X

ಬ್ರೇಕಿಂಗ್! ರಾಜ್ಯ ನಾಯಕರಿಗೆ ಶಾಕ್ ನೀಡಿದ “ಕೈ”ಕಮಾಂಡ್..! ದೆಹಲಿಗೆ ಬಂದ್ರೆ ಹುಷಾರ್ ಅಂದಿದ್ಯಾಕೆ..?

ಭಾರತೀಯ ಜನತಾ ಪಕ್ಷವನ್ನು ಅಧಿಕಾರದಿಂದ ದೂರವಿಡುವ ಉದ್ಧೇಶದಿಂದ ಹಾಗೂ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಮುಕ್ತ ಕರ್ನಾಟಕ ಆಗಬಾರದು ಎನ್ನುವ ಉದ್ಧೇಶದಿಂದ ನಡೆಸಿದ ಕಾಂಗ್ರೆಸ್-ಜನತಾ ದಳ ಮೈತ್ರಿ ಸರ್ಕಾರದಲ್ಲಿ ಇದೀಗ ಭಾರೀ ಅಲ್ಲೋಲ ಕಲ್ಲೋಲಗಳೇ ಭುಗಿಲೇಳುತ್ತಿವೆ. ತಿಪ್ಪರಲಾಗ ಹಾಕಿಕೊಂಡು ರಚಿಸಿದ ಮೈತ್ರಿ ಸರ್ಕಾರದಲ್ಲಿ ಇದೀಗ ಬೂದಿ ಮುಚ್ಚಿದ ಕೆಂಡದಂತಿರುವ ವಾತಾವರಣ. ಎಲ್ಲವೂ ಗಲಿಬಿಲಿ, ಗೊಂದಲ.

ಕುಮಾರ ಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ 2 ವಾರ ಕಳೆಯುತ್ತಾ ಬಂದರೂ ಇನ್ನೂ ಸಂಪುಟ ಸರ್ಕಸ್ ಮುಗಿದೇ ಇಲ್ಲ. ಸಂಪುಟ ವಿಸ್ತರಣೆಗೆ ಭಾರೀ ಕಸರತ್ತು ನಡೆಸುತ್ತಿರುವ ಕಾಂಗ್ರೆಸ್‍ ನಾಯಕರು ಬಂಡಾಯದ ಹೊಗೆಯನ್ನು ಆರಿಸಲು ಶತಾಯ ಗತಾಯ ಪ್ರಯತ್ನ ಪಡುತ್ತಿದ್ದಾರೆ. ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್ ನಾಯಕರು ನಾಮುಂದು ತಾಮುಂದು ಎಂದು ಕ್ಯೂನಲ್ಲಿ ನಿಂತಿದ್ದಾರೆ.

ಈ ಮಧ್ಯೆ ಸಂಪುಟಕ್ಕೆ ಅಸ್ತು ಎನ್ನಲು ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಇರಬೇಕಾಗಿತ್ತು. ರಾಗಾ ಅಮೇರಿಕಾ ಪ್ರವಾಸದಲ್ಲಿದ್ದ ಕಾರಣ ತಡವಾಗಿತ್ತು. ಆದರೆ ಇದೀಗ ರಾಹುಲ್ ಗಾಂಧಿ ಭಾರತಕ್ಕೆ ಮರಳಿದ್ದು ಮತ್ತೆ ಸಂಪುಟ ವಿಸ್ತರಣೆಯ ನಾಟಕ ಗರಿಗೆದರಿದೆ. ರಾಹುಲ್ ಗಾಂಧಿಯನ್ನು ಭೇಟಿ ಮಾಡಲು ಕಾಂಗ್ರೆಸ್ ನಾಯಕರು ಶಸ್ತ್ರ ಸನ್ನದ್ಧರಾಗಿದ್ದರು.

ಆದರೆ ಕಾಂಗ್ರೆಸ್‍ನ ರಾಜ್ಯ ನಾಯಕರಿಗೆ ಇದೀಗ ಭಾರೀ ನಿರಾಸೆಯಾಗಿದೆ. ರಾಹುಲ್ ಗಾಂಧಿಯ ಭೇಟಿಗೆ ತುದಿಗಾಲಿನಲ್ಲಿ ನಿಂತಿದ್ದ ಮಾಜಿ ಸಚಿವ ಡಿಕೆ ಶಿವಕುಮಾರ್ ಹಾಗೂ ಶಾಸಕ ಸಿದ್ದರಾಮಯ್ಯನವರನ್ನು ಕಾಂಗ್ರೆಸ್ ಹೈಕಮಾಂಡ್ ತಡೆದಿದೆ. ರಾಹುಲ್ ಗಾಂಧಿಯ ಸೂಚನೆ ಮೇರೆಗೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಹಾಗೂ ಮಾಜಿ ಕೇಂದ್ರ ಸಚಿವ ಗುಲಾಂ ನಬಿ ಅಜಾದ್ ರಾಜ್ಯ ಕಾಂಗ್ರೆಸ್ ನಾಯಕರಿಗೆ ಕಟ್ಟಪ್ಪಣೆ ಮಾಡಿದ್ದಾರೆ.

 

“ಯಾವುದೇ ಕಾರಣಕ್ಕೂ ನೀವು ಪಟ್ಟಿ ಹಿಡಿದುಕೊಂಡು ದೆಹಲಿಗೆ ಬರುವುದು ಬೇಡ. ನೀವು ಅಲ್ಲೇ ಇರಿ. ಏನು ಮಾಡಬೇಕೋ ಅದನ್ನು ನಾವು ಮಾಡುತ್ತೇವೆ. ನೀವು ಬಂದರೆ ಶಾಸಕರ ಲಾಬಿ ಹೆಚ್ಚಾಗುತ್ತೆ. ಹೀಗಾಗಿ ಯಾರೊಬ್ಬರೂ ದೆಹಲಿಗೆ ಬರೋದು ಬೇಡ” ಎಂದು ಆಜ್ನೆ ಹೊರಡಿಸಿದ್ದಾರೆ.

ತಮ್ಮ ಬೆಂಬಲಿಗರಿಗೆ ಮಂತ್ರಿ ಸ್ಥಾನವನ್ನು ಗಿಟ್ಟಿಸಿಕೊಳ್ಳಬಹುದು ಎಂಬ ಕನಸನ್ನು ಹೊತ್ತುಕೊಂಡು ದೆಹಲಿಗೆ ಪ್ರಯಾಣ ಬೆಳೆಸಲು ಹೊರಟಿದ್ದ ರಾಜ್ಯ ಕಾಂಗ್ರೆಸ್ ನಾಯಕರಿಗೆ ಇದೀಗ ಭಾರೀ ನಿರಾಸೆಯಾಗಿದೆ. ಎಲ್ಲಿ ತಮ್ಮ ಬೆಂಬಲಿಗರಿಗೆ ಸಚಿವ ಸ್ಥಾನ ಕೈತಪ್ಪುತ್ತೋ ಎಂಬ ಭೀತಿಯಿಂದ ರಾಜ್ಯ ನಾಯಕರು ಇದ್ದಾರೆ ಅನ್ನೋದ್ರಲ್ಲಿ ಯಾವುದೇ ಸಂದೇಹವಿಲ್ಲ.

-ಏಕಲವ್ಯ

Editor Postcard Kannada:
Related Post