ಕರ್ನಾಟಕದ ಹಿಂದೂ ವಿರೋಧಿ, ಶ್ರೀರಾಮ ವಿರೋಧಿ ಕಾಂಗ್ರೆಸ್ ಸರ್ಕಾರದ ನಿಲುವಿಗೆ ಬಿಜೆಪಿ ಕೆಂಡಾಮಂಡಲವಾಗಿದೆ. ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿಯ ವಿರುದ್ಧ ‘ನಾನೂ ಒಬ್ಬ ಕರ ಸೇವಕ, ನನ್ನನ್ನೂ ಬಂಧಿಸಿ’ ಎಂದು ಬಿಜೆಪಿಗರು ಅಭಿಯಾನ ಶುರುವಿಟ್ಟುಕೊಂಡಿದ್ದಾರೆ. ರಾಮ ವಿರೋಧಿ ಸರ್ಕಾರದ ವಿರುದ್ಧ ರಾಮ ಭಕ್ತರು, ಬಿಜೆಪಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಸಂಬಂಧ ಬಿಜೆಪಿ ಪಕ್ಷದ ನಾಯಕರು ಮಾತನಾಡಿದ್ದು, 1990 – 92 ರ ಅವಧಿಯಲ್ಲಿ ನಮ್ಮ ರಾಜ್ಯದಿಂದಲೂ ಹಲವಾರು ಮಂದಿ ಕರ ಸೇವಕರು ಆಯೋಧ್ಯೆ ರಾಮ ಜನ್ಮಭೂಮಿಯ ಕರಸೇವೆಯಲ್ಲಿ ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ಸಹ ಕಾಂಗ್ರೆಸ್ನವರು ರಾಮ ಭಕ್ತ ಕರಸೇವಕರಿಗೆ ಬೆದರಿಕೆ ಒಡ್ಡುವ ಕೆಲಸವನ್ನು ಮಾಡಿದ್ದರು. ಈಗ ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿಯಲ್ಲಿ ಭವ್ಯವಾದ ರಾಷ್ಟ್ರ ಮಂದಿರ ಉದ್ಘಾಟನೆ ನಡೆಯಲಿದ್ದು, ಈ ಸಂದರ್ಭದಲ್ಲಿ ಸಹ ಕಾಂಗ್ರೆಸ್ ಕರ ಸೇವಕರು, ರಾಮ ಭಕ್ತರು, ಹಿಂದೂಗಳನ್ನು ಬೆದರಿಸುವ ಕೆಲಸಕ್ಕೆ ಮುಂದಾಗಿದೆ ಎಂದು ಕಾಂಗ್ರೆಸ್ ದುರಾಡಳಿತದ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ನಾಯಕ ಸುನೀಲ್ ಕುಮಾರ್ ಪಕ್ಷದ ಪರ ಮಾತನಾಡಿದ್ದು, ಶ್ರೀರಾಮ ಮಂದಿರದ ಕರಸೇವಕರಾಗಿ ನಾವೂ ಕೆಲಸ ಮಾಡಿದ್ದೇವೆ. ಶ್ರೀರಾಮ ಮಂದಿರ ಕಟ್ಟುವುದು ಭಾಜಪದ ಬದ್ಧತೆ. ಇದನ್ನು ಬಿಜೆಪಿ ಕಳೆದ ಹಲವು ವರ್ಷಗಳಿಂದ ತನ್ನ ಪ್ರಣಾಳಿಕೆಯಲ್ಲಿ ಹೇಳುತ್ತಲೇ ಬಂದಿದೆ. ಶ್ರೀರಾಮ ಮಂದಿರ ನಿರ್ಮಾಣ ನಮ್ಮೆಲ್ಲರ ಭಾವನೆಯೇ ಹೊರತು ರಾಜಕೀಯ ವಿಚಾರ ಅಲ್ಲ ಎಂದು ಅವರು ತಿಳಿಸಿದ್ದಾರೆ.
ಶ್ರೀರಾಮ ಮಂದಿರ ನಿರ್ಮಾಣ ನಡವಳಿಕೆ ಹಾಗೂ ಬದ್ಧತೆಯ ಪ್ರಶ್ನೆ. ಮಂದಿರಕ್ಕಾಗಿ ಕೆಲಸ ಮಾಡುತ್ತಿರುವ ರಾಮ ಭಕ್ತರನ್ನು ಅಪರಾಧಿಗಳಿಗೆ ಹೋಲಿಕೆ ಮಾಡುವ ಕೆಲಸವನ್ನು ಕಾಂಗ್ರೆಸ್ನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಾಡುತ್ತಿದೆ. ಕುಕ್ಕರ್ ಬಾಂಬ್ ಸ್ಪೋಟ ಮಾಡಿದ ಉಗ್ರ ಕಾಂಗ್ರೆಸ್ ಪಕ್ಷಕ್ಕೆ ಅಮಾಯಕನಂತೆ ಕಾಣುತ್ತಾನೆ. ಬೆಂಗಳೂರು ಗಲಭೆ ಆರೋಪಿಗಳು ಕಾಂಗ್ರೆಸ್ಗೆ ಬ್ರದರ್ಸ್. ಆದರೆ ಯಾವುದೇ ತಪ್ಪು ಕೆಲಸದಲ್ಲಿ ತೊಡಗದ ಕರಸೇವಕ ರಾಮಭಕ್ತರು ಮಾತ್ರ ಕ್ರಿಮಿನಲ್ಗಳ ಹಾಗೆ ಕಾಂಗ್ರೆಸ್ ಪಕ್ಷಕ್ಕೆ ಕಾಣುತ್ತಿದ್ದು, ಇದು ಕಾಂಗ್ಗಳ ಹಿಂದೂ ವಿರೋಧಿ ನೀತಿ ಎಂದು ಬಿಜೆಪಿ ಹೇಳಿದೆ.
ರಾಜ್ಯದ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನಿಲುವುಗಳಿಂದಲೇ ಸರ್ಕಾರ ಸತ್ತು ಹೋಗಿದೆ ಎಂದು ಹಿಂದೂಗಳು ಭಾವಿಸುವ ಹಾಗಾಗಿದೆ. ಕಾಂಗ್ರೆಸ್ ಸರ್ಕಾರ ರೈತರ ಪರವೂ ಇಲ್ಲ. ಹಿಂದೂಗಳ ಪರವೂ ಇಲ್ಲ. ಕೇವಲ ಅಲ್ಪಸಂಖ್ಯಾತರನ್ನು ಓಲೈಕೆ ಮಾಡುವುದು, ವೈಭವೀಕರಿಸುವುದರಲ್ಲಿಯೇ ಕೈ ನಾಯಕರು ತಲ್ಲೀನರಾಗಿದ್ದಾರೆ ಎಂದು ಬಿಜೆಪಿ ಕೆಂಡ ಕಾರಿದೆ.
ನಾನೂ ಕರ ಸೇವಕ, ನನ್ನನ್ನೂ ಬಂಧಿಸಿ ಎಂಬ ಅಭಿಯಾನ ಮುಂದುವರಿಯಲಿರುವುದು. ರಾಮ ಭಕ್ತರನ್ನು ಬೆದರಿಸುವ ಪ್ರಯತ್ನವನ್ನು ಕಾಂಗ್ರೆಸ್ ಸರ್ಕಾರ ಕೈ ಬಿಡಬೇಕು. ಈ ಹೋರಾಟದಲ್ಲಿ ಪೊಲೀಸ್, ಕೇಸು ಹಾಕಿಯೇ ಹಾಕುತ್ತಾರೆ. ಆದರೆ ನಾವೇನು ಕ್ರಿಮಿನಲ್ಗಳಾ ಎಂದು ಬಿಜೆಪಿ ನಾಯಕರು ಪ್ರಶ್ನೆ ಮಾಡಿದ್ದಾರೆ.