ಜನಸಾಮಾನ್ಯರ ಜೀವನವನ್ನು ಉತ್ತಮಗೊಳಿಸಲು ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಹಲವು ನಿರ್ಧಾರಗಳ ಕಾರಣದಿಂದ ಸಂಪೂರ್ಣ ಪ್ರಪಂಚಕ್ಕೆ ಭಾರತವು ಭರವಸೆಯ ಕೇಂದ್ರ ಎಂಬಂತಾಗಿರುವುದಾಗಿ ಪ್ರಧಾನಿ ಮೋದಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಇಂದು ಅವರುಆಂಧ್ರಪ್ರದೇಶದಲ್ಲಿ ಹಲವಾರು ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಬಳಿಕ ಮಾತನಾಡಿದರು.
ಒಟ್ಟು 10,500 ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಪ್ರಧಾನಿ ಮೋದಿ ಅವರಿಂದು ಚಾಲನೆ ನೀಡಿದ್ದಾರೆ. ಈ ಯೋಜನೆಗಳು ಆಂಧ್ರಪ್ರದೇಶದ ಜನರ ಜೀವನ ಸೌಕರ್ಯ, ಮೂಲ ಸೌಕರ್ಯ ಹಾಗೂ ಆತ್ಮನಿರ್ಭರ ಭಾರತದ ಕನಸುಗಳಿಗೆ ಮತ್ತಷ್ಟು ಜೀವ ತುಂಬಲಿದೆ ಎಂದು ಅವರು ಹೇಳಿದರು.
ಈ ಅಮೃತ ಸಮಯದಲ್ಲಿ ಅಭಿವೃದ್ಧಿ ಹೊಂದಿದ ಭಾರತ ಎಂಬ ಉದ್ದೇಶವನ್ನಿರಿಸಿಕೊಂಡು, ಭಾರತವು ಅಭಿವೃದ್ಧಿ ಸಾಧಿಸುವ ಹಾದಿಯಲ್ಲಿ ನಾಗಾಲೋಟ ಸಾಧಿಸುತ್ತಿದೆ. ಈ ಅಭಿವೃದ್ಧಿ ಪಥವು ನಾನಾ ಆಯಾಮಗಳನ್ನು ಹೊಂದಿದೆ. ಜನಸಾಮಾನ್ಯರ ಅವಶ್ಯಕತೆಗಳು, ಅಗತ್ಯತೆಗಳ ಬಗ್ಗೆ ಈ ಅಭಿವೃದ್ಧಿ ಕಾರ್ಯಗಳು ಕೇಂದ್ರೀಕೃತವಾಗಿವೆ. ಜತೆಗೆ ಸುಧಾರಿತ ಮೂಲಸೌಕರ್ಯಗಳನ್ನು ಒದಗಿಸುವ ಮಾರ್ಗಸೂಚಿಯನ್ನು ಸಹ ಕೇಂದ್ರ ಸರ್ಕಾರ ಪ್ರಸ್ತುತಪಡಿಸುತ್ತದೆ ಎಂದು ಅವರು ನುಡಿದರು.
ಆಂಧ್ರಪ್ರದೇಶ ವಿಶಾಖಪಟ್ಟಣಂ ನಗರವು ವ್ಯಾಪಾರ ಮತ್ತು ವ್ಯಾಪಾರ ಸಂಪ್ರದಾಯಕ್ಕೆ ಸಂಬಂಧಿಸಿದಂತೆ ಅತ್ಯಂತ ಶ್ರೀಮಂತ ಮತ್ತು ವಿಶೇಷ ಪ್ರದೇಶವಾಗಿದೆ ಎಂದೂ ಅವರು ಶ್ಲಾಘಿಸಿದ್ದಾರೆ. ಹಿಂದಿನ ಕಾಲದಲ್ಲಿ ಈ ನಗರ ಪ್ರಮುಖ ಬಂದರು ಆಗಿದ್ದು, ಸಾವಿರಾರು ವರ್ಷಗಳ ಹಿಂದೆ ರೋಮ್ ಮತ್ತು ಏಷ್ಯಾ ನಡುವಿನ ವ್ಯಾಪಾರದ ಸಂಪರ್ಕ ಸೇತುವಾಗಿತ್ತು ಎಂದು ಅವರು ತಿಳಿಸಿದರು.