ರಾಜಕೀಯ ಅಂದ್ರೇ ಹಾಗೇನೆ. ಅದು ಯಾರನ್ನೂ ಬಿಡೋದಿಲ್ಲ. ಅದೊಂಥರಾ ಹಾವು ಏಣಿಯ ಆಟ. ಒಮ್ಮೆ ಗೆಲ್ತಾರೆ ಮತ್ತೊಮ್ಮೆ ಸೋಲ್ತಾರೆ. ಎದು ಸರ್ವೇ ಸಾಮಾನ್ಯವಾಗಿ ಹೋಗಿದೆ. ಆದರೆ ರಾಜಕೀಯಕ್ಕೆ ಬಲಿಬಿದ್ದು ಕೆಲವರು ತಮ್ಮ ಜೀವನವನ್ನು ವ್ಯರ್ಥಮಾಡಿಕೊಳ್ಳುವುದು ಮಾತ್ರ ವಿಪರ್ಯಾಸ…
ರಾಜಕೀಯಕ್ಕೂ ಚಿತ್ರರಂಗಕ್ಕೂ ಎದೆ ಭಾರೀ ನಂಟು…!
ಒಂದರ್ಥದಲ್ಲಿ ರಾಜಕೀಯ ಹಾಗೂ ಚಿತ್ರರಂಗ ಒಂದು ನಾಣ್ಯದ ಎರಡು ಮುಖಗಳು ಇದ್ದ ಹಾಗೆ ಆಗಿದೆ. ಚಿತ್ರರಂಗದಲ್ಲಿ ಹೆಸರು ಮಾಡಿ ನಂತರ ರಾಜಕೀಯಕ್ಕೆ ಧುಮುಕಿ ತಮ್ಮ ಶಕ್ತಿ ಪ್ರದರ್ಶನವನ್ನು ಪ್ರದರ್ಶಿಸೋದು ಹೊಸದೇನಲ್ಲ. ಚಿತ್ರರಂಗದಲ್ಲಿ ಮಿಂಚಿ ಜಯಲಲಿತ ಸಹಿತ ಅದೆಷ್ಟೋ ಮಂದಿ ಮುಖ್ಯಮಂತ್ರಿಯಾಗಿದ್ದಾರೆ. ಅದೆಷ್ಟೋ ಮಂದಿ ಸಚಿವ ಶಾಸಕರೂ ಆಗಿದ್ದಾರೆ. ಚಿತ್ರರಂಗದಲ್ಲಿ ಹೆಸರು ಗಳಿಸಿ ನಂತರ ಆ ಹೆಸರಿನಲ್ಲಿ ರಾಜಕೀಯ ಜನಪ್ರಿಯತೆಯನ್ನೂ ಗಳಿಸಲು ಮುಂದಾಗುತ್ತಾರೆ.
ಮತ್ತೆ ಅಖಾಡಕ್ಕಿಳಿಯುತ್ತಾರಾ ಗೀತಾ ಶಿವರಾಜ್ ಕುಮಾರ್…?
ಕಳೆದ ಬಾರಿ (2014) ಶಿವಮೊಗ್ಗ ಲೋಕ ಸಭಾ ಕ್ಷೇತ್ರಕ್ಕೆ ನಡೆದ ಮಹಾ ಚುನಾವಣೆ ಭಾರೀ ರಂಗನ್ನು ಪಡೆದುಕೊಂಡಿತ್ತು. ಸೋಲಿಲ್ಲದ ಸರದಾರ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರನ್ನು ಮಣಿಸಲು ಜಾತ್ಯಾತೀತ ಜನತಾ ದಳ ಸಖತ್ ಪ್ಲಾನ್ ಒಂದನ್ನು ರೂಪಿಸಿತ್ತು. ವರನಟ ರಾಜ್ ಕುಮಾರ್ ಸೊಸೆ, ಅಂದರೆ ಶಿವರಾಜ್ ಕುಮಾರ್ ಅವರ ಪತ್ನಿ ಚುನಾವಣಾ ಅಖಾಡಕ್ಕಿಳಿದಿದ್ದರು. ಹೇಗಾದರೂ ಮಾಡಿ ಭಾರತೀಯ ಜನತಾ ಪಕ್ಷವನ್ನು ಮಣಿಸಲೇ ಬೇಕು ಎಂದು ಟೊಂಕ ಕಟ್ಟಿ ನಿಂತಿದ್ದ ಜೆಡಿಎಸ್ ಒತ್ತಾಯಪೂರ್ವಕವಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರನ್ನು ಒಪ್ಪಿಸುತ್ತಾರೆ. ಇದು ಶಿವರಾಜ್ ಕುಮಾರ್ ಗೆ ಇರಿಸು ಮುರಿಸು ಆಗಿದ್ದರೂ ಕೂಡಾ ಹಠಕ್ಕೆ ಮಣಿದು ಒಪ್ಪಿಕೊಳ್ಳುತ್ತಾರೆ.
ಕೆಲಸ ಮಾಡಿದ್ದ ಮಧು ಬಂಗಾರಪ್ಪನ ಕೈಚಳಕ..!
ಎಸ್… ನೋ ಡೌಟ್… ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರನ್ನು ಚುನಾವಣೆಗೆ ಸ್ಪರ್ಧಿಸುವಂತೆ ಮಾಡಿದ ಹಿಂದಿನ ಶಕ್ತಿಯೇ ಮಧು ಬಂಗಾರಪ್ಪ. ಮಾಜಿಮುಖ್ಯಮಂತ್ರಿ ದಿ.ಬಂಗಾರಪ್ಪ ಅವರ ಮಕ್ಕಳಲ್ಲಿ ಮಧು ಬಂಗಾರಪ್ಪ ಹಾಗೂ ಗೀತಾ ಶಿವರಾಜ್ ಕುಮಾರ್ ಕೂಡಾ. ತನ್ನ ತಂದೆ ಬಂಗಾರಪ್ಪನವರ ರಾಜಕೀಯ ಜಂಪಿಂಗ್ ಬಹಳಾನೇ ಜೋರಾಗಿತ್ತು. ಹೀಗಾಗಿ ಮಧು ಬಂಗಾರಪ್ಪ ಜೆಡಿಎಸ್ ಪಾಲಾಗಿದ್ದರೆ ಮತ್ತೋರ್ವ ಮಗ ಕುಮಾರ ಬಂಗಾರಪ್ಪ ಭಾರತೀಯ ಜನತಾ ಪಕ್ಷದ ಪಾಲಾಗಿದ್ದರು. ಪುತ್ರಿ ಗೀತಾ ಮಾತ್ರ ರಾಯಲ್ ಕುಟುಂದಲ್ಲಿ ಜೀವನ ನಡೆಸುತ್ತಿದ್ದರು.
ಆದರೆ ರಾಜಕೀಯ ಅಮಲು ಅವರನ್ನೂ ಹಿಡಿಯುವಂತೆ ಮಾಡಿದ್ದು ಮಧು ಬಂಗಾರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯ ತಂತ್ರಗಾರಿಕೆ. ಗೀತಾ ಶಿವರಾಜ್ ಕುಮಾರ್ ಅವರನ್ನು ಕಣಕ್ಕಿಳಿಸಿದರೆ ರಾಜ್ ಕುಮಾರ್ ಕುಟುಂಬ ಎಂಬ ಕಾರಣಕ್ಕೆ ಜನರು ಮತ ಹಾಕ್ತಾರೆ ಎಂಬ ಲೆಕ್ಕಾಚಾರ ಇವರದ್ದಾಗಿತ್ತು. ಆರಂಭದಲ್ಲಿ ನಟ ಶಿವರಾಜ್ ಕುಮಾರ್ ಗೆ ಇದು ಒಪ್ಪಿಗೆ ಇರಲಿಲ್ಲವಾಗಿದ್ದರೂ ನಂತರ ಮಧುಬಂಗಾರಪ್ಪ ಹಾಗೂ ಕುಮಾರಸ್ವಾಮಿಯ ಒತ್ತಡಕ್ಕೆ ಮಣಿದು ಓಕೆ ಅನ್ನುತ್ತಾರೆ. ಪತ್ನಿಯ ಪರವಾಗಿ ಮತಯಾಚನೆಯನ್ನೂ ಮಾಡುತ್ತಾರೆ.
ಆದರೆ ಜೆಡಿಎಸ್ ಪ್ಲಾನ್ ಉಲ್ಟಾ ಆಗಿತ್ತು. ಬಿಜೆಪಿ ಜಯಬೇರಿ ಭಾರಿಸಿ ಗೀತಾರನ್ನು ಸೋಲಿಸಿಬಿಟ್ಟಿತ್ತು. ಮಧುಬಂಗಾರಪ್ಪರ ತಂತ್ರ ಫಲಿಸಲೇ ಇಲ್ಲ. ಒಂದರ್ಥದಲ್ಲಿ ರಾಜ್ ಕುಟುಂಬಕ್ಕೆ ಇದು ಭಾರೀ ಮುಖಭಂಗವೆನೆಸಿತ್ತು.
ಇದೀಗ ವಿಧಾನ ಸಭಾ ಚುನಾವಣೆ ಎದುರಾಗಿದೆ. ಈ ಬಾರಿ ಯಾವುದೇ ಟಿಕೆಟ್ ಬೇಡ ಎಂದು ಗೀತಾ ಶಿವರಾಜ್ ಕುಮಾರ್ ಕುಳಿತಿದ್ದಾರೆ. ಆದರೆ ಪ್ರಚಾರದ ಅಖಾಡಕ್ಕಿಳಿಯುವ ಎಲ್ಲಾ ಸಾಧ್ಯತೆಗಳೂ ಇವೆ ಎನ್ನಲಾಗುತ್ತಿದೆ. ನೀವು ಸ್ಪರ್ಧಿಸದಿದ್ದರೂ ಪರವಾಗಿಲ್ಲ. ಆದರೆ ನಮ್ಮ ಪರವಾಗಿ ಪ್ರಚಾರ ನಡೆಸಿ ಎಂದು ಜೆಡಿಎಸ್ ನಾಯಕರು ಕೇಳಿಕೊಂಡಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಕಾಂಗ್ರೆಸ್ ನಾಯಕರು ಕೂಡಾ ಗೀತಾಗೆ ಗಾಳ ಹಾಕಿದ್ದಾರೆ. ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯಡಿಯೂರಪ್ಪನವರ ವಿರುದ್ಧ 3 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಸೋತಿದ್ದ ಗೀತಾ ಈ ಬಾರಿ ಚುನಾವಣಾ ಅಖಾಡಕ್ಕೆ ಇಳಿದಿಲ್ಲ. ಆದರೆ ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಗೀತಾ ಸಹೋದರ ಮಧುಬಂಗಾರಪ್ಪನವರ ಪರವಾಗಿ ಅಖಾಡಕ್ಕಿಳಿಯಲಿದ್ದಾರೆ.
ಒಟ್ಟಾರೆ ಮತ್ತೆ ಚುನಾವಣೆ ಎದುರಾಗಿದ್ದು ಈ ಬಾರಿ ಯಾರ ಮಡಿಲಿಗೆ ಗೆಲುವು ಅನ್ನೋದನ್ನು ಕಾದುನೋಡಬೇಕಾಗಿದೆ. ಚುನಾವಣಾ ಅಖಾಡದಲ್ಲಿ ಸಿನಿ ತಾರೆಯರೂ ಧುಮುಕಿದ್ದು ಮತ್ತಷ್ಟು ರಂಗೇರಿದೆ.
-ಸುನಿಲ್ ಪಣಪಿಲ