ಅತ್ತ ಕಾಂಗ್ರೆಸ್ ನಾಯಕ ಹಾಗೂ ಸಚಿವ ಡಿಕೆ ಶಿವಕುಮಾರ್ ಅವರ ಮೇಲೆ ಐಟಿ ಈಟಿ ಬೀಸುತ್ತಿದ್ದರೆ ಇತ್ತ ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲವೇ ಉಂಟಾಗಿದೆ. ಕಾಂಗ್ರೆಸ್ ಹಾಗೂ ಜನತಾ ದಳ ಮೈತ್ರಿ ಸರ್ಕಾರದ ಕನಸನ್ನು ನನಸು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಚಿವ ಡಿಕೆ ಶಿವಕುಮಾರ್ ಅವರ ಮೇಲೆ ಇದೀಗ ಸಂಕಷ್ಟ ಎದುರಾಗಿದೆ. ಒಂದೊಮ್ಮೆ ಡಿಕೆ ಶಿವಕುಮಾರ್ ಅವರನ್ನು ಐಟಿ ಬಂಧಿಸಿದ್ದಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ಪತನವಾಗುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದೆ.
ಈ ಮಧ್ಯೆ ಡಿಕೆಶಿಗೆ ಐಟಿ ಬಲೆ ಹಾಕಿದ್ದ ಸುದ್ಧಿ ಕೇಳುತ್ತಲೇ ಮುಖ್ಯಮಂತ್ರಿ ಕುಮಾರ ಸ್ವಾಮಿಯವರಿಗೆ ಭಯ ಆವರಿಸಿಬಿಟ್ಟಿದೆ. ಒಂದು ವೇಳೆ ಡಿಕೆ ಶಿವಕುಮಾರ್ ಅವರನ್ನು ಐಟಿ ಬಂಧಿಸಿದರೆ ಇಲ್ಲಿ ಮೈತ್ರಿ ಸರ್ಕಾರವೇ ನಡುಗಿ ಹೋಗುತ್ತೆ. ಹೀಗಾಗಿ ವಿಧಾನ ಸೌಧಾಕ್ಕೆಂದು ತೆರಳಿದ್ದ ಮುಖ್ಯಮಂತ್ರಿ ಕುಮಾರ ಸ್ವಾಮಿ ದಿಢೀರ್ ತಮ್ಮ ಪಥವನ್ನೇ ಬದಲಾಯಿಸಿದ್ದಾರೆ. ಎಂದಿನಂತೆ ವಿಧಾನ ಸೌಧಾಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಕುಮಾರ ಸ್ವಾಮಿ ಡಿಕೆಶಿ ಕೇಸ್ ವಿಚಾರ ತಿಳಿಯುತ್ತಿದ್ದಂತೆ ತಮ್ಮ ಕಾರನ್ನು ಮಧ್ಯಮಾರ್ಗದಲ್ಲೇ ತಿರುಗಿಸಿ ಪದ್ಮನಾಭ ನಗರಕ್ಕೆ ತೆರಳಿದ್ದಾರೆ.
ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ದೇವೇಗೌಡರ ಮನೆಗೆ ತೆರಳಿ ಬರೋಬ್ಬರಿ 2 ಗಂಟೆಗಿಂತಲೂ ಅಧಿಕ ಸಮಯ ಮಾತು ಕತೆ ನಡೆಸಿದ್ದಾರೆ. ಈ ವೇಳೆ ಡಿಕೆಶಿಯನ್ನು ಐಟಿ ಬಂಧಿಸಿದರೆ ಮುಂದಿನ ಕ್ರಮಗಳೇನು ಎಂಬ ಬಗ್ಗೆಯೂ ಸಮಾಲೋಚನೆ ನಡೆಸಿದ್ದಾರೆ. ಭಾರತೀಯ ಜನತಾ ಪಕ್ಷದ ನಾಯಕರ ವಿರೋಧವನ್ನು ಕಟ್ಟಿಕೊಂಡು ರಾಜ್ಯದಲ್ಲಿ ಕಾಂಗ್ರೆಸ್ ಜೊತೆ ಸೇರಿಕೊಂಡು ಸಮ್ಮಿಶ್ರ ಸರ್ಕಾರ ರಚಿಸಿಬಿಟ್ಟಾಗಿದೆ. ಅದೂ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರ ಅಭಯಹಸ್ತ ಬೇರೆ. ಇದು ತಮ್ಮ ಸರ್ಕಾರಕ್ಕೆ ಎಲ್ಲಿ ಕುತ್ತು ತರುತ್ತೋ ಎಂಬ ಭಯದಲ್ಲಿ ಮುಖ್ಯಮಂತ್ರಿ ಕುಮಾರ ಸ್ವಾಮಿಯವರ ಲೆಕ್ಕಾಚಾರ. ಹೀಗಾಗಿ ಈ ಬಗ್ಗೆ ಮುಂದಿನ ನಡೆಯನ್ನು ಚರ್ಚಿಸಲು ಪದ್ಮನಾಭ ನಗರದಲ್ಲಿರುವ ಮಾಜಿ ಪ್ರಧಾನಿ ದೇವೇಗೌಡರ ಮನೆಗೆ ಭೇಟಿ ನೀಡಿದ್ದಾರೆ.
ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಕುಮಾರ ಸ್ವಾಮಿ “ನಾವು ಕಾಂಗ್ರೆಸ್ ಸಚಿವ ಡಿಕೆ ಶಿವಕುಮಾರ್ ಅವರನ್ನ ಬೆಂಬಲಿಸುತ್ತೇವೆ. ಯಾವುದೇ ಕಾರಣಕ್ಕೂ ಅವರನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ” ಎಂದು ಹೇಳಿದ್ದಾರೆ. ಈ ಮೂಲಕ ವಿರೋಧ ಪಕ್ಷದಲ್ಲಿದ್ದಾಗ ಒಂದು ತರ, ಇದೀಗ ಮೈತ್ರಿ ಸರ್ಕಾರದಲ್ಲಿ ಒಂದು ತರ ಎಂದು ಸಾಭೀತುಪಡಿಸಿದ್ದಾರೆ.
ಒಟ್ಟಾರೆ ದೋಸ್ತಿ ಪಕ್ಷದ ನಾಯಕನನ್ನು ಐಟಿ ಇಲಾಖೆ ಹೆಡೆಮುರಿ ಕಟ್ಟಿದ್ದು ಮುಖ್ಯಮಂತ್ರಿ ಕುಮಾರ ಸ್ವಾಮಿಯವರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಕನಿಷ್ಟ ಒಂದು ವರ್ಷವಾದರೂ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಬೇಕು, ಈ ರಾಜ್ಯವನ್ನು ಆಳಬೇಕೆಂಬ ಕನಸಿಟ್ಟುಕೊಂಡಿದ್ದ ಮುಖ್ಯಮಂತ್ರಿ ಕುಮಾರ ಸ್ವಾಮಿಗೆ ಐಟಿ ಬಿಸಿ ತೀವ್ರ ಏಟು ನೀಡಿದೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ.
-ಏಕಲವ್ಯ