X

ಬಿಗ್ ಬ್ರೇಕಿಂಗ್: ಅಂದು ಜೆಡಿಎಸ್‍ನಿಂದ ಸಿದ್ದರಾಮಯ್ಯರನ್ನು ಕರೆತಂದ ಕಾಂಗ್ರೆಸ್ ನಾಯಕನಿಂದಲೇ ಇಂದು ಸಮಧಾನಪಡಿಸುವ ಸೂತ್ರ..! ದೂರವಾಣಿ ಕರೆಗೆ ಸಿದ್ದು ಏನಂದ್ರು ಗೊತ್ತಾ? 

“ಇದೊಂದು 6 ತಿಂಗಳ ಸರ್ಕಾರ. ಇದು ಹೆಚ್ಚು ಸಮಯ ಉಳಿಯೋದಿಲ್ಲ. ಇದರಲ್ಲಿ ಮುಖ್ಯಮಂತ್ರಿಯಾಗಿರುವ ಕುಮಾರ ಸ್ವಾಮಿ ಕಾಂಗ್ರೆಸ್-ಜನತಾ ದಳ ಮೈತ್ರಿ ಸರ್ಕಾರದ ಸಾಂದರ್ಭಿಕ ಶಿಶು. ಈ ಸರ್ಕಾರವನ್ನು ಬೇರಾರೂ ಬೇಡ, ಸ್ವತಃ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಉರುಳಿಸುತ್ತಾರೆ”… ಇದು ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಿ ಕಾಂಗ್ರೆಸ್-ಜನತಾದಳ ಮೈತ್ರಿ ಸರ್ಕಾರ ರಚಿಸಿದಾಗಿನಿಂದ ಇಂದಿನವರೆಗೂ ಸರ್ಕಾರ ಹಾಗೂ ನಾಯಕರು ನಡೆಸಿಕೊಂಡು ಬರುತ್ತಿರುವ ರೀತಿಯನ್ನು ಜನರು ವರ್ತಿಸುತ್ತಿರುವ ಪರಿ.

ಹೌದು, ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರೇ ಇದೀಗ ಕಾಂಗ್ರೆಸ್ ಹಾಗೂ ಜನತಾ ದಳದ ಮೈತ್ರಿ ಸರ್ಕಾರವನ್ನು ಉರುಳಿಸುವ ಸಖತ್ ಯೋಜನೆಯನ್ನು ರೂಪಿಸುತ್ತಿದ್ದಾರೆ. ತಮ್ಮ ಆಪ್ತ ಶಾಸಕರೊಂದಿಗೆ ಧರ್ಮಸ್ಥಳದ ಶಾಂತಿವನದಲ್ಲಿ ಸತತವಾಗಿ ಮಾತನಾಡುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈತ್ರಿ ಸರ್ಕಾರವನ್ನು ಬೀಳಿಸುವ ತಂತ್ರವನ್ನು ಹೂಡುತ್ತಿದ್ದಾರೆ.

ಈಗಾಗಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೈತ್ರಿ ಸರ್ಕಾರದ ವಿರುದ್ಧ ಮಾತನಾಡಿರುವ ಬಗ್ಗೆ 2 ವೀಡಿಯೋ ಬಿಡುಗಡೆಯಗಿದ್ದು ರಾಜ್ಯ ಮಾತ್ರವಲ್ಲದೆ ರಾಷ್ಟ್ರೀಯ ರಾಜಕೀಯದಲ್ಲೂ ಭಾರೀ ಅಲ್ಲೋ ಕಲ್ಲೋಲಗಳನ್ನೇ ಹುಟ್ಟುಹಾಕಿದೆ. ಈ ಕಾರಣಕ್ಕಾಗಿ ಜನತಾ ದಳದ ರಾಷ್ಟ್ರಾಧ್ಯಕ್ಷರು ದೆಹಲಿಗ ದೌಡಾಯಿಸಿದ್ದು ಕಾಂಗ್ರೆಸ್ ಹೈಕಮಾಂಡ್‍ಗೆ ದೂರು ನೀಡಿದ್ದಾರೆ.

ಸಿದ್ದುಗೆ ಕರೆ ಮಾಡಿದ ಅಹ್ಮದ್ ಪಟೇಲ್..!

ಒಂದು ಕಾಲದಲ್ಲಿ ಜನತಾ ದಳದ ನಾಯಕರಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಆ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಮಾಡಿದ್ದ ಮತ್ಯಾರೂ ಅಲ್ಲ. ಇದೇ ಕಾಂಗ್ರೆಸ್ ನಾಯಕಿ ಅವರ ಆಪ್ತ ಕಾರ್ಯದರ್ಶಿ ಅಹ್ಮದ್ ಪಟೇಲ್. ಜನತಾ ದಳದಲ್ಲಿ ತನ್ನನ್ನು ಕೇವಲ ಉಪಮುಖ್ಯಮಂತ್ರಿ ಸ್ಥಾನಕ್ಕಷ್ಟೇ ಸೀಮಿತಗೊಳಿಸಿದ್ದಾರೆಂದು ಬೇಸರಗೊಂಡಿದ್ದ ಸಿದ್ದರಾಮಯ್ಯರನ್ನು ಕಾಂಗ್ರೆಸ್‍ಗೆ ಆಹ್ವಾನಿಸಿ ಅವರನ್ನು ಪಕ್ಷ ಸೇರುವಂತೆ ಮಾಡಿದ್ದ ಅಹ್ಮದ್ ಪಟೇಲ್ ಇದೀಗ ಸಿದ್ದರಾಮಯ್ಯನವರ ಮುನಿಸಿಗೆ ಅಂತ್ಯ ಹಾಡಲು ಪ್ರಯತ್ನಿಸುತ್ತಿದ್ದಾರೆ. ಅಂದು ಯಾವ ಪಕ್ಷದಿಂದ ಹೊರ ಬಂದಿದ್ದರೋ ಇಂದ ಅದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈಗಿನ ಸರ್ಕಾರದಲ್ಲಿ ಮಾಜಿ ಪ್ರಧಾನಿ ಹಾಗೂ ಜನತಾ ದಳದ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು ತಮ್ಮ ಅಧಿಕಾರವನ್ನು ಚಲಾಯಿಸಿದ್ದಾರೆ ಎಂಬುವುದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆರೋಪ. ಹೀಗಾಗಿ ಸರ್ಕಾರವನ್ನು ಉರುಳಿಸಬೇಕು ಎಂಬ ನಿರ್ಧಾರಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಂದಿದ್ದಾರೆ ಎನ್ನಲಾಗಿದೆ.

ಇದೀಗ ಸ್ವತಃ ಮಧ್ಯಪ್ರವೇಶಿಸಿರುವ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಮಾಜಿ ಸಿಎಂ ಸಿದ್ದರಾಮಯ್ಯರ ಅಸಮಧಾನವನ್ನು ಶಮನ ಮಾಡಲು ಪ್ರಯತ್ನಿಸುತ್ತಿದ್ದಾರೆ. ಖುದ್ದು ದೂರವಾಣಿ ಕರೆ ಮಾಡಿದ ರಾಜ್ಯಸಭಾ ಸದಸ್ಯ ಹಾಗೂ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರೊಂದಿಗೆ 7 ನಿಮಿಷಗಳ ಕಾಲ ಮಾತನಾಡಿದ್ದಾರೆ. ಈ ವೇಳೆ ತನಗಾದ ನೋವನ್ನು ಸಿದ್ದು ಹಂಚಿಕೊಂಡಿದ್ದಾರೆ ಎನ್ನಲಾಗುತ್ತಿದೆ.

“ನನಗೆ ಜನತಾ ದಳದ ಜೊತೆ ಕೈಜೋಡಿಸುವುದು ಆರಂಭದಲ್ಲೇ ಇಷ್ಟವಿರಲಿಲ್ಲ. ಆದರೆ ಹೈಕಮಾಂಡ್ ಹೇಳಿದ್ದಕ್ಕೆ ಮಾತ್ರವೇ ಒಪ್ಪಿಕೊಂಡಿದ್ದೆ. ಆದರೆ ಇದೀಗ ನೋಡಿ ಏನಾಗ್ತಿದೆ ಎಂದು. ಎಲ್ಲವೂ ದೇವೇಗೌಡರೇ ನೋಡಿಕೊಳ್ಳುತ್ತಿದ್ದಾರೆ. ಅವರ ಉದ್ಧೇಶ ಸ್ಪಷ್ಟವಾಗಿದೆ. ಕಾಂಗ್ರೆಸ್ ಪಕ್ಷವನ್ನು ಮುಗಿಸಿಬಿಡುವುದೇ ದೇವೇಗೌಡರ ಲೆಕ್ಕಾಚಾರ. ಇದು ನನಗೆ ನೋವು ತಂದಿದೆ. ನಾನು ಕಾಂಗ್ರೆಸ್ ಅನ್ನ ತಿಂದಿದ್ದೇನೆ. ಇತ್ತೀಚೆಗೆ ಉಪಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ಜಿ.ಪರಮೇಶ್ವರ್ ಕೂಡಾ ನನ್ನನ್ನು ನಿರ್ಲಕ್ಷಿಸುತ್ತಿದ್ದಾರೆ. ಇದನ್ನು ಸಹಿಸಲು ಸಾಧ್ಯವೇ” ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಇದಕ್ಕೆ ತಾಳ್ಮೆಯಿಂದ ಉತ್ತರಿಸಿದ ಅಹ್ಮದ್ ಪಟೇಲ್ “ಎಲ್ಲವೂ ಸರಿಯಾಗುತ್ತೆ. ಈ ಸಂದರ್ಭದಲ್ಲಿ ಗೊಂದಲಕ್ಕೆ ಎಡೆಮಾಡಿಕೊಡಬೇಡಿ” ಎಂದು ಕಿವಿ ಹಿಂಡಿದ್ದಾರೆ ಎನ್ನಲಾಗಿದ್ದಾರೆ. ಒಟ್ಟಾರೆ ರಾಜ್ಯ ರಾಜಕೀಯದಲ್ಲಿ ಭಾರೀ ಬಿರುಗಾಳಿಯೇ ಬೀಸುತ್ತಿದ್ದು ಈ ಅಭದ್ರ ಸರ್ಕಾರ ಯಾವಾಗ ಉರುಳುತ್ತೋ ಎಂಬುವುದುನ್ನು ಹೇಳಲಸಾಧ್ಯ.

-ಏಕಲವ್ಯ

Editor Postcard Kannada:
Related Post