ಯಾರೇ ಒಬ್ಬ ವ್ಯಕ್ತಿ ಸೈನ್ಯಕ್ಕೆ ಸೇರುತ್ತಾನೆಂದರೆ ಆ ವ್ಯಕ್ತಿಯ ಜಾತಿ, ಧರ್ಮಗಳೇನು ಎನ್ನುವುದನ್ನು ಯಾರೊಬ್ಬರೂ ಕೇಳುವುದಿಲ್ಲ. ಬದಲಾಗಿ ಅವನಿಗಿರುವ ದೇಶಾಭಿಮಾನಕ್ಕೆ ದೇಶವಾಸಿಗಳೆಲ್ಲಾ ತಲೆದೂಗುತ್ತಾರೆ. ಸೈನ್ಯಕ್ಕೆ ಸೇರಬಹುದಾದ ವ್ಯಕ್ತಿ ಯಾರೇ ಆದರೂ ಅವನ ಬಗ್ಗೆ ಇಡಿ ದೇಶವೇ ಹೆಮ್ಮೆ ಪಡುತ್ತದೆ ಏಕೆಂದರೆ ಭಾರತೀಯ ಸೇನೆ ನಿರ್ವಹಿಸುವ ಕಾರ್ಯ ಅಂತಹುದ್ದು. ಹೀಗಿರಬೇಕಾದರೆ, ದಾಳಿಯಲ್ಲಿ ತನ್ನೆರಡು ಕಾಲುಗಳನ್ನು ಕಳೆದುಕೊಂಡರೂ ಕೂಡ ಸೈನ್ಯಕ್ಕೆ ಮತ್ತೆ ಆ ವೀರಯೋಧ ಮರಳಿ ಸೇರುತ್ತಾರೆ ಎಂದರೆ ಅದಕ್ಕಿಂತ ದೊಡ್ಡ ಹೆಮ್ಮೆಯ ವಿಚಾರ ಮತ್ತೊಂದು ಇಲ್ಲ. ಅಷ್ಟಕ್ಕೂ ಆ ದಿಟ್ಟ ವೀರ ಯೋಧನಾದರೂ ಯಾರು ಗೊತ್ತೇ?
ಮಳೆ, ಚಳಿ, ಶೀತ ಮಾರುತ, ಬಿರು ಬಿಸಿಲು ಎನ್ನುವುದನ್ನೂ ಲೆಕ್ಕಿಸದೆ ಹಗಲಿರುಳೂ ದೇಶದ ಗಡಿ ಕಾಯುವ ಯೋಧರ ದೇಶ ನಿಷ್ಠೆಯಿಂದಾಗಿಯೇ ಇಂದು ನಾವೆಲ್ಲಾ ನೆಮ್ಮದಿಯಿಂದ ಬದುಕುತ್ತಿದ್ದೇವೆ. “ಹುಟ್ಟಿದ ಮೇಲೆ ಸಾಯಲೇಬೇಕು. ಆದರೆ, ದೇಶಕ್ಕಾಗಿ ಹೋರಾಡಿ ಸಾಯುವುದು ಅದೃಷ್ಟ. ಈ ರೀತಿಯಲ್ಲಿ ತನ್ನ ಅಣ್ಣ ಪಶ್ಚಿಮ ಬಂಗಾಳದ ಡಾರ್ಚಿಲಿಂಗ್ನಲ್ಲಿ ದೇಶಕ್ಕಾಗಿ ಸಾವನ್ನಪ್ಪಿರುವುದು ತಮಗೆ ಗೌರವ ತಂದಿದೆ” ಎಂದು ಬಿಎಸ್ ಎಫ್ ಯೋಧ ರವಿಕುಮಾರ್ ತಮ್ಮ ಸಹೋದರನ(ಎಂ. ಗಂಗಾಧರ್) ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದ ಮಾತು ಇಂದಿಗೂ ಅಚ್ಚಳಿಯಾಗಿ ಉಳಿದಿದೆ.
ಆದರೆ ಯುದ್ದದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರಿಂದ ತನ್ನೆರಡು ಕಾಲನ್ನು ತುಂಡರಿಸಿದರೂ ಕೂಡ ಆ ಯೋಧನ ದೇಶಪ್ರೇಮ ಇನ್ನು ಕುಗ್ಗಿಲ್ಲ!! ಹೌದು… ನಮ್ಮ ಸೈನಿಕರಿಗೆ ದೇಶದ ಮೇಲಿರುವ ಅಪಾರ ಶ್ರದ್ಧೆಯೇ ಅಂತದ್ದೂ. ತಮ್ಮ ಜೀವ ಆಪತ್ತಿನಲ್ಲಿದೆ, ಜೀವಕ್ಕೆ ಕುತ್ತು ಬರುತ್ತಿದೆ ಎಂದು ಗೊತ್ತಿದ್ದರೂ ಎಂದಿಗೂ ತಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳುವುದಿಲ್ಲ ಎಂಬುದಕ್ಕೆ ಸಾಕ್ಷಿಯಾಗಿರುವ ಯೋಧ ಬೇರಾರು ಅಲ್ಲ!! ಸಿಆರ್ ಫಿಎಫ್ ಯೋಧ ಭೋಗಡೆ ರಾಮದಾಸ್ ಬಾಹು!!
ಯೋಧ ಬೋಗಡೆ ರಾಮದಾಸ್ ಬಾಹು ಜೀವನ ಗಾಥೆಯೇ ಅಂತಹದ್ದು. ನಕ್ಸಲರೊಂದಿಗೆ ನಡೆದ ಹೋರಾಟದಲ್ಲಿ ವೀರಾವೇಶದಿಂದ ಹೋರಾಡಿದ ಈ ಯೋಧ ನಕ್ಸಲರು ನಡೆಸಿದ ಬ್ಲಾಸ್ಟ್ ನಲ್ಲಿ ತನ್ನ ಎರಡು ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದವು. ಅಷ್ಟೇ ಅಲ್ಲದೇ ಸಾವು ಬದುಕಿನ ನಡುವೆ ಹೋರಾಡಿದ ಈ ಯೋಧ ಇದೀಗ ಸೂಕ್ತ ಚಿಕಿತ್ಸೆ ಪಡೆದುಕೊಂಡು ಮರಳಿ ಸೈನಿಕ ಶಿಬಿರಕ್ಕೆ ಕೆಲಸಕ್ಕೆ ಹಾಜರಾಗಿ, ಹೋರಾಟಕ್ಕೆ ಸಜ್ಜಾಗಿರುವುದು ಹೆಮ್ಮೆಯ ವಿಚಾರ.
ಕೋಬ್ರಾ ಕಮಾಂಡೋ ಆಗಿರುವ ರಾಮದಾಸ್ ಅವರು 2017ರಲ್ಲಿ ಛತ್ತಿಡಗಡದ ಸುಕ್ಮಾ ಜಿಲ್ಲೆಯ ನಕ್ಸಲರು ನಡೆಸಿದ ಬ್ಲಾಸ್ಟ್ ನಲ್ಲಿ ಗಾಯಗೊಂಡಿದ್ದರು. 208 ಬಟಾಲಿಯನ್, ಸಿಆರ್ ಫಿಎಫ್ ಮತ್ತು ಜಿಲ್ಲಾ ಪೆÇಲೀಸ್ ದಳ ಜಂಟಿಯಾಗಿ ಅರಣ್ಯ ಪ್ರದೇಶದಲ್ಲಿ ನಕ್ಸಲರ ವಿರುದ್ಧ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಈ ವೇಳೆ ಅರಣ್ಯದಲ್ಲಿರುವ ಕಸರಾಮ್ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸುವ ವೇಳೆ ರಾಮದಾಸ್ ಐಇಡಿ ಬ್ಲಾಸ್ಟ್ ನಿಂದ ಗಂಭೀರವಾಗಿ ಗಾಯಗೊಂಡಿದ್ದರು.
ಆದರೆ ಯುದ್ದದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯೋಧ ಬೋಗಡೆ ರಾಮದಾಸ್ ಬಾಹು ಅವರಿಗೆ 2017 ನವೆಂಬರ್ 29ರಂದು ಪ್ರಥಮ ಚಿಕಿತ್ಸೆಯನ್ನು ನೀಡಲಾಯಿತು. ಗಂಭಿರವಾಗಿ ಗಾಯಗೊಂಡಿದ್ದರಿಂದ ರಾಮದಾಸ್ ಅವರ ಕಾಲನ್ನು ಮೊಳಕಾಲಿಗಿಂತ ಮೇಲೆ ತುಂಡರಿಸಲಾಗಿತ್ತಲ್ಲದೇ, ಯುದ್ದರಂಗದ ಹೋರಾಟದಲ್ಲಿ ಎಡಗೈಗೆ ಗಂಭೀರ ಗಾಯಗಳಾಗಿದ್ದವು. ಆದರೆ ಇದೀಗ ರಾಮದಾಸ್ ಚಿಕಿತ್ಸೆಯಿಂದ ಗುಣಮುಖರಾಗಿದ್ದು, 208 ಕೋಬ್ರಾ ಪಡೆಯಲ್ಲಿ ಕಾರ್ಯ ನಿರ್ವಹಿಸಲು ಮರಳಿದ್ದಾರೆ.
ಈಗಾಗಲೇ ಅದೆಷ್ಟೋ ಯೋಧರು ದೇಶಕ್ಕೋಸ್ಕರ ಹೋರಾಡಿ ತಮ್ಮ ಪ್ರಾಣವನ್ನೇ ಸಮರ್ಪಿಸಿ ಹುತಾತ್ಮರೆನಿಸಿದ್ದು, ಸಾವಿಗೆ ಹೆದರದೆ ದೇಶಕ್ಕೋಸ್ಕರ ಯುದ್ದರಂಗದಲ್ಲಿ ತಮ್ಮ ಶತ್ರುಗಳೊಂದಿಗೆ ಹೋರಾಡಿ ಭಾರತಮಾತೆಯನ್ನು ಉಳಿಸಿಕೊಟ್ಟಿದ್ದಾರೆ. ದೇಶಕ್ಕೋಸ್ಕರ ಪ್ರಾಣವನ್ನೇ ಮುಡಿಪಾಗಿಸಿಟ್ಟಿರುವ ಅದೆಷ್ಟೋ ಸೈನಿಕರು ಕೊರೆಯುವ ಚಳಿಯನ್ನು ಲೆಕ್ಕಿಸದೆ, ಸುಡುವ ಬಿಸಿಲಿಗೆ ಕ್ಯಾರೆ ಅನ್ನದೇ ತನ್ನ ದೇಶಕ್ಕೋಸ್ಕರ ಹಗಲಿರುಳು ದುಡಿಯುವ ಸೈನಿಕರ ಪಾಡು ಹೇಳತೀರದು.
ತಮ್ಮ ಜೀವ ಆಪತ್ತಿನಲ್ಲಿದೆ, ಜೀವಕ್ಕೆ ಕುತ್ತು ಬರುತ್ತಿದೆ ಎಂದು ಗೊತ್ತಿದ್ದರೂ ಎಂದಿಗೂ ತಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳದ ಸಿಆರ್ ಫಿಎಫ್ ಯೋಧ ಭೋಗಡೆ ರಾಮದಾಸ್ ಬಾಹು ಅವರ ದೇಶಪ್ರೇಮವನ್ನು ಎಲ್ಲರೂ ಕೂಡ ಮೆಚ್ಚುವಂತಹದ್ದು!! ಆದರೆ, ಭಾರತದಲ್ಲಿರುವ ಅದೆಷ್ಟೋ ಮಾಧ್ಯಮಗಳು ಇಂದು ರಾಜಕೀಯ ದಾಳಗಳಿಗೆ ಸಿಲುಕಿಕೊಂಡು ಇಂತಹ ಸುದ್ದಿಗಳನ್ನೇ ಮರೆಮಾಚುತ್ತಿದ್ದಾರಲ್ಲದೇ, ದೇಶಕ್ಕೋಸ್ಕರ ಹೋರಾಡುವ ಸೈನಿಕನ ಬಗ್ಗೆಯಾಗಲಿ, ದೇಶಪ್ರೇಮದ ವಿಚಾರವಾಗಲಿ ಈ ಬಗ್ಗೆ ಸುದ್ದಿ ಭಿತ್ತರಿಸುತ್ತಿಲ್ಲ ಅನ್ನೋದೇ ದೊಡ್ಡ ವಿಪರ್ಯಾಸ.
ಸಿಆರ್ ಫಿಎಫ್ ಯೋಧ ಭೋಗಡೆ ರಾಮದಾಸ್ ಬಾಹು ಅವರು, ಸಾವಿನ ದವಡೆಗೆ ಸಿಲುಕಿದರೂ ಕೂಡ ಮತ್ತೆ ಸೈನ್ಯಕ್ಕೆ ಮರಳಿದ್ದಾರೆ ಎಂದರೆ ಆ ವೀರ ಯೋಧನಿಗೆ ಸೆಲ್ಯೂಟ್….!! ಎಂದು ಹೇಳಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
– ಅಲೋಖಾ