ಜಾತ್ಯಾತೀತ ಜನತಾ ದಳದ ನಾಯಕರ ಮೇಲಿನ ಕೋಪದಿಂದ ಸಿಡಿದೆದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿ ಇದೀಗ ಮತ್ತೆ ಶಾಸಕನಾಗಿ ಆಯ್ಕೆಯಾಗಿ ಮೈತ್ರಿ ಸರ್ಕಾರದಲ್ಲಿ ಒಲ್ಲದ ಮನಸಿನ ನಾಯಕರ ಬಳಿಯಿಂದ ಮಂತ್ರಿ ಪದವಿಯನ್ನು ಗಿಟ್ಟಿಸಿಕೊಂಡು ಅಧಿಖಾರ ನಡೆಸುತ್ತಿರುವ ಕರ್ನಾಟಕ ರಾಜ್ಯ ಸರ್ಕಾರದ ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ಗೆ ಇದೀಗ ಸಂಕಷ್ಟ ಎದುರಾಗಿದೆ.
ಜಮೀರ್ ಅಹ್ಮದ್ಗೆ ನೀಡಿದ ವಕ್ಫ್ ಖಾತೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರೋಷನ್ ಬೇಗ್ ಆಕ್ಷೇಪ ಎತ್ತಿದ್ದಾರೆ. ಈ ಖಾತೆ ನನಗೆ ನೀಡಬೇಕು ಎಂದು ಹಠ ಹಿಡಿದಿದ್ದಾರೆ. ಈ ಖಾತೆಯನ್ನು ನಿರ್ವಹಿಸಿದವರು ಅಲ್ಪಸಂಖ್ಯಾತರ ನಾಯಕರಾಗುತ್ತಾರೆ ಎಂಬ ಕಾರಣಕ್ಕೆ ಈ ಖಾತೆಯ ಮೇಲೆ ಇದೀಗ ಎಲ್ಲರ ಕಣ್ಣು ಬಿದ್ದಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿಕಟ ವರ್ತಿಗಳಾಗಿರುವ ಕಾಂಗ್ರೆಸ್ ನಾಯಕ ರೋಷನ್ ಬೇಗ್ ಇದೀಗ ಹೊಸ ಖ್ಯಾತೆಯನ್ನು ತೆಗೆದಿದ್ದಾರೆ
ರೋಷನ್ ಬೇಗ್ ಅವರ ಬೇಡಿಕೆಗೆ ಮೈತ್ರಿ ಸರ್ಕಾರ ಸಕಾರಾತ್ಮಕವಾಗಿ ಸ್ಪಂಧಿಸಿದೆ! ಜಮೀರ್ ಅಹ್ಮದ್ ಅಪ್ಪಟ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ. ಹೀಗಾಗಿ ಅವರನ್ನು ಕಂಡರೆ ಕಾಂಗ್ರೆಸ್ ನಾಯಕ ಹಾಗೂ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ಗೆ ಅಷ್ಟಕಷ್ಟೇ. ಇನ್ನು ಮುಖ್ಯಮಂತ್ರಿ ಕುಮಾರ ಸ್ವಾಮಿಗಂತೂ ಕೇಳೋದೇ ಬೇಡ. ಪಕ್ಷದ್ರೋಹ ಮಾಡಿ ಬಿಟ್ಟುಹೋದ ಜಮೀರ್ ಮೇಲೆ ಮೂಗಿನ ತುದಿಯವರೆಗೂ ಕೋಪ ಇದೆ. ಹೀಗಾಗಿ ಜಮೀರ್ ಅಹ್ಮದ್ರಿಂದ ಆಖಾತೆಯನ್ನು ಹಿಂಪಡೆದು ಮತ್ತೆ ರೋಷನ್ ಬೇಗ್ ಅವರಿಗೆ ನೀಡಲಿದ್ದಾರೆ.
ಮಾತ್ರವಲ್ಲದೆ ಜಮೀರ್ ಕೇಳಿದ್ದ ಕಾರಿಗೂ ಮುಖ್ಯಮಂತ್ರಿ ಕುಮಾರ ಸ್ವಾಮಿ ಕೊಕ್ಕೆ ಹಾಕಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉಪಯೋಗಿಸುತ್ತಿದ್ದ ಫಾರ್ಚುನರ್ ಕಾರು ತನಗೆ ನೀಡಬೇಕೆಂದು ಜಮೀರ್ ಹಠ ಹಿಡಿದಿದ್ದರು. ಆದರೆ ಕುಮಾರ ಸ್ವಾಮಿ ಜಮೀರ್ ಆಸೆಗೆ ತಣ್ಣೀರು ಎರೆಚಿದ್ದಾರೆ. “ನನಗೆ ದೊಡ್ಡ ಕಾರಿನಲ್ಲಿ ತಿರುಗಿ ಅಭ್ಯಾಸ. ಹೀಗಾಗಿ ನಾನು ಸಿದ್ದರಾಮಯ್ಯ ಬಳಸುತ್ತಿದ್ದ ಕಾರನ್ನು ಕೇಳಿದ್ದೇನೆ” ಎಂದಿದ್ದ ಜಮೀರ್ ಅಹ್ಮದ್ಗೆ ಕುಮಾರ ಸ್ವಾಮಿ ನಿರಾಸೆ ಹುಟ್ಟಿಸಿದ್ದಾರೆ.
ಒಂದು ಕಡೆ ಸಿದ್ದರಾಮಯ್ಯ ಅವರ ವಿರೋಧಿ ಬಣ ಅಂದರೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರ ವಿರೋಧ. ಮತ್ತೊಂದು ಕಡೆ ಪಕ್ಷ ಬಿಟ್ಟು ಬಂದು ವಿರೋಧ ಕಟ್ಟಿಸಿಕೊಂಡ ಜನತಾ ದಳದ ನಾಯಕರ ಕೋಪ. ಈ ಈರ್ವರ ನಡುವೆ ಜಮೀರ್ ಅಹ್ಮದ್ ಬಡಪಾಯಿಯಾಗಿದ್ದಾರೆ. ಇದೀಗ ಈ ಹಿಂದೆ ನೀಡಿದ್ದ ಖಾತೆಯನ್ನು ಹಿಂಪಡೆಯಲು ಮೈತ್ರಿ ಸರ್ಕಾರದ ನಾಯಕರು ಮುಂದಾಗಿದ್ದು, ತಾನೋರ್ವ ಮುಸಲ್ಮಾನರ ನಾಯಕನಾಗಬೇಕು ಎಂದು ಹೊರಟಿದ್ದ ಜಮೀರ್ಗೆ ಭಾರೀ ನಿರಾಸೆಯಾಗಿದ್ದಂತು ಸುಳ್ಳಲ್ಲ.
-ಏಕಲವ್ಯ