ಮಹದಾಯಿ ಪರ ಹೋರಾಡುತ್ತೇವೆ ಎಂದರು! ಕೊನೆಗೆ ಕರ್ನಾಟಕವನ್ನು ಬಂದ್ ಮಾಡ್ತೇವೆ ಎಂದರು! ಇಲ್ಲ ಇಲ್ಲ, ಮಹದಾಯಿಗಷ್ಟೇ ಹೋರಾಟ ಎಲ್ಲರ ಸಮ್ಮುಖದಲ್ಲಿ ಎಂದರು! ಇದೆಲ್ಲ ನೋಡುತ್ತಿದ್ದರೆ ಕರ್ನಾಟಕ ಬಂದ್ ವಿಫಲವಾಗುವ ಎಲ್ಲಾ ಲಕ್ಷಣಗಳೂ ಗೋಚರವಾಗುತ್ತಿದೆ!
ಒಂದೇ ಕಲ್ಲಿನಲ್ಲಿ ಮೂರು ಹಕ್ಕಿ ಹೊಡೆಯ ಹೋಗಿ. . .
ಹಾ! ಮಹದಾಯಿ ಗಲಾಟೆಯ ವಿಚಾರವನ್ನಿಟ್ಟುಕೊಂಡು ಕಳೆದ ತಿಂಗಳಿನಿಂದಲೂ ಒಂದಲ್ಲ ಒಂದು ರಗಳೆಯಾಗುತ್ತಲೇ ಇದೆ! ನಿಜಕ್ಕೂ ಕನ್ನಡ ಪರ ಸಂಘಟನೆಗಳಿಗೆ ಮಹದಾಯಿಯ ವಿಚಾರವಾಗಿ ಕಾಳಜಿ ಇದ್ದಿದ್ದರೆ ಇಷ್ಟು ದಿನ ಬೇಕಾಗುತ್ತಲೇ ಇರಲಿಲ್ಲ ಬಂದ್ ಗೆ ಕರೆ ನೀಡಲು! ಅಥವಾ, ಕರ್ನಾಟಕದ ಗಡಿಯಿಂದ ಗೋವಾಕೆ ಕಾಲ್ನಡಿಗೆಯಲ್ಲಿ ಚಳುವಳಿ ಪ್ರಾರಂಭಿಸಲು! ಏನ್ ಮಾಡೋದು ಹೇಳಿ! ಎಲ್ಲಿ ಯಡಿಯೂರಪ್ಪನವರು ಹರಸಾಹಸ ಮಾಡಿ ಕರ್ನಾಟಕಕ್ಕೆ ನೀರು ತರಲೇಬೇಕು ಎಂದದ್ದೇ ಕಾಂಗ್ರೆಸ್ ಗೆ ಇದ್ದಕ್ಕಿದ್ದಂತೆ ಬೆದರಿ ರೈತ ಸಂಘವನ್ನು ಎತ್ತಿ ಕಟ್ಟಿ ಪ್ರತಿಭಟನೆ ಮಾಡಿಸಿದ್ದೂ ಅಲ್ಲದೇ, ಕೊನೆಗೆ ಇಲ್ಲಾದರೂ ಸನ್ನಿ ನೈಟ್ಸ್ ನಲ್ಲಿ ಹೋದ ಮರ್ಯಾದೆ ಯನ್ನು ಮರಳಿ ಪಡೆಯಲಿಕ್ಕಾಗುತ್ತದೆಯೇ ಎಂದು ಕರ್ನಾಟಕ ರಕ್ಷಣಾ ವೇದಿಕೆಯವರೂ ಬಂದಿದ್ದಾಯ್ತು! ಕಾಂಗ್ರೆಸ್ ಗೆ ಫುಲ್ ಖುಷಿಯಾಗುವಾಗಲೇ ವಾಟಾಳ್ ನಾಗರಾಜ್ ಕೂಡ ಕಪ್ಪು ಕನ್ನಡಕದೊಳ ಕಣ್ಣು ಹೊಡೆದು, ತೋರು ಬೆರಳು ತೋರುತ್ತಾ ಹೇಳಿದ್ದಾಯ್ತು! “ಕರ್ನಾಟಕ ಬಂದ್” ಎಂದು!
ಅಷ್ಟಕ್ಕೆ ಸರಿಯಾಗಿ, ಮೋದಿ ಮತ್ತು ಅಮಿತ್ ಷಾ ರಿಬ್ಬರೂ ಸಹ ಕರ್ನಾಟಕ ಪ್ರವಾಸಕ್ಕೆ ಜನವರಿ 25 ಮತ್ತು ಫೆಬ್ರುವರಿ 4 ರ ದಿನಾಂಕದಂದು ಬರುತ್ತಿರುವುದು ಎಲ್ಲಿ ನಿಶ್ಚಿತವಾಯಿತೋ, ಈ ಎಲ್ಲಾ ಸೋ ಕಾಲ್ಡ್ ಹೋರಾಟಗಾರರು ಆ ಎರಡು ದಿನದಂದೇ ಕರ್ನಾಟಕ ಬಂದ್ ಎಂದರು! ಆದರೆ, ಒಬ್ಬೊಬ್ಬರಾಗಿಯೇ ಬಂದ್ ನಿಂದ ಹಿಂದೆ ಸರಿದ ಪರಿಣಾಮ ಈಗ ಮತ್ತೊಂದು ಗೊಂದಲ ಪ್ರಾರಂಭವಾಗಿದೆ!
ಕೈ ಕೊಟ್ಟರು ನಂಬಿದ್ದವರು! ಜಾಣನಾದ ಕರವೇ ಅಧ್ಯಕ್ಷ!
70 ಕನ್ನಡ ಪರ ಸಂಘಟನೆಗಳು ಹಿಂದೆ ಸರಿದಿವೆ! ಹೋಟೆಲ್ ಮಾಲೀಕರು ಬಂದ್ ಗೆ ಬೆಂಬಲ ನೀಡುವುದಿಲ್ಲ ಎಂದಿದ್ದಾರೆ ! ಟ್ಯಾಕ್ಸಿ ಚಾಲಕರೂ ಸಹ ಬಂದ್ ಗೆ ಬೆಂಬಲ ನೀಡಲು ನಿರಾಕರಿಸಿದ್ದಾರೆ! ಓಹೋ! ಇನ್ನು ಏನು ಮಾಡಲಿ ಎಂದು ಚಿಂತೆಗೆ ಕುಳಿತ ಕರವೇ ಅಧ್ಯಕ್ಷ ಗೇರನ್ನು ರಿವರ್ಸ್ ಮಾಡಿದ್ದಾರೆ! ಮುಂಚೆ, ವಾಟಾಳ್ ನಾಗರಾಜ್ ಯಾವಾಗ ಬೆಂಬಲಕ್ಕೆ ನಿಂತರೋ, ಸ್ವಲ್ಪ ನಿಮಿರಿದ್ದ ಕರವೇ ಬಣ ಈಗ ಬಂದ್ ಗೆ ಯಾರಿಂದಲೂ ಬೆಂಬಲ ಸಿಗದ ಹಿನ್ನೆಲೆಯಲ್ಲಿ ಸರಕ್ಕನೇ ಜಾರಿಕೊಂಡಿದೆ! ಇಲ್ಲಿಯವರೆಗೂ ಕರ್ನಾಟಕ ಬಂದ್ ನಡೆದೇ ನಡೆಯುತ್ತೆ ಎಂದು ಅಬ್ಬರಿಸುತ್ತಿದ್ದ ಕರವೇ ಬಣದ ಅಧ್ಯಕ್ಷರು ಈಗ ವರಸೆಯನ್ನೇ ಬದಲಿಸಿದ್ದಾರೆ! “ಇನ್ನೂ ಬಂದ್ ಗೆ ನಾನು ಒಪ್ಪಿಗೆಯನ್ನೇ ನೀಡಿಲ್ಲ” ಎಂದಿರುವ ಅಧ್ಯಕ್ಷರು ಹೋರಾಟದಿಂದ ಹಿಂದೆ ಸರಿದಿರುವುದು ಬಹುತೇಕ ಖಚಿತವಾಗಿದೆ!
ಒನ್ ಮ್ಯಾನ್ ಆರ್ಮಿ ಈಗ ವಾಟಾಳ್!
ನಿಜಕ್ಕೂ ಬೇಸರವಾಗುತ್ತೆ! ವಾಟಾಳ್ ಬಣವೊಂದನ್ನು ಕಟ್ಟಿಕೊಂಡಿದ್ದ ನಾಗರಾಜ್ ರವರು ವಿಧ ವಿಧ ರೀತಿಯಲ್ಲಿ ಪ್ರತಿಭಟನೆ ಮಾಡುತ್ತ ಇದ್ದರಷ್ಟೇ! ಆದರೆ, ಎಲ್ಲಿ ಕನ್ನಡ ಪರ ಸಂಘಟನೆಗಳ ನಾಯಕರಾದ ಪ್ರವೀಣ್ ಶೆಟ್ಟಿಯೂ ಹಿಂದೆ ಸರಿದರೋ, ವಾಟಾಳ್ ಈಗೊಬ್ಬರೇ ಆಗಿ ಹೋಗಿದ್ದಾರೆ! ಅದಕ್ಕೇ, ‘ನಾಳೆ ಬಂದ್ ಮಾಡಿಲ್ಲವೆಂದರೆ ಬಂದ್ ಮಾಡಿಸುತ್ಥೀನಿ” ಎಂದು ಹೇಳಿಕೆ ಕೊಟ್ಡಿದ್ದು ಈಗ ಬಹುತೇಕ ಸ್ಪಷ್ಟವಾಗಿದೆ! ನಾಳೆ ಯಾವ ಬಂದ್ ಕೂಡ ಇಲ್ಲವೆಂದು!
ವಾಟಾಳ್ ಬಣದಿಂದ ಧಮ್ಕಿ..?
ಕನ್ನಡ ಪರ ಹೋರಾಟಗಾರ ವಾಟಾಲ್ ನಾಗರಾಜ್ ಬಣದ ಕಡೆಯವರಿಂದ ಕನ್ನಡ ಸಂಘದ ಕಾರ್ಯಕರ್ತರಿಕೆ ಬೆದರಿಕೆ ಒಡ್ಡಲಾಗಿದೆ ಎನ್ನಲಾಗಿದೆ. ಒಟ್ಟು 70 ಕನ್ನಡ ಪರ ಸಂಘಟನೆಗಳು ವಾಟಾಳ್ ನಾಗರಾಜ್ ಅವರ ಗುಂಪಿನ ಈ ಬೆದರಿಕೆಯಿಂದ ಅಸಮಧಾನಗೊಂಡಿದ್ದಾರೆ. ಕನ್ನಡ ಪರ ಹೋರಾಟಗಾರರಾದ ಒಂದು ಸಂಘಟನೆಗೆ ಕರೆ ಮಾಡಿದ ವಾಟಾಳ್ ನಾಗರಾಜ್ ಅವರ ಗುಂಪೊಂದು ಮನಬಂದಂತೆ ನಿಂದಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಬೇಸರಗೊಂಡ ಕನ್ನಡ ಪರ ಹೋರಾಟಗಾರರು ಬಂದ್ಗೆ ತಮ್ಮ ಬೆಂಬಲವನ್ನು ವಾಪಾಸ್ ಪಡೆದಿದ್ದಾರೆ. ಕರೆ ಕೊಟ್ಟಿದ್ದ ಒಟ್ಟು 70ಕ್ಕಿಂತಲೂ ಅಧಿಕ ಕನ್ನಡ ಪರ ಸಂಘಟನೆಗಳು ಈಗ ಬಂದ್ಗೆ ನೀಡಿದ ಬೆಂಬಲವನ್ನು ವಾಪಾಸ್ ಪಡೆದಿರುವುದು ಮತ್ತೊಂದು ಬಣಕ್ಕೆ ತೀವ್ರ ಮುಜುಗರ ಅನುಭವಿಸುವಂತಾಗಿದೆ.
ಮತ್ತೊಂದೆಡೆ ಕರ್ನಾಟಕ ಬಂದ್ನ್ನು ರಾಜಕೀಯಗೊಳಿಸುತ್ತಿರುವ ಕೆಲವು ಕನ್ನಡ ಪರ ಸಂಘಟನೆಗಳ ವಿರುದ್ಧವೂ ಈ ಕನ್ನಡ ಪರ ಸಂಘಟನೆಗಳು ಗರಂ ಆಗಿದ್ದಾರೆ ಎನ್ನುವ ಮಾಹಿತಿಯೂ ಸಿಕ್ಕಿದೆ. ಭಾರತೀಯ ಜನತಾ ಪಕ್ಷದ ನಾಯಕರುಗಳು ರಾಜ್ಯಕ್ಕೆ ಆಗಮಿಸುವ ದಿನದಂದೇ ಕರ್ನಾಟಕ ಬಂದ್ಗೆ ಕರೆ ಕೊಟ್ಟಿದ್ದು ಹೋರಾಟದ ಹಾದಿಯನ್ನು ಬದಲಾಯಿಸಿದೆ ಎಂದು ಆರೋಪಿಸಿದ್ದಾರೆ. ಈ ಮುಂಚೆಯೇ ನಿಗಧಿಯಾಗಿದ್ದ ಬಂದ್ ದಿನಾಂಕವನ್ನು ಅಮಿತ್ ಶಾ ಹಾಗೂ ನರೇಂದ್ರ ಮೋದಿ ಆಗಮಿಸುವ ದಿನಾಂಕಕ್ಕೆ ಬದಲಾಯಿಸಿ ರಾಜಕೀಯಗೊಳಿಸುತ್ತಿರುವ ಕೆಲವು ಕನ್ನಡ ಪರ ಸಂಘಟನೆಗಳ ಬಗ್ಗೆಯೂ ಈ 70 ಸಂಘಟನೆಗಳು ಚಾಟಿ ಬೀಸಿವೆ. ಮಾತ್ರವಲ್ಲದೆ ರಾಜಕೀಯ ರಹಿತವಾಗಿ ನಡೆಸುತ್ತಿರುವ ಈ ಹೋರಾಟವು ಕಾಂಗ್ರೆಸ್ ಪ್ರವೇಶದಿಂದ ರಾಜಕೀಯವಾಗುತ್ತಿರುವುದು ಕೂಡಾ ಕನ್ನಡ ಪರ ಸಂಘಟನೆಗಳು ಕೆಂಡಾಮಂಡಲವಾಗಲು ಕಾರಣವಾಗಿದೆ.
ಕರ್ನಾಟಕ ಬಂದ್ ಆಗುತ್ತೆ, ಜನಜೀವನ ಅಸ್ತವ್ಯಸ್ತ ಆಗುತ್ತೆ ಎಂದು ಈವರೆಗೆ ಹೇಳುತ್ತಲೇ ಬರುತ್ತಿದ್ದ ಕನ್ನಡ ಪರ ಸಂಘಟನೆಗಳು ಈಗ ತಮ್ಮ ಮಾರ್ಗವನ್ನು ಬದಲಾಯಿಸಿದೆ. ಆಡಳಿತ ನಡೆಸುತ್ತಿರುವ ಸರ್ಕಾರವು ಬಂದ್ ನಡೆಸುವುದಕ್ಕೆ ವಿರೋಧ ವ್ಯಕ್ತಪಡಿಸಬೇಕು. ಆದರೆ ಆಡಳಿತ ನಡೆಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರವೇ ತನ್ನ ರಾಜಕೀಯ ಲಾಭಕ್ಕೋಸ್ಕರ ಬಂದ್ ನಡೆಸಲು ಕುಮ್ಮಕ್ಕು ನೀಡುತ್ತಿರುವುದು ಕೂಡಾ ಬಯಲಾಗಿದೆ. ಹೀಗಾಗಿಯೇ 70ಕ್ಕಿಂತಲೂ ಅಧಿಕ ಕನ್ನಡ ಪರ ಸಂಘಟನೆಗಳು ಈ ಬಂದ್ಗೆ ನೀಡಿದ್ದ ಬಂದ್ನ್ನು ವಾಪಾಸ್ ಪಡೆಯಲು ನಿರ್ಧರಿಸಿ ಘೋಷಿಸಿದ್ದಾರೆ. ಆಡಳಿತ ನಡೆಸುತ್ತಿರುವ ಸರ್ಕಾರವೇ ಕೇವಲ ರಾಜಕೀಯ ಉದ್ಧೇಶಕ್ಕಾಗಿ ಬಂದ್ಗೆ ಆದೇಶ ನೀಡಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.
-Prithu Agnihotri