X

ಕಮಲ ಹಿಡಿದು ಆರ್ಭಟಿಸಲಿದ್ದಾರೆ ಆರ್ಮುಗ..! ಬಿಜೆಪಿ ಚುನಾವಣಾ ಅಖಾಡಕ್ಕಿಳಿದ ರವಿಶಂಕರ್..! ಮೊಳಗಲಿದೆ ಪಂಚಿಂಗ್ ಡೈಲಾಗ್!

ಬಿಜೆಪಿ ಬಿಜೆಪಿ ಬಿಜೆಪಿ… ಎತ್ತ ನೋಡಿದರೂ ಈಗ ಕೇಸರಿ ಪಕ್ಷದ್ದೇ ಜಪ. ಕಳೆದ 5 ವರ್ಷದಲ್ಲಿ ಕಾಂಗ್ರೆಸ್ ಮಾಡಿರುವ ಅನಾಚಾರಗಳನ್ನು ಧಿಕ್ಕರಿಸಿ, ಶತಾಯ ಗತಾಯ ಈ ಬಾರಿ ಕಮಲ ಅರಳಿಸಲೇಬೇಕು ಎನ್ನುವ ಹಠದೊಂದಿಗೆ ಈಜುತ್ತಿದ್ದಾರೆ ಭಾರತೀಯ ಜನತಾ ಪಕ್ಷದ ನಾಯಕರು. ಮುಖ್ಯಮಂತ್ರಿ ಸಿದ್ದರಾಮಯ್ಯರನ್ನೇ ಸೋಲಿಸಬೇಕೆಂಬ ಹಠಕ್ಕೆ ಬಿದ್ದಿರುವ ಬಿಜೆಪಿ ನಾಯಕರು ಏನೇ ಆದರೂ ಮುಂದಿನ ಬಾರಿ ಬಿಜೆಪಿ ಸರ್ಕಾರ ನಡೆಸಲೇ ಬೇಕು ಎಂಬ ಮಂತ್ರವನ್ನು ಜಪಿಸುತ್ತಿದೆ. ಈಗಾಗಲೇ ಆರಂಭವಾಗಿರುವ ಪ್ರಚಾರದ ಭರಾಟೆ ಪ್ರಧಾನಿ ಮೋದಿ ಆಗಮನದ ನಂತರ ಮತ್ತಷ್ಟು ರಂಗೇರಲಿದೆ.

ಕಣಕ್ಕಿಳಿದಿದ್ದಾರೆ ಟಾಪ್ ಸ್ಟಾರ್ ಗಳು…

ಈ ಬಾರಿ ಭಾರತೀಯ ಜನತಾ ಪಕ್ಷದಲ್ಲಿ ಸ್ಟಾರ್ ನಟರ ಕಣವೂ ಭಾರೀ ಕುತೂಹಲಗಳನ್ನೇ ಸೃಷ್ಟಿಸಿವೆ. ನವರಸ ನಾಯಕ ಜಗ್ಗೇಶ್ ಹಾಗೂ ಡೈಲಾಗ್ ಕಿಂಗ್ ಸಾಯಿಕುಮಾರ್ ಗೂ ಭಾರತೀಯ ಜನತಾ ಪಕ್ಷದಿಂದ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಬಾಗಲಕೋಟೆಯಿಂದ ನಟ ಸಾಯಿಕುಮಾರ್ ಕಣಕ್ಕಿಳಿದಿದ್ದರೆ, ಬೆಂಗಳೂರಿನ ಯಶವಂತಪುರದಿಂದ ನವರಸ ನಾಯಕ ಜಗ್ಗೇಶ್ ಜಿದ್ದಿಗೆ ಬಿದ್ದಿದ್ದಾರೆ.

ಕಮಲ ಹಿಡಿದು ಅಬ್ಬರಿಸಲಿದ್ದಾರೆ ಆರ್ಮುಗ…!

ಈ ಬಾರಿ ತೆರೆ ಮೇಲೇ ಘರ್ಜಿಸುತ್ತಿದ್ದ ರವಿಶಂಕರ್ ಭಾರತೀಯ ಜನತಾ ಪಕ್ಷದ ಪರವಾಗಿ ಅಬ್ಬರಿಸಲಿದ್ದಾರೆ. ತನ್ನ ಸಹೋದರ ಡೈಲಾಗ್ ಕಿಂಗ್ ಸಾಯಿ ಕುಮಾರ್ ಅವರು ಬಾಗಲಕೋಟೆಯಲ್ಲಿ ಭಾರತೀಯ ಜನತಾ ಪಕ್ಷದಿಂದ ಅಖಾಡಕ್ಕಿಳಿದಿದ್ದಾರೆ. ಹೀಗಾಗಿ ತನ್ನ ಸಹೋದರನ ಪರವಾಗಿ ನಟ ರವಿಶಂಕರ್ ಪ್ರಚಾರ ಕೈಗೊಳ್ಳಲಿದ್ದಾರೆ. ಬಾಗಲಕೋಟೆಯಲ್ಲಿ ಈ ಬಾರಿ ಕಮಲ ಅರಳಿಸಲೇಬೇಕು ಎಂಬ ಹಠಕ್ಕೆ ಬಿದ್ದಿರುವ ಬಿಜೆಪಿ ನಾಯಕರು ಇದೀಗ ಸಾಯಿಕುಮಾರ್ ಪರ ಅವರ ಸಹೋದರ ರವಿಶಂರ್ ಅವರನ್ನು ಕಣಕ್ಕಿಳಿಸಲಿದ್ದಾರೆ. ಈ ಮೂಲಕ ಚುನಾವಣಾ ಅಖಾಡ ಮತ್ತಷ್ಟು ರಂಗೇರುವ ಎಲ್ಲಾ ಸಾಧ್ಯತೆಗಳೂ ಇವೆ.

ಯಥಾ ಅಣ್ಣ ತಥಾ ತಮ್ಮ..!

ಒಂದು ಕಾಲದಲ್ಲಿ ಸಾಯಿ ಕುಮಾರ್ ಅವರು ತೆರೆ ಮೇಲೆ ಬಂದರೆಂದರೆ ಸಾಕು ಶಿಳ್ಳೆ ಚಪ್ಪಾಳೆಗಳ ಸುರಿಮಳೆಯೇ ಬೀಳುತ್ತಿತ್ತು. ಅವರು ಸಿಡಿಸುವ ಪಂಚಿಂಗ್ ಡೈಲಾಜ್ ಗೆ ಸಿನಿ ರಸಿಕರು ಕುಣಿದು ಕುಪ್ಪಳಿಸುತ್ತಿದ್ದರು. ಅದರಲ್ಲೂ ಪೊಲೀಸ್ ಪಾತ್ರದಲ್ಲಿ ನಟಿಸಿದರಂತೂ ಕೇಳೋದೇ ಬೇಡ. ಏರುಸಿರು ಬಿಡುತ್ತಾ ಸಾಯಿ ಕುಮಾರ್ ಸಿಡಿಸುವ ಡೈಲಾಗ್ ಇಂದಿಗೂ ಕಿವಿಗೆ ಅಪ್ಪಳಿಸುತ್ತಿರುತ್ತದೆ.

ಅಣ್ಣನಂತೆ ತಮ್ಮನೂ ಅದ್ಭುತ ಕಂಠವುಳ್ಳ ನಾಯಕ. ನೂರಾರು ಸಿನಿಮಾಗಳಿಗೆ ತಮ್ಮ ಕಂಠವನ್ನು ನೀಡುವುದರ ಮೂಲಕ ತೆರೆಮರೆಯಲ್ಲಿ ಘರ್ಜಿಸುತ್ತಿದ್ದರು. ಆದರೆ ಅವರ ಮುಖ ಮಾತ್ರ ಕಾಣಿಸುತ್ತಲೇ ಇರಲಿಲ್ಲ. ಕೆಲ ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಸುದೀಪ್ ನಿರ್ಧೇಶಿಸಿ ನಟಿಸಿದ ಕೆಂಪೇಗೌಡ ಚಿತ್ರದಲ್ಲಿ ಮೊಟ್ಟ ಮೊದಲ ಬಾರಿಗೆ ತೆರೆ ಮೇಲೆ ಖಳನಾಯಕನ ಪಾತ್ರದಲ್ಲಿ ಮಿಂಚಿದ್ದರು. ಆರ್ಮುಗ ಪಾತ್ರದಲ್ಲಿ ಮಿಂಚಿದ್ದ ರವಿಶಂಕರ್ ಅವರ ಸಿನಿಜೀವನವೇ ಬದಲಾಗಿ ಹೋಗಿತ್ತು. ಆ ಸಿನಿಮಾದಲ್ಲಿ ಹೊಡೆದಿದ್ದ ಕಂಚಿನ ಕಂಠದ ಡೈಲಾಗ್ ಗಳು ಜನರ ಬಾಯಲ್ಲಿ ಇಂದಿಗೂ ಹರಿದಾಡುತ್ತಿದೆ. ನಂತರ ಅವರಿಗೆ ಒಲಿದು ಬಂದ ಆಫರ್ ಅದೆಷ್ಟೋ… ಇದೀಗ ಆರ್ಮುಗ ಎಂಬ ಹೆಸರಿನಿಂದಲೇ ರವಿಶಂಕರ್ ಫೇಮಸ್ ಆಗುತ್ತಿದ್ದಾರೆ.

ಸಿನಿಮಾದಲ್ಲಿ ಸಿಡಿಸುತ್ತಿದ್ದ ಡೈಲಾಗ್ ಗಳು ಇದೀಗ ಭಾರತೀಯ ಜನತಾ ಪಕ್ಷದ ಪರವಾಗಿ ಬರಲಿದೆ. ಭಾರತೀಯ ಜನತಾ ಪಕ್ಷದ ಪರವಾಗಿ ಹಲವಾರು ಸಿನಿ ತಾರೆಯರು ಪ್ರಚಾರಕ್ಕೆ ಇಳಿದಿದ್ದಾರೆ. ಜಗ್ಗೇಶ್ ಸ್ಪರ್ಧಿಸುತ್ತಿದ್ದರೆ, ತಾರಾ, ಮಾಳವಿಕ ಸಹಿತ ಅನೇಕ ಸ್ಟಾರ್ ಪ್ರಚಾರಕರು ಇದ್ದಾರೆ. ನಟ ಸಾಯಿ ಕುಮಾರ್ ಸ್ಪರ್ಧಿಸುತ್ತಿರುವುದರಿಂದ ಇವರ ಸಹೋದರ ರವಿಶಂಕರ್ ಕೂಡಾ ಕಮಲ ಹಿಡಿದು ಪ್ರಚಾರ ನಡೆಸಲಿದ್ದಾರೆ. ಹೀಗಾಗಿ ಚುನಾವಣಾ ಕಣ ಮತ್ತಷ್ಟು ರಂಗೇರುವುದರಲ್ಲಿ ಅನುಮಾನವೇ ಇಲ್ಲ.

-ಸುನಿಲ್ ಪಣಪಿಲ

Editor Postcard Kannada:
Related Post