ಕಳೆದ ಕೆಲ ಸಮಯದ ಹಿಂದೆ ಉಡುಪಿಯಲ್ಲಿ ಸದ್ದು ಮಾಡಿದ್ದ ‘ಹಿಜಾಬ್ ಗಲಭೆ’ ನಿಮಗೆಲ್ಲಾ ನೆನಪಿರಬಹುದು. ಶಿಕ್ಷಣ ಸಂಸ್ಥೆಗಳಿಗೆ ಹಿಜಾಬ್ ಹಾಕದೆ ಬರೋದಿಲ್ಲ, ನಮಗೆ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸೋದಿಕ್ಕೆ ಅವಕಾಶ ಕೊಡ್ಬೇಕು ಅಂತ ಹೇಳಿ, ಈ ಅವಕಾಶ ದೊರೆಯದೆ ಇದ್ದಾಗ ಪರೀಕ್ಷೆಯನ್ನೇ ಬಹಿಷ್ಕರಿಸಿದ ಮುಸ್ಲಿಂ ವಿದ್ಯಾರ್ಥಿಗಳ ಕಥೆ ನಿಮಗೆಲ್ಲಾ ಗೊತ್ತೇ ಇದೆ. ಈ ಪ್ರಕರಣ ಹೈಕೋರ್ಟ್, ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು ಸಹ ಗೊತ್ತು.
ಇದಾದ ಬಳಿಕ ಹಿಜಾಬ್ ನಮಗೆ ಶಿಕ್ಷಣಕ್ಕಿಂತಲೂ ಹೆಚ್ಚು. ಧರ್ಮ ಬಿಟ್ಟು ಶಿಕ್ಷಣ ಬೇಡ ಅಂತ ಕೆಲವು ಮುಸ್ಲಿಂ ವಿದ್ಯಾರ್ಥಿನಿಯರು ಮನೆ ಸೇರಿದ್ದೂ ಆಯ್ತು. ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ನಿಮಗೆ ತಿಳಿದಿರಬಹುದು. ಕರ್ನಾಟಕದ ಉಡುಪಿಯಲ್ಲಿ ಆರಂಭವಾದ ಈ ಧಾರ್ಮಿಕ ಮೌಢ್ಯ ಅಮೇಲೆ ದೇಶದಾದ್ಯಂತ ಸದ್ದು ಮಾಡಿದ್ದು, ಸುದ್ದಿ ಮಾಡಿದ್ದನ್ನು ತಿಳಿದುಕೊಂಡಿದ್ದೇವೆ. ಯಾರದ್ದೋ ಮಾತು ಕೇಳಿ ತಮ್ಮ ಶೈಕ್ಷಣಿಕ ಬದುಕಿಗೆ ಕೊಳ್ಳಿ ಇರಿಸಿಕೊಳ್ಳಲು ಸಹ ಈ ಮುಸ್ಲಿಂ ವಿದ್ಯಾರ್ಥಿನಿಯರು ಹಿಂದೆ ಮುಂದೆ ನೋಡಲಿಲ್ಲ ಎಂದರೆ ಇವರ ಧರ್ಮದ ಅಮಲು ಹೇಗಿರಬಹುದು ಎಂದು ನೀವೇ ಆಲೋಚಿಸಿ.
ಈ ಕಥೆಯನ್ನು ಮತ್ತೆ ನೆನಪಿಸಿಕೊಳ್ಳುವುದಕ್ಕೆ ಕಾರಣ ಇದೆ. ರಾಜ್ಯ ವಕ್ಫ್ ಬೋರ್ಡ್ ಮುಸ್ಲಿಂ ವಿದ್ಯಾರ್ಥಿಗಳಿಗಾಗಿಯೇ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿ ಪ್ರತ್ಯೇಕವಾದ ಮುಸ್ಲಿಂ ಹೆಣ್ಣುಮಕ್ಕಳ ಕಾಲೇಜುಗಳನ್ನು ಸ್ಥಾಪನೆ ಮಾಡಲು ಮುಂದಾಗಿದೆ. ಒಟ್ಟು 10 ಕಾಲೇಜುಗಳ ಸ್ಥಾಪನೆಗೆ ಶೀಘ್ರ ಕಾರ್ಯತಂತ್ರ ನಡೆಯಲಿದೆ ಎಂದು ಮೂಲಗಳಿಂದಲೂ ತಿಳಿದು ಬಂದಿದೆ. ರಾಜ್ಯ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗಿದ್ದ ಈ ಪ್ರಸ್ತಾಪಕ್ಕೆ ಅನುಮೋದನೆ ದೊರೆತಿದೆ ಎಂಬುದಾಗಿಯೂ ಮೂಲಗಳು ಹೇಳಿವೆ.
ಆರಂಭದಲ್ಲಿ ಪ್ರಥಮ ಪಿಯುಸಿ ಆರಂಭಿಸಿ ಬಳಿಕ ದ್ವಿತೀಯ ಪಿಯುಸಿ ಆರಂಭಿಸಲಾಗುವುದು ಎಂದು ಮೂಲಗಳು ಹೇಳಿದ್ದು, ಈ ಸಂಬಂಧ ಈಗಾಗಲೇ ಸ್ಥಳ ಗುರುತು ಪ್ರಕ್ರಿಯೆ ಸಹ ನಡೆಸಲಾಗುತ್ತಿದೆ. ಯಾವುದೋ ಕಾಣದ ‘ಕೈ’ ಈ ಮುಸ್ಲಿಂ ವಿದ್ಯಾರ್ಥಿನಿಯರ ಕಾಲೇಜು ನಿರ್ಮಾಣದ ಹಿನ್ನೆಲೆಯಲ್ಲಿ ಆಟವಾಡುತ್ತಿದೆ ಎನ್ನುವುದು ಸತ್ಯ. ಹಿಜಾಬ್ ಸಂಬಂಧ ನಿಯಮದ ಪ್ರಕಾರ ಗೆಲ್ಲಲಾಗದವರು, ಸರ್ಕಾರದ ಸಹಾಯ ತೆಗೆದುಕೊಂಡು ಹೀಗೊಂದು ಪ್ರಯತ್ನ ನಡೆಸಿದೆ ಎನ್ನುವುದು ಮೇಲ್ನೋಟಕ್ಕೆ ಕಂಡುಬರುವ ಸತ್ಯ.
ಊರಿಗೆರಡರಂತೆ ಮಸೀದಿ ನಿರ್ಮಾಣ ಆಯ್ತು.. ಮದರಸಾಗಳನ್ನು ಅಲ್ಲಲ್ಲಿ ನಿರ್ಮಿಸಿ ಆಯ್ತು. ಅದರೊಳಗೆ ವಿದ್ಯಾರ್ಥಿಗಳಿಗೆ ಯಾವ ರೀತಿಯ ಶಿಕ್ಷಣ ನೀಡಲಾಗುತ್ತಿದೆ ಎನ್ನುವುದನ್ನು ದೇವರೇ ಬಲ್ಲ. ಸರ್ಕಾರ ಇದಕ್ಕೆ ಅನುದಾನ, ಸ್ಕಾಲರ್ಶಿಪ್ ಎಲ್ಲವನ್ನೂ ನೀಡುತ್ತದೆ. ಆದರೆ ಅವುಗಳೊಳಗೆ ಏನು ನಡೆಯುತ್ತಿದೆ ಎನ್ನುವುದರ ಚಿಕ್ಕ ಮಾಹಿತಿ ಸಹ ನಮ್ಮ ಸರ್ಕಾರಕ್ಕೆ ಇಲ್ಲ ಎನ್ನುವುದು ದುರಂತ. ಇದನ್ನು ಸ್ಥಗಿತಗೊಳಿಸುವುದಕ್ಕೂ ನಮ್ಮ ಸರ್ಕಾರದಿಂದ ಸಾಧ್ಯವಾಗಿಲ್ಲ. ಕೆಲವು ರಾಜ್ಯಗಳಲ್ಲಿ ಮದರಸಾಗಳಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳನ್ನು ಗಮನಿಸಿ, ಬುಲ್ಡೋಜರ್ ಮೂಲಕ ಕೆಡವಿದ ಘಟನೆಗಳೂ ಇವೆ. ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಕೆಲಸವನ್ನು ಈ ಮದರಸಾಗಳು ಮಾಡುತ್ತಿದ್ದವು ಎನ್ನುವುದು ಅತ್ಯಂತ ದುರಂತ ಮತ್ತು ಗಂಭೀರ ವಿಷಯ.
ಆದರೆ ನಮ್ಮ ರಾಜ್ಯದಲ್ಲಿ ಈ ವರೆಗೆ ಇಂತಹ ಕ್ರಮ ಕೈಗೊಂಡಿಲ್ಲ. ಕೊನೇ ಪಕ್ಷ ಮದರಸಾ, ಮಸೀದಿಗಳಲ್ಲಿ ಏನು ನಡೆಯುತ್ತಿದೆ ಎನ್ನುವುದರ ಅರಿವು ಸಹ ಸರ್ಕಾರಕ್ಕಿಲ್ಲ. ಬಿಜೆಪಿ ಸರ್ಕಾರವೇ ಕರ್ನಾಟಕದಲ್ಲಿದ್ದರೂ ಈ ಸಂಬಂಧ ಯಾವೊಂದು ಕ್ರಮವನ್ನು ಸಹ ತೆಗೆದುಕೊಳ್ಳಲಾಗಿಲ್ಲ ಎನ್ನುವುದು ನಾಚಿಕೆಯ ವಿಷಯ.
ಈಗ ವಕ್ಫ್ ಬೋರ್ಡ್ ಮೂಲಕ ಮುಸ್ಲಿಂ ಹೆಣ್ಣು ಮಕ್ಕಳಿಗೆ ಕಾಲೇಜು ಆರಂಭಿಸಲು ರಾಜ್ಯ ಸರ್ಕಾರ ಹೊರಟಿದೆ. ವಕ್ಫ್ ಬೋರ್ಡ್ ರಾಜ್ಯ ಸರ್ಕಾರದ ಅಡಿಯಲ್ಲಿ ಬರುವುದೋ ಇಲ್ಲವೋ ಗೊತ್ತಿಲ್ಲ. ಆದರೆ ಅದರ ಮೂಲಕ ಇಂತಹ ಒಂದು ಅವಕಾಶ ನೀಡಿದೆ ಎಂದಾದಲ್ಲಿ ಪಾಕಿಸ್ತಾನಕ್ಕೂ – ಇಲ್ಲಿಗೂ ಯಾವುದೇ ವ್ಯತ್ಯಾಸ ಇಲ್ಲ ಎಂದೇ ಹೇಳಬಹುದು. ಮುಂದೊಮ್ಮೆ ಷರೀಯತ್ ಕಾನೂನಿಗೂ ಹೋರಾಟ ನಡೆದಲ್ಲಿ, ಸರ್ಕಾರ ಇದಕ್ಕೆ ಬೆಂಬಲ ನೀಡಬಹುದಾ?, ನೀಡಿದಲ್ಲಿ ಅದರಿಂದಾಗಿ ಆಗುವ ಅಪಾಯಕ್ಕೆ ಸರ್ಕಾರ ಹೊಣೆ ಹೊತ್ತುಕೊಳ್ಳುತ್ತಾ ಎನ್ನುವುದು ಅಸಂಖ್ಯಾತ ಬಹುಸಂಖ್ಯಾತರ ಪ್ರಶ್ನೆ.
ಒಟ್ಟಿನಲ್ಲಿ ಸರ್ಕಾರದ ಈ ನಿಲುವು ಬಿಜೆಪಿ ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ ದೊಡ್ಡ ಮಟ್ಟಿನ ಹೊಡೆತ ನೀಡಿದರೂ ಆಶ್ಚರ್ಯ ಪಡಬೇಕಾಗಿಲ್ಲ.