ನವದೆಹಲಿ: ರಾಜ್ಯಸಭೆಯಲ್ಲಿ ಇಂದು ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಸಿದ್ಧಪಡಿಸಲು ಸಮಿತಿಗೆ ಅವಕಾಶ ಒದಗಿಸುವ ಖಾಸಗಿ ಸದಸ್ಯರ ಮಸೂದೆಯನ್ನು ಮಂಡನೆ ಮಾಡಲಾಯಿತು.
ಆ ಮೂಲಕ ಚುನಾವಣಾ ಸಂದರ್ಭದಲ್ಲಿ ಬಿಜೆಪಿ ಪ್ರಣಾಳಿಕೆಯಲ್ಲಿ ನೀಡಿದ್ದ ಮತ್ತೊಂದು ಭರವಸೆಯನ್ನು ಈಡೇರಿಸಲು ಕೇಂದ್ರದ ಮೋದಿ ಸರ್ಕಾರ ಮುಂದಾಗಿದೆ. ಇನ್ನೇನು ಕೆಲವೇ ಸಮಯದಲ್ಲಿ ದೇಶದಲ್ಲಿ ಏಕರೂಪದ ನಾಗರಿಕ ಸಂಹಿತೆ ಜಾರಿಯಾಗಲಿದೆ.
ಈ ವಿಧೇಯಕವನ್ನು ಮಂಡನೆ ಮಾಡಿದ ನಂತರದ ಬೆಳವಣಿಗೆ ಎಂಬಂತೆ ಮೇಲ್ಮನೆಯಲ್ಲಿ ಗದ್ದಲವೂ ಆರಂಭವಾಗಿದೆ. ಈ ಮಸೂದೆಯನ್ನು ಮಂಡನೆ ಮಾಡುವುದನ್ನು ಕಾಂಗ್ರೆಸ್, ಸಿಪಿಐಎಂ, ಸಿಪಿಐ, ತೃಣಮೂಲ ಕಾಂಗ್ರೆಸ್ನ ವಿಪಕ್ಷ ಸದಸ್ಯರು ಪ್ರತಿಭಟಿಸಿದರು. ಈ ನೀತಿಯು ದೇಶದಲ್ಲಿ ಪ್ರಚಲಿತ ರೂಢಿಯಲ್ಲಿರುವ ಸಾಮಾಜಿಕ ವ್ಯವಸ್ಥೆ, ವಿವಿಧತೆಯಲ್ಲಿ ಏಕತೆಯನ್ನು ನಾಶಗೊಳಿಸಲಿದೆ ಎಂದು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಜೊತೆಗೆ ಪ್ರತಿಪಕ್ಷಗಳ ಸದಸ್ಯರು ಈ ಮಸೂದೆ ಮಂಡನೆ ಮಾಡದಂತೆ, ಹಿಂಪಡೆಯುವಂತೆಯೂ ಕೋರಿದರು. ಆದರೆ ಈ ಪ್ರಸ್ತಾವನೆಯ ಪರವಾಗಿ 63 ಮತ್ತು ವಿರುದ್ಧವಾಗಿ 23 ಮತಗಳು ಬಿದ್ದಿದ್ದು, ಈ ಕಾರಣದಿಂದ ಈ ಮಸೂದೆಯನ್ನು ರಾಜ್ಯಸಭೆ ಅಂಗೀಕರಿಸಿತು. ಈ ಮಸೂದೆಯು ಯಾವುದೇ ಧರ್ಮವನ್ನು ಪರಿಗಣನೆಗೆ ತೆಗೆದುಕೊಳ್ಳದೆ, ಈ ದೇಶದ ಎಲ್ಲ ನಾಗರಿಕರ ವೈಯಕ್ತಿಕ ಹಕ್ಕುಗಳನ್ನು ರಕ್ಷಣೆ ಮಾಡುವ ಹಿನ್ನೆಲೆಯಲ್ಲಿ ಕಾನೂನುಗಳನ್ನು ಮಸೂದೆ ಒದಗಿಸಿಕೊಡಲಿದೆ.