ರಾಜಕೀಯ ಲಾಭ ಪಡೆಯಬೇಕಾದರೆ ಬದ್ಧ ವೈರಿಗಳು ಒಂದಾಗುತ್ತಾರೆ ಎಂಬುದು ರಾಜ್ಯ ರಾಜಕಾರಣ ಗಮನಿಸಿದರೆ ಸ್ಪಷ್ಟವಾಗಿ ಗೋಚರಿಸುತ್ತದೆ. ಅದ್ಯಾವ ರೀತಿಯಲ್ಲಿ ಕಚ್ಚಾಡುತ್ತಿದ್ದರು ಎಂದರೆ ಇವರಿಬ್ಬರು ಇನ್ನು ಮುಂದೆ ಒಟ್ಟಾಗಿ ವೇದಿಕೆ ಹಂಚಿಕೊಳ್ಳಲು ಕೂಡಾ ಸಾಧ್ಯವಿಲ್ಲ ಅಂಬಂತಿತ್ತು ವಾತಾವರಣ. ಆದರೆ ಇದೀಗ ಅವೆಲ್ಲವೂ ಬದಲಾಗಿ ಒಡಹುಟ್ಟಿದವರಂತೆ ವರ್ತಿಸುತ್ತಿದ್ದಾರೆ ಎಂದರೆ ರಾಜಕೀಯ ಆಟ ಯಾವ ರೀತಿ ಆಡಿಸಿಕೊಳ್ಳುತ್ತದೆ ಎಂದು ನೋಡಿ. ಗುರಿ ಒಂದೇ ಜನರ ಮತ್ತು ರಾಜ್ಯದ ಅಭಿವೃದ್ಧಿಗಾಗಿ ಇರುವ ಬಿಜೆಪಿಯನ್ನು ಹೊರಗಿಟ್ಟು, ಮತ್ತೆ ೫ ವರ್ಷ ತಮ್ಮದೇ ಸರ್ವಾಧಿಕಾರ ಆಳ್ವಿಕೆ ನಡೆಸಬಹುದು ಎಂಬ ಲೆಕ್ಕಾಚಾರ ಇಟ್ಟುಕೊಂಡ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ರಾಜ್ಯಭಾರ ನಡೆಸಲು ಪ್ರಯತ್ನಿಸುತ್ತಿದ್ದಾರೆ. ಅಷ್ಟಕ್ಕೂ ಈಗ ಅಣ್ಣ ತಮ್ಮಂದಿರಂತೆ ಇರುವ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಚುನಾವಣೆಗೂ ಮೊದಲು ಯಾವ ರೀತಿ ಇದ್ದರು ಎಂಬೂದು ಜನರಿಗೆ ಮತ್ತೊಮ್ಮೆ ಹೇಳಬೇಕಾಗಿಲ್ಲ.!
ಕುಮಾರಸ್ವಾಮಿ ಅವರೇ ನೀವು ಚುನಾವಣೆಗೂ ಮೊದಲು ನಡೆದುಕೊಂಡದ್ದನ್ನು ನೀವು ಇದೀಗ ನಿಮ್ಮ ಲಾಭಕ್ಕೋಸ್ಕರ ಮರೆತಂತೆ ನಟಿಸಬಹುದು, ಆದರೆ ನಾವಿನ್ನೂ ಮರೆತಿಲ್ಲ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಲು ಹಠ ಹಿಡಿದಿರುವುದು ಈ ಕೆಳಗಿನ ಕಾರಣಕ್ಕೇ ಹೊರತು ಮತ್ಯಾವುದೇ ವಿಚಾರಕ್ಕಲ್ಲ.!
ಜಂತಕಲ್ ಮೈನಿಂಗ್ ಕೇಸ್ನಲ್ಲಿ ಕುಮಾರಸ್ವಾಮಿ ಭಾಗಿ..!
ಅಕ್ರಮ ಗಣಿಗಾರಿಕೆ ಆರೋಪ ಎದುರಿಸುತ್ತಿದ್ದ ಕುಮಾರಸ್ವಾಮಿ ಅವರು , ಬಿಜೆಪಿ ಅಧಿಕಾರಕ್ಕೆ ಬಂದಿದ್ದೇ ಆದಲ್ಲಿ ಕುಮಾರಸ್ವಾಮಿ ಅವರ ಪ್ರಕರಣವನ್ನು ಮತ್ತೆ ವಿಚಾರಣೆ ಮಾಡುವ ಸಾಧ್ಯತೆ ಇದೆ. ಜನಾರ್ದನ ರೆಡ್ಡಿ ಅವರು ಕುಮಾರಸ್ವಾಮಿ ವಿರುದ್ಧ ೧೫೦ ಕೋಟಿ ಲಂಚ ಪಡೆದಿರುವ ಬಗ್ಗೆ ಗಂಭೀರ ಆರೋಪ ಮಾಡಿದ್ದರು. ಇದು ಕೇವಲ ಕುಮಾರಸ್ವಾಮಿ ಮಾತ್ರವಲ್ಲದೆ ಇಡೀ ರಾಜ್ಯವನ್ನೇ ದಿಗ್ಭ್ರಮೆಗೊಳಿಸುವಂತೆ ಮಾಡಿತ್ತು. ಕುಮಾರಸ್ವಾಮಿ ಅವರು ಜನಪರ ನಾಯಕ ಎಂದು ಹೇಳಿಕೊಂಡು ತಿರುಗಾಡುತ್ತಾರೆ. ಆದರೆ ಬರೋಬ್ಬರಿ ೧೫೦ ಕೋಟಿ ಲಂಚದ ಆರೋಪ ಎದುರಿಸುತ್ತಿರುವ ಕುಮಾರಸ್ವಾಮಿಗೆ ಈ ಬಾರಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ಶಿಕ್ಷೆ ಕಟ್ಟಿಟ್ಟಬುತ್ತಿ ಎಂಬುದು ಸ್ಪಷ್ಟವಾಗಿ ಗೊತ್ತಿದೆ. ಅದೇ ಕಾರಣಕ್ಕೆ ಇತ್ತ ಕಾಂಗ್ರೆಸ್ ನ ಜೊತೆ ಸೇರಿ ತಾನು ಮೈತ್ರಿ ಮಾಡಿಕೊಂಡು ಮುಖ್ಯಮಂತ್ರಿ ಆಗಿ ಮಾಡಿದ ಹಗರಣದಿಂದ ತಪ್ಪಿಸಿಕೊಳ್ಳಬಹುದು ಎಂಬ ಲೆಕ್ಕಾಚಾರ ಹೂಡಿದ್ದಾರೆ.!
ಸಿದ್ದರಾಮಯ್ಯನವರಿಗೆ ಅರ್ಕಾವತಿ ಉರುಳಿನ ಭಯ..!
ಅರ್ಕಾವತಿ ಬಡಾವಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಡಿಎ ಆಯುಕ್ತರಾಗಿದ್ದ ಶ್ಯಾಮ್ ಭಟ್ ಅವರು ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಅಕ್ರಮವಾಗಿ ಡಿನೋಟಿಫಿಕೇಷನ್ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಅರ್ಕಾವತಿ ಬಡಾವಣೆಯ ಸುಮಾರು ಮೂರು ಎಕರೆ ಭೂಮಿಯನ್ನು ಯಾವುದೇ ದಾಖಲೆ ಪತ್ರ ಇಲ್ಲದೇ ಸಿದ್ದರಾಮಯ್ಯನವರು ಡಿನೋಟಿಫಿಕೇಷನ್ ಮಾಡಿದ್ದರು ಎಂದು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ ವಕೀಲ ಅಮೃತೇಶ್ ಸಿದ್ದರಾಮಯ್ಯನವರ ವಿರುದ್ಧ ನೇರ ಆರೋಪ ಮಾಡಿದ್ದರು. ಆದರೆ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದರಿಂದ ಆರೋಪಗಳಿಗೆ ಸೊಪ್ಪು ಹಾಕದೇ ಈ ಆರೋಪದಿಂದ ಪಾರಾಗಿದ್ದರು. ಆದರೆ ಈ ಪ್ರಕರಣ ಇನ್ನೂ ಕೋರ್ಟ್ ಕೈಯಲ್ಲೇ ಇರುವುದರಿಂದ ಸಿದ್ದರಾಮಯ್ಯನವರಿಗೆ ಭಯ ತಪ್ಪಿದ್ದಲ್ಲ. ಆದ್ದರಿಂದಲೇ ಬಿಜೆಪಿ ಅಧಿಕಾರಕ್ಕೆ ಬಂದಿದ್ದೇ ಆದಲ್ಲಿ ಸಿದ್ದರಾಮಯ್ಯನವರು ಕಂಬಿ ಎಣಿಸುವುದು ಗ್ಯಾರಂಟಿ. ಅದೇ ಕಾರಣಕ್ಕೆ ಸಿದ್ದರಾಮಯ್ಯನವರು ಕುಮಾರಸ್ವಾಮಿ ಜೊತೆ ಕೈಜೋಡಿಸಿ ಬಿಜೆಪಿ ಮತ್ತು ಯಡಿಯೂರಪ್ಪನವರನ್ನು ವಿರೋಧಿಸಿ , ಸರಕಾರ ರಚನೆಯಾಗದಂತೆ ಪಟ್ಟುಹಿಡಿದಿದ್ದಾರೆ.!
ಹೂಬ್ಲಾಟ್ ವಾಚ್ ಪ್ರಕರಣ ಮೇಲೆತ್ತದ ಕುಮಾರಸ್ವಾಮಿ ಇಂದು ಸಿದ್ದರಾಮಯ್ಯ ದೋಸ್ತ್..!
ಸಿದ್ದರಾಮಯ್ಯನವರು ಸಮಾಜವಾದಿ ಎಂದು ಹೇಳಿಕೊಂಡಿದ್ದಾರೆ ಹೊರತು ಅಧಿಕಾರದಲ್ಲಿದ್ದ ೫ ವರ್ಷದಲ್ಲಿ ಮಜಾವಾದಿಯಾಗಿಯೇ ಜೀವನ ನಡೆಸಿದವರು. ಅದೇ ರೀತಿ ಲಕ್ಷ ಲಕ್ಷ ಹಣದ ಹೂಬ್ಲಾಟ್ ವಾಚ್ ಕಟ್ಟಿಕೊಂಡು ತಿರುಗಾಡುತ್ತಿದ್ದ ಸಿದ್ದರಾಮಯ್ಯನವರನ್ನು ಲಂಚ ಪಡೆದಿರುವುದಾಗಿ ಬಹಿರಂಗವಾಗಿಯೇ ಹೇಳಿಕೆ ನೀಡಿ ಆರೋಪಿಸಿದ ಕುಮಾರಸ್ವಾಮಿ ಅವರು ಇಡೀ ರಾಜ್ಯದ ಜನರ ದೃಷ್ಟಿ ಸಿದ್ದರಾಮಯ್ಯನವರ ಕೈಯಲ್ಲಿರುವ ವಾಚ್ ಮೇಲೆ ಬೀಳುವಂತೆ ಮಾಡಿದ್ದರು. ಈ ಸಮಯದಲ್ಲಿ ಸಿದ್ದರಾಮಯ್ಯನವರು ಕುಮಾರಸ್ವಾಮಿ ವಿರುದ್ಧ, ಕುಮಾರಸ್ವಾಮಿ ಸಿದ್ದರಾಮಯ್ಯನವರ ವಿರುದ್ಧ ಹರಿಹಾಯ್ದಿದ್ದೇ ಹಾಯ್ದಿದ್ದು. ಸಿದ್ದರಾಮಯ್ಯನವರು ಈ ವಾಚ್ನ್ನು ಉದ್ಯಮಿಯಿಂದ ಲಂಚದ ರೂಪದಲ್ಲಿ ಪಡೆದಿದ್ದಾರೆ, ಅದಕ್ಕೆ ಸಂಬಂಧಿಸಿದ ಸಾಕ್ಷಿ ನನ್ನ ಬಳಿ ಇದೆ ಎಂದು ಬಾಂಬ್ ಸಿಡಿಸಿದ ಕುಮಾರಸ್ವಾಮಿ ಯಾವುದೇ ಸಾಕ್ಷ್ಯಾಧಾರಗಳನ್ನು ತೋರಿಸದೇ ಕೇವಲ ತಮಗೆ ಪ್ರಚಾರ ಗಿಟ್ಟಿಸಿಕೊಂಡಿದ್ದರು. ಅದಾದ ನಂತರ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ನಡುವೆ ಹಾವು – ಮುಂಗುಸಿ ಆಟ ಶುರುವಾಗಿತ್ತು. ಚುನಾವಣಾ ಸಂದರ್ಭದಲ್ಲಿ ಒಂದೊಂದೇ ಹೇಳಿಕೆ ನೀಡುವ ಕುಮಾರಸ್ವಾಮಿ ಅವರು ಇದೀಗ ಅದೇ ಸಿದ್ದರಾಮಯ್ಯನವರ ಕೈಜೋಡಿಸಿ ಬಿಜೆಪಿಯನ್ನು ಮಣಿಸಲು ಮುಂದಾಗಿದ್ದಾರೆ.!
ಸಿಎಂ ಇಬ್ರಾಹಿಂಗೆ ಭ್ರೂಣ ಹತ್ಯೆ ಆರೋಪ, ಇತ್ತ ರೋಷಣ್ ಬೇಗ್ಗೆ ನಕಲಿ ಛಾಪ ಕಾಗದದ ಕೇಸಿನ ಭಯ ಹೀಗೆ ಹೇಳುತ್ತಾ ಹೋದರೆ ಒಂದಾ ಎರಡಾ ಈ ಕಾಂಗ್ರೆಸ್ ಮತ್ತು ಜೆಡಿಎಸ್ನ ಕಳ್ಳಾಟಗಳು ನೂರಾರು ಇದೆ. ಆದರೆ ಅವೆಲ್ಲವನ್ನು ಮರೆಮಾಚಲು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಇದೀಗ ಮೈತ್ರಿ ಮಾಡಿಕೊಂಡು ತಮ್ಮ ಸರಕಾರ ರಚನೆ ಮಾಡಲು ಮುಂದಾಗಿದ್ದಾರೆ.!
ಕುಮಾರಸ್ವಾಮಿ ಅವರೇ, ನೀವು ಬೆರಳೆಣಿಕೆಯಷ್ಟು ಶಾಸಕರನ್ನು ಇಟ್ಟುಕೊಂಡು ನೂರರ ಗಡಿ ದಾಟಿರುವ ಬಿಜೆಪಿಯನ್ನು ಅಧಿಕಾರದಿಂದ ತಪ್ಪಿಸಲು ಪ್ರಯತ್ನಿಸಿದರೆ, ರಾಜ್ಯದ ಜನರ ಕೆಂಗಣ್ಣಿಗೆ ಗುರಿಯಾಗುವುದು ಖಂಡಿತ. ನೀವು ಕೇವಲ ನಿಮ್ಮ ಮೇಲಿರುವ ಅಪರಾಧಗಳಿಂದ ತಪ್ಪಿಸಿಕೊಳ್ಳಲು ಈ ರೀತಿ ನಾಟಕವಾಡುತ್ತಿದ್ದೀರೇ ವಿನಃ ರಾಜ್ಯದ ಅಭಿವೃದ್ಧಿಯ ಬಗ್ಗೆ ನಿಮಗೆ ಯಾವುದೇ ಆಲೋಚನೆ ಇಲ್ಲ ಎಂಬುದು ಸ್ಪಷ್ಟ..!
–ಅರ್ಜುನ್