ಮೈತ್ರಿ ಮಾಡಿಕೊಂಡು ಆರಾಮವಾಗಿ ಸರಕಾರ ನಡೆಸಿಕೊಳ್ಳಬಹುದು ಎಂದು ಲೆಕ್ಕಾಚಾರ ಹಾಕಿದ್ದ ಕುಮಾರಸ್ವಾಮಿ ಅವರಿಗೆ ಪ್ರಮಾಣವಚನ ಸ್ವೀಕರಿಸಿದ ದಿನದಿಂದಲೇ ಒಂದಿಲ್ಲೊಂದು ಕಂಟಕಗಳು ಎದುರಾಗುತ್ತಲೇ ಇದೆ. ಯಾಕೆಂದರೆ ಒಂದೆಡೆ ಕಾಂಗ್ರೆಸ್ ಮುಖಂಡರ ಒತ್ತಡವಿದ್ದರೆ, ಮತ್ತೊಂದೆಡೆ ತನ್ನದೇ ಪಕ್ಷದ ಶಾಸಕರ ಒತ್ತಡ.ಒಟ್ಟಾರೆಯಾಗಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಬೇಕಾಗಿದ್ದ ಕುಮಾರಸ್ವಾಮಿ ಅವರು ಇನ್ನೂ ಮಂತ್ರಿ ಮಂಡಲ ರಚನೆ ಮಾಡದೆಯೇ ಕಾಲಹರಣ ಮಾಡುವಂತಾಗಿದೆ. ಇದರಿಂದ ರಾಜ್ಯದಲ್ಲಿ ಆಕ್ರೋಶವೂ ವ್ಯಕ್ತವಾಗುತ್ತಿದ್ದು, ಕಗ್ಗಂಟಾಗಿರುವ ಮಂತ್ರಿ ಮಂಡಲ ರಚನೆಗೆ ಶಾಸಕರೇ ಅಡ್ಡಿಯಾಗುತ್ತಿದ್ದಾರೆ.
ಇತ್ತ ಜೆಡಿಎಸ್ ಗಿಂತ ಹೆಚ್ಚು ಶಾಸಕರನ್ನು ಇಟ್ಟುಕೊಂಡಿರುವ ಕಾಂಗ್ರೆಸ್ ತಮಗೆ ಬೇಕಾದ ಸ್ಥಾನವನ್ನು ಪಡೆಯಲು ಒತ್ತಡ ಹೇರುತ್ತಿದ್ದರೆ, ಜೆಡಿಎಸ್ ಶಾಸಕರೂ ಕೂಡ ದೇವೇಗೌಡರ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬೆನ್ನ ಹಿಂದೆ ಬಿದ್ದಿದ್ದಾರೆ..!
ಎರಡೆರಡು ಖಾತೆಗಾಗಿ ರೇವಣ್ಣ ಪಟ್ಟು..!
ಜೆಡಿಎಸ್ ಮುಖಂಡ ಮತ್ತು ಶಾಸಕನಾಗಿರುವ ಎಚ್ ಡಿ ರೇವಣ್ಣ ಅವರು ಮಂತ್ರಿ ಸ್ಥಾನಕ್ಕಾಗಿ ಭಾರೀ ಪೈಪೋಟಿ ನಡೆಸುತ್ತಲೇ ಬಂದಿದ್ದಾರೆ. ಇತ್ತ ಇಂಧನ ಖಾತೆಗಾಗಿ ಡಿಕೆ ಶಿವಕುಮಾರ್ ಪ್ರಯತ್ನಿಸುತ್ತಿದ್ದರೆ, ರೇವಣ್ಣ ಅವರು ದೇವೇಗೌಡರ ಮುಖಾಂತರ ಮಂತ್ರಿ ಗಿರಿಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ರೇವಣ್ಣ ಅವರು ಲೋಕೋಪಯೋಗಿ ಇಲಾಖೆಯ ಮೇಲೂ ಕಣ್ಣಿಟ್ಟಿದ್ದು, ಇಂಧನ ಖಾತೆಯೂ ತಮಗೇ ಬೇಕೆಂದು ಪಕ್ಷದ ಮುಖಂಡರ ಮೇಲೆ ಒತ್ತಡ ಹೇರುತ್ತಿದ್ದಾರೆ. ಈ ಬಗ್ಗೆ ಈಗಾಗಲೇ ದೇವೇಗೌಡರ ಬಳಿ ತೆರಳಿ ತಮ್ಮ ಆಸೆ ವ್ಯಕ್ತಪಡಿಸಿದ ರೇವಣ್ಣ ಸರಕಾರದ ಎರಡೂ ಖಾತೆಗಳು ಸಿಗಬೇಕೆಂದು ಹೇಳಿಕೊಂಡಿದ್ದಾರೆ. ಆದರೆ ರೇವಣ್ಣ ಅವರ ಈ ಬೇಡಿಕೆಗೆ ಎಳ್ಳುನೀರು ಬಿಟ್ಟ ಜಿ.ಟಿ.ದೇವೇಗೌಡ ಅವರು ಎರಡೆರಡು ಸ್ಥಾನಗಳಿಗಾಗಿ ರೇಸ್ ಆರಂಭಿಸಿರುವ ರೇವಣ್ಣ ಅವರಿಗೆ ನಿರಾಸೆ ಉಂಟು ಮಾಡಿದ್ದಾರೆ.!
ಪಕ್ಷದ ವಿರುದ್ಧವೇ ಮುನಿಸಿಕೊಂಡ ಡಿಕೆಶಿ..!
ಮೈತ್ರಿ ಮಾಡಿಕೊಂಡ ಎರಡೂ ಪಕ್ಷಗಳ ಶಾಸಕರನ್ನು ಯಾರ ಕಣ್ಣಿಗೂ ಬೀಳದಂತೆ ರೆಸಾರ್ಟ್ ಗಳಲ್ಲಿ ಕೂಡಿಹಾಕಿ ಎಲ್ಲಾ ಶಾಸಕರನ್ನು ಕಾಪಾಡಿಕೊಂಡಿದ್ದ ಕಾಂಗ್ರೆಸ್ ನ ಪವರ್ಫುಲ್ ಲೀಡರ್ ಡಿಕೆ ಶಿವಕುಮಾರ್ ಅವರು ಮೈತ್ರಿ ಸರಕಾರದಲ್ಲೂ ನನಗೆ ಇಂಧನ ಖಾತೆಯೇ ಬೇಕೆಂದು ಹೇಳಿಕೊಂಡಿದ್ದರು. ಡಿಕೆಶಿ ಈ ಹಿಂದಿನ ಕಾಂಗ್ರೆಸ್ ಸರಕಾರದ ಸಮಯದಲ್ಲೂ ಇಂಧನ ಸಚಿವರಾಗಿದ್ದ ಕಾರಣ ಈ ಬಾರಿಯೂ ಇಂಧನ ಖಾತೆಗಾಗಿ ಪ್ರಯತ್ನಿಸಿದ್ದರು. ಆದರೆ ಡಿಕೆಶಿ ಆಸೆಗೆ ಅಡ್ಡಗಾಲು ಹಾಕಿದ ಜೆಡಿಎಸ್ನ ರೇವಣ್ಣ ಅವರು ಈ ಖಾತೆಗಾಗಿ ಪಟ್ಟು ಹಿಡಿದಿದ್ದಾರೆ. ಆದ್ದರಿಂದ ಜೆಡಿಎಸ್ ಜೊತೆಗೆ ಸ್ವತಃ ತನ್ನದೇ ಪಕ್ಷದ ವಿರುದ್ಧ ಅಸಮಧಾನಗೊಂಡ ಡಿಕೆಶಿ, ಎಲ್ಲಾ ಮಂತ್ರಿ ಸ್ಥಾನಗಳನ್ನು ಅವರೇ ಇಟ್ಟುಕೊಳ್ಳಲಿ ನನಗೆ ಮುಜರಾಯಿ ಇಲಾಖೆ ಕೊಟ್ಟುಬಿಡಲಿ ದೇವಸ್ಥಾನ ಸುತ್ತುಕೊಂಡು ರಾಜಕೀಯ ಜೀವನ ಕಳೆಯುತ್ತೇನೆ ಎಂದು ಹೇಳುತ್ತಾ ತನಗಾದ ಮೋಸದ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಅಂತೂ ಮೈತ್ರಿ ಮಾಡಿಕೊಂಡು ಸಮ್ಮಿಶ್ರ ಸರಕಾರ ರಚನೆಯಾಗಿ ಇನ್ನೇನು ಆಡಳಿತ ನಡೆಸಬಹುದು ಎಂಬ ಲೆಕ್ಕಾಚಾರ ಹಾಕಿಕೊಂಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಇದೀಗ ಎರಡೂ ಪಕ್ಷಗಳ ಮುಖಂಡರ ನಡೆ ನುಂಗಲಾರದ ತುತ್ತು ಎಂಬಂತಾಗಿದೆ…!
–ಅರ್ಜುನ್