ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ದಿನಾ ಚರ್ಚೆಯಾಗುತ್ತಿರುವ ಉತ್ತರ ಪ್ರದೇಶ ಇಂದು ಮತ್ತೆ ಸುದ್ಧಿಯಾಗಿದೆ. ಹದಗೆಟ್ಟಿರುವ ಕಾನೂನು ಸುವ್ಯವಸ್ಥೆಯನ್ನು ಹತೋಟಿಗೆ ತರುವಲ್ಲಿ ಸತತ ಪ್ರಯತ್ನ ಪಡುತ್ತಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕ್ರಿಮಿನಲ್ಗಳನ್ನು ಹೆಡೆಮುರಿ ಕಟ್ಟಿ ಜೈಲಿಗಟ್ಟುತ್ತಿದ್ದಾರೆ. ಈ ಮೂಲಕ ಸುದ್ಧಿಯಾಗುತ್ತಿದ್ದ ಉತ್ತರ ಪ್ರದೇಶ ಇಂದು ಮತ್ತೆ ಸುದ್ಧಿಯಾಗಿದೆ.
ದೇಶದ ಅತಿ ದೊಡ್ಡ ರಾಜ್ಯ. ಆ ರಾಜ್ಯದ ಜನ ಸಂಖ್ಯೆಯೂ ಅಷ್ಟೇ ಅಧಿಕವಾಗಿದೆ. ಇಂತಹ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಅನ್ನೋದು ಸತ್ತೇ ಹೋಗಿತ್ತು. ದಿನ ನಿತ್ಯದ ಪತ್ರಿಕೆಗಳಲ್ಲಿ ಕ್ರೈಮ್ ಗಳ ಆರ್ಭಟವೇ ಸದ್ದು ಮಾಡುತ್ತಿತ್ತು. ಗೂಂಡಾಗಳು ಕ್ಯಾರೇ ಎನ್ನದೆ ಅಲ್ಲಿ ಮನಬಂದಂತೆ ರೌಡಿಸಂ ಮೆರೆಯುತ್ತಿದ್ದರು. ಅತ್ಯಾಚಾರ ಅನ್ನೋದು ನಿಯಂತ್ರಿಸಲಾಗದ ಬಲುದೊಡ್ಡ ಸಮಸ್ಯೆಯಾಗಿತ್ತು. ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸರೇ ಗೂಂಡಾಗಳಿಂದ ಒದೆ ತಿಂದು ಓಡಿ ಹೋಗುವಂತಹ ಸ್ಥಿತಿ ಅಲ್ಲಿ ನಿರ್ಮಾಣವಾಗಿತ್ತು. ಆದರೆ ಈಗ ಹಾಗಿಲ್ಲ. ಆ ರಾಜ್ಯದ ರಾಜಕೀಯ ಕ್ರಾಂತಿಯೇ ಬದಲಾಗಿದೆ. ಆ ರಾಜ್ಯಕ್ಕೆ ಓರ್ವ ಕಾವಿ ಉಟ್ಟ ಸನ್ಯಾಸಿ ಮುಖ್ಯಮಂತ್ರಿ ಗದ್ದುಗೆಗೆ ಏರಿದ್ದಾನೆ. ನೋ ಕ್ರೈಮ್ ನೋ ರೇಪ್. ಕಾನೂನು ಸುವ್ಯವಸ್ಥೆಯೂ ಸೂಪರ್. ಗೂಂಡಾಗಳು ಗೂಡಂಗಡಿಯಲ್ಲಿ ಪಾತ್ರೆ ತೊಳೆಯುವ ಸ್ಥಿತಿ ಅಲ್ಲಿ ನಿರ್ಮಾಣವಾಗಿದೆ. ಇಲ್ಲದಿದ್ದರೆ ಪೊಲೀಸರ ಗುಂಡೇಟಿಗೆ ನರಕಕ್ಕೆ ದಾರಿ ಗ್ಯಾರಂಟಿ.
ಉತ್ತರ ಪ್ರದೇಶ ಅಂದರೆ ಮೊದಲು ಕ್ರೈಮ್ಗಳೇ ಕಣ್ಣಮುಂದೆ ಬರುತ್ತಿತ್ತು. ಆದರೆ ಈಗ ಉತ್ತರ ಪ್ರದೇಶವೆಂದರೆ ಕಾವಿ ಉಟ್ಟ ದಿಟ್ಟ ಸನ್ಯಾಸಿ ಯೋಗಿ ಆದಿತ್ಯನಾಥ್ ನೆನಪಾಗುತ್ತಾರೆ. ಮಾತ್ರವಲ್ಲದೆ ಯೋಗಿ ಬಂದ ನಂತರ ಒಂದಲ್ಲಾ ಒಂದು ಕಾರಣದಿಂದ ದೇಶದಲ್ಲೇ ಹೆಸರಾಗುತ್ತಿದ್ದಾರೆ. ಭಾರತೀಯ ಜನತಾ ಪಕ್ಷದಲ್ಲೂ ತಾವು ಮಾಸ್ ಹೀರೋ ಆಗಿದ್ದಾರೆ. ಇದು ತಾವು ಅಧಿಕಾರಕ್ಕೆ ಬಂದ ನಂತರ ಉತ್ತರ ಪ್ರದೇಶ ರಾಜ್ಯವನ್ನು ಹೇಗೆ ಮಾಡಿದ್ದಾರೆಂಬ ಪ್ರತಿಯೊಂದು ಸಾಧನೆಯನ್ನೂ ಬಿಚ್ಚಿಡುತ್ತದೆ.
ಉತ್ತರ ಪ್ರದೇಶದಲ್ಲಿ ಗುಂಡಿನದ್ದೇ ಸದ್ದು!
ಕಳೆದ ಎಸ್.ಪಿ. ಸರ್ಕಾರದ ಅವಧಿಯಲ್ಲಿ ತಾಂಡವವಾಡುತ್ತಿದ್ದ ಕ್ರಿಮಿನಲ್ ಚಟುವಟಿಕೆಯ ಗೂಂಡಾಗಳನ್ನು ಅಂದಿನ ಸರ್ಕಾರ ಭಾರೀ ಸವಲತ್ತುಗಳನ್ನು ನೀಡಿ ಕಾಪಾಡುತ್ತಿತ್ತು. ಆದರೆ ಬದಲಾದ ಸರ್ಕಾರದ ಅವಧಿಯಲ್ಲಿ ಗೂಂಡಾಗಳಿಗೆ ನೆಲೆ ಇಲ್ಲದಂತಾಗಿದೆ. ಉತ್ತರ ಪ್ರದೇಶವನ್ನು ಉಗ್ರ ತಾಣವನ್ನಾಗಿ ಮಾಡಿಕೊಂಡಿದ್ದ ಗೂಂಡಾಗಳು ಈಗ ಯೋಗಿಯ ಗುಂಡೇಟಿಗೆ ಎದ್ನೋ ಬಿದ್ನೋ ಎಂಬಂತೆ ಓಡುವ ಪರಿಸ್ಥಿತಿಗೆ ತಲುಪಿದೆ. ನೂರಾರು ಗೂಂಡಾಗಳನ್ನು ಎನ್ಕೌಂಟರ್ ಮಾಡಿ ಬಿಸಾಕುತ್ತಿದ್ದಾರೆ ಉತ್ತರ ಪ್ರದೇಶದ ಪೊಲೀಸರು. ಉತ್ತರ ಪ್ರದೇಶದಲ್ಲಿ ಎಲ್ಲೆಲ್ಲೂ ಈಗ ಗುಂಡಿನದ್ದೇ ಸದ್ದು ಅಡಗಿದೆ.
48 ಗಂಟೆಯಲ್ಲಿ ಯು.ಪಿ.ಯಲ್ಲಿ ಆದ ಎನ್ಕೌಂಟರ್ ಎಷ್ಟು ಗೊತ್ತಾ?
ಕಳೆದ 48 ಗಂಟೆಯಲ್ಲಿ ಯೋಗಿ ಸರ್ಕಾರ ಮಾಡಿದ ಆದೇಶಕ್ಕೆ ಇಡೀ ಗೂಂಡಾ ಸಮೂಹವೇ ಬೆಚ್ಚಿ ಬಿದ್ದಿದೆ. ಎಲ್ಲೆಂದರಲ್ಲಿ ಅಡಗಿಕೊಂಡು ಬದುಕಿದರೆ ಭಿಕ್ಷೆ ಬೇಡಿಯಾದರೂ ತಿನ್ನುತ್ತೇವೆ ಎನ್ನುವ ಹಂತಕ್ಕೆ ತಲುಪಿದ್ದಾರೆ. ಶುಕ್ರವಾರ ಸಂಜೆಯಿಂದೀಚೆಗೆ ಉತ್ತರ ಪ್ರದೇಶದ 10 ಜಿಲ್ಲೆಗಳಲ್ಲಿ ಒಟ್ಟು 15 ಪೊಲೀಸ್ ಎನ್ಕೌಂಟರ್ಗಳು ವರದಿಯಾಗಿದ್ದು, 24 ವಾಂಟೆಡ್ ಕ್ರಿಮಿನಲ್ಗಳನ್ನು ಬಂಧಿಸಲಾಗಿದೆ. ಒಬ್ಬ ಗ್ಯಾಂಗ್ಸ್ಟರ್ ಗುಂಡೇಟಿಗೆ ಬಲಿಯಾಗಿದ್ದಾನೆ.
ಮುಜಾಫರ್ನಗರ, ಗೋರಖ್ಪುರ, ಬುಲಂದ್ಶಹರ್, ಶಾಮ್ಲಿ, ಹಾಪುರ್, ಮೀರತ್, ಸಹಾರಣ್ಪುರ, ಬಾಗ್ಪತ್, ಕಾನ್ಪುರ ಮತ್ತು ಲಖನೌ ಜಿಲ್ಲೆಗಳಲ್ಲಿ ಈ ಎನ್ಕೌಂಟರ್ಗಳು ನಡೆದಿವೆ. ಎಲ್ಲ ಪ್ರಕರಣಗಳಲ್ಲೂ ಪಿಸ್ತೂಲುಗಳು, ನಾಡಬಂದೂಕುಗಳು ಸೇರಿದಂತೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳು ಹಾಗೂ ಕ್ರಿಮಿನಲ್ಗಳು ಜನರಿಂದ ದೋಚಿದ ನಗದು, ಆಭರಣ ಮತ್ತು ಕಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪಟ್ಟಿ ಮಾಡಲಾದ ಕ್ರಿಮಿನಲ್ಗಳನ್ನು ಮಟ್ಟಹಾಕಲು ಈ ಎನ್ಕೌಂಟರ್ಗಳನ್ನು ನಡೆಸಲಾಗಿದೆ. ಇದೇ ವೇಳೆ 8 ಗ್ಯಾಂಗ್ಸ್ಟರ್ಗಳನ್ನು ಬಂಧಿಸಲಾಗಿದೆ. ಈ ಗ್ಯಾಂಗ್ಸ್ಟರ್ಗಳ ತಲೆಗೆ 15,000 ದಿಂದ 25,000 ರೂ ವರೆಗೆ ಬಹುಮಾನ ಘೋಷಿಸಲಾಗಿತ್ತು ಎಂದು ಡಿಜಿಪಿ ಓ.ಪಿ ಸಿಂಗ್ ತಿಳಿಸಿದರು.
‘ಈ ವಾಂಟೆಡ್ ಗ್ಯಾಂಗ್ಸ್ಟರ್ಗಳನ್ನು ಬಂಧಿಸಿ ಜೈಲಿಗೆ ತಳ್ಳುವ ಉದ್ದೇಶದಿಂದ ಕಾರ್ಯಾಚರಣೆ ನಡೆಸಲಾಗಿದೆ. ಸ್ವಯಂ ರಕ್ಷಣೆಗಾಗಿ ಮಾತ್ರವೇ ಅನಿವಾರ್ಯವಾಗಿ ಬೇರೆ ಆಯ್ಕೆಯೇ ಇಲ್ಲದ ಸಂದರ್ಭಗಳಲ್ಲಿ ಬಲ ಪ್ರಯೋಗ ಮಾಡುವಂತೆ ಪೊಲೀಸರಿಗೆ ಸೂಚಿಸಲಾಗಿತ್ತು. ವಾಂಟೆಡ್ ಕ್ರಿಮಿನಲ್ಗಳು ಎಂದು ಪರಿಗಣಿಸಲಾದ ದುಷ್ಕರ್ಮಿಗಳು ಕಾನೂನು ಉಲ್ಲಂಘಿಸುವುದನ್ನು ನಿಲ್ಲಿಸುವುದೇ ಇದರ ಮೂಲ ಉದ್ದೇಶ’ ಎಂದು ಸಿಂಗ್ ಟೈಮ್ಸ್ ಆಫ್ ಇಂಡಿಯಾಗೆ ವಿವರಿಸಿದರು.
ಮುಜಾಫರ್ನಗರದಲ್ಲಿ ಶುಕ್ರವಾರ ಪೊಲೀಸ್ ಪಡೆ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಇಂದ್ರಪಾಲ್ನನ್ನು ಹೊಡೆದುರುಳಿಸಿದರು. ಘಾಜಿಯಾಬಾದ್ ಮೂಲದ ಈತ 33 ಕ್ರಿಮಿನಲ್ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ.
ಎನ್ಕೌಂಟರ್ ಬಳಿಕ ಗೋರಖ್ಪುರದಲ್ಲಿ ಇಬ್ಬರು ಕ್ರಿಮಿನಲ್ಗಳ ಬಂಧನ:
2013ರಲ್ಲಿ ಹರಿದ್ವಾರದಲ್ಲಿ ನಡೆದ ಶೂಟೌಟ್ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಯೊಬ್ಬರಿಂದ ಪಿಸ್ತೂಲು ಕಸಿದು ಇನ್ನೊಬ್ಬ ಪೊಲೀಸ್ ಅಧಿಕಾರಿಯನ್ನು ಹತ್ಯೆ ಮಾಡಿದ ಕೇಸೂ ಇಂದ್ರಪಾಲ್ ಮೇಲಿದೆ. ಈತನ ಸುಳಿವು ಕೊಟ್ಟವರಿಗೆ 25,000 ರೂ ಬಹುಮಾನವನ್ನೂ ಘೋಷಿಸಲಾಗಿತ್ತು. ಎನ್ಕೌಂಟರ್ ವೇಳೆ ಈತ ಎಸ್ಟಿಎಫ್ ಮೇಲೆ ಗುಂಡುಹಾರಿಸಿದಾಗ ಸಬ್ ಇನ್ಸ್ಪೆಕ್ಟರ್ ಒಬ್ಬರು ಗಾಯಗೊಂಡರು.
ಗೋರಖ್ಪುರದಲ್ಲಿ ನಡೆದ ಇನ್ನೊಂದು ಎನ್ಕೌಂಟರ್ನಲ್ಲಿ ಇಬ್ಬರು ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದರು. ಈ ದುಷ್ಕರ್ಮಿಗಳು ಶುಕ್ರವಾರ ಬೆಳಗಿನ ಜಾವ ರಾಮ್ನಗರ್ ಪ್ರದೇಶದಲ್ಲಿ ಗ್ರಾಮ ಪ್ರಧಾನರೊಬ್ಬರಿಂದ ಸುಲಿಗೆಗೆ ಸಂಚು ಹೂಡಿದ್ದರು. ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಕಾರ್ಯಾಚರಣೆಗಿಳಿದ ಪೊಲೀಸರು ದುಷ್ಕರ್ಮಿಗಳಿಗೆ ಗುಂಡು ಹೊಡೆದು ಗಾಯಗೊಳಿಸಿ ಬಂಧಿಸಿದರು. ಬಳಿಕ ಅವರನ್ನು ಬಿಆರ್ಡಿ ಆಸ್ಪತ್ರೆಗೆ ಸೇರಿಸಲಾಯಿತು.
ಈ ಇಬ್ಬರೂ ಕ್ರಿಮಿನಲ್ಗಳ ತಲೆಗೆ ತಲಾ 50,000 ರೂ.ಗಳ ಬಹುಮಾನ ಘೋಷಿಸಲಾಗಿತ್ತು. ಕಳೆದ ಭಾನುವಾರ ನಡೆದ ಉದ್ಯಮಿ ದಿನೇಶ್ ಗುಪ್ತಾ ಹತ್ಯೆ ಪ್ರಕರಣದಲ್ಲಿ ಶಾಮೀಲಾಗಿರುವುದನ್ನು ಈ ಕ್ರಿಮಿನಲ್ಗಳು ಒಪ್ಪಿಕೊಂಡಿದ್ದಾರೆ.
ಬುಲಂದ್ಶಹರ್ನಲ್ಲಿ ಇನ್ನೊಬ್ಬ ವಾಂಟೆಡ್ ದರೋಡೆಕೋರ ಮುಕೇಶ್ನನ್ನು ಜಹಾಂಗಿರಾಬಾದ್ ಠಾಣೆ ವ್ಯಾಪ್ತಿಯಲ್ಲಿ ಬಂಧಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಗುರುವಾರ ಮಧ್ಯರಾತ್ರಿ ಬಳಿಕ ಆತನ ಮನೆಗೆ ಪೊಲೀಸರು ದಾಳಿ ಮಾಡಿದಾಗ ಮುಕೇಶ್ ಗುಂಡು ಹಾರಿಸಲಾರಂಭಿಸಿದ. ಆದರೆ ಪೊಲೀಸರು ಬಲಪ್ರಯೋಗಿಸಿ ಆತನನ್ನು ಸೆರೆಹಿಡಿದರು. ಈತನ ಮೇಲೆ 20,000 ರೂ ಬಹುಮಾನ ಘೋಷಿಸಲಾಗಿತ್ತು. ಕೊಲೆ, ಕೊಲೆಯತ್ನ, ದರೋಡೆ ಹಾಗೂ ಮದ್ಯ ಕಳ್ಳಸಾಗಣೆ ಸೇರಿದಂತೆ ಹಲವು ಕ್ರಿಮಿನಲ್ ಪ್ರಕರಣಗಳು ಈತನ ಮೇಲಿವೆ.
ಗೂಡಂಗಡಿಯಲ್ಲಿ ಕೆಲಸ ಮಾಡುತ್ತಿರುವ ಗೂಂಡಾಗಳು!
ನಂಬಿದರೆ ನಂಬಿ, ಬಿಟ್ಟರೆ ಬಿಡಿ… ಉತ್ತರ ಪ್ರದೇಶದ ಗೂಂಡಾಗಳು ಯೋಗಿ ಸರ್ಕಾರ ಬಂದ ನಂತರ ಯಾವ ಹಂತಕ್ಕೆ ತಲುಪಿದ್ದಾರೆಂದರೆ, ಗೂಡಂಗಡಿ ಹಾಗೂ ಸಣ್ಣ ಪುಟ್ಟ ಹೊಟೇಲ್ಗಳಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಒಂದು ಕಾಲದಲ್ಲಿ ಗಲ್ಲಿ ಗಲ್ಲಿಯಲ್ಲಿ ಹಫ್ತಾ ವಸೂಲಿ ಮಾಡಿ ಗೂಂಡಾಗಿರಿ ಮೆರೆಯುತ್ತಿದ್ದ ಗೂಂಡಾಗಳು ಇಂದು ಯೋಗಿ ಕೈಯಿಂದ ತಪ್ಪಿಸಿಕೊಂಡರೆ ನೂರು ವರ್ಷ ಆಯಸ್ಸು ಎಂದು ಕೆಲಸಕ್ಕೆ ಸೇರಿಕೊಂಡಿದ್ದಾರೆ. ಸಾರ್ವಜನಿಕರೂ ಯೋಗಿಯ ಈ ದಿಟ್ಟ ಕ್ರಮಕ್ಕೆ ಜೈ ಅಂದಿದ್ದು, ಭಾರೀ ಪ್ರಸಂಶೆ ವ್ಯಕ್ತವಾಗಿದೆ.
ಒಟ್ಟಿನಲ್ಲಿ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾದ ನಂತರ ಒಂದಲ್ಲಾ ಒಂದು ಕಾರಣದಿಂದ ಪ್ರಖ್ಯಾತಿಯನ್ನು ಪಡೆಯುತ್ತಿದೆ. ಗೂಂಡಾಗಳೇ ತುಂಬಿದ್ದ ರಾಜ್ಯದಲ್ಲಿ ಈಗ ಸಜ್ಜನರು ನಿಟ್ಟುಸಿರು ಬಿಡುವಂತಾಗಿದೆ. ಗೂಂಡಾ ಮುಕ್ತ ರಾಜ್ಯವನ್ನಾಗಿಸಲು ಸಂಕಲ್ಪ ತೊಟ್ಟ ಯೋಗಿ ಸರ್ಕಾರ ಕಳೆದ 48 ಗಂಟೆಗಳ ಕಾಲ ಮಾಡಿದ ಈ ಸಾಧನೆಯೇ ಇದಕ್ಕೆ ಕೈಗನ್ನಡಿಯಾಗಿದೆ.
source: http://vknet.in/oJB1oa14/faa via @Vijaykarnataka: http://app.vknet.in
-ಸುನಿಲ್ ಪಣಪಿಲ