X

ಶ್ರೀರಾಮುಲು ಪರ ಅಖಾಡಕ್ಕಿಳಿದ ರಾಕಿಂಗ್ ಸ್ಟಾರ್..! ಸಿಎಂ ವಿರುದ್ಧವೇ ತೊಡೆತಟ್ಟಲಿದ್ದಾರೆ ಯಶ್..!?

ರಾಜ್ಯ ವಿಧಾನಸಭಾ ಚುನಾವಣೆಗೆ ಈಗಾಗಲೇ ತಯಾರಿ ನಡೆಸುತ್ತಿರುವ ರಾಜಕೀಯ ಪಕ್ಷಗಳಿಗೆ ಸಾಥ್ ನೀಡಿರುವ ಕನ್ನಡ ಚಿತ್ರರಂಗದ ಕೆಲ ಸ್ಟಾರ್‌ಗಳು ಇದೀಗ ತಾವು ಬೆಂಬಲಿಸುವ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಇಳಿದಿದ್ದಾರೆ. ಚಿತ್ರರಂಗದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಕಾರಣ ರಾಜಕೀಯ ಪಕ್ಷಗಳು ಸ್ಟಾರ್‌ಗಳನ್ನು ತಮ್ಮತ್ತ ಸೆಳೆಯುವ ಪ್ರಯತ್ನ ನಡೆಸುತ್ತಲೇ ಬಂದಿದ್ದಾರೆ. ಕೆಲವರು ಈ ಹಿಂದೆಯೇ ರಾಜಕೀಯ ಪ್ರವೇಶಿಸಿದರೆ , ಇನ್ನೂ ಕೆಲ ಸ್ಟಾರ್‌ಗಳ ನಡೆ ಪ್ರಶ್ನಾತೀತವಾಗಿಯೇ ಉಳಿದಿತ್ತು. ಆದರೆ ಇದೀಗ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಸ್ಟಾರ್‌ಗಳ ದಂಡೇ ಬೀದಿಗಿಳಿದು ತಾವು ಬೆಂಬಲ ಸೂಚಿಸುವ ಅಭ್ಯರ್ಥಿಗಳ ಪರವಾಗಿ ಕಣಕ್ಕಿಳಿದಿದ್ದಾರೆ..!

 

ಬಳ್ಳಾರಿ ಕಿಂಗ್ ಜೊತೆ ರಾಕಿಂಗ್ ಸ್ಟಾರ್..!

ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಕಣಕ್ಕಿಳಿದಿರುವ ಬಳ್ಳಾರಿ ದೊರೆ ಶ್ರೀರಾಮುಲು , ಹೇಗಾದರೂ ಮಾಡಿ ಸಿದ್ದರಾಮಯ್ಯನವರನ್ನು ಸೋಲಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದಾರೆ. ಆದ್ದರಿಂದಲೇ ಅದಕ್ಕೆ ಬೇಕಾದ ಎಲ್ಲಾ ರೀತಿಯ ತಯಾರಿ ನಡೆಸಿದ್ದು, ಇದೀಗ ಸ್ಟಾರ್ ಕ್ಯಾಂಪೇನರ್ ಆಗಿ ರಾಕಿಂಗ್ ಸ್ಟಾರ್ ಯಶ್ ಅವರನ್ನೇ ತಮ್ಮ ಜೊತೆ ಸೇರಿಸಿಕೊಂಡಿದ್ದಾರೆ. ಯಶ್ ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟ, ಅಷ್ಟೇ ಅಲ್ಲದೆ ರಾಜ್ಯದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಕಾರಣದಿಂದಾಗಿ ಈ ಹಿಂದೆಯೇ ಅನೇಕ ರಾಜಕೀಯ ನಾಯಕರುಗಳು ಯಶ್ ಅವರನ್ನು ತಮಗೆ ಬೆಂಬಲ ಸೂಚಿಸುವಂತೆ ಕೇಳಿಕೊಂಡಿದ್ದರು.

ಆದರೆ ಯಶ್ ಯೋಜನೆಯೇ ವಿಭಿನ್ನವಾಗಿತ್ತು. ಯಾಕೆಂದರೆ ಯಶ್ ತನ್ನದೇ ಶೈಲಿಯಲ್ಲಿ ಕೆಲವೊಂದು ಜನಪರ ಕೆಲಸಗಳನ್ನು ಮಾಡಿದ್ದಾರೆ. ಇದಕ್ಕೆ ರಾಜ್ಯಾದ್ಯಂತ ಅಪಾರ ಮಣ್ಣನೆಯೂ ವ್ಯಕ್ತವಾಗಿತ್ತು. ಆದ್ದರಿಂದಲೇ ಯಶ್ ರಾಜಕೀಯ ಪ್ರವೇಶಿಸುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಯಶ್ ಮಾತ್ರ ಇದಕ್ಕೆ ಸ್ಪಷ್ಟನೆ ನೀಡಿದ್ದರು. ತಾನು ಮಾಡುವ ಜನಪರ ಕೆಲಸಗಳಿಗೆ ಯಾರು ಬೆಂಬಲ , ಸಹಾಯ ನೀಡುತ್ತಾರೋ ಅವರಿಗೆ ನನ್ನ ಬೆಂಬಲ ಎಂದು ಸ್ಪಷ್ಟಪಡಿಸಿದ್ದರು. ಆದ್ದರಿಂದಲೇ ಇದೀಗ ಶ್ರೀ ರಾಮುಲು ಅವರು ಸ್ಪರ್ಧಿಸುತ್ತಿರುವ ಚಿತ್ರದುರ್ಗದ ಮೊಳಕಾಲ್ಮೂರಿನಲ್ಲಿ ನಟ ಯಶ್ ಪ್ರಚಾರಕ್ಕಿಳಿದಿದ್ದಾರೆ.

ಸಿದ್ದರಾಮಯ್ಯ ಪರ ಕಿಚ್ಚನ ಕ್ಯಾಂಪೇನ್, ಯಶ್ ನಡೆಸುತ್ತಾರ ಮೋಡಿ..?

ರಾಜ್ಯದ ಎರಡೆರಡು ಕ್ಷೇತ್ರಗಳಿಂದ ಸ್ಪರ್ಧಿಸುತ್ತಿರುವ ಸಿದ್ದರಾಮಯ್ಯನವರು ಬಾದಾಮಿಯಲ್ಲಿ ತಮ್ಮ ಪರ ಪ್ರಚಾರಕ್ಕೆ ನಟ ಕಿಚ್ಛಾ ಸುದೀಪ್ ಅವರನ್ನು ಬಳಸಿಕೊಂಡರೆ ಇತ್ತ ಮೊಳಕಾಲ್ಮೂರು ಕ್ಷೇತ್ರದಲ್ಲಿ ಸಿದ್ದರಾಮಯ್ಯನವರ ವಿರುದ್ಧ ರಾಕಿಂಗ್ ಸ್ಟಾರ್ ಯಶ್ ತೊಡೆತಟ್ಟಲಿದ್ದಾರೆ. ನಟ ಸುದೀಪ್ ಅವರು ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದರ ಬಗ್ಗೆ ಹಲವಾರು ಪ್ರಶ್ನೆಗಳು ಮೂಡಿತ್ತು. ಆದರೆ ಸುದೀಪ್ ಈ ಬಗ್ಗೆ , ತಾನು ಕೇವಲ ಆತ್ಮೀಯತೆಯಿಂದ ಇರುವುದರಿಂದ ಭೇಟಿ ಮಾಡಿದ್ದೆ ಎಂದಿದ್ದರು. ಆದರೆ ಇದೀಗ ಸಿದ್ದರಾಮಯ್ಯನವರ ಪರವಾಗಿ ಪ್ರಚಾರ ಮಾಡಲು ಇಳಿದಿದ್ದು , ಸುದೀಪ್ ಕೂಡಾ ರಾಜಕೀಯ ರಂಗ ಪ್ರವೇಶಿಸುತ್ತಿದ್ದಾರೆ..!

ನನ್ನ ಪ್ರಚಾರ ಶ್ರೀರಾಮುಲು ವಿರುದ್ಧ ಅಲ್ಲ..!

ಬಾದಾಮಿಯಲ್ಲಿ ಸಿದ್ದರಾಮಯ್ಯನವರ  ವಿರುದ್ಧ ಸ್ಪರ್ಧಿಸುತ್ತಿರುವ ಶ್ರೀರಾಮುಲು ಇತ್ತ ಗೆಲ್ಲಲೇಬೇಕು ಎಂದು ಪಣತೊಟ್ಟಿದರೆ, ಇತ್ತ ಸುದೀಪ್ ಸಿದ್ದರಾಮಯ್ಯನವರ ಪರವಾಗಿ ಪ್ರಚಾರಕ್ಕಿಳಿದಿದ್ದಾರೆ. ಆದರೆ ಇದೀಗ ಈ ಬಗ್ಗೆ ಸ್ಪಷ್ಟನೆ ನೀಡಿದ ನಟ ಸುದೀಪ್, ‘ನಾನು ಸಿದ್ದರಾಮಯ್ಯನವರ ಪರವಾಗಿ ಪ್ರಚಾರ ಮಾಡುತ್ತೇನೆ ಹೊರತು ಶ್ರೀರಾಮುಲು ಅವರ ವಿರುದ್ಧ ಅಲ್ಲ. ಯಾಕೆಂದರೆ ನಾನೂ ರಾಮುಲು ಸಹೋದರರಿದ್ದಂತೆ, ಆದ್ದರಿಂದ ನಾನು ಶ್ರೀರಾಮುಲು ಅವರ ವಿರುದ್ದವಾಗಿ ಎಂದೂ ಹೋಗುವುದಿಲ್ಲ, ಸಿದ್ದರಾಮಯ್ಯನವರು ನನ್ನನ್ನು ಆತ್ಮೀಯವಾಗಿ ಕೇಳಿಕೊಂಡಿದ್ದರಿಂದ ನಾನು ಅವರ ಪರವಾಗಿ ಪ್ರಚಾರ ಮಾಡಲಿದ್ದೇನೆ’ ಎಂದ ಸ್ಪಷ್ಟನೆ ನೀಡಿದರು..!

ಅದೇನೇ ಆದರೂ, ಈಗಾಗಲೇ ಎಲ್ಲಾ ರೀತಿಯಲ್ಲೂ ಕುತೂಹಲ ಕೆರಳಿಸಿರುವ ರಾಜ್ಯ ವಿಧಾನಸಭಾ ಚುನಾವಣೆ ಇದೀಗ ಕನ್ನಡ ಚಿತ್ರರಂಗದ ಸ್ಟಾರ್‌ಗಳ ಎಂಟ್ರಿಯಿಂದಾಗಿ ಮತ್ತಷ್ಟು ರಂಗೇರುತ್ತಿದೆ..!

–ಅರ್ಜುನ್

Editor Postcard Kannada:
Related Post