ದೇಶದ ಭ್ರಷ್ಟಾಚಾರಿ ಪಕ್ಷಗಳು ಒಗ್ಗೂಡಿ ಮಾಡಿಕೊಂಡಿರುವ ಇಂಡಿ ಒಕ್ಕೂಟದ ವಿರುದ್ಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ನೇತೃತ್ವದಲ್ಲಿ ದೇಶದ ಭ್ರಷ್ಟಪಕ್ಷಗಳು ಒಂದಾಗಿ ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಇಂಡಿ ಒಕ್ಕೂಟವನ್ನು ರಚನೆ ಮಾಡಿಕೊಂಡಿವೆ. ಇದರಲ್ಲಿ ಸೇರಿಕೊಂಡಿರುವ ಎಲ್ಲಾ ಪಕ್ಷಗಳೂ ಭ್ರಷ್ಟ ಪಕ್ಷಗಳಾಗಿವೆ ಎಂದು ಅವರು ಹೇಳಿದ್ದಾರೆ.
ಇಂಡಿ ಒಕ್ಕೂಟ ಎನ್ನುವುದು ಘಮಂಡಿ ಒಕ್ಕೂಟವಾಗಿದೆ. ಈ ಒಕ್ಕೂಟದಲ್ಲಿ ಭಾಗವಹಿಸಿದ ನಾಯಕರೆಲ್ಲರೂ ಒಂದಿಲ್ಲೊಂದು ಪ್ರಕರಣಗಳಲ್ಲಿ ಜೈಲಿನ ಮುಖ ನೋಡಿ ಬಂದವರಾಗಿದ್ದಾರೆ. ಭ್ರಷ್ಟಾಚಾರಿಗಳೇ ತುಂಬಿರುವ ಬಣ ಇದಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆಗೆ ಪಣ ತೊಟ್ಟು ಕೆಲಸ ಮಾಡುತ್ತಿದೆ. ಆದರೆ ಈ ಇಂಡಿ ಒಕ್ಕೂಟದ ಸದಸ್ಯರು ದೇಶದಲ್ಲಿ ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಪ್ರಧಾನಿ ಮೋದಿ ಅವರ ಸರ್ಕಾರ ಭ್ರಷ್ಟಾಚಾರದ ತನಿಖೆ ನಡೆಸಲು ಕ್ರಮ ಕೈಗೊಳ್ಳುತ್ತಿದ್ದರೆ, ಇಂಡಿ ಒಕ್ಕೂಟ ಇದನ್ನು ತಡೆಯಲು, ವಿರೋಧಿಸಲು ಸಂಚು ಮಾಡುತ್ತಿದೆ ಎಂದು ಅವರು ನುಡಿದಿದ್ದಾರೆ.
ಕಳೆದ ಕೆಲ ದಶಕಗಳ ಕಾಂಗ್ರೆಸ್ ಆಡಳಿತದಲ್ಲಿ 2 ಜಿ ಹಗರಣ, ಕಲ್ಲಿದ್ದಲು ಹಗರಣ, ಕಾಮನ್ವೆಲ್ತ್ ಹಗರಣ, ಹೆಲಿಕಾಪ್ಟರ್ ಹಗರಣ ಹೀಗೆ ಹಲವಾರು ಹಗರಣಗಳನ್ನು ನಡೆಸಿ ಹಲವು ಕಾಂಗ್ರೆಸ್ ನಾಯಕರು ಇಂದು ಬೇಲ್ ಮೇಲೆ ಹೊರಗಿದ್ದಾರೆ ಎಂದು ಅವರು ಲೇವಡಿ ಮಾಡಿದ್ದಾರೆ.
ಕಾಂಗ್ರೆಸ್ ಮಾಡದೇ ಉಳಿದಿರುವ ಹಗರಣ ದೇಶದಲ್ಲಿ ಯಾವುದೂ ಇಲ್ಲ. ಭ್ರಷ್ಟಾಚಾರದ ಮೂಲಕ ಹಲವು ಕಾಂಗ್ರೆಸ್ ನಾಯಕರು ಬೇಲ್ ಪಡೆದು ಹೊರಗೆ ತಿರುಗಾಟ ನಡೆಸುತ್ತಿದ್ದರೆ, ಇನ್ನೂ ಹಲವರು ಜೈಲಿನಲ್ಲಿ ಇದ್ದಾರೆ ಎಂದು ಅವರು ಹೇಳಿದ್ದಾರೆ. ಸುಸ್ಥಿರ, ಸದೃಢ ಭಾರತ ನಿರ್ಮಾಣ ಆಗಬೇಕಾದರೆ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ಸರ್ಕಾರ ರಚಿಸಬೇಕಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.