ಪ್ರಧಾನಿ ನರೇಂದ್ರ ಮೋದಿಯವರ ಕರ್ನಾಟಕ ಚುನಾವಣಾ ಪ್ರಚಾರ ಭರ್ಜರಿಯಾಗಿಯೇ ಸಾಗುತ್ತಿದೆ. 2 ದಿನಗಳಲ್ಲಿ ಬರೋಬ್ಬರಿ 6 ನೇ ಚುನಾವಣಾ ಪ್ರಚಾರವನ್ನು ಇಂದು ಪ್ರಧಾನಿ ಮೋದಿ ನಡೆಸುತ್ತಿದ್ದಾರೆ. ಒಂದೊಂದು ಸ್ಥಳಗಳಲ್ಲೂ ಒಂದೊಂದು ವಿಶೇಷ ಭಾಷಣಗಳ ಮೂಲಕ ಗಮನ ಸೆಳೆಯುತ್ತಿರುವ ಪ್ರಧಾನಿ ಮೋದಿಯವರ ಭಾಷಣ ಇಂದು ಮತ್ತೊಂದು ವಿಶೇಷಕ್ಕೂ ಕಾರಣವಾಗಿತ್ತು.
ನಲಪಾಡ್ ವಿರುದ್ಧ ಮೋದಿ ವಾಗ್ದಾಳಿ..!
ಇಂದಿನ ಮೂರನೇ ಚುನಾವಣಾ ಜಾಥಾವನ್ನು ಬೆಂಗಳೂರಿನ ಕೆಂಗೇರಿಯಲ್ಲಿ ಪ್ರಧಾನಿ ಮೋದಿ ನಡೆಸಿದ್ದರು. ಈ ಜಾಥಾಕ್ಕೆ ಲಕ್ಷಾಂತರ ಮಂದಿ ಭಾರತೀಯ ಜನತಾ ಪಕ್ಷದ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಆಗಮಿಸಿದ್ದರು. ಪ್ರಧಾನಿ ಮೋದಿ ಇಂದು ಬೆಂಗಳೂರಿನ ಸಮಗ್ರ ಅಭಿವೃದ್ಧಿಯ ಬಗ್ಗೆ ಮಾತನಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಬೆಂಗಳೂರನ್ನು ನಾಶ ಮಾಡುತ್ತಿದೆ, ನಮಗೆ ಅಧಿಕಾರ ಕೊಡಿ ಕೆಂಪೇಗೌಡ ಕಟ್ಟಿದ ಬೆಂಗಳೂರನ್ನು ನಾವು ನಿಮಗೆ ಉಳಿಸಿಕೊಡುತ್ತೇವೆ. ಎಂದು ಹೇಳಿದ್ದಾರೆ.
ಈ ವೇಳೆ ಕಾಂಗ್ರೆಸ್ ಸರ್ಕಾರ ನಡೆಸಿದ್ದ ಗೂಂಡಾಗಿರಿಯ ಬಗ್ಗೆಯೂ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ನ ಶಾಂತಿನಗರದ ಶಾಸಕ ಹ್ಯಾರಿಸ್ ಅವರ ಪುತ್ರ ಗೂಂಡಾ ಮಹಮ್ಮದ್ ನಲಪಾಡ್ ನಡೆಸಿ ಅವಾಂತರಗಳ ಬಗ್ಗೆ ಧ್ವನಿ ಎತ್ತಿದ್ದಾರೆ. “ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕರು ತಮ್ಮ ಮಕ್ಕಳನ್ನು ಬಿಟ್ಟು ಗೂಂಡಾಗಿರಿ ಮೆರೆಸುತ್ತಿದ್ದಾರೆ. ಕಾಂಗ್ರೆಸ್ ಶಾಸಕರ ಮಕ್ಕಳ ಹಾಗೂ ಆಪ್ತರ ಗೂಂಡಾಗಿರಿ ಮುಗಿಲು ಮುಟ್ಟುತ್ತಿದೆ. ದಾರಿಯಲ್ಲಿ ಹೋಗುತ್ತಿರುವ ಅಮಾಯಕರ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ಈ ಮಹಾ ನಗರದಲ್ಲಿ ಜನತೆಗೆ ಭದ್ರತೆ ಅನ್ನೋದೇ ಇಲ್ಲ. ಇಲ್ಲಿ ಏನಿದ್ದರೂ ಕಾಂಗ್ರೆಸ್ ಗೂಂಡಾಗಿರಿ. ಈ ಗೂಂಡಾಗಿರಿಯನ್ನು ನಿಯಂತ್ರಿಸಲು ಕಾಂಗ್ರೆಸ್ ಸರ್ಕಾರದಿಂದ ಸಾಧ್ಯವಾಗಿಲ್ಲ. ಕಾಂಗ್ರೆಸ್ ಶಾಸಕರ ಗೂಂಡಾಗಿರಿ ಮುಗಿಲು ಮುಟ್ಟಿದೆ. ಶಾಸಕರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ.” ಎಂದು ಗಂಭೀರ ಆರೋಪವನ್ನು ಮಾಡಿದ್ದಾರೆ.
ಕೆಲ ತಿಂಗಳುಗಳ ಹಿಂದೆಯಷ್ಟೇ ಶಾಂತಿನಗರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ಮಹಮ್ಮದ್ ನಲಪಾಡ್ ಘರ್ಜಿ ಕೆಫೆಯಲ್ಲಿದ್ದ ಅಮಾಯಕ ವಿದ್ವತ್ ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಭಾರೀ ಪ್ರಚಾರಕ್ಕೆ ಗುರಿಯಾಗಿದ್ದರು. ಅಂದು ಮಾರಣಾಂತಿಕ ಹಲ್ಲೆ ಮಾಡಿದ್ದ ನಲಪಾಡ್ ಇಂದಿಗೂ ಜೈಲುವಾಸವನ್ನು ಅನುಭವಿಸುತ್ತಿದ್ದಾನೆ.
ಇನ್ನು ಬಿಬಿಎಂಪಿ ಕಛೇರಿಗೆ ನುಗ್ಗಿ ಪೆಟ್ರೋಲ್ ಸುರಿದು ದಾಂಧಲೆ ನಡೆಸಿದ್ದ ಕಾಂಗ್ರೆಸ್ ಶಾಸಕ ಬೈರತಿ ಸುರೇಶ್ ಆಪ್ತ ನಾರಾಯಣ ಸ್ವಾಮಿಯ ಬಗ್ಗೆಯೂ ಪ್ರಧಾನಿ ಮೋದಿ ಗುಡುಗಿದ್ದಾರೆ. ಒಟ್ಟಾರೆ ಪ್ರಧಾನಿ ಮೋದಿ ಇಂದು ಕೂಡಾ ತಮ್ಮ ಭಾಷಣದ ಮೂಲಕ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷವನ್ನು ಝಾಡಿಸಿದ್ದಾರೆ.
-ಸುನಿಲ್ ಪಣಪಿಲ