X

ಬದುಕಿದರೂ ನನ್ನ ರೆಜಿಮೆಂಟಿನ ಜೊತೆ! ಸತ್ತರೂ ರೆಜಿಮೆಂಟಿನ ಜೊತೆಯೇ! ಆದರೆ, ತಿರುಗಿ ಮಾತ್ರ ಬರಲಾರೆ ಎಂದಿದ್ದ ಆ ಮಹಾ ಯೋಧ ಕೊನೆಗೂ. . . .

ಪ್ರಾಣ ಇದ್ರೆ ರೆಜಿಮೆಂಟಿನ ಜೊತೆಗೆ , ಸತ್ರೂ ಕೂಡಾ ರೆಜಿಮೆಂಟಿನ ಜೊತೆಗೆ. ಯಾವ ಕಾರಣಕ್ಕೂ ವಾಪಸ್ಸು ಬರಲ್ಲ. ನನ್ನ ಟ್ಯಾಂಕ್ ನೊಂದಿಗೆ ಹೋರಾಟ ಮಾಡುತ್ತೇನೆ. ನಾನು ನನ್ನ ಟ್ಯಾಂಕಿನೊಂದಿಗೆ, ನನ್ನ ರೆಜಿಮೆಂಟಿನೊಂದಿಗೆ ಸಾಯುತ್ತೇನೆ ಹೊರತು ಆಸ್ಪತ್ರೆಯಲ್ಲಲ್ಲ. ನಾನು ಯುದ್ಧವನ್ನು ನೋಡಲೇಬೇಕು. ನಾನು ಯುದ್ಧದಲ್ಲಿ ಹೋರಾಡಲೇಬೇಕು. ನನ್ನ ಸಾವು ಆಗುವುದಾದರೆ ಇದೇ ರೆಜೆಮೆಂಟ್ ನಲ್ಲಿ ಆಗಬೇಕು. ಎಂದು ಅದೇ ರೆಜಿಮೆಂಟ್ ನಲ್ಲಿ ತನ್ನ ಪ್ರಾಣ ಬಲಿದಾನಗೈದ ಯೋಧನ ಹೆಸರು ಲೆಫ್ಟಿನೆಂಟ್ ಕರ್ನಲ್ ಅರ್ಡೆಶಿರ್ ಬರ್ಜೋರ್ಜಿ ತಾರಾಪೋರೆ(A.B. ತಾರಾಪೋರೆ).

ಲೆಫ್ಟಿನೆಂಟ್ ಕರ್ನಲ್ ಅರ್ಡೆಶಿರ್ ಬರ್ಜೋರ್ಜಿ ತಾರಾಪೋರೆ ಅವರು ಹುಟ್ಟಿದ್ದು 1923 ರ ಆಗಸ್ಟ್ 19 ರಂದು ಮುಂಬೈಯಲ್ಲಿ. ತಾರಾಪೋರೆಯವರು ಸೈನ್ಯದ ಹಿನ್ನಲೆಯವರಾಗಿದ್ದರು. ಅವರ ಕುಟುಂಬ ಹಿಂದೆ ಶಿವಾಜಿ ಸೈನ್ಯದಲ್ಲಿತ್ತು. ತಾರಾಪೋರೆಯವರು ಓದಿದ್ದು ಪುಣೆಯಲ್ಲಿ. 1940 ರಲ್ಲಿ ತಮ್ಮ ಮೆಟ್ರಿಕ್ಯುಲೇಷನ್ ಪೂರ್ಣಗೊಳಿಸಿದ ನಂತರ ಅವರು ಸೇನೆಗೆ ಅರ್ಜಿ ಹಾಕಿದರು ಮತ್ತು ಆಯ್ಕೆಯಾದರು. ಸೇನಾ ತರಬೇತಿಗಾಗಿ ಪಡೆದದ್ದು ಗೋಲ್ಕಂಡಾದಲ್ಲಿ. ತರಬೇತಿಯ ನಂತರ ಅವರನ್ನು ಬೆಂಗಳೂರಿಗೆ ಕಳಿಸಲಾಯ್ತು.

ತಾರಾಪೋರೆಯವರು ಸೇನೆಗೆ ಆಯ್ಕೆಯಾದ ಮೇಲೆ ಅವರನ್ನ ಪದಾತಿ ದಳದ ನೇತೃತ್ವ ವಹಿಸಿದರು. ತಾರಾಪೋರೆಯವರಿಗೆ ಪದಾತಿ ದಳಕ್ಕಿಂತಲೂ, ಶಸ್ತ್ರಸಜ್ಜಿತ ಸೇನಾಪಡೆ ಸೇರುವ ಬಯಕೆ ಇತ್ತು. ಅದೊಂದು ದಿನ ಕಮಾಂಡರ್ ಇನ್ ಚೀಫ್ ಮೇಜರ್ ಜನರಲ್ ಎಲ್ ಎಡ್ರೂಸ್ ಅವರು ಪರಿಶೀಲನೆಗೆ ಬಂದಾಗ, ಒಂದು‌ ಪ್ರಯೋಗ ನಡೆದಿತ್ತು. ಆ ಪ್ರಯೋಗದಲ್ಲಿ ಗ್ರೆನೆಡ್ ಎಸೆದಾಗ ಅದು ತುಂಬಾ ಸಮೀಪದಲ್ಲಿ ಬಿತ್ತು. ಆಗ ತಾರಾಪೋರೆ ತತಕ್ಷಣ ಆ ಗ್ರೆನೆಡ್ ನ್ನು ಎಸೆಯಲು ಪ್ರಯತ್ನ ಮಾಡಿ ಎಸೆದು ಬಿಟ್ಟರು. ಆದರೂ ಕೂಡಾ ಅದರಿಂದ ತಾರಾಪೋರೆ ಅವರಿಗೆ ಗಾಯಗಳಾದವು. ತಾರಾಪೋರೆ ಅವರ ಸಾಹಸವನ್ನು ನೋಡಿದ ಮೇಲಿನ ಅಧಿಕಾರಿಗಳು, ತಾರಾಪೋರೆ ಅವರ ಬಯಕೆಯಂತೆ ಶಸ್ತ್ರಸಜ್ಜಿತ ರೆಜಿಮೆಂಟ್ ಗೆ ನೇಮಕ ಮಾಡಿದರು. ತಾರಾಪೋರೆಯವರನ್ನು 1 ನೇ ಹೈದರಾಬಾದ್ ಇಂಪೀರಿಯಲ್ ಸರ್ವಿಸ್ ಲ್ಯಾನ್ಸರ್ ಗೆ ವರ್ಗಾಯಿಸಲಾಯಿತು. ಆಗ ನಡೆದ ಆಪರೇಷನ್ ಪೋಲೋ
ದಲ್ಲಿ ಹೋರಾಡಿ, ತಮ್ಮ ಸಾಹಸವನ್ನು ಮತ್ತೊಮ್ಮೆ ಪ್ರದರ್ಶಿಸಿದರು. ತದನಂತರ ಅವರನ್ನು ಜನರಲ್ ಕಮಾಂಡಿಂಗ್ ಆಫೀಸರ್ (CO) ಆಗಿ ಮಾಡಲಾಯಿತು.

1965ರ ಯುದ್ಧವದು:

1962ರಲ್ಲಿ ಮೊದಲ ಪ್ರಧಾನಿ ನೆಹರೂನ ಅವಿವೇಕತನಕ್ಕೆ ಚೀನಾ ಕಾಲು ಕೆದರಿ ಜಗಳಕ್ಕೆ ಬಂದು ಯುದ್ಧ ಮಾಡಿದಾಗ ಆ ಯುದ್ಧದಲ್ಲಿ 3250 ಯೋಧರು ಹುತಾತ್ಮರಾದರು. ಇಲ್ಲಿ ಒಂದು ವಿಷಯ ತಿಳಿಸಲೇಬೇಕು. ಈ ಯುದ್ಧದಲ್ಲಿ ನಾವು ಸೋತಿದ್ದಕ್ಕೆ ನೇರ ಕಾರಣ ನೆಹರು. ನಮ್ಮ ಸೈನಿಕರ ಕೈಯ್ಯಲ್ಲಿ
ಸರಿಯಾದ ಬಂದೂಕು ಕೊಟ್ಟಿರಲಿಲ್ಲ,ಹಾಕಿಕೊಳ್ಳಲು ಬೂಟು ಇರಲಿಲ್ಲ. ಹಿಂದೂ-ಚೀನಿ ಭಾಯಿ ಭಾಯಿ ಎಂದು ನೆಹರೂ ಬೀಗುತ್ತಿದ್ದಾಗಲೇ ಚೀನಿಯರು ನಮ್ಮ ಮೇಲೆ ಮುಗಿಬಿದ್ದು ನಮ್ಮ ಸೈನಿಕರನ್ನು ಕೊಂದು ಹಾಕಿದ್ದರು. ಯಾವುದೇ ಸಿದ್ಧತೆ ಇರಲಿಲ್ಲ,ಅಸಲಿಗೆ ಸೈನಿಕರಿಗೆ ಹಾಕಿಕೊಳ್ಳಲು ಬೂಟೇ ಇರಲಿಲ್ಲ ಆದರೂ ಯುದ್ಧಕ್ಕೆ ಸಿದ್ಧ ಎಂದು ಅಡುಗೆಮನೆಯಲ್ಲಿ ನೆಹರು ಗರ್ಜಿಸಿ,ಸೈನಿಕರನ್ನು ಗಡಿಗೆ ಕಳಿಸಿಬಿಟ್ಟಿದ್ದ. ಅಲ್ಲಿ ಭಾರತದ ಗಡಿಯಲ್ಲಿ ನಮ್ಮ ನಿಸ್ಸಹಾಯಕ ಯೋಧನೊಬ್ಬ ಜೇಬಿನಲ್ಲಿದ್ದ ಕಟ್ಟಕಡೆಯ ಕಾಡತೂಸನ್ನು ಶತ್ರುವೆನೆಡೆಗೆ ಫೈರ್ ಮಾಡಿ, ಆಟ ನಂತರ ಏನೇನೂ ಮಾಡಲಾಗದೆ ಹಿಮಕಾಡಿನ ಬಟಾಬಯಲಿನಲ್ಲಿ ಬೆಚ್ಚನೆಯದೊಂದು ಅಂಗಿಯೂ ಇಲ್ಲದಂತೆ ನಿಂತಿದ್ದ.ಅವನನ್ನು ಚೀನಿ ಸೈನಿಕರು ನಾಲ್ಕೂ ಕಡೆಯಿಂದ ಸುತ್ತುವರೆದು ಪ್ರಾಣಿಯನ್ನು ಬೇಟೆಯಾಡಿದಂತೆ ಬೇಟೆಯಾಡಿ ಕೊಂದುಬಿಟ್ಟರು. ನೆಹರೂನ ಅವಿವೇಕತನಕ್ಕೆ ಅವನ ಅಡುಗೆಮನೆಯ ಪೌರುಷಕ್ಕೆ 3250 ಯೋಧರನ್ನು ಭಾರತ ಕಳೆದುಕೊಂಡಿತು.

ಚೀನಾದ ಜೊತೆ ರಾಜಕೀಯ ಪಡಸಾಲೆಯಿಂದ ಭಾರತ 1962 ರಲ್ಲಿ ಸೋತಿದ್ದರ ಪರಿಣಾಮ,1965ರಲ್ಲಿ ಪಾಕಿಸ್ತಾನ ಅದೇ ಸಮಯವನ್ನು ಬಳಸಿಕೊಂಡು ಭಾರತದೊಂದಿಗೆ ಯುದ್ಧ ಮಾಡಲು ಯೋಚನೆ ಮಾಡಿತು. ಅದರಂತೆ ಪಾಕಿಸ್ತಾನ ಅಮೆರಿಕಾದೊಂದಿಗೆ ಸಂಭಂದವನ್ನು ಗಟ್ಟಿಮಾಡಿಕೊಂಡು ನ್ಯಾಟೋ ಮತ್ತು ಸೆಂಟೋದ್ ಮೇಂಬರ್ ಆಗಿ ಅಮೆರಿಕಾದ ಶಸ್ತ್ರಾಸ್ತ್ರಗಳನ್ನು ತನ್ನ ದೇಶಕ್ಕೆ ತಂದಿಟ್ಟುಕೊಳ್ಳುವ ವ್ಯವಸ್ಥೆ ಮಾಡಿತು. ಪಾಕಿಸ್ತಾನ ಅಮೆರಿಕಾದಿಂದ ಪೆಟನ್ ಟ್ಯಾಂಕ್ ಮತ್ತು ಸೇಬರ್ ಜೆಟ್ ಗಳನ್ನು ತಂದುಕೊಂಡಿತು. ತೀರಾ ಬಲಿಷ್ಠವಾಗಿ ಬೆಳೆದು ನಿಂತು ಭಾರತದ ಮೇಲೆ ಯುದ್ಧ ಮಾಡುವ ತಯಾರಿ ನಡೆಸಿತು. ಅಷ್ಟೊತ್ತಿಗಾಗಲೇ ನೆಹರೂ ಅವರು ತೀರಿಕೊಂಡಿದ್ದರು. ಆಗ ಪಾಕಿಸ್ತಾನ ಹೊಂಚುಹಾಕಿತು. ಪ್ರಧಾನಿ ತೀರಿಹೋಗಿದ್ದರಿಂದ ಮುಂದಿನ ಪ್ರಧಾನಿ ಯಾರು ಎನ್ನುವ ಗೊಂದಲದಲ್ಲಿರುವಾಗಲೇ ನಾವು ಯುದ್ಧ ಮಾಡಬೇಕೆಂದು ತಯಾರಿ ನಡೆಸಿತು. ಆಗಲೇ ನಡೆದದ್ದು ಚಮತ್ಕಾರ. ಪರಮ ದೇಶಭಕ್ತ , ಪರಮ ಪ್ರಾಮಾಣಿಕ , ಅತ್ಯಂತ ಸರಳ ಜೀವಿಯಾದ ಲಾಲ್ ಬಹದ್ದೂರ್ ಶಾಸ್ತ್ರೀಯವರು ಪ್ರಧಾನಿಯಾಗಿ ಚುಕ್ಕಾಣಿ ಹಿಡಿದರು.

ಆಗ ಪಾಕಿಸ್ತಾನ ಪ್ರಯೋಗದ ರೀತಿಯಲ್ಲಿ ಗುಜರಾತಿನ ಕಚ್ಛ ಪ್ರದೇಶದ ಮೇಲೆ ದಾಳಿ ಮಾಡಿ ನೋಡಿತು. ಆಗ ಯುರೋಪ್ ಸಂಧಾನ ಆಡಿ ಅವರನ್ನು ಅವರ ದೇಶಕ್ಕೆ ಕಳಿಸಿತು. ಪಾಕಿಸ್ತಾನಕ್ಕೆ ಆ ದಾಳಿ ಪ್ರಯೋಗದ ರೀತಿಯದ್ದಾಗಿತ್ತು. ಕಚ್ಛ ಪ್ರದೇಶದ ತನಕ ಬಂದು ದಾಳಿ ಮಾಡಿ ಹೋದ ಪಾಕಿಸ್ತಾನಕ್ಕೆ ಈಗ ಮತ್ತಷ್ಟು ಧೈರ್ಯ ಬಂದಿತ್ತು. ಈಗ ಮತ್ತೆ ಕಾಶ್ಮೀರ ಮತ್ತು ಪಂಜಾಬಿನ ಮೇಲೆ ಕಣ್ಣು ಹಾಕಿತು. ಕಾಶ್ಮೀರ ಮತ್ತು ಪಂಜಾಬಿನ ಮೇಲೆ ದಾಳಿ ಮಾಡಿ ದೆಹಲಿಯವರೆಗೂ ವಶಪಡಿಸಿಕೊಳ್ಳುವ ಯೋಜನೆ ರೂಪಿಸಿತು. ಅಂತೂ ಇಂತೂ ತಯಾರಾಗಿಯೇ ಬಿಟ್ಟರು.

ಭಾರತದ ಮೇಲೆ ಪಾಕಿಸ್ತಾನ ದಾಳಿ ಮಾಡಲು ಅವರಲ್ಲಿ ಯಾವ ಧೈರ್ಯವಿತ್ತು ಗೊತ್ತಾ? ಅವರಲ್ಲಿ ಅಮೆರಿಕಾದಿಂದ ತಂದ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಇದ್ದವು. ಅವುಗಳ ಧೈರ್ಯದ ಮೇಲೆಯೇ ಅದು ಭಾರತದ ಮೇಲೆ ದಾಳಿ ಮಾಡಲು ಧೈರ್ಯ ಮಾಡಿದ್ದು. ಪಾಕಿಗಳು ತಂದುಕೊಂಡಿದ್ದಂತಹ ಅಮೆರಿಕಾದ ಶಸ್ತ್ರಾಸ್ತ್ರಗಳು ಅದೇ ವರ್ಷ ತಯಾರು ಮಾಡಿದಂತಹ ಅತ್ಯಾಧುನಿಕ ಶಸ್ತ್ರಾಸ್ತ್ರಗಳಾಗಿದ್ದವು. ಅದರಲ್ಲೂ ಅವರಲ್ಲಿದ್ದ ಪೆಟನ್ ಟ್ಯಾಂಕ್ ಶಕ್ತಿ ಎಷ್ಟಿತ್ತೆಂದರೆ ಅದು 2km ದೂರದಲ್ಲೊರುವುದನ್ನೂ ಉಡಾಯಿಸಿ ಬಿಡುತ್ತಿತ್ತು. ರಾತ್ರಿಯ ಸಮಯದಲ್ಲೂ ಆ ಪೆಟನ್ ಟ್ಯಾಂಕ್ ಗಳು ಕೆಲಸ ಮಾಡುವಂತಹ ಸಾಮರ್ಥ್ಯವನ್ನು ಹೊಂದಿದ್ದವು.

ಆದರೆ ಆಗಿನ ಭಾರತದ ಪರಿಸ್ಥಿತಿ ಹೇಗಿತ್ತು ಗೊತ್ತಾ?

ಆಗ ಭಾರತೀಯ ಸೇನೆಯಲ್ಲಿರುವ ಟ್ಯಾಂಕ್ ಗಳು 1942ರ ಟ್ಯಾಂಕ್ ಗಳು. ಎರಡನೇ ಜಾಗತಿಕ ಯುದ್ಧದ ಸಂದರ್ಭದಲ್ಲಿ ತಯಾರು ಮಾಡಿದಂತಹ ಟ್ಯಾಂಕ್ ಗಳಿದ್ದವು. ಅವುಗಳ ಸಾಮರ್ಥ್ಯ 0.8km(800m) ಮಾತ್ರ. ರಾತ್ರಿ ಕೆಲಸ ಮಾಡುವ ಸಾಮರ್ಥ್ಯವಿರುವ ಟ್ಯಾಂಕ್ ಗಳಾಗಿರಲಿಲ್ಲ. ಪಾಕಿಗಳ ಹತ್ತಿರ ಅದೇ ವರ್ಷ ಅಂದರೆ 1965ರಲ್ಲೇ ತಯಾರು ಮಾಡಿದ ಶಸ್ತ್ರಾಸ್ತ್ರಗಳಿದ್ದವು. ಇದೆಲ್ಲಾ ಲೆಕ್ಕಾಚಾರ ಹಾಕಿಯೇ ಪಾಕಿಸ್ತಾನ ನಮ್ಮ ಮೇಲೆ ದಾಳಿ ಮಾಡುವ ಯೋಜನೆ ರೂಪಿಸಿದ್ದು.

1965ರ ಆ ಯುದ್ಧದಲ್ಲಿ ತಾರಪೋರೆ ಅವರಿಗೆ ಸೈಲ್ಕೋಟ್ ಸೆಕ್ಟರ್ನಲ್ಲಿ ಫಿಲ್ಲೋರಾ ವಶಪಡಿಸಿಕೊಳ್ಳುವ ಜವಾಬ್ದಾರಿ ವಹಿಸಲಾಯಿತು. ಅದರಂತೆ ತಾರಾಪೋರೆಯವರು ಯೋಜನೆ ರೂಪಿಸಿ 14 ಸೆಪ್ಟೆಂಬರ್ 1965 ರಂದು ವಾಜಿರಾಲಿಯನ್ನು ವಶಪಡಿಸಿಕೊಂಡರು. ಮತ್ತು 16 ನೇ ಹೊತ್ತಿಗೆ ಜಸ್ಸೋರಾನ್ ಮತ್ತು ಬುತುರ್-ಡೊಗಂಡಿಯನ್ನು ವಶಪಡಿಸಿಕೊಂಡರು. ಆ ಹೊತ್ತಿಗೆ ತಾರಾಪೋರೆ ಅವರ ದೇಹ ಗುಂಡಿನ ದಾಳಿಯಿಂದ ಜರ್ಜರಿತವಾಗಿತ್ತು. ಆಗ ಜೊತೆಗಿದ್ದ ಸೈನಿಕರು ಆಸ್ಪತ್ರೆಗೆ ಸೇರಿಸುತ್ತೇವೆ ನಿಮ್ಮನ್ನು ಅಂದಾಗ. ಯೋಧ ಎ.ಬಿ.
ತಾರಾಪೋರೆಯವರು ಏನು ಹೇಳ್ತಾರೆ ಗೊತ್ತಾ?

ಪ್ರಾಣ ಇದ್ರೆ ರೆಜಿಮೆಂಟಿನ ಜೊತೆಗೆ , ಸತ್ರೂ ಕೂಡಾ ರೆಜಿಮೆಂಟಿನ ಜೊತೆಗೆ. ಯಾವ ಕಾರಣಕ್ಕೂ ವಾಪಸ್ಸು ಬರಲ್ಲ. ನನ್ನ ಟ್ಯಾಂಕ್ ನೊಂದಿಗೆ ಹೋರಾಟ ಮಾಡುತ್ತೇನೆ. ನಾನು ನನ್ನ ಟ್ಯಾಂಕಿನೊಂದಿಗೆ, ನನ್ನ ರೆಜಿಮೆಂಟಿನೊಂದಿಗೆ ಸಾಯುತ್ತೇನೆ ಹೊರತು ಆಸ್ಪತ್ರೆಯಲ್ಲಲ್ಲ. ನಾನು ಯುದ್ಧವನ್ನು ನೋಡಲೇಬೇಕು. ನಾನು ಯುದ್ಧದಲ್ಲಿ ಹೋರಾಡಲೇಬೇಕು. ನನ್ನ ಸಾವು ಆಗುವುದಾದರೆ ಇದೇ ರೆಜೆಮೆಂಟ್ ನಲ್ಲಿ ಆಗಬೇಕು.

ಆ ಯೋಧ ತಾನು ಅಂದಂತೆ ಎಲ್ಲಾ ಬೆಟ್ಟಗಳನ್ನು ವಶಪಡಿಸಿಕೊಳ್ಳುವವರೆಗೂ ಆ ರೆಜಿಮೆಂಟ್ ಬಿಟ್ಟು ಕದಲಲಿಲ್ಲ. ಕೊನೆಯ ಬೆಟ್ಟ ವಶ ಪಡಿಸಿ ಕೊಳ್ಳುವವರೆಗೂ ಆ ವೀರಯೋಧ ತನ್ನ ಪ್ರಾಣವನ್ನು ಹಿಡಿದು ಹೋರಾಡಿದ್ದ. ಕೊನೆಯ ಬೆಟ್ಟ ವಶಪಡಿಸಿಕೊಂಡಾಗಲೇ ಆತನ ಪ್ರಾಣಪಕ್ಷಿ ಹಾರಿಹೋದದ್ದು.
ತಾರಪೋರೆಯವರ ಸಾಹಸಕ್ಕೆ ಮರಣಾನಂತರ ಅವರಿಗೆ ದೇಶದ ಪರಮೋಚ್ಛ ಪ್ರಶಸ್ತಿ ಪರಮವೀರ ಚಕ್ರ ನೀಡಿ ಗೌರವಿಸಿತು.

ಇಂತಹ ವೀರಯೋಧರ ಸಾಹಸ , ಬಲಿದಾನಗಳಿಂದಲೇ ನಾವಿಂದು ಆರಾಮಾಗಿದ್ದೇವೆ. ಅವರನ್ನು ನೆನಪಿಸಿಕೊಳ್ಳವುದು,ಅವರಿಗೆ ಗೌರವಿಸೋದು ನಮ್ಮ ಕರ್ತವ್ಯ. ಈ ಲೇಖನವನ್ನು ಓದಿದ ಮೇಲೆ ಎರಡು ಹನಿ ಕಣ್ಣೀರು ಸುರಿಸಿಬಿಡಿ. ಅದೇ ನಾವು ಸೈನಿಕರಿಗೆ ಕೊಡುವ ದೊಡ್ಡ ಗೌರವ. ನಮ್ಮಿಂದ ಗಡಿಗೆ ಹೋಗಿ ಹೋರಾಡಿ ಸಾಯೋದಕ್ಕಂತೂ ಆಗಲ್ಲ ಅದಕ್ಕಾಗಿ ದೇಶಕ್ಕಾಗಿ ಬದುಕೋಣ. ದೇಶ ಸೇವೆ ಮಾಡುತ್ತಿರುವ , ತಾಯಿ ಭಾರತಾಂಬೆಗಾಗಿ ಮಾಡಿದ ವೀರ ಯೋಧರನ್ನು ನೆನೆಯೋಣ. ವೀರ ಯೋಧರ ಬಗ್ಗೆ ದಿನಕ್ಕೆ ಒಂದು ಸಾರಿಯಾದರೂ ನೆನಪಿಸಿಕೊಳ್ಳಿ. ನಮ್ಮಿಂದ ದೇಶಕ್ಕಾಗಿ ಸಾಯೋಕಂತೂ ಆಗಲ್ಲ, ಕನಿಷ್ಠ ಪಕ್ಷ ದೇಶಕ್ಕಾಗಿ ಬದುಕಿ.

ಜೈ ಹಿಂದ್

-ಶಿವಾಂಶ

Editor Postcard Kannada:
Related Post