ಕಿತ್ತೂರಿನ ಈದ್ಗಾ ಮೈದಾನದಲ್ಲಿ ಭಾರತದ ಧ್ವಜ ಹಾಕುವುದಕ್ಕೆ ವಿರೋಧ ವ್ಯಕ್ತಪಡಿಸಿದ ವೇಳೆ ಸ್ವತಃ ಅನಂತ್ ಕುಮಾರ್ ಹೆಗ್ಡೆ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದ್ದರು. ದೇಶಪ್ರೇಮ ಮತ್ತು ಜಾತ್ಯಾತೀತತೆಯ ಬಗ್ಗೆ ಇವರಿಗೆ ಯಾರ ಉಪದೇಶವೂ ಅಗತ್ಯ ಇಲ್ಲ. ದೇಶಪ್ರೇಮ ದ ಜೊತೆಗೆ ರಾಜಕೀಯಕ್ಕೆ ಬಂದ ಅನಂತ್ ಕುಮಾರ್ ಹೆಗ್ಡೆ ತನ್ನ ನೇರ ನುಡಿಗಳಿಂದಲೇ ಮನೆಮಾತಾಗಿದ್ದರು.
ಕರ್ನಾಟಕ ಬಿಜೆಪಿ ಯ ಫೈರ್ ಬ್ರಾಂಡ್ ಎಂದೇ ಖ್ಯಾತಿಯಾದ ಅನಂತ್ ಕುಮಾರ್ ಹೆಗ್ಡೆ ಹಿಂದುತ್ವದ ಪರವಾದವನ್ನು ಮಾಡುತ್ತಾ ಬಂದವರು. ಸದಾ ಒಂದಿಲ್ಲೊಂದು ಹೇಳಿಕೆಗಳ ಮೂಲಕ ಸುದ್ದಿಯಲ್ಲಿರುವ ಅನಂತ್ ಕುಮಾರ್ ಹೆಗ್ಡೆ ಮತ್ತೆ ಗುಡುಗಿದ್ದಾರೆ. ಹೊನ್ನಾವರದಲ್ಲಿ ನಡೆದ ಶ್ರೀ ಗುರು ಸಿದ್ದರಾಮೇಶ್ವರರ 845ನೇ ಜಯಂತಿ ಮಹೋತ್ಸವದಲ್ಲಿ ಮಾತನಾಡಿದ ಸಂಸದ ಅನಂತ್ ಕುಮಾರ್ ಹೆಗ್ಡೆ ಜಾತಿವಾದಿಗಳ ವಿರುದ್ಧ ಗುಡುಗಿದ್ದಾರೆ.
“ಹಿಂದೂಗಳ ಆರಾಧ್ಯ ದೈವ ಶ್ರೀ ರಾಮಚಂದ್ರ ಬ್ರಾಹ್ಮಣ ಅಲ್ಲ,ಕ್ರಷ್ಣ ವಾಲ್ಮೀಕಿ ಸೇರಿದಂತೆ ಇವರ್ಯಾರೂ ಬ್ರಾಹ್ಮಣ ಜಾತಿಗೆ ಸೇರಿದವರಲ್ಲ.ಆದರೂ ನಾವು ಇವರನ್ನು ಪೂಜಿಸುತ್ತೇವೆ.ನಾವೆಲ್ಲರೂ ಜಾತಿ ಎಂಬ ಸಂಕುಚಿತ ಭಾವನೆಯಿಂದ ಹೊರಬರಬೇಕು” ಎಂದು ಹೇಳಿದ್ದಾರೆ.
ಈ ಮೂಲಕ ಹಿಂದೂಗಳು ಎಲ್ಲರೂ ಒಗ್ಗಟ್ಟಾಗಿರಬೇಕು ಎಂದು ಕರೆ ಕೊಟ್ಟರು. ದೇಶದಲ್ಲಿ ಬ್ರಾಹ್ಮಣರನ್ನು ಬೈಯುವುದು ಮಾಮೂಲಾಗಿದೆ. ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಹೇಳಿದರು. ದೇಶದ ಮಹಾನ್ ಪುರುಷರಲ್ಲಿ ಬಹುತೇಕರು ಬ್ರಾಹ್ಮಣ ಜಾತಿಗೆ ಸೇರಿದವರಲ್ಲ.ಆದರೆ ಇವರೆಲ್ಲರನ್ನು ನಾವೂ ಪೂಜಿಸುತ್ತೇವೆ ಎನ್ನುವ ಮೂಲಕ ಜಾತಿ ಜಾತಿಯ ಬಗ್ಗೆ ಕಚ್ಚಾಡುವವರಿಗೆ ಕಿವಿಮಾತು
ನೀಡಿದರು.
ಅನಂತ್ ಕುಮಾರ್ ಹೆಗ್ಡೆಯವರ ಈ ನೇರವಾದ ಮಾತುಗಳಿಂದಲೇ ವಿರೋಧಿಗಳು ಇವರನ್ನು ಟೀಕಿಸುತ್ತಾ ಬಂದಿದ್ದಾರೆ.
ಆದರೆ ಇದ್ಯಾವುದಕ್ಕೂ ಸೊಪ್ಪು ಹಾಕದ ಹೆಗ್ಡೆ ತನ್ನದೇ ಆದ ರೀತಿಯಲ್ಲಿ ವಿರೋಧಿಗಳ ಬಾಯಿ ಮುಚ್ಚಿಸಿದ್ದಾರೆ…!ಅನಂತ್ ಕುಮಾರ್ ಹೆಗ್ಡೆಯವರ ಈ ವ್ಯಕ್ತಿತ್ವದಿಂದಾಗಿ ಸಂಸದನಾಗಿದ್ದ ಹೆಗ್ಡೆಯವರು ಮೋದಿಸರ್ಕಾರದ ‘ಕೌಷಲ್ಯ ಅಭಿವೃದ್ಧಿ ಸಚಿವನಾಗಿ’ ಆಯ್ಕೆಗೊಂಡಿದ್ದು.
ಇವರ ನೇರವಾದ ಮಾತುಗಳಿಂದ ವಿರೋಧಿಗಳ ಕಣ್ಣು ಕೆಂಪಗಾಗಿಸುತ್ತಿತ್ತು. ಕಟ್ಟರ್ ಹಿಂದುತ್ವದ ಸಿದ್ದಾಂತಗಳನ್ನೇ ಹೇಳಿಕೊಂಡು ಬಂದಿದ್ದರಿಂದ ಕರ್ನಾಟಕದಲ್ಲಿ ‘ಬಿಜೆಪಿಯ ಫೈರ್ ಬ್ರಾಂಡ್’ ಎಂದೇ ಪ್ರಸಿದ್ದಿ ಪಡೆದಿದ್ದಾರೆ ಅನಂತ್ ಕುಮಾರ್ ಹೆಗ್ಡೆ.
“ಮಹಾಪುರುಷರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸುವುದು ಬೇಡ,ಯಾಕೆಂದರೆ ಅವರು ಕೇವಲ ತನ್ನ ಜಾತಿಗಾಗಿ ಬದುಕದೇ ಸಮಾಜಕ್ಕಾಗಿ ಬದುಕಿದವರು” ಎನ್ನುವ ಮೂಲಕ ಪ್ರಸ್ತುತ ಕೆಲವರು ಜಾತಿಯ ವಿಚಾರವಾಗಿ ಕಚ್ಚಾಡುವಂತೆ ಮಾಡುವವರನ್ನು ಟೀಕಿಸಿದರು.
ಕರ್ನಾಟಕದಲ್ಲಿ ಜಾತಿಯ ಓಲೈಕೆ ರಾಜಕಾರಣ ನಡೆಯುತ್ತಿದೆ.ಓಟ್ ಬ್ಯಾಂಕ್ ಗಾಗಿ ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಓಲೈಕೆ ಮಾಡುತ್ತಿದೆ ಎಂದು ಈ ಹಿಂದೆಯೇ ಗುಡುಗಿದ್ದ ಅನಂತ್ ಕುಮಾರ್ ಹೆಗ್ಡೆ ಈಗ ಹಿಂದೂಗಳಲ್ಲಿ ಜಾತಿ ಜಾತಿಗಳ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಬರಬಾರದು. ಜಾತಿ ಎಂಬ ಒಂದು ಸಂಕುಚಿತ ಭಾವನೆಯಿಂದ ನಾವೆಲ್ಲರೂ ಹೊರಗೆ ಬರಬೇಕು ಎಂದು ಹೇಳಿದರು.
ದೇಶದಲ್ಲಿ ಮಾರಕವಾಗಿರುವುದೇ ಈ ಜಾತಿ ಎಂಬ ಖಾಯಿಲೆ.ಯಾಕೆಂದರೆ ಜಾತಿಯ ಸಂಕೋಲೆಯಲ್ಲಿ ಬಿದ್ದವನು ತಾನೂ ಬೆಳವಣಿಗೆ ಹೊಂದುವುದಿಲ್ಲ ಜೊತೆಗೆ ತನ್ನ ಸುತ್ತಮುತ್ತಲಿನ ಜನರನ್ನೂ ಬೆಳೆಯಲು ಬಿಡುವುದಿಲ್ಲ.
ಆದ್ದರಿಂದ ಇದು ದೇಶದ ಅಭಿವೃದ್ಧಿಗೆ ಅಡ್ಡಗಾಲು ಇಟ್ಟಂತೆ ಎಂದು ಹೇಳಿದರು.
ಕೇವಲ ಸಂವಿಧಾನವನ್ನು ತಿದ್ದಪಡಿ ಮಾಡಬೇಕೆಂಬ ಹೇಳಿಕೆಯನ್ನು ಇಟ್ಟುಕೊಂಡು ವಿವಾದಿತ ವ್ಯಕ್ತಿ ಎಂಬ ಹಣೆಪಟ್ಟಿ ಕಟ್ಟಿದ ವಿರೋಧಿಗಳು ಅನಂತ್ ಕುಮಾರ್ ಹೆಗಡೆಯವರ ಮೃದು ಸ್ವಭಾವವನ್ನು ಅರಿತಿಲ್ಲ. ತಾನೊಬ್ಬ ಬ್ರಾಹ್ಮಣ ವಂಶದಲ್ಲಿ ಹುಟ್ಟಿ ಬೆಳೆದಿದ್ದರೂ ಧೀನ ದಲಿತರ ಬಗೆಗಿನ ಅವರ ಕಾಳಜಿ ಮಾತ್ರ ಅದ್ಭುತ. ದೇಶದಲ್ಲಿ ಅದೆಷ್ಟೋ ಮಹಾ ಪುರುಷರನ್ನು ನಾವು ಪೂಜಿಸುತ್ತೇವೆ.
ರಾಮ, ಕೃಷ್ಣ, ವಾಲ್ಮೀಕಿ, ಬೇಡ, ಕನಕದಾಸ ಸಹಿತ ಹಲವಾರು ಮಹಾಪುರುಷರನ್ನು ಭಕ್ತಿಯಿಂದ ಪೂಜೆ ಮಾಡುತ್ತೇವೆ. ಆದರೆ ಸತ್ಯವೇನೆಂದರೆ ಅವರ್ಯಾರೂ ಬ್ರಾಹ್ಮಣ ವಂಶದಲ್ಲಿ ಹುಟ್ಟೇ ಇಲ್ಲ. ಆದರೂ ನಾವು ಅವರಿಗೆ ವಿಶೇಷವಾದ ಸ್ಥಾನಮಾನವನ್ನು ನೀಡುತ್ತಿದ್ದೇವೆ ಎಂಬ ಮಾತುಗಳನ್ನು ಹೇಳಿದ್ದಲ್ಲದೆ, ಎಲ್ಲರೂ ಜಾತಿ ಎಂಬ ಚೌಕಟ್ಟಿನಿಂದ ಹೊರಬಂದರೆ ಮಾತ್ರ ದೇಶ ಧರ್ಮ ಉದ್ಧಾರವಾಗಲು ಸಾಧ್ಯ ಎಂದು ಹೇಳಿದ್ದಾರೆ.
ಇದು ಸಹಜವಾಗಿಯೇ ಅನಂತ್ ಕುಮಾರ್ ಹೆಗಡೆಯವರ ವಿರೋಧಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಯಾವಾಗ ಹೆಗಡೆಯವರು ವಿವಾದಾತ್ಮಕ ಹೇಳಿಕೆಯನ್ನು ನೀಡುತ್ತಾರೋ ಎಂಬ ಸಂಕುಚಿತ ಮನೋಭಾವವನ್ನು ಇಟ್ಟುಕೊಂಡು ಕಾಯುತ್ತಲೇ ಇರುವ ವಿರೋಧಿಗಳು ಹೆಗಡೆಯವರ ಈ ಮಾತಿನಿಂದ ಅಕ್ಷರಷಃ ನಿಬ್ಬೆರಗಾಗಿದ್ದಾರೆ. ಅವರು ಹಿಂದೂ ಧರ್ಮದ ಒಳಿತಿಗಾಗಿ ದುಡಿಯುತ್ತಾರೆಯೇ ವಿನಹ ಒಂದು ಜಾತಿ ಎಂಬ ಚೌಕಟ್ಟಿನೊಂದಿಗೆ ಎಂದಿಗೂ ಸೀಮಿತವಾಗಲಾರರು ಎಂಬುವುದು ಪ್ರತಿಯೊಬ್ಬನೂ ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಚಾರವಾಗಿದೆ.
ಜಾತಿ ಎಂಬ ಮನೋಭಾವದಿಂದ ಹೊರಬರಬೇಕು. ನಾನು ನನ್ನದು ಎಂದು ಹೇಳುವ ಬದಲು ನಾವು ನಮ್ಮವರು ಎಂದು ಭಾವಿಸಿದರೆ ಅದು ದೇಶದ ಅಭಿವೃದ್ಧಿಗೂ ಸಹಾಯವಾಗುತ್ತದೆ ಎಂಬ ನಿಟ್ಟಿನಲ್ಲಿ ಸಂಸದರೂ ಕೇಂದ್ರ ಸಚಿವರು ಆದಂತಹ ಅನಂತ್ ಕುಮಾರ್ ಹೆಗ್ಡೆ ಹೊನ್ನಾವರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ…
–ಅರ್ಜುನ್