ಕರ್ನಾಟಕ ಮಹದಾಯಿ – ಕಳಸಾ ಬಂಡೂರಿ ಹೋರಾಟದಲ್ಲಿ ಜಯ ಸಾಧಿಸಿದೆ. ಕೇಂದ್ರ ಜಲ ಆಯೋಗ ಕರ್ನಾಟಕ ರಾಜ್ಯದ ಕಳಸಾ ಬಂಡೂರಿ ಯೋಜನೆಯ ವಿಸ್ತೃತ ಯೋಜನಾ ವರದಿಗೆ ಅನುಮೋದನೆ ನೀಡಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಮಾತನಾಡಿದ್ದು, ಕಾಂಗ್ರೆಸ್ ಪಕ್ಷ ಕಳಸಾ ಬಂಡೂರಿ ಯೋಜನೆಯ ಡಿಪಿಆರ್ ಆಗವುದೇ ಇಲ್ಲ ಎಂಬಂತೆ ಪ್ರತಿಕ್ರಿಯೆ ನೀಡಿತ್ತು. ಆದರೆ ಕಾಂಗ್ರೆಸ್ನ ಎಣಿಕೆ ತಪ್ಪಾಗಿದ್ದು, ಕೇಂದ್ರದ ಮೋದಿ ಸರ್ಕಾರ ಕಾಂಗ್ರೆಸ್ ಪಕ್ಷದ ಟೀಕೆಗೆ ಸರಿಯಾದ ಪ್ರತ್ಯುತ್ತರ ನೀಡಿದೆ ಎಂದು ಹೇಳಿದ್ದಾರೆ.
ಈ ಯೋಜನೆ ಜಾರಿಯಾದರೆ ರಾಜ್ಯದ ಕಿತ್ತೂರು ಕರ್ನಾಟಕ, ಹುಬ್ಬಳ್ಳಿ – ಧಾರವಾಡ, ಬೆಳಗಾವಿ ಜಿಲ್ಲೆಗಳಿಗೆ ಕುಡಿಯುವ ನೀರಿನ ಸಮಸ್ಯೆ ತಪ್ಪಲಿದೆ. ಈ ಹಿಂದೆ ಮಹದಾಯಿ ತೀರ್ಪಿನ ಸಂದರ್ಭದಲ್ಲಿಯೂ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಮೂಲಕ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಕ್ರಮ ಕೈಗೊಂಡಿತ್ತು. ಸದ್ಯ ಈ ಕುಡಿಯುವ ನೀರಿನ ಯೋಜನೆಗೆ ಡಿಪಿಆರ್ಗೆ ಅನುಮೋದನೆ ನೀಡುವ ಮೂಲಕ, ಯೋಜನೆಯ ಸುಗಮ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಸಹಕರಿಸಿರುವುದಾಗಿ ಜೋಶಿ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಈ ಹಿಂದೆಯೇ ಕೇಂದ್ರ ಸಚಿವ ಜೋಶಿ ಮತ್ತು ಇನ್ನೂ ಹಲವು ರೈತ ಮುಖಂಡರು ಆಗ್ರಹಿಸಿರುವುದನ್ನು ನಾವಿಲ್ಲಿ ನೆನಪಿಸಿಕೊಳ್ಳಲೇ ಬೇಕು. ಹಾಗೆಯೇ ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಜೊತೆಗೂ ಜೋಶಿ, ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮಹತ್ವದ ಸಭೆ ನಡೆಸಿದ್ದರು. ಇದೀಗ ಜೋಶಿ ಅವರು ಕೇಂದ್ರದ ಜೊತೆ ಸರಿಯಾಗಿ ಚರ್ಚಿಸಿ, ಈ ಯೋಜನೆಗೆ ಡಿಪಿಆರ್ಗೆ ಅನುಮತಿ ಕೊಡಿಸುವಲ್ಲಿ ಸಫಲರಾಗಿದ್ದಾರೆ.
ಈ ಯೋಜನೆಯನ್ನು ಸಾಕಾರಗೊಳಿಸಲು ಡಿಪಿಆರ್ಗೆ ಅನುಮೋದನೆ ನೀಡಿದ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಜೋಶಿ ಧನ್ಯವಾದ ಸಮರ್ಪಿಸಿದ್ದಾರೆ. ಹಾಗೆಯೇ ಈ ರಚನಾತ್ಮಕ ಯೋಜನೆಯ ವರದಿಗಾಗಿ ಸಿಎಂ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ನೀರಾವರಿ ಸಚಿವ ಗೋವಿಂದ ಕಾರಜೋಳ ಅವರಿಗೂ ಜೋಶಿ ಕೃತಜ್ಞತೆ ತಿಳಿಸಿದ್ದಾರೆ.