ಪ್ರಚಲಿತ

ನಿಮ್ಮ ಪ್ರಧಾನಿ ಅಭ್ಯರ್ಥಿಗೆ ಸಂವಿಧಾನದ ಪರಿಚಯ ಇನ್ನಾದರೂ ಮಾಡಿಕೊಡಿ ಕಾಂಗ್ರೆಸಿಗರೇ…

ಕಾಂಗ್ರೆಸ್ ಪಕ್ಷದ ಯುವ ನೇತಾರ ಎಂದೇ ಕಾಂಗ್ರೆಸಿಗರು ನಂಬಿರುವ ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ನಿನ್ನೆಯಿಂದ ತೊಡಗಿದಂತೆ ಭಾರತದ ಹಸಿ ಬಿಸಿ ಸುದ್ದಿಗಳಲ್ಲಿ ಈ ಸುದ್ದಿ ಮುಂಚೂಣಿಯಲ್ಲಿರುವುದು ಎಲ್ಲರೂ ಬಲ್ಲರು.

ಅಂದ ಹಾಗೆ ರಾಹುಲ್ ಗಾಂಧಿ ಅವರು ಅನರ್ಹರಾಗಿರುವುದಕ್ಕೆ, ಅವರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು, ಬಿಜೆಪಿ ಪಕ್ಷವೇ ನೇರ ಹೊಣೆ. ರಾಹುಲ್ ಗಾಂಧಿಯನ್ನು ನೇರವಾಗಿ ಎದುರಿಸಲಾಗದೆ ಬಿಜೆಪಿ ಇಂತಹ ಕೃತ್ಯ ಎಸಗಿದೆ ಎಂದು ಕಾಂಗ್ರೆಸ್‌ನವರು, ಇನ್ನಿತರ ಈ ದೇಶದ ಎಡಪಂಥೀಯ ವಿಚಾರಧಾರೆಯನ್ನು ತುಂಬಿಕೊಂಡಿರುವ ಕೆಲವು ಬುದ್ಧಿಜೀವಿಗಳ ಒಕ್ಕೊರಲ ಕೂಗು. ರಾಹುಲ್‌‌ಗೆ ಇಂತಹ ಸ್ಥಿತಿ ಎದುರಾಗಿರುವುದಕ್ಕೆ ಬಿಜೆಪಿಯ ಮೇಲೆ ಗೂಬೆ ಕೂರಿಸಿ, ಪ್ರಧಾನಿ ಮೋದಿ ಅವರನ್ನು ದೂಷಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವುದು ದುರಂತ. ಇವರು ಈ ದೇಶದ ಕಾನೂನು, ಪ್ರಜಾಪ್ರಭುತ್ವ‌, ನ್ಯಾಯಾಂಗ ವ್ಯವಸ್ಥೆಯ ಮೇಲೆ ಯಾವುದೇ ನಂಬಿಕೆ, ವಿಶ್ವಾಸ ಹೊಂದಿಲ್ಲ ಎನ್ನುವುದಕ್ಕೆ ಇವರ ಈ ಅರಚಾಟ, ಕಿರುಚಾಟಗಳೇ ಸಾಕ್ಷಿ ನುಡಿಯುತ್ತಿವೆ.

ಪ್ರಧಾನಿ ಮೋದಿ ಅವರನ್ನು ಟೀ ಕಲಿಸುವ ಬರ ದಲ್ಲಿ, ರಾಹುಲ್ ಗಾಂಧಿ ಅವರು ‘ಮೋದಿ’ ಎನ್ನುವ ಉಪನಾಮವನ್ನು ಹೊಂದಿರುವವರೆಲ್ಲರನ್ನೂ ಗುರಿಯಾಗಿಸಿ ಕಳ್ಳರು ಎಂದು ಸಂಬೋಧನೆ ಮಾಡಿರುವುದಕ್ಕೆ ಅವರಿಂದು ಶಿಕ್ಷೆ ಅನುಭವಿಸುತ್ತಿರುವುದು. ಇಲ್ಲಿ ಪ್ರಧಾನಿ ಮೋದಿ ಅವರು ಈ ಬಗ್ಗೆ ರಾಹುಲ್ ಎಂಬ ಅಪ್ರಬುದ್ಧ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿದ್ದಲ್ಲ. ಅವರಿಗೆ ಆ ಘಟನೆಯೂ ನೆನಪಿರಲಿಕ್ಕಿಲ್ಲ. ಆದರೆ ಈ ಬಗ್ಗೆ ನ್ಯಾಯಾಲಯದಲ್ಲಿ ದಾವೆ ಹೂಡಿ, ರಾಹುಲ್ ಗಾಂಧಿಗೆ ಇಂತಹ ಸ್ಥಿತಿ ಕರುಣಿಸಿದವರು ‘ಮೋದಿ’ ಜನಾಂಗಕ್ಕೆ ಸೇರಿದವರು ಎಂಬುದನ್ನು ಕಾಂಗ್ರೆಸ್ ಪಕ್ಷ ಗಮನಿಸಬೇಕು. ಹಾಗೆಯೇ ರಾಹುಲ್ ಗಾಂಧಿ ಅವರು ತಮ್ಮ ಎಲುಬಿಲ್ಲದ ನಾಲಿಗೆಯಲ್ಲಿ ಬಾಯಿಗೆ ಬಂದಂತೆ, ಏನು ಮಾತನಾಡಿದರೂ ನಡೆಯುತ್ತದೆ ಎಂದು ತಪ್ಪಿ ಮಾತನಾಡಿದುದರ ಪರಿಣಾಮವನ್ನು ಅನುಭವಿಸುತ್ತಿದ್ದಾರೆ. ಈ ದೇಶದ ಕಾನೂನಿನ ಮುಂದೆ ಎಲ್ಲರೂ ಸಮಾನರು ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಹಾಗೆಯೇ, ತಪ್ಪಿ ಮಾತನಾಡುವ ಮೊದಲು ಎಚ್ಚರವಿರಲಿ ಎನ್ನುವ ಸಂದೇಶವನ್ನು ಸಹ ರಾಹುಲ್ ಗಾಂಧಿಯ ಈ ಪ್ರಕರಣ ನೀಡುತ್ತಿದೆ.

ಹಾಗೆಯೇ, ರಾಹುಲ್ ಗಾಂಧಿ ಲಂಡನ್ನಿನ ಕೇಂಬ್ರಿಜ್ ವಿವಿ‌ಯಲ್ಲಿ ನಿಂತು ಭಾರತದ ಸಂವಿಧಾನದ ಬಗ್ಗೆ ಬೇಕಾಬಿಟ್ಟಿ ನಾಲಿಗೆ ಹರಿಯಬಿಟ್ಟಿದ್ದನ್ನು ನಾವು ನೆನಪಿಸಿಕೊಳ್ಳಲೇ ಬೇಕಾದ ಸಂದರ್ಭ ಇದು. ಯಾಕೆ ಗೊತ್ತ, ಅದೇ ಸಂವಿಧಾನ ಇಂದು ಭಾರತದ ನ್ಯಾಯಾಂಗ ವ್ಯವಸ್ಥೆ ಮೂಲಕ ರಾಹುಲ್ ಗಾಂಧಿಗೆ ಪ್ರಜಾಪ್ರಭುತ್ವದ ಅಂದವನ್ನು ತಿಳಿಸಿ ಕೊಟ್ಟಿದೆ. ಜೊತೆಗೆ ಲೋಕಸಭೆಯಿಂದ ಗೇಟ್ ಪಾಸ್ ನೀಡುವ ಮೂಲಕ ಭಾರತದ ಸಂವಿಧಾನದ ಶಾಸಕಾಂಗ ವ್ಯವಸ್ಥೆಯೂ ರಾಹುಲ್ ಗಾಂಧಿಗೆ ಈ ದೇಶದ ಪ್ರಜಾಪ್ರಭುತ್ವದ ಸೌಂದರ್ಯ, ಶಕ್ತಿಯನ್ನು ಪರಿಚಯಿಸಿದೆ.

ಒಬ್ಬ ನಾಯಕನಾಗಬೇಕಾದವನ ಜವಾಬ್ದಾರಿ ಏನು?, ಅವನ ಮಾತು ಹೇಗಿರಬೇಕು, ಅವನ ನಡವಳಿಕೆ ಹೇಗಿರಬೇಕು ಎಂಬುದನ್ನೇ ಅರಿಯದ ರಾಹುಲ್ ಗಾಂಧಿ ಅವರನ್ನು ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಕಾಂಗ್ರೆಸ್ ಹೇಳಿರುವುದು, ಕಾಂಗ್ರೆಸ್ ಪಕ್ಷದ ದುಸ್ಥಿತಿಗೆ ಹಿಡಿದ ಕೈಗನ್ನಡಿ. ಇಂತಹ ಅಪ್ರಬುದ್ಧ ರಾಜಕಾರಣಿಗೆ ಕಾಮಸಂಗ್ರೆಸಿನ ಪ್ರಬುದ್ಧ ಮನಸ್ಸುಗಳಾದರೂ ‘ರಾಹುಲ್ ಅನರ್ಹತೆ ಕಥೆ’ಯ ನೈಜತೆಯನ್ನು ಮನವರಿಕೆ ಮಾಡಿದಲ್ಲಿ ಉತ್ತಮ.

Tags

Related Articles

Close