ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರ ಈಗಾಗಲೇ ಭಾಗ್ಯಗಳ ಮೇಲೆ ಭಾಗ್ಯಗಳನ್ನು ನೀಡುತ್ತಲೇ ಬರುತ್ತಿದ್ದು, ಅದರ ಜೊತೆಗೆ ಹಗರಣಗಳ ಮೇಲೆ ಹಗರಣಗಳನ್ನು ಮಾಡುತ್ತಲೇ ಬರುತ್ತಿರುವ ವಿಚಾರ ತಿಳಿದೇ ಇದೆ. ಆದರೆ ರಾಜ್ಯದಲ್ಲಿ ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ತಮ್ಮ ಪ್ರಚಾರವನ್ನು ಚುರುಕುಗೊಳಿಸಿದೆಯಲ್ಲದೇ, ರಾಜ್ಯದಲ್ಲಿ ರಾಹುಲ್ ಗಾಂಧಿ ಸಮಾವೇಶ ನಡೆಸುವ ಮುನ್ನವೇ ಹೊಸಪೇಟೆ ಕಾಂಗ್ರೆಸ್ನಲ್ಲಿ ಅಸಮಾಧಾನ ಸ್ಫೋಟಗೊಂಡಿದೆ.
ಹೌದು… ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಬಳಿಕ ರಾಹುಲ್ ಗಾಂಧಿಯವರು ಮೊದಲ ಬಾರಿ ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ 3 ದಿನಗಳ ಕಾಲ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ರಾಹುಲ್ ರಾಜ್ಯ ಪ್ರವಾಸ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿರುವ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಜಿ. ಪರಮೇಶ್ವರ್ ಅವರು, ರಾಹುಲ್ ಗಾಂಧಿಯವರು ಮೂರು ದಿನಗಳ ಕಾಲ ಫೆ.10, 11, 12 ರಂದು ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದು, ಭೇಟಿ ವೇಳೆ ಮೆಗಾ ರ್ಯಾಲಿ ಹಾಗೂ ರೋಡ್ ಶೋನಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ.
ಆದರೆ ರಾಹುಲ್ ಗಾಂಧಿ ಭೇಟಿ ನೀಡುವ ಮುನ್ನವೇ ರಾಜ್ಯ ಕಾಂಗ್ರೆಸ್ ನಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು ತೀವ್ರ ಮುಜುಗರವನ್ನು ಉಂಟು ಮಾಡಿದೆ. ಈಗಾಗಲೇ ರಾಜ್ಯದಲ್ಲಿ ಸಿ ಎಂ ಸಿದ್ದರಾಮಯ್ಯ ಮತ್ತು ಜಿ ಪರಮೇಶ್ವರ್ ಅವರು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರತ್ಯೇಕವಾಗಿ ಚುನಾವಣಾ ಪ್ರಚಾರ ನಡೆಸಿ ಬಹಳಷ್ಟು ಚರ್ಚೆಗೆ ಕಾರಣರಾಗಿದ್ದಾರಲ್ಲದೇ, ಪಕ್ಷದೊಳಗಿರುವ ಒಳಜಗಳ ಚುನಾವಣಾ ಪ್ರಚಾರದಲ್ಲೂ ತೋರಿಸಿಬಿಟ್ಟಿದ್ದರು.
ಆದರೆ ಇದೀಗ ರಾಹುಲ್ ಗಾಂಧಿ ಸಮಾವೇಶ ನಡೆಸುವ ಮುನ್ನವೇ ಹೊಸಪೇಟೆ ಕಾಂಗ್ರೆಸ್ನಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ಮಾಜಿ ಶಾಸಕ ಹೆಚ್.ಆರ್.ಘವಿಯಪ್ಪ ಹಾಗೂ 2013 ರ ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ವಹಾಬ್ ಇಬ್ಬರೂ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಮತ್ತು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರಿಗೆ ಓಪನ್ ಚಾಲೆಂಜ್ ಹಾಕಿದ್ದಾರೆ. ಬಿಜೆಪಿ ಶಾಸಕ ಆನಂದ್ ಸಿಂಗ್ರನ್ನು ಕಾಂಗ್ರೆಸ್ ತರುವ ವಿಚಾರವಾಗಿ ಇಬ್ಬರೂ ಸ್ಥಳೀಯ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಫೆಬ್ರವರಿ 10 ರಂದು ನಡೆಯುವ ಎಸ್.ಟಿ. ಸಮಾವೇಶದಲ್ಲಿ ಶಾಸಕ ಆನಂದ್ ಸಿಂಗ್ರನ್ನು ಕಾಂಗ್ರೆಸ್ ತರುವ ಒಲವನ್ನು ನಾಯಕರು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ವಿಚಾರ ತಿಳಿದ ಸ್ಥಳೀಯ ನಾಯಕರಾದ ಅಬ್ದುಲ್ ವಹಾಬ್ ಹಾಗೂ ಘವಿಯಪ್ಪ ಅದು ಹೇಗೆ ಆನಂದ್ ಸಿಂಗ್ ರನ್ನು ಪಕ್ಷಕ್ಕೆ ಕರೆ ತರ್ತೀರಾ ನೋಡ್ತೀವಿ. ಆನಂದ್ ಸಿಂಗ್ ಚುನಾವಣೆಯಲ್ಲಿ ಹೇಗೆ ಗೆಲ್ಲುತ್ತಾರೆ ಎಂಬುದನ್ನು ನಾವು ನೋಡುತ್ತೇವೆ ಅಂತಾ ಬಹಿರಂಗವಾಗಿ ಸವಾಲು ಹಾಕಿದ್ದಾರೆ ಎನ್ನಲಾಗಿದೆ.
ಬಿಜೆಪಿ ಶಾಸಕನನ್ನು ಕಾಂಗ್ರೆಸ್ಸಿಗೆ ಕರೆತರಲು ಹವಹಣಿಸುತ್ತಿರುವ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಮತ್ತು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ವಿರುದ್ದ ಕೆಂಡಮಂಡಲರಾಗಿರುವ ಸ್ಥಳೀಯ ನಾಯಕರಾದ ಅಬ್ದುಲ್ ವಹಾಬ್ ಹಾಗೂ ಘವಿಯಪ್ಪ ಬಹಿರಂಗವಾಗಿ ಸವಾಲೊಡ್ಡುವ ಮೂಲಕ ಕಾಂಗ್ರೆಸ್ ನಲ್ಲಿ ಭಿನ್ನಾಭಿಪ್ರಾಯದ ಕೂಗು ಇದೀಗ ಸದ್ದು ಮಾಡುತ್ತಿದೆ. ಆದರೆ ಇದೀಗ ಈ ವಿವಾದವು ಹೈಕಮಾಂಡ್ ವರೆಗೂ ತಲುಪಿದ್ದು, ರಾಹುಲ್ ಗಾಂಧಿ ಆಗಮನದ ಸಂದರ್ಭದಲ್ಲಿ ಭಿನ್ನಮತ ಸ್ಫೋಟಗೊಳ್ಳದಂತೆ ತಡೆಯಲು ಎಐಸಿಸಿ ಹಾಗೂ ಕೆಪಿಸಿಸಿ ನಾಯಕರು ಪ್ರಯತ್ನ ನಡೆಸಲು ಮುಂದಾಗುತ್ತಿದ್ದಾರೆ.
ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ. ಜಿ. ಪರಮೇಶ್ವರ ನಡುವಣ “ಅಧಿಕಾರ ಪ್ರತಿಷ್ಠೆ ಕಿತ್ತಾಟ” ಉತ್ತುಂಗಕ್ಕೇರಿದ್ದು, ರಾಜ್ಯ ಸರಕಾರದ ಸಾಧನೆಗಳ ಪ್ರಚಾರ ಕಾರ್ಯಕ್ರಮಕ್ಕೆ ಪರಮೇಶ್ವರ ಅವರನ್ನು ಕರೆಯುವುದಿಲ್ಲ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಅವರು ಪರಮೇಶ್ವರ್ ಅವರಿಗೆ ಟಾಂಗ್ ನೀಡಿದ್ದರು.
ಅಷ್ಟೇ ಅಲ್ಲದೇ, ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಶುರುವಾಗಿರುವ ಬಿಜೆಪಿಯ ಪರಿವರ್ತನಾ ಯಾತ್ರೆ ಹಾಗೂ ಜೆಡಿಎಸ್ಸಿನ ವಿಕಾಸ ಯಾತ್ರೆಗೆ ಪರ್ಯಾಯವಾಗಿ ಸಿದ್ದರಾಮಯ್ಯನವರು ಕೂಡ ಜನಾರ್ಶೀವಾದ ಯಾತ್ರೆ ನಡೆಸಲು ನಿರ್ಧರಿಸಿದ್ದರು ಎನ್ನುವ ವಿಚಾರ ತಿಳಿದೇ ಇದೆ. ಹಾಗಾಗಿ ರಾಜ್ಯ ಸರ್ಕಾರ ನಾಲ್ಕೂವರೇ ವರ್ಷಗಳಲ್ಲಿ ಮಾಡಿರುವ ಸಾಧನೆಗಳನ್ನು ವಿವರಿಸಿ, ಚುನಾವಣೆಯಲ್ಲಿ ಮತ್ತೆ ತಮ್ಮನ್ನು ಆರ್ಶೀವದಿಸಿ ಎಂದು ಕೇಳಿಕೊಳ್ಳುವುದು ಈ ಯಾತೆಯ್ರ ಹಿಂದಿನ ಉದ್ದೇಶ. ಇದರ ಜತೆಗೆ ತಮ್ಮ ನೇತೃತ್ವದಲ್ಲೇ ಮುಂದಿನ ಚುನಾವಣೆ ನಡೆಯಲಿದೆ, ಮುಂದಿನ ಬಾರಿಯೂ ತಾವೇ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಹೇಳಿಕೊಂಡಿದ್ದರು.
ಆದರೆ ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿರುವ ಪರಮೇಶ್ವರ ಅವರ£ಯೀ ಮಾತು ಸಹಜವಾಗಿಯೇ ಕೆರಳಿಸಿದೆ. ಹೀಗಾಗಿ ಸಿದ್ದರಾಮಯ್ಯ ಸಾಧನೆ ಪ್ರತಿಬಿಂಬಿಸುವ ಈ ಕಾರ್ಯಕ್ರಮದಿಂದ ದೂರ ಉಳಿಯಬೇಕೆಂದು ನಿರ್ಣಯಿಸಿದ ಅವರು, ಪಕ್ಷದಿಂದ ಜನಾರ್ಶೀವಾದ ಯಾತ್ರೆ ಮಾಡಿದರೆ ಮಾತ್ರ ತಾವು ಪಾಲ್ಗೊಳ್ಳುವುದಾಗಿಯೂ, ಒಂದೊಮ್ಮೆ ಸರಕಾರದಿಂದ ಕಾರ್ಯಕ್ರಮ ಮಾಡಿದರೆ ಭಾಗವಹಿಸುವುದಿಲ್ಲ ಎಂದು ಯಾತ್ರೆ ಬಗ್ಗೆ ಸಿದ್ದರಾಮಯ್ಯ ಹೇಳಿದ ಬೆನ್ನಲ್ಲೇ ಪ್ರತಿಕ್ರಿಯಿಸಿದ್ದರು.
ಇದು ಸಿದ್ದರಾಮಯ್ಯ ಅವರಿಗೆ ತೀವ್ರ ಮುಜುಗರವನ್ನು ಉಂಟು ಮಾಡಿತ್ತು. ಹಾಗಾಗಿ ಸರ್ಕಾರದ ಪ್ರಚಾರ ಕಾರ್ಯಕ್ರಮಗಳಿಗೆ ಪರಮೇಶ್ವರ ಅವರನ್ನು ಕರೆಯುವುದಿಲ್ಲ, ಆದರೆ ಪಕ್ಷದಿಂದ ನಡೆಯುವ ಎಲ್ಲ ಕಾರ್ಯಕ್ರಮಗಳಲ್ಲೂ ತಾವು ಭಾಗವಹಿಸುವುದಾಗಿ ಹೇಳುವ ಮೂಲಕ ಪರಮೇಶ್ವರ ಅವರನ್ನು ಜನಾರ್ಶೀವಾದ ಯಾರ್ತೆಯಿಂದ ದೂರ ಇಡುವ ಹಾಗೂ ಪಕ್ಷ ಪ್ರಚಾರ ಕಾರ್ಯಕ್ರಮಗಳಲ್ಲಿ ಪ್ರಚಾರ ಪಾಲು ಪಡೆಯುವ ತಂತ್ರ ಮೆರೆದಿದ್ದರು. ಇದು ಪರಮೇಶ್ವರ ಹಾಗೂ ಸಿದ್ದರಾಮಯ್ಯ ನಡುವಣ ರಾಜಕೀಯ ಉರಿಗೆ ಮತ್ತಷ್ಟು ತುಪ್ಪ ಸುರಿದಂತೆ ಮಾಡಿತ್ತಲ್ಲದೇ, ಪಕ್ಷದೊಳಗಿನ ಒಳಜಗಳ ಈ ಹಿಂದೆ ಸ್ಫೋಟಗೊಂಡಿತ್ತು.
ಆದರೆ ಇದೀಗ ಟೆಂಪಲ್ ರನ್ ಮೂಲಕ ಸುದ್ದಿಯಲ್ಲಿರುವ ರಾಹುಲ್ ಗಾಂಧಿ ವಿಧಾನ ಸಭಾ ಚುನಾವಣೆಯ ವಿಚಾರವಾಗಿ, ಗುಜರಾತ್ ಮಾದರಿಯಲ್ಲಿಯೇ ಕರ್ನಾಟಕದಲ್ಲಿ ಮತ ಕೀಳುವ ಹುನ್ನಾರ ನಡೆಸುತ್ತಿದ್ದು, ದೇವಸ್ಥಾನಗಳಿಗೆ ಬೇಟಿ ನೀಡುವುದರೊಂದಿಗೆ ತಮ್ಮ ಚುನಾವಣಾ ಪ್ರಚಾರವನ್ನು ಆರಂಭಿಸಲಿದ್ದಾರೆ. ಆದರೆ ಇದೀಗ ರಾಜ್ಯದಲ್ಲಿ ರಾಹುಲ್ ಗಾಂಧಿ ಸಮಾವೇಶ ನಡೆಸುವ ಮುನ್ನವೇ ಕಾಂಗ್ರೆಸ್ನಲ್ಲಿ ಅಸಮಾಧಾನ ಸ್ಫೋಟಗೊಂಡಿದೆಯಲ್ಲದೇ, ಪಕ್ಷದೊಳಗೆ ಮುಂದೆ ಅದೇನೇನೂ ನಡೆಯುತ್ತೆ ಅನ್ನೋದನ್ನು ಕಾದು ನೋಡಬೇಕಾಗಿದೆ.
– ಅಲೋಖಾ