ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಆಡಳಿತ ನಡೆಸುವ ಉತ್ಸಾಹದಿಂದ ಮೈತ್ರಿ ಮಾಡಿಕೊಂಡರು. ಆದರೆ ಕುಮಾರಸ್ವಾಮಿ ಅವರ ಲೆಕ್ಕಾಚಾರ ಸಂಪೂರ್ಣವಾಗಿ ತಲೆಕೆಳಗಾಗಿದೆ. ಯಾಕೆಂದರೆ ಮೈತ್ರಿ ಮಾಡಿಕೊಳ್ಳುವ ಸಂದರ್ಭದಲ್ಲಿ ಕುಮಾರಸ್ವಾಮಿ ಅವರ ಬೆನ್ನ ಹಿಂದೆ ಬಿದ್ದ ಕಾಂಗ್ರೆಸ್ ಮುಖಂಡರು ಇದೀಗ ಸ್ವತಃ ಕುಮಾರಸ್ವಾಮಿ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಖಾತೆ ಹಂಚಿಕೆ ವಿಚಾರದಲ್ಲಿ ಪರಸ್ಪರ ಪೈಪೋಟಿಗೆ ಇಳಿದಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಒಂದೊಂದೇ ಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿದಿದ್ದಾರೆ.
ಕೆಲ ದಿನಗಳಿಂದ ಭಾರೀ ಕುತೂಹಲ ಕೆರಳಿಸಿದ್ದ ಕಾಂಗ್ರೆಸ್ ಪವರ್ಫುಲ್ ಲೀಡರ್ ಡಿಕೆ ಶಿವಕುಮಾರ್ ನಡೆ ದಿನೇ ದಿನೇ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ತಲೆನೋವಾಗಿತ್ತು. ಯಾಕೆಂದರೆ ಡಿಕೆಶಿ ತನಗೆ ಇಂಧನ ಖಾತೆಯೇ ಬೇಕೆಂದು ಒತ್ತಡ ಹೇರಿದರೆ, ಇತ್ತ ಕುಮಾರಸ್ವಾಮಿ ಅವರ ಸಹೋದರ, ಜೆಡಿಎಸ್ ನ ಮುಖಂಡ ಎಚ್ ಡಿ ರೇವಣ್ಣ ಅವರೂ ಕೂಡ ಇಂಧನ ಖಾತೆಗಾಗಿ ದೇವೇಗೌಡರ ಬೆನ್ನ ಹಿಂದೆ ಬಿದ್ದಿದ್ದಾರೆ. ಆದ್ದರಿಂದ ಈ ಎಲ್ಲಾ ಶಾಸಕರ ವರ್ತನೆ ನೋಡಿ ಸ್ವತಃ ಕುಮಾರಸ್ವಾಮಿ ಅವರೇ ಕಂಗಾಲಾಗಿದ್ದಾರೆ..!
ಫಲ ನೀಡುತ್ತಾ ಡಿಕೆಶಿ ಹಠ..?
ಸಮ್ಮಿಶ್ರ ಸರಕಾರ ರಚನೆಯಾದ ದಿನದಿಂದಲೂ ಅಸಮಧಾನಗೊಂಡ ಡಿಕೆ ಶಿವಕುಮಾರ್, ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರ ಮೇಲೆ ಮುನಿಸಿಕೊಳ್ಳುತ್ತಲೇ ಬಂದಿರುವುದರಿಂದ ಪಕ್ಷದ ಮುಖಂಡರೂ ಕಂಗಾಲಾಗಿದ್ದರು. ಯಾಕೆಂದರೆ ಡಿಕೆಶಿ ಕಾಂಗ್ರೆಸ್ನಲ್ಲಿ ಅತ್ಯಂತ ಪ್ರಭಾವಿಶಾಲಿ ರಾಜಕಾರಣಿ, ಆದರೆ ಇದೀಗ ಮೈತ್ರಿ ಸರಕಾರದಲ್ಲಿ ಡಿಕೆಶಿಗೆ ಯಾವುದೇ ಸ್ಥಾನ ಮಾನ ಸಿಗುತ್ತಿಲ್ಲ. ಆದ್ದರಿಂದ ಅಸಮಧಾನಗೊಂಡ ಡಿಕೆಶಿ ಪದೇ ಪದೇ ಪಕ್ಷದ ಮುಖಂಡರ ಹಾಗೂ ಜೆಡಿಎಸ್ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕುತ್ತಲೇ ಇದ್ದಾರೆ. ಆದರೆ ಇದೀಗ ಡಿಕೆಶಿ ಹಠಕ್ಕೆ ಬೇಸತ್ತಿರುವ ಕುಮಾರಸ್ವಾಮಿ ಅವರು, ಡಿಕೆಶಿ ಪಟ್ಟು ಹಿಡಿದು ಕೂತಿದ್ದ ಇಂಧನ ಇಲಾಖೆಯನ್ನು ಕಾಂಗ್ರೆಸ್ಗೆ ಬಿಟ್ಟುಕೊಡಲು ಮುಂದಾಗಿದೆ.
ಒಂದೆಡೆ ಕಾಂಗ್ರೆಸ್ ಮುಖಂಡರು ನೇರವಾಗಿ ರಾಹುಲ್ ಗಾಂಧಿ ಬಳಿಗೆ ತೆರಳಿದ್ದು, ತಮ್ಮ ಬೇಡಿಕೆಯನ್ನು ನೇರವಾಗಿ ರಾಹುಲ್ ಬಳಿ ಚರ್ಚಿಸಲಿದ್ದಾರೆ. ಇದರಿಂದಾಗಿ ಹೈಕಮಾಂಡ್ ಡಿಕೆಶಿ ಪರವಾಗಿಯೇ ನಿಲ್ಲಬಹುದು ಎಂಬ ಲೆಕ್ಕಾಚಾರ ಹಾಕಿದ ಕುಮಾರಸ್ವಾಮಿ ಅವರು ಇಂಧನ ಖಾತೆಗಾಗಿ ರೇಸ್ನಲ್ಲಿದ್ದ ಎಚ್ ಡಿ ರೇವಣ್ಣ ಅವರನ್ನು ಬದಿಗೆ ಸರಿಸಿ ಡಿಕೆಶಿಗೆ ನೀಡಲು ತಯಾರಿ ನಡೆಸಿದ್ದಾರೆ..!
ರೇವಣ್ಣ ಮನವೊಲಿಕೆ ಮಾಡಿದ ದೇವೇಗೌಡರು..!
ಸಚಿವ ಸ್ಥಾನಕ್ಕಾಗಿ ಲಾಭಿ ನಡೆಸುತ್ತಿರುವ ಎಚ್ ಡಿ ರೇವಣ್ಣ ಅವರು ಎರಡೆರಡು ಖಾತೆಗಾಗಿ ಕಣ್ಣಿಟ್ಟಿದ್ದರು. ಇತ್ತ ಡಿಕೆಶಿ ಕೂಡಾ ಇಂಧನ ಖಾತೆಗಾಗಿ ಪಟ್ಟು ಹಿಡಿದಿದ್ದ ಕಾರಣ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಭಾರೀ ತಲೆ ನೋವಾಗಿತ್ತು. ಅದರಂತೆ ಇದೀಗ ಕಾಂಗ್ರೆಸ್ ಮುಖಂಡರ ಟೀಂ ರಾಹುಲ್ ಭೇಟಿಗಾಗಿ ದೆಹಲಿಗೆ ತೆರಳಿದ್ದು, ಇದರಿಂದ ಕಂಗಾಲಾಗಿರುವ ಕುಮಾರಸ್ವಾಮಿ ಅವರು ಕಾಂಗ್ರೆಸ್ಗೆ ಸಚಿವ ಸ್ಥಾನ ಬಿಟ್ಟುಕೊಡಲು ಮುಂದಾಗಿದ್ದಾರೆ.
ಇತ್ತ ಅಸಮಧಾನಗೊಂಡ ರೇವಣ್ಣ ಅವರನ್ನು ಮನವೊಲಿಕೆ ಮಾಡಿದ ಜೆಡಿಎಸ್ ವರಿಷ್ಠ ದೇವೇಗೌಡರು ಬೇರೆ ಖಾತೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಆದ್ದರಿಂದ ಸಚಿವ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿರುವ ಶಾಸಕರ ಮನವೊಲಿಸುವುದೇ ಕುಮಾರಸ್ವಾಮಿ ಅವರಿಗೆ ಭಾರೀ ದೊಡ್ಡ ಕಗ್ಗಂಟಾಗಿದ್ದು, ಇನ್ನೂ ಸಚಿವ ಸಂಪುಟ ರಚಿಸದ ಸಮ್ಮಿಶ್ರ ಸರಕಾರ ದಿನ ಮುಂದೂಡುತ್ತಲೇ ಇದೆ..!
–ಅರ್ಜುನ್