ರಾಹುಲ್ ಗಾಂಧಿ ನಡೆಸುತ್ತಿರುವ ‘ಭಾರತ್ ಜೋಡೋ’ ಯಾತ್ರೆಯಲ್ಲಿ ನರ್ಮದಾ ಬಚಾವೋ ಆಂದೋಲನ ಕಾರ್ಯಕರ್ತೆ ಮೇಧಾ ಪಾಟ್ಕರ್ ಭಾಗವಹಿಸಿದ್ದು, ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಿ ನಡೆದ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಗುಜರಾತ್ನ ಜನರ ವಿಶ್ವಾಸ ಗಳಿಸಲು ಕಾಂಗ್ರೆಸ್ ತನ್ನ ಒಡೆದು ಆಳುವ ನೀತಿಯನ್ನು ಬಿಡಬೇಕು ಎಂದು ಹೇಳಿದ್ದಾರೆ. ಗುಜರಾತಿನ ಜನತೆ ಕಾಂಗ್ರೆಸ್ ಅನ್ನು ಈಗಾಗಲೇ ತಿರಸ್ಕರಿಸಿದ್ದಾರೆ. ಒಂದು ಸಮುದಾಯ ಅಥವಾ ಪ್ರದೇಶದ ಜನರನ್ನು ಕೆರಳಿಸುವಂತಹ ಕಾಂಗ್ರೆಸ್ ಪಕ್ಷದ ನೀತಿ ನಿಲುವುಗಳು ಕಾಂಗ್ರೆಸ್ ಪಕ್ಷವನ್ನು ಈಗಾಗಲೇ ಸಾಕಷ್ಟು ನಷ್ಟಕ್ಕೆ ದೂಡಿರುವುದಾಗಿಯೂ ಪ್ರಧಾನಿ ಮೋದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ಸೌರಾಷ್ಟ್ರದ ಒಣಗಿರುವ ಪ್ರದೇಶಗಳಿಗೆ ನರ್ಮದಾ ನದಿಯ ನೀರು ತಲುಪುವುದನ್ನು ಅಡ್ಡಿಪಡಿಸುತ್ತಿದೆ. ಹೀಗೆ ಭಾರತವನ್ನು ಒಡೆದು ಆಳುವ ನೀತಿಯನ್ನು ಬಯಸುವ ಅಂಶಗಳಿಗೆ ಬೆಂಬಲಿಸುವ ಕಾಂಗ್ರೆಸ್ ಪಕ್ಷಕ್ಕೆ ಗುಜರಾತಿಗಳು ಬೆಂಬಲ ನೀಡಲಾರರು. ಹಾಗೆಯೇ, 40 ವರ್ಷಗಳ ಕಾಲ ಸರ್ದಾರ್ ಸರೋವರ ಅಣೆಕಟ್ಟು ಯೋಜನೆಯನ್ನು ಸ್ಥಗಿತಗೊಳಿಸಲು ಕಾರಣರಾದವರ ಜೊತೆಗೆ ಗುರುತಿಸಿಕೊಳ್ಳುವವರಿಗೆ ಜನರ ಬೆಂಬಲ ಸಿಗುವುದಿಲ್ಲ. ಅವರನ್ನು ಜನರು ಕ್ಷಮಿಸುವುದೂ ಇಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.