ಭಾರತದ ಶಕ್ತಿ ಪೀಠವೆಂದು ಕರೆಸಿಕೊಳ್ಳುವ “ಸತಿಯ ಪೀಠ” ಶಿವನ ಪತ್ನಿ, ದಕ್ಷಪುತ್ರಿ ದಾಕ್ಷಾಯಣಿಯ ದೇಹದ ಭಾಗಗಳಿಂದ ಉಂಟಾಗಿದ್ದೆಂದು ಪುರಾಣಗಳು ಉಲ್ಲೇಖಿಸುತ್ತವೆ. ತನ್ನ ತಂದೆ ದಕ್ಷ ಪ್ರಜಾಪತಿ ತನ್ನ ಗಂಡ ಶಿವನನ್ನು ಯಜ್ಞಕ್ಕೆ ಆಹ್ವಾನಿಸದೆ ಅಪಮಾನ ಮಾಡಿದ್ದಕ್ಕಾಗಿ ಕುಪಿತಗೊಂಡ ಸತಿ, ಯಜ್ಞ ಕುಂಡಕ್ಕೆ ಹಾರಿ ಪ್ರಾಣ ಬಿಡುತ್ತಾಳೆ. ವಿಷಯ ತಿಳಿದ ಶಿವ ಕೋಪದಿಂದ ಕೆಂಡಾಮಂಡಲನಾಗಿ ಯಜ್ಞ ನಡೆಯುವಲ್ಲಿಗೆ ಬಂದು ಸತಿಯ ದೇಹವನ್ನು ಅಗ್ನಿಯಿಂದೆತ್ತಿ ತಾಂಡವವಾಡಲು ತೊಡಗುತ್ತಾನೆ. ಪ್ರಳಯದ ಭೀತಿಯನ್ನು ಮನಗಂಡ ವಿಷ್ಣುವು ತನ್ನ ಸುದರ್ಶನ ಚಕ್ರದಿಂದ ಸತಿಯ ದೇಹವನ್ನು 51 ತುಂಡುಗಳಾಗಿ ಕತ್ತರಿಸಿದಾಗ ಅದು ಭಾರತದ 51 ಭಾಗಗಳಲ್ಲಿ ಹೋಗಿ ಬೀಳುತ್ತದೆ. ಸತಿಯ ಅಂಗಾಗಳು ಬಿದ್ದ ಜಾಗಗಳೆಲ್ಲವೂ “ಶಕ್ತಿ ಪೀಠ”ಗಳಾಗುತ್ತವೆ.
51 ಪೀಠಗಳಲ್ಲಿ ಉಳಿದೆಲ್ಲ ಶಕ್ತಿ ಪೀಠಗಳು ಭಾರತದಲ್ಲೆ ಇದ್ದರೂ ಒಂದು ಪೀಠ ಮಾತ್ರ ಈಗ ಪಾಕಿಸ್ತಾನ ಆಕ್ರಮಿತ ಬಲೋಚಿಸ್ಥಾನದಲ್ಲಿದೆ. ಸತಿಯ ದೇಹದ ಮೊದಲ ಅಂಗ ಶಿರ ಈ ಜಾಗದಲ್ಲಿ ಬಿದ್ದಿದ್ದರಿಂದ ಸನಾತನ ಸಂಸ್ಕೃತಿಯಲ್ಲಿ ಈ ಪೀಠಕ್ಕೆ ಬಹು ಮಾನ್ಯತೆ ಇದೆ. 51 ಪೀಠಗಳಲ್ಲಿ ಇದು ಮೊದಲನೆಯ ಪೀಠ ಎನ್ನಲಾಗುತ್ತದೆ. ಬಲೋಚಿಸ್ತಾನದ ಹಿಂದೂಗಳು ಪೀಠವನ್ನು ತಾಯಿ ಹಿಂಗಳಾದೇವಿ ಎಂದು ಪೂಜಿಸಿದರೆ ಮುಸ್ಲಿಮರು “ನಾನಿ” ಮಂದಿರ ಅಥವಾ “ಬೀಬಿ ನಾನಿ” ಮಂದಿರವೆಂದು ಆಸ್ಥೆಯಿಂದ ಪೂಜಿಸುತ್ತಾರೆ. ಹಿಂದೂಗಳಂತೆಯೆ ಹೂವು-ಹಣ್ಣು-ಧೂಪ- ಕೆಂಪು ಚಾದರ ಅರ್ಪಿಸಿ ದೇವಿಯ ಆರಾಧನೆ ಮಾಡುತ್ತಾರೆ! ಹಿಂಗಳಾ ನದಿಯ ಪಕ್ಕದ ಚಂದ್ರಕೂಪ ಬೆಟ್ಟದಲ್ಲಿರುವ ಈ ಮಂದಿರ ಭಾರತದ ಗಡಿಯಾಚೆ ಹಿಂದೂ-ಮುಸ್ಲಿಮ್ ಭಾವೈಕ್ಯವನ್ನು ಸಾರುತ್ತಿದೆ.
ತ್ರೇತಾಯುಗದಲ್ಲಿ ಸ್ವಯಂ ಶ್ರೀ ರಾಮನೆ ದೇವಿಯ ದರ್ಶನಗೈದಿದ್ದರೆನ್ನಲಾಗುತ್ತದೆ. ಹಿಂಗಳಾದೇವಿಯ ದರ್ಶನಕ್ಕಾಗಿ ಗುರು ಗೋರಖನಾಥ, ಗುರು ನಾನಕ ದೇವರು, ಮತ್ತು ದಾದಾ ಮಖಾನ್ ಎಂಬ ಮಹಾಪುರುಷರೂ ಕೂಡ ಈ ಬೆಟ್ಟವನ್ನು ಹತ್ತಿದ್ದಾರೆ. ಈ ಗುಹಾದೇವಾಲಯದೊಳಗೆ ಮಾನವ ನಿರ್ಮಿತ ಮೂರ್ತಿಗಳಿಲ್ಲ. ಪ್ರಾಕೃತಿಕವಾಗಿ ಕಲ್ಲೊಂದನ್ನು ಹಿಂಗಳಾದೇವಿ ಎಂದು ಪೂಜಿಸಲಾಗುತ್ತದೆ. ಪ್ರತಿವರ್ಷ ಏಪ್ರಿಲ್ ನಲ್ಲಿ ಜರುಗುವ ಹಿಂಗಳಾದೇವಿ ತೀರ್ಥಯಾತ್ರೆಗೆ ಪ್ರಪಂಚದ ಮೂಲೆ ಮೂಲೆಗಳಿಂದಲೂ ಭಕ್ತಾದಿಗಳು ಬರುತ್ತಾರೆ. ಭಾರತದ ಭಕ್ತಾದಿಗಳ ಒಂದು ಸಮೂಹವೂ ಯಾತ್ರೆಯಲ್ಲಿ ಪಾಲ್ಗೊಳುತ್ತದೆ.
ಪುರಾಣ ಕಥೆಗಳ ಪ್ರಕಾರ ತಾತರ್ ಮಂಗೋಲ ವಂಶದ ಹಿಂಗೋಳ ಮತ್ತು ಸುಂದರ ಎಂಬ ದುಷ್ಟ ಸಹೋದರರು ಪಾಪದ ಮನುಷ್ಯರಿಗೆ ಇಲ್ಲ ಸಲ್ಲದ ಕಷ್ಟಗಳನ್ನು ಕೊಡುತ್ತಿದ್ದರಂತೆ. ಜನರೆಲ್ಲ ರಕ್ಷಣೆಗಾಗಿ ದೇವರ ಮೊರೆ ಹೋದಾಗ ಗೌರಿ ಪುತ್ರ ಗಣೇಶನು ಸುಂದರನನ್ನೂ ಮತ್ತು ತಾಯಿ ಹಿಂಗೋಳನನ್ನುಇದೆ ಗುಹೆಯಲ್ಲಿ ವಧಿಸುತ್ತಾರೆ. ಸಾಯುವ ಘಳಿಗೆಯಲ್ಲಿ ಹಿಂಗೋಳನು ತನ್ನನ್ನು ವಧಿಸಿದ ಜಾಗವನ್ನು ತನ್ನ ಹೆಸರಿನಲ್ಲೆ ಕರೆಯುವಂತಾಗಬೇಕು ಎಂದು ದೇವಿಯನ್ನು ಪ್ರಾರ್ಥಿಸುತ್ತಾನೆ. ಆತನ ಬೇಡಿಕೆಯನ್ನು ದೇವಿಯು ಈಡೇರಿಸಿದ್ದರಿಂದ ಈ ಜಾಗಕ್ಕೆ ಹಿಂಗಳಾದೇವಿ ಮಂದಿರ ಎಂಬ ಹೆಸರು ಬರುತ್ತದೆ.
ಹಿಂಗಳಾದೇವಿ ಮಂದಿರವು “ಬ್ರಹ್ಮ ಕ್ಷತ್ರಿಯರ” ಕುಲ ದೇವಿಯ ಮಂದಿರವಾಗಿದೆ. ಇದರ ಹಿಂದೆಯೂ ಒಂದು ಕಥೆ ಇದೆ. ಭಗವಾನ್ ಪರಶುರಾಮರು ಕ್ಷತ್ರಿಯರನ್ನು ಸಂಹಾರ ಮಾಡುತ್ತಿದ್ದ ಕಾಲದಲ್ಲಿ ಇಲ್ಲಿಯ ಬ್ರಾಹ್ಮಣರು ತಮ್ಮ ಮನೆಗಳಲ್ಲಿ ಕ್ಷತ್ರಿಯರಿಗೆ ಅಡಗಿಕೊಳ್ಳಲು ಜಾಗ ನೀಡುತ್ತಾರೆ. ಪ್ರಾಣ ರಕ್ಷಣೆಗಾಗಿ ಬ್ರಾಹ್ಮಣರಂತೆ ವೇಷ ಬದಲಾಯಿಸಿದ ಕ್ಷತ್ರಿಯರು ತದನಂತರ ಬ್ರಾಹ್ಮಣರೆ ಆಗಿ ಬ್ರಹ್ಮ ಕ್ಷತ್ರಿಯರೆನಿಸಿಕೊಳ್ಳುತ್ತಾರೆ. ಈ ಮಂದಿರಕ್ಕೆ ಸಂಬಂಧಿಸಿದ ಕೌತಕ ವಿಚಾರವೆಂದರೆ ಇಲ್ಲಿ ರಾತ್ರಿಕಾಲದಲ್ಲಿ ಎಲ್ಲಾ ಶಕ್ತಿಗಳು ಒಟ್ಟಾಗಿ ರಾಸ ನೃತ್ಯ ಗೈಯುತ್ತವಂತೆ ಮತ್ತೆ ಬೆಳಗಾದರೆ ತಮ್ಮ ಸ್ವಸ್ಥಾನ ಸೇರಿಕೊಳ್ಳುತ್ತವಂತೆ!! ಅನ್ಯ ಹಿಂದೂ ಮಂದಿರಗಳಂತೆಯೆ ಮತಾಂಧರು ಈ ಮಂದಿರವನ್ನೂ ಧ್ವಂಸಗೈಯಲು ಬಂದಿದ್ದರಂತೆ. ಆದರೆ ದೇವಿಯ ಶಕ್ತಿಯಿಂದ ಮಂದಿರ ಹಾಳುಗೆಡವಲು ಬಂದ ದೂರ್ತರು ಗಾಳಿಯಲ್ಲಿ ಹಾರಾಡುತ್ತಿದ್ದರಂತೆ. ಅಂದಿನಿಂದ ಇಂದಿನವರೆಗೂ ಈ ಮಂದಿರದ ಗೋಜಿಗೆ ಯಾವ ಮತಾಂಧನೂ ಹೋಗಿಲ್ಲ. ದೇವಿ ಮಹಾತ್ಮೆ ಎಂದರೆ ಇದೆ ತಾನೆ!!
ಈ ಮಂದಿರದಲ್ಲಿ ದೇವಿಯನ್ನು ಕೊಟ್ಟಾರಿ. ಕೊಟ್ಟಾವಿ, ಕೊಟ್ಟಾಶೀಶಾ ಎಂದೂ ಭೈರವನ್ನು ಭೀಮ ಲೋಚನ ಎಂದೂ ಕರೆಯಲಾಗುತ್ತದೆ. ಬಲ್ಲವರ ಪ್ರಕಾರ ಈ ಮಂದಿರ 2000 ವರ್ಷಗಳಿಗೂ ಹಿಂದಿನ ಕಾಲದ್ದು. ಕಳೆದ ಹಲವಾರು ವರ್ಷಗಳಿಂದ ಸರ್ವ ಧರ್ಮ ಸಾಮರಸ್ಯಕ್ಕೆ ಉದಾಹರಣೆಯಾಗಿದೆ ಈ ಮಂದಿರ. ಮುಸ್ಲಿಂ ಬಾಹುಳ್ಯದ ಶತ್ರು ದೇಶದಲ್ಲಿದ್ದರೂ ಹಿಂದೂಗಳನ್ನು ಬೆಸೆಯುವ ತಾಯಿ ಹಿಂಗಳಾದೇವಿ ಮಂದಿರ ಸನಾತನ ಭಾರತದ ಕುರುಹು. ಅಂದು ನೆಹರೂ ಮನಸ್ಸು ಮಾದಿದ್ದರೆ ಇಂದು ಬಲೋಚಿಸ್ತಾನ ಭಾರತದ ಭಾರತವಾಗಿರುತ್ತಿತ್ತು. ಏನು ಮಾಡುವುದು ನಮ್ಮ ದುರ್ದೈವ ಹಾಗಾಗಲಿಲ್ಲ….
-ಶಾರ್ವರಿ