ಕಾಂಗ್ರೆಸ್ ಹಾಗೂ ಜನತಾ ದಳದ ಸರ್ಕಾರ ಇನ್ನೇನು ಆರಂಭವಾಗುತ್ತಿದೆ ಎನ್ನುವಷ್ಟರಲ್ಲೇ ಕಾಂಗ್ರೆಸ್ನಲ್ಲಿ ಭಿನ್ನಮತ ಸ್ಪೋಟಗೊಂಡಿದೆ. ಭಾರತೀಯ ಜನತಾ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಿ ಜನತಾ ದಳದೊಂದಿಗೆ ಅಕ್ರಮ ಸಂಬಂಧವನ್ನು ಮಾಡಿಕೊಂಡಿರುವ ಕಾಂಗ್ರೆಸ್ ಪಕ್ಷ ಇದೀಗ ಪೇಚಿಗೆ ಸಿಲುಕಿದೆ. ಕೈ ತಪ್ಪುತ್ತಿದ್ದ ಗದ್ದುಗೆಯನ್ನು ಮತ್ತೆ ಮರುಸ್ಥಾಪಿಸುವಲ್ಲಿ ಯಶಸ್ವಿಯಾಗಿದ್ದ ಕಾಂಗ್ರೆಸ್ ನಾಯಕ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಭಿನ್ನಮತ ಸ್ಪೋಟಗೊಂಡಿದೆ.
ಡಿಸಿಎಂ ಸ್ಥಾನಕ್ಕಾಗಿ ಡಿಕೆಶಿ ಬಿಗ್ ಫೈಟ್…!
ಕಾಂಗ್ರೆಸ್ 2ನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ 3ನೇ ಸ್ಥಾನಕ್ಕೆ ಜಿಗಿದಿರುವ ಜನತಾ ದಳಕ್ಕೆ ಮುಖ್ಯಮಂತ್ರಿ ಸ್ಥಾನವನ್ನು ನೀಡಿ ಕಾಂಗ್ರೆಸ್ ಕೈತೊಳೆದುಕೊಂಡಿದೆ. ಆದರೆ ಇದೀಗ ಕಾಂಗ್ರೆಸ್ ಪಕ್ಷದಲ್ಲೇ ಭಿನ್ನಮತ ಭುಗಿಲೆದ್ದಿದ್ದು ಉಪಮುಖ್ಯಮಂತ್ರಿ ಸ್ಥಾನಕ್ಕಾಗಿ ಭಾರೀ ಪೈಪೋಟಿ ಏರ್ಪಟ್ಟಿತ್ತು. ಲಿಂಗಾಯತ ಕೋಟಾದಡಿ ಶ್ಯಾಮನೂರು ಶಿವಶಂಕರಪ್ಪ, ದಲಿತ ಕೋಟಾದಡಿ ಜಿ.ಪರಮೇಶ್ವರ್ ಲಾಬಿ ನಡೆಸುತ್ತಿದ್ದರೆ, ತಾನು ಕಾಂಗ್ರೆಸ್ಗಾಗಿ ದುಡಿದವ ಹಾಗೂ ಈ ಬಾರಿ ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆ ಮಾಡಬೇಕಾದರೆ ನನ್ನ ಪಾತ್ರ ತುಂಬಾನೆ ಮುಖ್ಯ. ಹೀಗಾಗಿ ನನಗೇ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಮಾಜಿ ಇಂಧನ ಸಚಿವ ಡಿಕೆ ಶಿವಕುಮಾರ್ ಒತ್ತಾಯಿಸುತ್ತಿದ್ದರು.
ಆದರೆ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿ ಕಾಂಗ್ರೆಸ್ ಹೈಕಮಾಂಡ್ ಆದೇಶಿಸಿತ್ತು. ಅದ್ಯಾವಾಗ ಪರಂ ಗೆ ಈ ಹುದ್ದೆ ಒಲಿದು ಬಂತೋ ಅಂದಿನಿಂದ ಡಿಕೆಶಿವಕುಮಾರ್ ಫುಲ್ ರೆಬೆಲ್ ಆಗಿದ್ದರು. ತನಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲೇ ಬೇಕು ಎಂದು ಹಠ ಹಿಡಿದಿದ್ದರು. ಆದರೆ ಇದಕ್ಕೆ ಸೊಪ್ಪು ಹಾಕದ ಕೈಕಮಾಂಡ್ “ನಿಮಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ನೀಡುತ್ತೇವೆ ಹಾಗೂ ಅದರೊಂದಿಗೆ ಸಚಿವ ಸ್ಥಾನದ ಹುದ್ದೆಯನ್ನೂ ನೀಡುತ್ತೇವೆ” ಎಂದು ಮನವೊಲಿಸಲು ಯತ್ನಿಸಿತ್ತು. ಆದರೆ ಇದನ್ನು ಒಪ್ಪಿಕೊಳ್ಳದ ಡಿಕೆಶಿ ಮತ್ತೆ ಕಾಂಗ್ರೆಸ್ ಹೈಕಮಾಂಡ್ಗೆ ಒತ್ತಡ ಹಾಕಿತ್ತು.
ಈ ಮಧ್ಯೆ ಡಿಕೆ ಶಿವಕುಮಾರ್ ಅವರ ಬೆಂಬಲಿಗರೂ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಡಿಕೆಶಿವಕುಮಾರ್ಗೆ ಡಿಸಿಎಂ ಸ್ಥಾನ ನೀಡಿ, ಇಲ್ಲವಾದರೆ ಕಾರ್ಯಕರ್ತರ ಆಕ್ರೋಶಕ್ಕೆ ತುತ್ತಾಗಬೇಕಾಗುತ್ತದೆ ಎಂದು ಡಿಕೆಶಿ ಬೆಂಬಲಿಗರು ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಬಹಿರಂಗವಾಗಿಯೇ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಈ ಬಗ್ಗೆ ಸ್ವತಃ ಡಿಕೆಶಿವಕುಮಾರ್ ಕೂಡಾ ತಮ್ಮ ಬೇಸರವನ್ನು ಹೊರ ಹಾಕಿದ್ದಾರೆ. “ನಾನು ಫುಟ್ ಬಾಲ್ ಆಡುವವನು ಅಲ್ಲ, ನಾನು ಚೆಸ್ ಆಡುವವನು. ಯಾವ ಸಮಯದಲ್ಲಿ ಹೇಗೆ ಆಡಬೇಕೆಂದು ನನಗೆ ತಿಳಿದಿದೆ. ಯಾರ ಹಣೆಯಲ್ಲಿ ಏನು ಬರೆದಿದೆಯೋ ಅದೇ ಆಗೋದು. ನನ್ನ ಹಣೆಯಲ್ಲಿ ಇಷ್ಟೇ ಬರೆದಿರಬೇಕು. ಹೀಗಾಗಿ ಹಾಗೆಯೇ ಆಗುತ್ತಿದೆ. ನಾನು ನನ್ನ ಕ್ಷೇತ್ರದ ಜನತೆಯಲ್ಲಿ ಮಾತನಾಡೋದಿದೆ. ಈಗ ನಾನು ಶಾಸಕ ಮಾತ್ರ” ಎಂದು ಬೇಸರದಲ್ಲಿಯೇ ಹೇಳಿದ್ದಾರೆ.
ಒಟ್ಟಾರೆ ಕಾಂಗ್ರೆಸ್ ಮುಖಂಡರ ಆಕ್ರೋಶ ದಿನದಿಂದ ದಿನಕ್ಕೆ ಏರುತ್ತಲೇ ಇರುತ್ತಿರುವುದು ಮುಂದಿನ ದಿನಗಳಲ್ಲಿ ಭಾರೀ ಬೆಲೆ ತೆರಬೇಕಾದ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದೆ. ಮಾತ್ರವಲ್ಲದೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ಹಾಗೂ ಜನತಾ ದಳ ಮೈತ್ರಿ ಮುರಿದುಕೊಳ್ಳಲು ಇಂತಹಾ ಘಟನೆಗಳೇ ಸಾಕ್ಷಿಯಾಗಲಿವೆ ಎಂದು ಹೇಳಲಾಗುತ್ತಿದೆ.
-ಸುನಿಲ್ ಪಣಪಿಲ