ಭಾರತೀಯ ಜನತಾ ಪಕ್ಷದ ಕೈಯಿಂದ ಶತಾಯ ಗತಾಯ ಅಧಿಕಾರ ಕಿತ್ತುಕೊಳ್ಳಬೇಕೆಂದು ನಿರ್ಧಾರ ಮಾಡಿದ್ದ ವಿರೋಧ ಪಕ್ಷದ ನಾಯಕರು ಅತ್ಯಂತ ಹೀನಾಯ ಸಾಧನೆಯನ್ನು ಮಾಡಿದ್ದರೂ ಮೈತ್ರಿ ಮಾಡಿಕೊಂಡು ವಿಧಾನ ಸಭೆಯಲ್ಲಿ ಸರ್ಕಾರವನ್ನು ರಚಿಸಿದ್ದವು. ಆದರೆ ಈ ಸರ್ಕಾರ ಸುಭದ್ರ ಸರ್ಕಾರ ಅಲ್ಲ ಅನ್ನೋದು ರಾಜ್ಯದ ಜನತೆಯ ಅಭಿಪ್ರಾಯ ಆಗಿತ್ತು. ಮೊದಲೇ ತಮ್ಮ ತಮ್ಮೊಳಗೆ ಕಚ್ಚಾಡಿಕೊಂಡಿದ್ದ ಈ ಕಾಂಗ್ರೆಸ್ ಜೆಡಿಎಸ್ ಶಾಸಕರು ಇನ್ನು ೫ ವರ್ಷ ನೆಟ್ಟಗೆ ಅಧಿಕಾರ ನಡೆಸುತ್ತಾರಾ ಎಂಬ ಮಾತುಗಳು ಕೇಳಿಬರುತ್ತಿತ್ತು. ಈ ಮಧ್ಯೆ ಹಲವಾರು ಕಾಂಗ್ರೆಸ್ ನಾಯಕರಿಗೆ ಜೆಡಿಎಸ್ ಜೊತೆಗೆ ಹೋಗೋದು ಇಷ್ಟವಿರಲಿಲ್ಲ. ಆದರೂ ಪಕ್ಷದ ಹಿರಿಯ ಮುಖಂಡರ ಆದೇಶದಂತೆ ನಡೆದುಕೊಳ್ಳುವ ಅನಿವಾರ್ಯ ಎದುರಾಗಿತ್ತು. ಪರಿಣಾಮ ಕಾಂಗ್ರೆಸ್ ಪಕ್ಷದ ಮೊದಲ ವಿಕೆಟ್ ಪತನವಾಗಿದೆ.
ಎಸ್ ಆರ್ ಪಾಟೀಲ್ ರಾಜೀನಾಮೆ..!
ಇದು ಕಾಂಗ್ರೆಸ್ ಪಕ್ಷಕ್ಕೆ ಅಕ್ಷರಶಃ ನಿದ್ದೆಗೆಡಿಸಿದ್ದಂತು ಸುಳ್ಳಲ್ಲ. ಕಾಂಗ್ರೆಸ್ ನಾಯಕ ಹಾಗೂ ಶಾಸಕ ಎಸ್ ಆರ್ ಪಾಟೀಲ್ ಕಾಂಗ್ರೆಸ್ ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಎಸ್ ಆರ್ ಪಾಟೀಲ್ ರಾಜೀನಾಮೆ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಅವರನ್ನು ಮೂರನೇ ಬಾರಿಗೆ ಆಯ್ಕೆ ಮಾಡಿದ ನಂತರ ಉತ್ತರ ಕರ್ನಾಟಕ ಭಾಗಕ್ಕೆ ಎಸ್ ಆರ್ ಪಾಟೀಲ್ ಹಾಗೂ ದಕ್ಷಿಣ ಕರ್ನಾಟಕ ಭಾಗಕ್ಕೆ ದಿನೇಶ್ ಗುಂಡೂರಾವ್ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಯಿತು. ಆದರೆ ಇದೀಗ ಎಸ್ ಆರ್ ಪಾಟೀಲ್ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದು ಕಾಂಗ್ರೆಸ್ ವಿರುದ್ಧ ತಮ್ಮ ಅಸಮಧಾನ ವನ್ನು ಹೊರಹಾಕಿದ್ದಾರೆ.
ಜೆಡಿಎಸ್ ಜೊತೆ ಒಪ್ಪಂದವೇ ಕಾರಣ..?
ತಾನು ಕೆಪಿಸಿಸಿ ಸ್ಥಾನಕ್ಕೆ ರಾಜೀನಾಮೆ ನೀಡುವ ಕಾರಣವನ್ನು ಎಸ್ ಆರ್ ಪಾಟೀಲ್ ಹೇಳಿದ್ದಾರೆ. ಅದರಲ್ಲಿ ಮೊದಲ ಕಾರಣವೇ ಜೆಡಿಎಸ್ ಜೊತೆಗೆ ಕಾಂಗ್ರೆಸ್ ಮೈತ್ರಿ. ಹಾವು ಮುಂಗುಸಿ ಯಂತೆ ಕಚ್ಚಾಡಿಕೊಂಡಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಇದೀಗ ಮೈತ್ರಿ ಸರ್ಕಾರ ನಡೆಸುತ್ತಿರುವುದೇ ಎಸ್ ಆರ್ ಪಾಟೀಲ್ ವೈಮನಸ್ಸಿಗೆ ಕಾರಣವಾಗಿತ್ತು.
ಕಾಂಗ್ರೆಸ್ ನಾಯಕರನ್ನು ಜನತಾ ದಳದ ನಾಯಕರು ತಮಗೆ ಬೇಕಾದಂತೆ ಉಪಯೋಗಿಸುತ್ತಿದ್ದಾರೆ. ಇದರಿಂದ ನಮ್ಮ ಪಕ್ಷಕ್ಕೆ ಅವಮಾನ ಆಗುತ್ತಿದೆ. ಇದನ್ನು ನಾನು ಸಹಿಸುವುದಿಲ್ಲ ಎಂದು ಅವರು ಹೇಳುತ್ತಾರೆ. ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಕೂಡಾ ಜೆಡಿಎಸ್ ನಾಯಕರು ಹೇಳಿದಂತಿರುತ್ತಾರೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಕಲವೇ ದಿನಗಳಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರದ ಮಂತ್ರಿ ಮಂಡಲ ರಚನೆ ನಡೆಯುತ್ತದೆ. ಈ ಮಂತ್ರಿ ಮಂಡಲದಲ್ಲಿ ಕಾಂಗ್ರೆಸ್ ನ ಹಿರಿಯ ನಾಯಕ ಎಸ್ ಆರ್ ಪಾಟೀಲ್ ಅವರನ್ನು ಕಡೆಗಣಿಸಲಾಗಿದೆ ಎಂದು ಹೇಳಲಾಗುತ್ತದೆ. ಇದೂ ಒಂದು ಕಾರಣವಾಗಿದೆ ಎಂದು ಹೇಳಲಾಗುತ್ತದೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾತನಾಡಿದ ಎಸ್ ಆರ್ ಪಾಟೀಲ್ “ಉತ್ತರ ಕರ್ನಾಟಕ ಭಾಗಕ್ಕೆ ಸರಕಾರದಿಂದ ಯಾವುದೇ ಸವಲತ್ತುಗಳು ಸಿಗುತ್ತಿಲ್ಲ. ನಮ್ಮ ಭಾಗವನ್ನು ಕಡೆಗಣಿಸಲಾಗುತ್ತಿದೆ. ಇದು ನನಗೆ ಅತಿಯಾದ ಬೇಸರವನ್ನು ತರಿಸಿದೆ” ಎಂದು ಹೇಳಿದ್ದಾರೆ. ಇನ್ನು ಪಕ್ಷದ ವಿಚಾರವಾಗಿ ಹೇಳಿಕೆ ನೀಡಿದ ಅವರು “ತನಗೆ ಈ ಬಾರಿ ಉತ್ತರ ಕರ್ನಾಟಕ ದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕವಾಗಿ ಗೆಲ್ಲಿಸಲು ಸಾಧ್ಯವಾಗಿರಲಿಲ್ಲ. ಅತ್ಯಂತ ಕಳಪೆ ಸಾಧನೆಯನ್ನು ನಮ್ಮ ಪಕ್ಷ ಮಾಡಿದೆ. ಇದರ ನೈತಿಕ ಹೊಣೆ ಹೊತ್ತು ನಾನು ರಾಜೀನಾಮೆ ನೀಡುತ್ತಿದ್ದೇನೆ” ಎಂದು ಹೇಳಿದ್ದಾರೆ.
೨೫ಕ್ಕೆ ರಾಜೀನಾಮೆ ನೀಡಿದ್ದರೂ ಇನ್ನೂ ಕಾಂಗ್ರೆಸ್ ಹೈಕಮಾಂಡ್ ಈ ರಾಜೀನಾಮೆ ಯನ್ನು ಅಂಗೀಕಾರ ಮಾಡಿಲ್ಲ. ಕಾಂಗ್ರೆಸ್ ಪಾಳಯದಲ್ಲಿ ಇದು ಆತಂಕವನ್ನು ಸೃಷ್ಟಿಸಿದ್ದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಗೆ ತನ್ನ ಕುರ್ಚಿ ಅಲುಗಾಡುವ ಭೀತಿ ಎದುರಾಗಿದೆ. ಎಸ್ ಆರ್ ಪಾಟೀಲ್ ರಾಜೀನಾಮೆ ಮುಂದಿನ ಅನೇಕ ಕಾಂಗ್ರೆಸ್ ನಾಯಕರ ರಾಜೀನಾಮೆಯ ಮುನ್ಸೂಚನೆ ಎಂದೇ ಹೇಳಲಾಗುತ್ತಿದೆ.
-ಸುನಿಲ್ ಪಣಪಿಲ