ಭಾರತದ ಶತ್ರು ರಾಷ್ಟ್ರ ಪಾಕಿಸ್ತಾನವು ಕಾಶ್ಮೀರದ ವಿಚಾರವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದು, ಇದಕ್ಕೆ ಭಾರತ ಪ್ರತ್ಯುತ್ತರ ನೀಡಿದೆ.
ಈ ಸಂಬಂಧ ಭಾರತದ ಪರ ಮಾತನಾಡಿದ ದೇಶದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ,ಅಲ್ – ಖೈದಾ ಉಗ್ರಗಾಮಿ ಸಂಘಟನೆಯ ನಾಯಕನಾಗಿದ್ದ ಒಸಮಾ ಬಿನ್ ಲಾಡೆನ್ಗೆ ಆತಿಥ್ಯ ನೀಡಿದ್ದ ಪಾಕಿಸ್ತಾನ, ಭಾರತಕ್ಕೆ ಪಾಠ ಹೇಳುವ ಅಗತ್ಯ ಇಲ್ಲ. ನೆರೆಯ ದೇಶದ ಸಂಸತ್ತಿನ ಮೇಲೆ ದಾಳಿ ಮಾಡಿದ ರಾಷ್ಟ್ರ ಭಾರತಕ್ಕೆ ಉಪದೇಶ ನೀಡುವ ಯಾವುದೇ ಅರ್ಹತೆ ಹೊಂದಿಲ್ಲ ಎಂದು ತಿಳಿಸಿದ್ದಾರೆ. ಸಾಂಕ್ರಾಮಿಕ ರೋಗ, ಹವಾಮಾನ ವೈಪರೀತ್ಯ, ಸಂಘರ್ಷ, ಭಯೋತ್ಪಾದನೆ ಇತ್ಯಾದಿಗಳನ್ನು ಒಳಗೊಂಡಂತೆ ಈ ಕಾಲದ ಸವಾಲುಗಳಿಗೆ, ಪರಿಣಾಮಕಾರಿ ಪ್ರತಿಕ್ರಿಯೆಯನ್ನು ಅವಲಂಬಿಸಿ ವಿಶ್ವಸಂಸ್ಥೆಯ ವಿಶ್ವಾಸಾರ್ಹತೆ ನಿರ್ಣಯವಾಗುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಪ್ರಪಂಚದ ಸಮಸ್ಯೆ ಸವಾಲುಗಳಿಗೆ ನಾವು ಸರಿಯಾದ ಪರಿಹಾರಗಳನ್ನು ಕಂಡುಕೊಳ್ಳುವ ಇಂತಹ ಸಮಯದಲ್ಲಿ, ಜಗತ್ತು ಸ್ವೀಕರಿಸಲು ಸಾಧ್ಯವಿಲ್ಲ ಎಂದುಕೊಂಡವರನ್ನು ಸಮರ್ಥನೆ ಮಾಡುವ ಪ್ರಶ್ನೆ ಉದ್ಭವವಾಗಬಾರದು. ಈ ವಿಚಾರ ಗಡಿಯಾಚೆ ನಡೆಯುವ ಉಗ್ರಗಾಮಿತ್ವಕ್ಕೆ ಬೆಂಬಲ ನೀಡುವ ರಾಷ್ಟ್ರಕ್ಕೆ ಸಹ ಅನ್ವಯವಾಗುತ್ತದೆ. ಭಯೋತ್ಪಾದಕರ ನಾಯಕನಿಗೆ ಆತಿಥ್ಯ ನೀಡಿದ್ದು, ನೆರೆಯ ದೇಶದ ಸಂಸತ್ ಮೇಲೆ ದಾಳಿ ನಡೆಸಿದ ರಾಷ್ಟ್ರ ಈ ರೀತಿಯ ಉಪದೇಶ ನೀಡುತ್ತಿರುವುದು ಹಾಸ್ಯಾಸ್ಪದ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಪಾಕ್ ಮೂಲದ ಲಷ್ಕರ್ ಎ ತೈಬಾ ಮತ್ತು ಜೈಶ್ ಎ ಮೊಹಮ್ಮದ್ ಸಂಘಟನೆಯ ಭಯೋತ್ಪಾದಕರು ದೆಹಲಿಯ ಸಂಸತ್ ಮೇಲೆ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಒಂಬತ್ತು ಮಂದಿ ಗುಂಡೇಟು ತಗುಲಿ ಬಲಿಯಾಗಿದ್ದರು. ಪಾಕ್ನ ವಿದೇಶಾಂಗ ಸಚಿವ ಭಾರತದ ಕಾಶ್ಮೀರ ವಿಚಾರದಲ್ಲಿ ತನ್ನ ನಿಲುವು ತಿಳಿಸಿದ ಬಳಿಕ ಜೈಶಂಕರ್ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದತಿಯ ಸಮಯದಲ್ಲಿಯೇ, ಇದು ಭಾರತದ ಆಂತರಿಕ ವಿಷಯ. ಇದರಲ್ಲಿ ಮೂಗು ತೂರಿಸದಂತೆ ಪ್ರಪಂಚಕ್ಕೆ ಹೇಳಿತ್ತು. ಇದೀಗ ವಾಸ್ತವವನ್ನು ಒಪ್ಪಿಕೊಂಡು ಭಾರತದ ಬಗ್ಗೆ ಅಪಪ್ರಚಾರ ಮಾಡುವುದನ್ನು ನಿಲ್ಲಿಸುವಂತೆಯೂ ಪಾಕಿಸ್ತಾನಕ್ಕೆ ಸೂಚಿಸಲಾಗಿದೆ.