ಪದೇ ಪದೇ ಮೈತ್ರಿ ಸರ್ಕಾರಕ್ಕೆ ಕಿರಿಕ್ ಮಾಡುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಕಾಂಗ್ರೆಸ್ ಪಕ್ಷ ಇದೀಗ ಶಾಕ್ ನೀಡುತ್ತಾ ಎಂಬ ಸಂಶಯ ವ್ಯಕ್ತವಾಗುತ್ತಿದೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕಳಪೆ ಸಾಧನೆಗೈದು ಹೀನಾಯವಾಗಿ ಸೋತ ಕಾಂಗ್ರೆಸ್ ಹಾಗೂ ಜನತಾ ದಳ ಸೇರಿಕೊಂಡು ಮೈತ್ರಿ ಸರ್ಕಾರ ನಡೆಸಿದ್ದವು. ಅತಿದೊಡ್ಡ ಪಕ್ಷವಾಗಿ ಮೆರೆದಿದ್ದ ಭಾರತೀಯ ಜನತಾ ಪಕ್ಷವನ್ನು ಅಧಿಕಾರದಿಂದ ದೂರ ಇಡುವ ಉದ್ಧೇಶದಿಂದ ಮೈತ್ರಿ ಸರ್ಕಾರ ನಡೆಸಿ ತಂತ್ರ ರೂಪಿಸಿದ್ದವು. ಆದರೆ ಈ ತಂತ್ರಕ್ಕೆ ಸ್ವತಃ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಎಳ್ಳು ನೀರು ಬಿಡುತ್ತಿದ್ದಾರೆ ಎನ್ನುವುದು ಸುಳ್ಳಲ್ಲ.
ಮೈತ್ರಿ ಸ್ಥಾನಕ್ಕೆ ಕಂಟಕವಾಗುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಇದೀಗ ಕಾಂಗ್ರೆಸ್ ಹೈಕಮಾಂಡ್ ಶಾಕ್ ನೀಡಲು ಮುಂದಾಗಿದೆ. ಮುಖ್ಯಮಂತ್ರಿ ಕುಮಾರ ಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ಸರ್ಕಾರದಲ್ಲಿ ಕಾಂಗ್ರೆಸ್ ನಾಯಕ ಜಿ.ಪರಮೇಶ್ವರ್ ಉಪಮುಖ್ಯಮಂತ್ರಿಯಾಗಿದ್ದಾರೆ. ಆದರೆ ಇದ್ಯಾವುದೂ ಸಿದ್ದರಾಮಯ್ಯರಿಗೆ ಇಷ್ಟವಿಲ್ಲ. ಈ ಕಾರಣಕ್ಕಾಗಿಯೇ ಅವರು ಈ ಸರ್ಕಾರವನ್ನು ಬೀಳಿಸುವ ತಂತ್ರವನ್ನು ಹೆಣೆಯುತ್ತಿದ್ದಾರೆ.
ಇದನ್ನರಿತ ಕೆಲ ಕಾಂಗ್ರೆಸ್ ನಾಯಕರು ಕಾಂಗ್ರೆಸ್ ಹೈಕಮಾಂಡ್ಗೆ ದೂರು ನೀಡಿದ್ದಾರೆ ಎನ್ನಲಾಗಿದೆ. ಮಾತ್ರವಲ್ಲದೆ ತನ್ನ ಮಗನ ಸರ್ಕಾರವನ್ನು ಸರಳವಾಗಿ ನಡೆಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಡುತ್ತಿಲ್ಲ ಎಂಬ ದೂರನ್ನು ಸ್ವತಃ ಮಾಜಿ ಪ್ರಧಾನಿ ದೇವೇಗೌಡರೇ ಕಾಂಗ್ರೆಸ್ ಹೈಕಮಾಂಡ್ ಬಳಿ ಹೇಳಿಕೊಂಡಿದ್ದಾರೆ.
ಈ ದೂರಿನನ್ವಯ ಕಾಂಗ್ರೆಸ್ ಹೈಕಮಾಂಡ್ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮುನಿಸಿಕೊಂಡಿದೆ. ಸಿದ್ದರಾಮಯ್ಯನಿಗೆ ಎಲ್ಲವನ್ನೂ ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಸಿದ್ದರಾಮಯ್ಯ ದ್ರೋಹ ಬಗೆಯುತ್ತಿದ್ದಾರೆ ಎಂಬ ಕಾಂಗ್ರೆಸ್ ನಾಯಕ ದೂರಿನ ಮೇರೆಗೆ ಸಿದ್ದರಾಮಯ್ಯರನ್ನು ಶಾಸಕಾಂಗ ಪಕ್ಷದ ನಾಯಕನ ಸ್ಥಾನದಿಂದ ವಜಾ ಮಾಡುವ ಸಾಧ್ಯತೆಗಳೂ ಇದೆ ಎನ್ನಲಾಗಿದೆ. ಈಗಾಗಲೇ ಶಾಸಕಾಂಗ ಪಕ್ಷದ ನಾಯಕನಾಗಿ ಹಾಗೂ ಮೈತ್ರಿ ಸರ್ಕಾರದ ಸಮನ್ವಯ ಸಮಿತಿಯ ಅಧ್ಯಕ್ಷನಾಗಿಯೂ ಜವಬ್ಧಾರಿ ಹೊತ್ತಿರುವ ಸಿದ್ದರಾಮಯ್ಯ ಇದೀಗ ಸರ್ಕಾರವನ್ನೇ ಬೀಳಿಸುವ ತಂತ್ರ ಹೆಣೆಯುತ್ತಿರುವುದು ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಮಧ್ಯೆ ಸೋನಿಯಾ ಗಾಂಧಿ ಆಪ್ತ ಅಹ್ಮದ್ ಪಟೇಲ್, ಧರ್ಮಸ್ಥಳದಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಈ ವೇಳೆ ತನ್ನ ಸಮಾಧಾನವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿಕೊಂಡಿದ್ದಾರೆ. ದೇವೇಗೌಡರ ಹಾಗೂ ಕುಮಾರ ಸ್ವಾಮಿಯ ದೂರು ಹೇಳಿದ್ದು ಮಾತ್ರವಲ್ಲದೆ ಸ್ವಪಕ್ಷ ನಾಯಕ ಪರಮೇಶ್ವರ್ ಅವರ ವಿರುದ್ಧವೂ ದೂರು ನೀಡಿದ್ದಾರೆ ಎನ್ನಲಾಗಿದ್ದು, ಮೈತ್ರಿ ಸರ್ಕಾರದ ಗಲಾಟೆ ಯಾವ ಹಂತವನ್ನು ತಲುಪುತ್ತೋ ಕಾದು ನೋಡಬೇಕಾಗಿದೆ.
source: m.dailyhunt.in/news
- ಏಕಲವ್ಯ