ ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ನಿರ್ಲಕ್ಷಿಸಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸಲು ಕೆಲಸ ಮಾಡುವ ಹಿಂದೂ ಗುಂಪುಗಳನ್ನು ಮೋದಿ ನೇತೃತ್ವದ ಸರ್ಕಾರವು ಬೆಂಬಲಿಸುತ್ತಿದೆ ಎಂದು ಕ್ರೈಸ್ತ ನಾಯಕರು ಆರೋಪಿಸಿದ್ದಾರೆ ಎಂದೂ ಬರೆಯಲಾಗಿದೆ.
ಕ್ರಿಶ್ಚಿಯನ್ ಗುಂಪುಗಳ ಪ್ರಕಾರ, ಮೋದಿ ಅಧಿಕಾರಕ್ಕೆ ಬಂದ ನಂತರ ಕ್ರಿಶ್ಚಿಯನ್ನರ ಮೇಲಿನ ದಾಳಿಗಳು ಹೆಚ್ಚಿವೆಯಂತೆ!! ಹಾಗಾದರೆ ಯೆಮನ್, ಅಫಘಾನಿಸ್ತಾನ, ಸಿರಿಯಾ , ಇರಾಕ್ ಗಳಲ್ಲಿ ಉಗ್ರರಿಂದ ಅಪಹೃತರಾದ ಕ್ರೈಸ್ತರನ್ನು ಬಿಡಿಸಿಕೊಂಡು ಬಂದದ್ದು ಯಾರು? ವೆಟಿಕನ್ನೋ ಅಥವಾ ಮೋದಿ ಸರಕಾರವೋ? ಹಾಗಿದ್ದಲ್ಲಿ ಇನ್ನು ಮುಂದೆ ಕ್ರೈಸ್ತರ ಅಪಹರಣವೇನಾದರೂ ನಡೆದರೆ ಚರ್ಚುಗಳು, ವೆಟಿಕನ್ ಇಲ್ಲವೆ ಕಾಂಗ್ರೆಸ್ ಬಿಡಿಸಿಕೊಂಡು ಬರಲಿ ಎಂದು ಮೋದಿ ಸುಮ್ಮನೆ ಕೈ ಕಟ್ಟಿ ಕುಳಿತರೆ ಕ್ರೈಸ್ತರು ಸುಮ್ಮನಿರುವರೆ? ಯೂಪಿಎ ಆಡಳಿತದ ಕಾಲದಲ್ಲಿ ಉಗ್ರರ ದಾಳಿ ನಡೆದಾಗ ಅದರಲ್ಲಿ ಕ್ರೈಸ್ತರೂ ಸಾವನ್ನಪ್ಪಿಲ್ಲವೇ? ಕಾಂಗ್ರೆಸ್ ಆಡಳಿತದಲ್ಲಿ ಉಗ್ರರ ದಾಳಿ ನಡೆದರೂ ಪರವಾಗಿಲ್ಲ ಮೋದಿ ಮಾತ್ರ ಗದ್ದುಗೆಯೇರಬಾರದು ಎನ್ನುವುದು ಈ ಪತ್ರದ ಅರ್ಥವೆ?
ಮೋದಿ ಮತ್ತು ಬಿ.ಜೆ.ಪಿಯನ್ನು ದ್ವೇಷಿಸುವ ಭರದಲ್ಲಿ “ನಮ್ಮ ಸಂವಿಧಾನದಲ್ಲಿ ಮತ್ತು ನಮ್ಮ ದೇಶದ ಜಾತ್ಯತೀತ ನಿಲುವಿನಲ್ಲಿ ಪ್ರಜಾಪ್ರಭುತ್ವದ ತತ್ವಗಳಿಗೆ ಬೆದರಿಕೆಯನ್ನುಂಟು ಮಾಡುವ ಪ್ರಕ್ಷುಬ್ಧ ರಾಜಕೀಯ ವಾತಾವರಣವನ್ನು ನಾವು ನೋಡುತ್ತಿದ್ದೇವೆ.” ಎಂದು ಬರೆಯಲಾಗಿದೆ. ಹಾಗಾದರೆ ದೇಶದ ಗದ್ದುಗೆಯಲ್ಲಿ ಒಬ್ಬ ಅಪ್ಪಟ ಹಿಂದೂ ದೇಶಭಕ್ತನಿಗೆ ಆಡಳಿತ ಮಾಡುವ ಹಕ್ಕಿಲ್ಲವೇ? ದೇಶದ ಗದ್ದುಗೆಯ ಮೇಲೆ ವೆಟಿಕನ್ ಪ್ರಾಯೋಜಿತ ಛದ್ಮ ವೇಷಧಾರಿ ಹಿಂದೂಗಳೆ ಕುಳಿತುಕೊಳ್ಳಬೇಕೆ? ಹಿಂದೂ ರಾಷ್ಟ್ರವನ್ನು ಕೆಥೋಲಿಕ್ ಅಥವಾ ಗಜವಾ-ಎ-ಹಿಂದ್ ಎಂದು ಮತಾಂತರ ಮಾಡಿದರೂ ಕೈ ಕಟ್ಟಿ ಕುಳಿತು ನೋಡಬೇಕೆ? ಜಾತ್ಯಾತೀತತೆ ಎಂದರೆ ಅಡಿಗಡಿಗು ಹಿಂದೂಗಳನ್ನು ತುಳಿಯುವುದೆ? “ವಸುದೈವ ಕುಟುಂಬಕಂ” ಸನಾತನ ಸಂಸ್ಕೃತಿಯನ್ನು ಪಾಲಿಸುತ್ತಿರುವ ಹಿಂದೂಗಳಿಗೆ ದೇಶದ ಪ್ರಧಾನಮಂತ್ರಿ ಗಾದಿಯ ಮೇಲೆ ಒಬ್ಬ ಹಿಂದೂ ಹೃದಯ ಸಾಮ್ರಾಟನನ್ನು ಕುಳ್ಳಿರಿಸುವ ಅಧಿಕಾರವಿಲ್ಲವೆ?
ಮದರಸಾಗಳು “ಮುಸ್ಲಿಮರು ಕಾಂಗ್ರೆಸಿಗೆ ಮತ ನೀಡಿ” ಎನ್ನುತ್ತವೆ, ಚರ್ಚುಗಳು “ಕ್ರೈಸ್ತರು ಕಾಂಗ್ರೆಸಿಗೆ ಮತ ನೀಡಿ” ಎನ್ನುತ್ತದೆ. ಆದರೆ ಯಾವೊಂದು ಮಂದಿರವೂ ಬಿಜೆಪಿಗೆ ಮತ ನೀಡಿ ಎನ್ನುವುದಿಲ್ಲ. ಹಿಂದೂಗಳು ಹೀಗೆ ಹೇಳಿದರೆ ಸಂವಿಧಾನಕ್ಕೆ ಅಪಮಾನ!! ಅವರು ಹೇಳಿದರೆ ಅದು ಸಂವಿಧಾನಕ್ಕೆ ಅವರು ನೀಡುವ ಸನ್ಮಾನ!! ಎಂಥಹ ಇಬ್ಬಗೆ ನೀತಿ? ಎಲ್ಲಿವರೆಗೆ ಹಿಂದೂಗಳು ತಮ್ಮದೆ ನಾಡಿನಲ್ಲಿ ಎರಡನೆ ದರ್ಜೆಯ ನಾಗರಿಕರಂತೆ ಬದುಕಬೇಕು? ಶತಮಾನಗಳಿಂದಲೂ ಮತಾಂಧರ ದಬ್ಬಾಳಿಕೆ ತಡೆದುಕೊಂಡು ಅಸ್ತಿತ್ವಕ್ಕೆ ಹೆಣಗಾಡಿ, ತಮ್ಮಷ್ಟಕ್ಕೆ ತಾವು ಬದುಕುತ್ತಿದ್ದರೆ, ಪ್ರಜಾಪ್ರಭುತ್ವ ಶಾಸನದಲ್ಲೂ ಜಿಹಾದ್-ಮತಾಂತರ ಮಾಡುವ ದಂಧೆ ನಡೆಸುತ್ತಿರುವುದನ್ನು ಕಂಡೂ ಕಾಣದಂತೆ ಸುಮ್ಮನಿದ್ದು ಬಿಡಬೇಕೆ? ಈ ದೇಶದಲ್ಲಿ ಹಿಂದೂಗಳ ಧ್ವನಿ ಕೇಳುವವರು ಯಾರು? ಈ ದೇಶದಲ್ಲಿ ಹಿಂದೂಗಳಿಗೆ ನ್ಯಾಯ ದೊರಕುವುದು ಯಾವಾಗ? ನ್ಯಾಯ ದೊರಕಿಸಿ ಕೊಡುವವರು ಯಾರು….?
-ಶಾರ್ವರಿ