ಬಹಳ ಹಿಂದಿನಿಂದಲೂ ಸನಾತನ ಧರ್ಮ ಹಲವಾರು ಸಮಸ್ಯೆಗಳನ್ನು ಎದುರಿಸಿಕೊಂಡೇ ಬಂದಿದೆ. ಸವಾಲುಗಳು ಸನಾತನ ಹಿಂದೂ ಧರ್ಮಕ್ಕೆ ಹೊಸತೇನಲ್ಲ. ಪುರಾಣ ಕಾಲದಿಂದಲೂ ಸನಾತನ ಹಿಂದೂ ಧರ್ಮದ ಮೇಲೆ ದುರುಳರ ಅಟ್ಟಹಾಸ, ಕೊನೆಗೆ ಅವರ ನಾಶದ ಜೊತೆಗೆ ಸನಾತನ ಧರ್ಮ ಮತ್ತಷ್ಟು ಪ್ರಾಜ್ವಲ್ಯಮಾನವಾಗಿ ಬೆಳಗಿದ ಹಲವಾರು ಕಥೆಗಳನ್ನು ನಾವು ಕೇಳಿದ್ದೇವೆ.
ಕಾಲ ಬದಲಾದರೂ ಸನಾತನ ಧರ್ಮವನ್ನು ವಿರೋಧಿಸುವವರ, ಸನಾತನ ಧರ್ಮದೊಳಗಿನ ಉತ್ತಮ ಅಂಶಗಳನ್ನು ಅರಗಿಸಿಕೊಳ್ಳಲಾಗದೆ ಬೇಕಾಬಿಟ್ಟಿ ಮಾತನಾಡುವವರ ಸಂಖ್ಯೆ ಇಳಿದಿಲ್ಲ. ಹಿಂದೂಗಳ ಬಗ್ಗೆ, ದೈವ ದೇವರುಗಳ ಬಗ್ಗೆ ಬೇಕಾಬಿಟ್ಟಿ ಮಾತನಾಡಿ ಪ್ರಚಾರ ಗಿಟ್ಟಿಸಿಕೊಳ್ಳುವ, ಅದರಿಂದಲೇ ಅನ್ನ ಹುಟ್ಟಿಸಿ ಬಂಡ ಬಾಳು ಬದುಕುತ್ತಿರುವವರಿಗೆ ನಮ್ಮಲ್ಲೇನೂ ಕೊರತೆ ಇಲ್ಲ. ಅಂತಹವರ ಸಾಲಿಗೆ ಸದ್ಯದ ಹೊಸ ಸೇರ್ಪಡೆ ಉದಯ ನಿಧಿ ಸ್ಟ್ಯಾಲಿನ್ ಮತ್ತು ಎ. ರಾಜಾ.
ಸನಾತನ ಧರ್ಮವನ್ನು ಅವಹೇಳನ ಮಾಡಿ ಈ ಇಬ್ಬರು ಕ್ಯಾನ್ಸರ್ ಮನಸ್ಥಿತಿಯ ನಾಲಾಯಕರು ನೀಡಿರುವ ವಿವಾದಾತ್ಮಕ ಹೇಳಿಕೆಗಳಿಗೆ ಸಾಕಷ್ಟು ಟೀಕೆ ವ್ಯಕ್ತವಾಗಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅವರು ಸಹ ಈ ಇಬ್ಬರ ವಿವಾದಾತ್ಮಕ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಸನಾತನ ಧರ್ಮವು ಇತಿಹಾಸದುದ್ದಕ್ಕೂ ಹಲವಾರು ಸವಾಲುಗಳನ್ನು ಎದುರಿಸಿಕೊಂಡೇ ಬಂದಿದೆ. ಅಧಿಕಾರದ ದಾಹಕ್ಕೆ ಪರಾವಲಂಬಿ ಜೀವಿಗಳ ಮಹತ್ವಾಕಾಂಕ್ಷೆಗೆ ಮಣಿಯದೆ, ಸನಾತನ ಹಿಂದೂ ಧರ್ಮ ಬೆಳೆಯುತ್ತಲೇ ಬಂದಿದೆ ಎಂದು ಅವರು ತಿರುಗೇಟು ನೀಡಿದ್ದಾರೆ.
ಡಿ ಎಂ ಕೆ ನಾಯಕ ಉದಯ ನಿಧಿಯ ಸನಾತನ ಧರ್ಮ ವಿರೋಧಿ ಹೇಳಿಕೆಗೆ ಪರೋಕ್ಷವಾಗಿ ಟಾಂಗ್ ನೀಡಿದ ಅವರು, ‘ರಾವಣನ ಅಹಂಕಾರದಿಂದ ಅಳಿಸಲಾಗದ ಸನಾತನ ಧರ್ಮ, ಕಂಸನ ರೋಷದಿಂದ ಅಲುಗಾಡದ ಸನಾತನ ಧರ್ಮ, ಬಾಬರ್ ಮತ್ತು ಔರಂಗಜೇಬ್ನ ಕ್ರೌರ್ಯಕ್ಕೂ ಎದೆಗುಂದದೆ ಅಚ್ಚಳಿಯದೆ ಉಳಿದಿರುವ ಸನಾತನ ಧರ್ಮ, ಈ ಅಧಿಕಾರದಾಹಿ, ಅವಕಾಶವಾದಿ ಪರಾವಲಂಬಿಗಳಿಂದಾಗಿ ಅಳಿಸಿ ಹೋಗುವುದು ಸಾಧ್ಯವೇ’ ಎಂದು ಹೇಳಿದ್ದಾರೆ.
ಈ ವಿಷಯದಲ್ಲಿ ನೇರವಾಗಿ ಯಾರದ್ದೇ ಹೆಸರನ್ನೂ ಉಲ್ಲೇಖ ಮಾಡದ ಅವರು, ಆ ಮೂಲಕ ಸನಾತನ ಹಿಂದೂ ಧರ್ಮದ ವಿರೋಧಿಗಳೆಲ್ಲರಿಗೂ ಒಟ್ಟಿಗೆ ಮುಟ್ಟಿ ನೋಡಿಕೊಳ್ಳುವ ಹಾಗೆ ಉತ್ತರ ನೀಡಿದ್ದಾರೆ ಎನ್ನುವುದು ಸತ್ಯ.
ಸನಾತನ ಧರ್ಮದ ಮೇಲೆ ಬೊಟ್ಟು ಮಾಡುವುದು, ಮಾನವೀಯತೆಗೆ ಅಡ್ಡಿ ಮಾಡುವಂತಹ ದುರುದ್ದೇಶಪೂರಿತ ಪ್ರಯತ್ನವಾಗಿದೆ. ಸನಾತನ ಧರ್ಮವನ್ನು ಸೂರ್ಯನಿಗೆ ಹೋಲಿಕೆ ಮಾಡಿರುವ ಯೋಗೀಜಿ ಅವರು, ಸನಾತನ ಧರ್ಮ ಎನ್ನುವುದು ಮಿತಿಯಿಲ್ಲದ ಶಕ್ತಿಯ ಮೂಲವಾಗಿದೆ. ಕೇವಲ ಮೂರ್ಖರು ಮಾತ್ರ ಸೂರ್ಯನ ಮೇಲೆ ಉಗುಳುವ ಪ್ರಯತ್ನ ಮಾಡಬಲ್ಲರು. ಮೂರ್ಖ ಸೂರ್ಯನ ಮೇಲೆ ಉಗುಳಲು ಪ್ರಯತ್ನ ನಡೆಸಿದರೆ, ಆ ಉಗುಳು ಮತ್ತೆ ಬೀಳುವುದು ಉಗಿಯಲು ಪ್ರಯತ್ನ ನಡೆಸಿದವನ ಮೇಲೆಯೇ ಎಂದವರು ವ್ಯಂಗ್ಯವಾಡಿದ್ದಾರೆ.
ವಿರೋಧ ಪಕ್ಷಗಳ ಮೇಲೆ ಹರಿಹಾಯ್ದಿರುವ ಯೋಗಿ ಆದಿತ್ಯ ನಾಥ್ ಅವರು, ಅವರ ಈ ಹೇಸಿಗೆ ಕೆಲಸಗಳಿಂದ ಅವರ ಮುಂದಿನ ಪೀಳಿಗೆ ನಾಚಿಕೆ ಪಡುವಂತಾಗುತ್ತದೆ ಎಂದಿದ್ದಾರೆ. ಹಾಗೆಯೇ ಜಾಗೃತ ಭಾರತೀಯರು ನಮ್ಮ ದೇಶದ ಸಂಸ್ಥೆಗಳು, ಸಂಪ್ರದಾಯಗಳ ಬಗ್ಗೆ ಹೆಮ್ಮೆ ಪಡುವ ಅಗತ್ಯತೆಯನ್ನು ಅವರು ಒತ್ತಿ ಹೇಳಿದ್ದಾರೆ.