X

ನಿಜವಾಯಿತು ಮಾಜಿ ಮುಖ್ಯಮಂತ್ರಿ ಬಿಎಸ್‌ವೈ ನುಡಿದ ಭವಿಷ್ಯ..! ರಾಜಕೀಯ ದಿಗ್ಗಜನ ಮಾತಿನಂತೆ ಮುರಿದುಬೀಳುತ್ತಾ ಮೈತ್ರಿ ಸರಕಾರ..?

ಭಾರತೀಯ ಜನತಾ ಪಕ್ಷದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ರಾಜಕೀಯ ಕ್ಷೇತ್ರದಲ್ಲಿ ಹೆಚ್ಚು ಅನುಭವ ಹೊಂದಿರುವವರು. ಯಾರು ಯಾವ ರೀತಿ ಎಂಬುದನ್ನು ಕಣ್ಣಲ್ಲೇ ಅಳತೆ ಮಾಡುವ ಬಿಎಸ್‌ವೈ ಕೆಲ ದಿನಗಳ ಹಿಂದಷ್ಟೇ ಕೇವಲ ಕೆಲವೇ ಗಂಟೆಗಳ ಕಾಲ ಮುಖ್ಯಮಂತ್ರಿ ಪಟ್ಟ ಅಲಂಕರಿಸಿ ಅಧಿಕಾರದಿಂದ ಕೆಳಗಿಳಿಯುವಂತಾಗಿತ್ತು. ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿತಾದರೂ , ಸರಕಾರ ರಚನೆ ಮಾಡುವಷ್ಟು ಬಹುಮತ ಸಾಧಿಸಲು ಸಾಧ್ಯವಾಗಲಿಲ್ಲ. ಆದರೂ ತಮ್ಮ ಬಳಿ ಇದ್ದ ೧೦೪ ಶಾಸಕರನ್ನು ಇಟ್ಟುಕೊಂಡೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ ಕಾನೂನಿನ ಪ್ರಕಾರ ಬಹುಮತ ಸಾಭೀತು ಪಡಿಸಲಾಗದೆ ಅಧಿಕಾರದಿಂದ ಕೆಳಗಿಳಿದ ಬಿಎಸ್‌ವೈ ಭಾರೀ ಆಕ್ರೋಶದಿಂದ ಮೈತ್ರಿ ಸರಕಾರದ ಭವಿಷ್ಯ ನುಡಿದಿದ್ದರು.‌ ಯಡಿಯೂರಪ್ಪ ನವರು ಮಾತನಾಡುವ ವೇಳೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಗೇಲಿ ಮಾಡಿಕೊಂಡು ನಕ್ಕಿದ್ದರು. ಆದರೆ ಆದದ್ದೇ ಬೇರೆ, ಭಾರೀ ಅಸಮಧಾನಗೊಂಡು ನುಡಿದ ಬಿಎಸ್‌ವೈ ಭವಿಷ್ಯ ಇದೀಗ ಒಂದೊಂದೇ ನಿಜವಾಗುತ್ತಾ ಬಂದಿದೆ.!

 

ಸಿದ್ದರಾಮಯ್ಯನವರ ಬಗ್ಗೆ ಹೇಳಿದ ಮಾತೂ ನಿಜವಾಯಿತು..!

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತನ್ನ ಅಧಿಕಾರದ ಅವಧಿಯಲ್ಲಿ ಹುಲಿಯಂತೆ ಎಗರುತ್ತಿದ್ದರು. ವಿರೋಧ ಪಕ್ಷವನ್ನಾಗಲಿ ತಮ್ಮದೇ ಪಕ್ಷದ ಮುಖಂಡರನ್ನಾಗಲಿ ಕ್ಯಾರೇ ಅನ್ನದ ಸಿದ್ದರಾಮಯ್ಯನವರು ಸ್ವತಃ ಕಾಂಗ್ರೆಸ್ ಹೈಕಮಾಂಡ್ ಮಾತಿಗೂ ಬಗ್ಗುತ್ತಿರಲಿಲ್ಲ. ಆದರೆ ಯಾವಾಗ ಚುನಾವಣೆಯಲ್ಲಿ ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಒಂದು ಕಡೆ ಹೀನಾಯವಾಗಿ ಸೋಲು ಕಂಡರೆ, ಇನ್ನೊಂದೆಡೆ ಅಲ್ಪ ಮತಗಳ ಅಂತರದಿಂದ ಗೆದ್ದಿದ್ದು, ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರಿಗೆ ಭಾರೀ ಮುಖಭಂಗವಾಗಿತ್ತು. ಆದ್ದರಿಂದಲೇ ಚುನಾವಣಾ ಫಲಿತಾಂಶ ಬಂದ ದಿನದಿಂದಲೇ ಮಂಕಾಗಿದ್ದರು ಸಿದ್ದರಾಮಯ್ಯನವರು. ಅಧಿಕಾರದ ಆಸೆಯಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡಿದರು. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಕಾಂಗ್ರೆಸ್ ಎಂದರೆ ನನ್ನಿಂದಲೇ ಎನ್ನುತ್ತಿದ್ದ ಸಿದ್ದರಾಮಯ್ಯನವರನ್ನು ಈ ಎರಡೂ ಪಕ್ಷಗಳು ಮೂಲೆಗುಂಪು ಮಾಡಿಕೊಂಡೇ ಬಂದಿದೆ.

ಇದು ಸ್ವತಃ ಸಿದ್ದರಾಮಯ್ಯನವರಿಗೆ ಅರಿವಿಗೆ ಬಂದ ವಿಚಾರ, ಆದರೂ ಸುಮ್ಮನಿದ್ದ ಸಿದ್ದರಾಮಯ್ಯನವರ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿಎಸ್‌ವೈ ವಿಧಾನಸಭೆಯಲ್ಲಿ ಬೇಸರ ವ್ಯಕ್ತಪಡಿಸಿದ್ದರು. ಸಿದ್ದರಾಮಯ್ಯನವರು ಮಾಜಿ ಮುಖ್ಯಮಂತ್ರಿ ಎಂಬುದನ್ನು ಮರೆತಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಈಗ ಅಧಿಕಾರ ಕೈಗೆ ಸಿಗುತ್ತಿದ್ದಂತೆ ಮೂಲೆಗುಂಪು ಮಾಡುತ್ತಿದೆ. ಇದು ಯಾವ ರೀತಿಯ ರಾಜಕೀಯ ಎಂದು ಪ್ರಶ್ನಿಸಿದ್ದರು.‌ ಬಿಎಸ್‌ವೈ ಆಡಿದ ಮಾತು ಸಿದ್ದರಾಮಯ್ಯನವರಿಗೂ ನಿಜ ಅನ್ನಿಸಿದ್ದು ಮಾತ್ರ ಸುಳ್ಳಲ್ಲ. ಆದ್ದರಿಂದಲೇ ಸಿದ್ದರಾಮಯ್ಯನವರು ಪಕ್ಷದಲ್ಲೇ ಇದ್ದು ಮೈತ್ರಿ ಸರಕಾರವನ್ನು ಕೆಡವಲು ಪ್ರಯತ್ನಿಸುತ್ತಿದ್ದಾರೆ ಎಂಬ ಅನುಮಾನವೂ ಸದ್ಯ ಎಲ್ಲರಲ್ಲೂ ವ್ಯಕ್ತವಾಗಿದೆ. ಇಲ್ಲಿ ಸರಿಯಾಗಿ ಗಮನಿಸಿದಾಗ ಬಿಎಸ್‌ವೈ ಅಂದು ನುಡಿದ ಭವಿಷ್ಯ ನಿಜವಾಗುತ್ತಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ.!

ಸಿದ್ದರಾಮಯ್ಯನವರನ್ನು ಈ ಎರಡೂ ಪಕ್ಷಗಳು ಕಡೆಗಣಿಸುತ್ತಿವೆ, ಎಷ್ಟೆಲ್ಲಾ ನೋಡಿಕೊಂಡು ಇನ್ನೂ ಈ ಪಕ್ಷದಲ್ಲೇ ಉಳಿಯುತ್ತೀರಾ ಎಂದು ಪ್ರಶ್ನಿಸಿದ್ದ ಬಿಎಸ್‌ವೈ ಮಾತಿಗೆ ಸಿದ್ದರಾಮಯ್ಯನವರು ಏನೂ ಉತ್ತರಿಸದೆ ಮೌನಕ್ಕೆ ಶರಣಾಗಿದ್ದರು. ಆದರೆ ಸಿದ್ದರಾಮಯ್ಯನವರ ಮೌನ ಇದೀಗ ಕೆಲಸ ಮಾಡುತ್ತಿದ್ದು, ಸಿದ್ದರಾಮಯ್ಯ ಸರಕಾರದ ಸಚಿವ ಸಂಪುಟದಲ್ಲಿ ಇದ್ದ ಸಚಿವರುಗಳು ಇದೀಗ ಒಬ್ಬೊಬ್ಬರಾಗಿಯೇ ಮೈತ್ರಿ ಸರಕಾರದ ವಿರುದ್ಧ ದಂಗೆ ಏಳುತ್ತಿದ್ದಾರೆ. ಆದ್ದರಿಂದ ಒಂದೆಡೆ ಸಿದ್ದರಾಮಯ್ಯನವರ ಗೇಮ್ ಪ್ಲಾನ್ ವರ್ಕೌಟ್ ಆಗುತ್ತಿದ್ದರೆ, ಇತ್ತ ಮತ್ತೊಂದೆಡೆ ಬಿಎಸ್ ಯಡಿಯೂರಪ್ಪ ನವರು ನುಡಿದ ಭವಿಷ್ಯವೂ ನಿಜವಾಗುತ್ತಿದೆ.!

ಡಿಕೆಶಿ ವಿಚಾರವನ್ನೂ ಪ್ರಸ್ತಾಪಿಸಿದ್ದ ಬಿಎಸ್‌ವೈ..!

ಯಡಿಯೂರಪ್ಪ ನವರು ಕೇವಲ ತಮ್ಮ ಅಧಿಕಾರ ಕೈತಪ್ಪಿದ ಹಿನ್ನೆಲೆಯಲ್ಲಿ ಮಾತನಾಡಿರಲಿಲ್ಲ, ಬದಲಾಗಿ ರಾಜಕೀಯದಲ್ಲಿ ಏನೆಲ್ಲಾ ನಡೆಯುತ್ತದೆ ಎಂಬುದರ ಚಿತ್ರಣ ಮುಂದಿಟ್ಟಿದ್ದರು. ಯಾಕೆಂದರೆ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಎಲ್ಲಾ ಶಾಸಕರ ರಕ್ಷಣೆ ಡಿಕೆಶಿ ಹೆಗಲ ಮೇಲಿತ್ತು. ‌ಪಕ್ಷ ವಹಿಸಿದ್ದ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಡಿ.ಕೆ. ಶಿವಕುಮಾರ್‌ಗೆ ಸಿಕ್ಕಿದ್ದು ಮಾತ್ರ ಚೆಂಬು!! ಯಾಕೆಂದರೆ ಡಿಕೆಶಿ ಕಣ್ಣಿಟ್ಟುದ್ದು ಇಂಧನ ಖಾತೆಯ ಮೇಲೆ, ಆದರೆ ಕುಮಾರಸ್ವಾಮಿ ಸರಕಾರ ನೀಡಿದ್ದು ಯಾರಿಗೂ ಬೇಡವಾದ ಒಂದು ಖಾತೆ.‌ ಅಲ್ಲಿಗೆ ಯಡಿಯೂರಪ್ಪ ನವರು ಡಿಕೆಶಿ ವಿಚಾರದಲ್ಲೂ ಆಡಿದ್ದ ಮಾತು ನೂರಕ್ಕೆ ನೂರರಷ್ಟು ನಿಜವಾಗಿದೆ. ಯಾಕೆಂದರೆ ಕಲಾಪದಲ್ಲಿ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ್ದ ಬಿಎಸ್‌ವೈ, ಡಿಕೆಶಿ ಒಬ್ಬ ರಾಜಕೀಯ ಕಳನಾಯಕ ಎಂದು ಹೇಳಿಕೊಂಡಿದ್ದರು.‌ ಈ ಮಾತು ಆಗಿನ ಪರಿಸ್ಥಿತಿಯಲ್ಲಿ ಬಿಎಸ್‌ವೈ ಬಾಯಲ್ಲಿ ಬಂದಿತ್ತಾದರೂ ಅಕ್ಷರಶಃ ನಿಜವಾಗಿದೆ. ಯಾಕೆಂದರೆ ಡಿಕೆಶಿ ತನಗೆ ತಾನು ಇಚ್ಚಿಸಿದ ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕಾಗಿ ಪಕ್ಷದ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದರು. ಯಾವ ಮಂತ್ರಿ ಸ್ಥಾನವೂ ನನಗೆ ಬೇಡ, ಎಲ್ಲವನ್ನೂ ಅವರೇ ಇಟ್ಟುಕೊಳ್ಳಲಿ ಎಂದು ಅಸಮಧಾನ ವ್ಯಕ್ತಪಡಿಸಿದ್ದರು‌. ಅಲ್ಲಿಗೆ ಡಿಕೆಶಿ ಬಗ್ಗೆ ಬಿಎಸ್‌ವೈ ಹೇಳಿದ ಭವಿಷ್ಯವೂ ನಿಜವಾಯಿತು.!

ಮೈತ್ರಿ ಸರಕಾರ ಹೆಚ್ಚು ದಿನ ಮುಂದುವರಿಯಲು ಸಾಧ್ಯವೇ ಇಲ್ಲ, ಪಕ್ಷದ ಒಳಗಿಂದಲೇ ಸಮ್ಮಿಶ್ರ ಸರ್ಕಾರವನ್ನು ಮಣ್ಣು ಮುಕ್ಕಿಸುವ ಕೆಲಸ ನಡೆಯುತ್ತದೆ ಎಂದಿದ್ದ ಬಿಎಸ್‌ವೈ ಮಾತಿಗೂ ಸದ್ಯ ಸರಕಾರದಲ್ಲಿ ನಡೆಯುತ್ತಿರುವ ಪ್ರಕ್ರಿಯೆಗೂ ಹೋಲಿಕೆಯಾಗುತ್ತಿರುವುದರಿಂದ , ಸ್ವಪಕ್ಷೀಯರಿಂದಲೇ ಮೈತ್ರಿ ಸರಕಾರ ನಾಶವಾಗಿ ಮತ್ತೆ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಏರಲಿದೆಯಾ ಎಂಬ ಸಂಶಯ ಹೆಚ್ಚಾಗುತ್ತಿದ್ದು, ಎಲ್ಲವೂ ಕಾಲ ನಿರ್ಣಯ ಮಾಡಲಿದೆ ಎಂಬುದು ಮಾತ್ರ ಸತ್ಯ..!

–ಸಾರ್ಥಕ್

Editor Postcard Kannada:
Related Post