ದೇಶವನ್ನೇ ಬೆಚ್ಚಿ ಬೀಳುವಂತೆ ಮಾಡಿದ್ದ ಮಣಿಪುರ ಹಿಂಸಾಚಾರ ಕೊನೆಗೂ ಕೊನೆಗೊಳ್ಳುವ ಸೂಚನೆಯೊಂದು ಸಿಕ್ಕಿದೆ. ಮಣಿಪುರದಲ್ಲಿ ಶಾಂತಿ ಸ್ಥಾಪನೆಗಾಗಿ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳಿಗೆ ಫಲ ದೊರೆತಿದೆ.
ಕೇಂದ್ರದ ಪ್ರಧಾನಿ ಮೋದಿ ಅವರ ಸರ್ಕಾರ ಎಲ್ಲಾ ರೀತಿಯಿಂದಲೂ ಮಣಿಪುರದಲ್ಲಿ ಶಾಂತಿ ಸ್ಥಾಪನೆಯಾಗುವಂತೆ ಮಾಡಲು ಹಲವಾರು ಉಪಕ್ರಮಗಳನ್ನು ತೆಗೆದುಕೊಂಡಿತ್ತು. ಇದರ ಫಲ ಎಂಬಂತೆ ಬಂಡುಕೋರರ ಗುಂಪುಗಳಲ್ಲಿ ಅತ್ಯಂತ ಹಳೆಯ ಗುಂಪು ಯುಎನ್ಎಲ್ಎಫ್ (ಯುನೈಟೆಡ್ ನ್ಯಾಷನಲ್ ಲಿಬರೇಶನ್ ಫ್ರಂಟ್) ಕೇಂದ್ರ ಸರ್ಕಾರದ ಜೊತೆಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದೆ.
ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾಹಿತಿ ನೀಡಿದ್ದು, ಮಣಿಪುರ ರಾಜ್ಯದ ಅತ್ಯಂತ ಹಳೆಯ ಕಣಿವೆ ಸಶಸ್ತ್ರ ಗುಂಪು ಯುಎನ್ಎಲ್ಎಫ್ ಹಿಂಸಾಚಾರ ತ್ಯಜಿಸುವುದಕ್ಕೆ ಮತ್ತು ಸಮಾಜದ ಮುಖ್ಯವಾಹಿನಿಗೆ ಬರಲು ಒಪ್ಪಿಕೊಂಡಿರುವುದಾಗಿ ತಿಳಿಸಿದ್ದಾರೆ.
ಇವರ ಈ ನಿಲುವಿನ ಬಗೆಗೆ ಹರ್ಷ ವ್ಯಕ್ತಡಿಸಿರುವ ಅವರು ಈ ಗುಂಪು ಹಿಂಸಾಚಾರವನ್ನು ತ್ಯಜಿಸುವುದಕ್ಕೆ ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಗಳಿಗೆ ಸೇರಿಕೊಳ್ಳಲು ಆಸಕ್ತಿ ತೋರಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ಅವರು ಶಾಂತಿ ಮತ್ತು ಪ್ರಗತಿಯ ಹಾದಿಯಲ್ಲಿ ನಡೆಯಲು ಮುಂದಾಗಿದ್ದು, ಅವರಿಗೆ ಶುಭ ಕೋರುವುದಾಗಿ ಹೇಳಿದ್ದಾರೆ.
ಬಂಡುಕೋರರು ಕೇಂದ್ರ ಸರ್ಕಾರದ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಶಸ್ತ್ರಾಸ್ತ್ರಗಳನ್ನು ಒಪ್ಪಿಸುವ ವಿಡಿಯೋ ಒಂದನ್ನು ಸಹ ಶಾ ಹಂಚಿಕೊಂಡಿದ್ದಾರೆ. ಕಳೆದ ಮೇ ತಿಂಗಳಲ್ಲಿ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ನಡೆದ ಬಳಿಕ ಕಣಿವೆ ಮೂಲದ ಭಯೋತ್ಪಾದಕ ಸಂಘಟನೆಯು ಸರ್ಕಾರದ ಜೊತೆಗೆ ಶಾಂತಿ ಮಾತುಕತೆಗೆ ಬಂದ ಪ್ರಥಮ ಘಟನೆ ಇದಾಗಿದೆ.