ಪ್ರಚಲಿತ

ಚೀನಾ ಸಿಡಿದು ನುಚ್ಚುನೂರಾಗುವುದನ್ನು ತಪ್ಪಿಸಲು ಡೋಕ್ಲಂನಲ್ಲಿ ಮತ್ತೆ ತಳವೂರಿತೇ ಡ್ರ್ಯಾಗನ್?!

ಡೋಕ್ಲಾಂ ಗಡಿಯಿಂದ ಹಿಂದಡಿ ಇಟ್ಟಿದ್ದ ಚೀನಾ ಸೇನೆ ಮತೊಮ್ಮೆ ಗಡಿಯಲ್ಲಿ ಪ್ರತ್ಯಕ್ಷವಾಗಿದೆ!!

ಭಾರತದ ಬಿಗಿ ನಿಲುವು ಮತ್ತು ರಾಜತಾಂತ್ರಿಕ ಜಾಣ್ಮೆಗೆ ಮಣಿದು ಮೂರೂವರೆ ತಿಂಗಳ ಹಿಂದಷ್ಟೇ ಡೋಕ್ಲಾಂ ಗಡಿಯಿಂದ ಹಿಂದಡಿ ಇಟ್ಟಿದ್ದ ಚೀನಾ ಸೇನೆ ಮತೊಮ್ಮೆ ಗಡಿಯಲ್ಲಿ ಪ್ರತ್ಯಕ್ಷವಾಗಿದೆ. ಭಾರತದ ವಿರುದ್ಧದ ಶೀತಲ ಸಮರವನ್ನು ಡೋಕ್ಲಾಂ ವಿವಾದದಿಂದಷ್ಟೇ ಜೀವಂತವಾಗಿಡಬಹುದೆಂಬ ರಹಸ್ಯ ಅಜೆಂಡಾದೊಂದಿಗೆ ಇದೇ ಮೊದಲ ಬಾರಿ ಚೀನಾ ಸರಕಾರ 1600-1800 ಯೋಧರನ್ನು ಶಾಶ್ವತವಾಗಿ ಡೋಕ್ಲಂ ಗಡಿಯಲ್ಲಿ ನಿಯೋಜಿಸಿದೆ. ಈ ಬೆಳವಣಿಗೆ ಭಾರತಕ್ಕೆ ಹೊಸ ಸವಾಲನ್ನು ಸೃಷ್ಟಿಸಿದೆ. ಮೈ ಕೊರೆಯುವ ಚಳಿಯ ಪ್ರತಿಕೂಲ ವಾತಾವರಣದ ನಡುವೆಯೂ ಡೋಕ್ಲಾಂಗೆ ದಾಂಗುಡಿ ಇಟ್ಟಿರುವ ಚೀನಿ ಸೈನಿಕರು ಈಗಾಗಲೇ ವಿವಾದಿತ ಪ್ರದೇಶದಲ್ಲಿ ಎರಡು ಹೆಲಿಪ್ಯಾಡ್ ನಿರ್ಮಿಸಿದ್ದಾರೆ.

ಹಾಗೆಯೇ ಉತ್ತರ ಮತ್ತು ಪೂರ್ವ ಭಾಗದಲ್ಲಿ ಸುಮಾರು 10 ಕಿ.ಮೀ. ರಸ್ತೆ ಅಭಿವೃದ್ಧಿಪಡಿಸಿದ್ದಾರೆ. ಮೂಲಗಳ ಪ್ರಕಾರ ತನ್ನ ಸಿಬ್ಬಂದಿಗೆ ಆಶ್ರಯ ಒದಗಿಸಲು ಹಾಗೂ ಅಗತ್ಯ ಸಾಮಗ್ರಿ ಇರಿಸಿಕೊಳ್ಳುವುದಕ್ಕೂ ಚೀನಾ ಸೇನೆ ವ್ಯವಸ್ಥೆ ಮಾಡಿಕೊಂಡಿದೆ.

ಏನಿದು ವಿವಾದ?!

ಸಿಕ್ಕಿಂ-ಭೂತಾನ್-ಟಿಬೆಟ್‍ಗೆ ಅಂಟಿಕೊಂಡಿರುವ (ತ್ರಿಬಿಂದು ಸ್ಥಳ)ಡೋಕ್ಲಂ ಚೀನಾ ಹಾಗೂ ಭೂತಾನ್ ನಡುವಿನ ವಿವಾದಿತ ಜಾಗ. ಇದು ತನ್ನದೆಂಬುದು ಚೀನಾದ ವಾದ. ಈ ಪ್ರದೇಶದಲ್ಲಿ ಚೀನಾ ಸೇನೆ ಗಸ್ತು ತಿರುಗುವುದಕ್ಕೆ ಭಾರತ ತಗಾದೆ ತೆಗೆದಿರಲಿಲ್ಲ. ಆದರೆ ಯಥಾಸ್ಥಿತಿಯನ್ನು ಕಾಯ್ದುಕೊಳ್ಳದೆ ಗಡಿಯಲ್ಲಿ ರಸ್ತೆ ನಿರ್ಮಾಣ ಮಾಡಲು ಮುಂದಾಗಿದ್ದರಿಂದ ಕೆರಳಿದ ಭಾರತ ಜೂನ್ ಮಧ್ಯಭಾಗದಲ್ಲಿ ಮಧ್ಯಪ್ರವೇಶಿಸಿ ಚೀನಾ ಯತ್ನವನ್ನು ತಡೆದಿತ್ತು. ಈ ಸಂದರ್ಭದಲ್ಲಿ ಗಡಿಯಲ್ಲಿ ಉಭಯ ರಾಷ್ಟ್ರಗಳ ಸೈನಿಕರ ನಡುವೆ ತಳ್ಳಾಟ-ನೂಕಾಟ ನಡೆದಿತ್ತು. ತದನಂತರ ಎರಡೂ ರಾಷ್ಟ್ರಗಳು ಭದ್ರತೆ ಹೆಚ್ಚಿಸಿದ್ದರಿಂದ ಪರಿಸ್ಥಿತಿ ಬಿಗಡಾಯಿಸಿತ್ತು. ಅಂತಿಮವಾಗಿ ಹಲವು ಬಾರಿ ರಾಜತಾಂತ್ರಿಕ ಮಾತುಕತೆಯ ನಂತರ ಆಗಸ್ಟ್ 28ರಂದು ಉಭಯ ರಾಷ್ಟ್ರಗಳ ಸೇನಾ ಪಡೆಗಳು ವಿವಾದಿತ ಪ್ರದೇಶದಿಂದ 150 ಮೀಟರ್ ಹಿಂದಕ್ಕೆ ಸರಿದಿದ್ದವು. ಪರಿಸ್ಥಿತಿ ತಿಳಿಗೊಂಡ ಬಳಿಕ ಚೀನಾದ ಕ್ಸಿಯಾಮೆನ್‍ನಲ್ಲಿ ಆಯೋಜನೆಗೊಂಡಿದ್ದ ಬ್ರಿಕ್ಸ್ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದರು. ಡೋಕ್ಲಂನಲ್ಲಿ ಶಾಂತಿ ಮರುಸ್ಥಾಪನೆಯಾಗಿದ್ದರಿಂದ ಚೀನಾ ಮತ್ತು ಭಾರತ ತಮ್ಮ ಸೇನಾಪಡೆಗಳನ್ನು ನಂತರ 500 ಮೀಟರ್ ಹಿಂದಕ್ಕೆ ಪಡೆದಿದ್ದವು.

ಸುಷ್ಮಾ-ವಾಂಗ್ ಯಿ ಮಾತುಕತೆ

ರಷ್ಯಾ-ಚೀನಾ-ಭಾರತದ ನಡುವಿನ ಮೂರು ದಿನಗಳ ತ್ರಿಪಕ್ಷೀಯ ಸಭೆ ದೆಹಲಿಯಲ್ಲೀಗ ನಡೆಯುತ್ತಿದ್ದು, ತದಂಗವಾಗಿ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಸೋಮವಾರ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಡೋಕ್ಲಂ ವಿಚಾರವೂ ಚರ್ಚೆಯಾಗುವ ನಿರೀಕ್ಷೆ ಇದೆ.

ಇದೇ ಮೊದಲು

ಚೀನಾ ಸೇನೆ ಪ್ರತಿ ವರ್ಷ ಏಪ್ರಿಲ್-ಮೇ ಮತ್ತು ಅಕ್ಟೋಬರ್-ನವೆಂಬರ್‍ನಲ್ಲಿ ಡೋಕ್ಲಾಂ ಗಡಿಯಲ್ಲಿ ಗಸ್ತು ತಿರುಗುವ ಮೂಲಕ ವಿವಾದವನ್ನು ಕೆದಕಿ ಮತ್ತೆ
ಹಿಂದಿರುಗುತ್ತಿತ್ತು. ಆದರೆ ಪ್ರಸಕ್ತ ವರ್ಷ ಡೋಕ್ಲಾಂ ಬಿಕ್ಕಟ್ಟು 73 ದಿನ ಉದ್ವಿಗ್ನ ಸ್ಥಿತಿಗೆ ಕಾರಣವಾದ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿ ಚೀನಾವು ಗಡಿ ಭಾಗದಲ್ಲಿ ಶಾಶ್ವತವಾಗಿ ಸೇನೆ ನಿಯೋಜಿಸಿದೆ ಎನ್ನಲಾಗಿದೆ.

ಪ್ರತೀಕಾರಕ್ಕೆ ಡ್ರ್ಯಾಗನ್ ಹೊಂಚು

ನಾಲ್ಕು ತಿಂಗಳ ಹಿಂದೆ ಡೋಕ್ಲಾಂ ದಕ್ಷಿಣಕ್ಕೆ ಜೆಂಪೇರಿ ರಿಡ್ಜ್ ಕಡೆಗೆ ರಸ್ತೆ ನಿರ್ಮಿಸಲು ಮುಂದಾಗಿದ್ದ ಚೀನಾದ ನಡೆಯನ್ನು ತಡೆಯುವಲ್ಲಿ ಭಾರತ ಯಶಸ್ವಿಯಾಗಿತ್ತು. ಇದರಿಂದ ತೀವ್ರ ಹಿನ್ನಡೆ ಅನುಭವಿಸಿದ್ದ ಚೀನಾ ಪ್ರತೀಕಾರದ ಕ್ರಮವಾಗಿ ಸೇನೆ ನಿಯೋಜಿಸಿದೆ ಎಂದು ವಿಶ್ಲೇಷಿಸಲಾಗಿದೆ.

ಮೊದಲೇ ಎಚ್ಚರಿಸಿದ್ದ ರಾವತ್

ಡೋಕ್ಲಾಂ ವಿವಾದ ತಣ್ಣಗಾದ ಬಳಿಕ ಸೆಪ್ಟೆಂಬರ್‍ನಲ್ಲಿ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಡೋಕ್ಲಾಂ ವಿವಾದ ಬಗೆಹರಿಯಿತು ಎಂದು ಬೀಗುವಂತಿಲ್ಲ ಎಂದಿದ್ದರು. ನಿಧಾನವಾಗಿ ವಿವಾದಿತ ಪ್ರದೇಶವನ್ನು ಚೀನಾ ಕೈವಶ ಮಾಡಿಕೊಳ್ಳಲು ತಂತ್ರ ಹೂಡಲಿದೆ ಎಂದೂ ಎಚ್ಚರಿಸಿದ್ದರು. ಅವರ ಮಾತೀಗ ನಿಜವಾಗಿದೆ.

ಚೀನಾ ನಿಸ್ಸಂದೇಹವಾಗಿ ವಿಶ್ವದ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿರುವ ಮತ್ತು ಮಿಲಿಟರಿ ಸೂಪರ್‍ಪವರ್ ರಾಷ್ಟ್ರವೆನ್ನುವುದನ್ನು ಒಪ್ಪಲೇಬೇಕಿದೆ. ಇದು ಜಗತ್ತಿನ ಉತ್ಪಾದಕ ಕೇಂದ್ರವಾಗಿದ್ದು, ನಾವು ಊಹಿಸದ ರೀತಿಯಲ್ಲಿ ಅದು ಎಲ್ಲವನ್ನೂ ತಯಾರಿಸುತ್ತದೆ. ದೇಶದ ಆರ್ಥಿಕ ಶಕ್ತಿಯನ್ನು ಸ್ಥಿರ ಸ್ಥಾಯಿಯನ್ನಾಗಿಸಿದ ಕೀರ್ತಿ ಖಂಡಿತಾ ಚೀನಾ ಕಮ್ಯುನಿಸ್ಟ್ ಆಡಳಿತಕ್ಕೆ ಸಲ್ಲಬೇಕು. ಚೀನಾದ ಆರ್ಥಿಕ ಸಾಮಥ್ರ್ಯ ವಿಶ್ವದ ಹಲವು ರಾಷ್ಟ್ರಗಳ ಮೇಲೆ ನಿಯಂತ್ರಣ ಸಾಧಿಸಿದೆ. ಆದರೆ ಚೀನಾದ ಮೇಲಿನ ಆರೋಪವೆಂದರೆ ನಾಗರಿಕರ ಮಾನವ ಹಕ್ಕುಗಳನ್ನು ದಮನಿಸುವುದು.

ಇಂದು ನಾವು ಚೀನಾದಲ್ಲಿ ಅದೇ ಸರಕಾರದ ವಿರುದ್ಧವಾದ ಧ್ವನಿಗಳನ್ನು ಕೇಳಲಾರಂಭಿಸಿದ್ದೇವೆ. ಉದಾಹರಣೆಗೆ ಇತ್ತೀಚಿನ ದಿನಗಳಲ್ಲಿ ನಾವು ಟಿಬೆಟ್‍ನಲ್ಲಿನ ಬೌದ್ಧಭಿಕ್ಕುಗಳ ಪ್ರತಿಭಟನೆಗಳನ್ನು ನೋಡಿದ್ದೇವೆ. ಆದರೆ ಚೀನಾ ಸರಕಾರ ಅವರ ಚಳವಳಿಯನ್ನು ವಿವೇಚನಾರಹಿತವಾಗಿ, ನಿರ್ದಯವಾಗಿ ಹತ್ತಿಕ್ಕಿತು. ಇದರಿಂದ ಬೆಚ್ಚಿಬಿದ್ದ ಟಿಬೆಟ್ಟಿಯನ್ನರು ಸದ್ಯ ಮೌನವಾಗಿದ್ದು, ಮತ್ತೊಂದು ಪಕ್ಷವಾದ ಕಾಲವನ್ನು ನೋಡಿ ಪ್ರತಿಭಟನೆ ನಡೆಸಲು ಸಂದರ್ಭಕ್ಕಾಗಿ ಕಾಯುತ್ತಿದ್ದಾರೆ. ಆದರೂ ಪರಿಸ್ಥಿತಿ ಚೆನ್ನಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಚೀನೀ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುತ್ತಿದೆ. ಇದನ್ನು ರಾಜಕೀಯ ವಿಸ್ಫೋಟ ಎಂದು ಕರೆಯಲಾಗುತ್ತಿದೆ. ಜನರು ಪ್ರವಾಹದ ವಿರುದ್ಧವಾಗಿ ಈಜಲಾರಂಭಿಸಿದ್ದಾರೆ. ಚೀನೀ ಸರಕಾರದ ದೌರ್ಜನ್ಯದಿಂದ ಬೇಸತ್ತ ಜನರು ಇಂದು ಒಂದಾಗುತ್ತಿದ್ದಾರೆ. ಜನರೆಲ್ಲಾ ಸಿಡಿದೆದ್ದರೆ ಅದನ್ನು ನಿಯಂತ್ರಿಸಲು ಸಾಧ್ಯವೇ… ಭವಿಷ್ಯದಲ್ಲಿ ಚೀನಾದಲ್ಲಿ ಏನಾಗಬಹುದು ಎಂಬ ಸ್ಪಷ್ಟತೆಯನ್ನು ಇಂದೇ ಅರ್ಥ ಮಾಡಿಕೊಳ್ಳಬಹುದು. ಚೀನಾ ಕಮ್ಯುನಿಸಂ ಗಡಗಡ ಅಲುಗಾಡುತ್ತಿದೆ. ಅದರ ಬಿಸಿಯನ್ನು ಆಡಳಿತರೂಢ ಸರಕಾರ ಅನುಭವಿಸುತ್ತಿದೆ..

ನಾನು ಮೊದಲೇ ಹೇಳಿದಂತೆ, ಕಮ್ಯುನಿಸ್ಟ್ ಪಾರ್ಟಿಯು ಚೀನಾದ ಮೇಲೆ ಸಂಪೂರ್ಣವಾದ ನಿಯಂತ್ರಣ ಹೊಂದಿದೆ. ಆದರೆ ತಮ್ಮ ರಾಷ್ಟ್ರದಲ್ಲಿ ಬಲವಾದ ಐಕ್ಯತೆ ಇದೆ ಎಂಬ ಸುಳ್ಳು ಹಬ್ಬಿಸುತ್ತಿದ್ದಾರೆ.

ಚೀನಾದ ಕಮ್ಯುನಿಸ್ಟ್ ಪಕ್ಷದಿಂದಾಗಿ ದೇಶದಲ್ಲಿನ ಐಕ್ಯತೆಗೆ ದೊಡ್ಡ ಗಂಡಾಂತರ ಬಂದೊದಗಿದೆ. ಚೀನೀ ಕಮ್ಯುನಿಸಂ ಬಗ್ಗೆ ಜನರಲ್ಲಿ ಧ್ವೇಷದ ಭಾವನೆ ಮನೆಮಾಡಿದ್ದು, ಅದು ಮತ್ತಷ್ಟು ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಇದು ಸಂಭಾವ್ಯ ಕ್ರಾಂತಿಗೆ ಮುನ್ನುಡಿ ಬರೆಯಲಿದ್ದು, ಒಂದರ್ಥದಲ್ಲಿ ಘರ್ಷಣೆಯೂ ಸಂಭವಿಸಬಹುದು. ಈ ಕ್ರಾಂತಿಯು ಎಲ್ಲಿಗೆ ತಲುಪಲಿದೆ ಎಂದರೆ ಅದು ದೇಶವಿಭಜನೆಗೂ ನಾಂದಿ ಹಾಡಬಹುದು. ಚೀನಾದಿಂದ ಸ್ವಾತಂತ್ರ್ಯ ಬಯಸಿ ದೇಶದೊಳಗಿನಿಂದಲೇ ಕ್ರಾಂತಿ ಆರಂಭಗೊಂಡು ದೇಶ ವಿಭಜನೆಯಾಗಿ ದೇಶದಲ್ಲಿ ಏಳು ಸ್ವತಂತ್ರ ಪ್ರಾಂತ್ಯಗಳು ರೂಪುಗೊಳ್ಳುತ್ತಿದೆ.

ಶಾಂಘೈ ಬಣವನ್ನು ಮುನ್ನಡೆಸುತ್ತಿರುವ ಜಿಯಾಂಗ್ ಝೆಮಿನ್ ಮತ್ತು ಹೂ ಜಿಂಟಾವೊ-ನೇತೃತ್ವದಲ್ಲಿ ಬೀಜಿಂಗ್ ಬಣವು ಅಧ್ಯಕ್ಷ ಕ್ಸಿ ಜಿಂಪಿಂಗ್ ನೇತೃತ್ವದಲ್ಲಿಝೆನ್ಜಿಯಾಂಗ್ ಬಣದೊಂದಿಗೆ ರಹಸ್ಯ ಯುದ್ಧದಲ್ಲಿ ತೊಡಗಿವೆ. ಪ್ರತಿಯೊಬ್ಬರೂ ಅಂತರ್ಯುದ್ಧದಲ್ಲಿ ತೊಡಗಿಕೊಂಡು ರಾಜಕೀಯ ಆಟವಾಡತೊಡಗಿದ್ದು, ಒಬ್ಬರುಮತ್ತೊಬ್ಬರ ಪ್ರಭಾವವನ್ನು ತೊಡೆದುಹಾಕಲು ಪ್ರಯತ್ನಿಸುತ್ತಿದ್ದಾರೆ.

ಇನ್ನೊಂದೆಡೆ ಚೀನೀ ನಾಗರಿಕರ ಸರಕಾರಿ ವಿರುದ್ಧ ಧೋರಣೆಯು ಯುದ್ಧ ಎಂಬ ಬೆಂಕಿಗೆ ಇಂಧನ ಪೂರೈಸುವ ಕೆಲಸವನ್ನು ಮಾಡುತ್ತಿದೆ. ಚೀನಾದ ಕಮ್ಯುನಿಸ್ಟ್‍ನ ನಿರಂಕುಶ ಆಡಳಿತದಿಂದ ಬೃಹತ್ ಕಾರ್ಮಿಕ ಅಶಾಂತಿ ಭುಗಿಲೆದ್ದಿದೆ. ನಾಗರಿಕರು ದೇಶದಲ್ಲಿ ಪ್ರಜಾಪ್ರಭುತ್ವಕ್ಕಾಗಿ ಪ್ರತಿಭಟನೆಗೆ ತೊಡಗಿದ್ದಾರೆ. ಚೀನಾದಲ್ಲಿ ಸರಕಾರಿ ಸಾಮ್ಯದ ಪತ್ರಿಕೆಗಳಷ್ಟೇ ಇದ್ದು, ಅದು ಸರಕಾರದ ಹೊಗಳುಭಟ್ಟ ಸರಕಾರವಷ್ಟೆ. ಉಳಿದ ಜನಪರ ಮಾಧ್ಯಮಗಳಿಗೆ ಸಂಪೂರ್ಣವಾಗಿ ಸೆನ್ಸಾರ್ ವಿಧಿಸಲಾಗಿದೆ.

ಅಭಿವೃದ್ಧಿಯ ಮೇಲೆ ನಿಗಾ ಇಟ್ಟಿರುವ ಚೀನೀ ತಜ್ಞರು ಚೀನಾ ಅಭಿವೃದ್ಧಿಯಲ್ಲಿ ಮುಂದಿದ್ದರೂ ರಾಜಕೀಯ ಕುಸಿತ ಮಾತ್ರ ಹತ್ತಿರದಲ್ಲೇ ಇದೆ ಎನ್ನುವುದನ್ನು ನಂಬುತ್ತಾರೆ. ಚೀನಾದಲ್ಲಿ ಮಾನವ ಹಕ್ಕುಗಳಿಗೆ ಬೆಲೆಯಿಲ್ಲ. ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ಸಿವಿಕ್ ಸೊಸೈಟಿಯ ವಿರುದ್ಧ ನಿರ್ದಯ ಶಿಸ್ತುಕ್ರಮವನ್ನು ಚೀನಾ ಕೈಗೊಳ್ಳುತ್ತಿದೆ. ಸರಕಾರದ ವಿರುದ್ಧ ಬಂದವರನ್ನು ನಿರ್ದಯವಾಗಿ ಹತ್ಯೆ ಮಾಡಲಾಗುತ್ತದೆ. ಸರ್ಕಾರದ ಈ ಹತ್ಯೆಯ ಭಯದಿಂದಾಗಿ ಜನರು ದಂಗೆ ಏಳುವುದಿಲ್ಲ. ಆದರೆ ಜನರಲ್ಲಿ ಕ್ರಾಂತಿಯ ಕಿಡಿ ಉರಿಯದೆ ಇರುತ್ತದೆಯೇ. ಅದಕ್ಕಾಗಿಯೇ ಸರಕಾರದ ವಿರುದ್ಧ ಭೂಗತವಾಗಿ ಇದ್ದುಕೊಂಡು ದಂಗೆ ಏಳುತ್ತಿದ್ದಾರೆ. ಅಡಗಿಕೊಂಡಿರುವ ಕೆಲವೊಂದು ಭೂಗತ ಹೋರಾಟಗಾರರು ಕಮ್ಯುನಿಸ್ಟ್ ಪಾರ್ಟಿಯ 19ನೇ ನ್ಯಾಷನಲ್ ಕಾಂಗ್ರೆಸ್‍ನ ಮೊದಲು ಕ್ಸಿ ಜಿಂಪಿಂಗ್ ಸರಕಾರದ ವಿರುದ್ಧದ ನಡೆದ ಪ್ರಮುಖ ರಾಜಕೀಯ ದಂಗೆಯನ್ನು ಅರ್ಥಮಾಡಿಕೊಳ್ಳಬಹುದು ಎಂದು ಚೀನೀ ತಜ್ಞರು ತಿಳಿಸಿದ್ದಾರೆ.

ಚೀನಾ ದೇಶ ದೋಕಲಂ ವಿಚಾರದಲ್ಲಿ ಭಾರತದ ಜೊತೆ ಜಗಳ ಕಾಯ್ದುಕೊಂಡು ಬಂದಿದ್ದು ಯಾಕೆ..? ವಿಶ್ವಕ್ಕೆ ಪರಮಾಣು ಬೆದರಿಕೆಯೊಡ್ಡುತ್ತಿರುವ ಉತ್ತರ ಕೊರಿಯಾದ ಬೆಂಬಲಕ್ಕೆ ನಿಂತಿದ್ದು ಯಾಕೆ?

ಹೌದು, ಚೀನಾಕ್ಕೆ ತನ್ನ ದೇಶದಲ್ಲಿ ನಡೆಯುತ್ತಿರುವ ಜನಾಂಗೀಯ ಭಿಕ್ಕಟ್ಟನ್ನು ನಿಯಂತ್ರಿಸಲು ಈ ತಂತ್ರವನ್ನು ಅನುಸರಿಸದೆ ಉಪಾಯವೇ ಇರಲಿಲ್ಲ ಎನ್ನುತ್ತಾರೆರಾಜಕೀಯ ತಜ್ಞರು. ಈ ವಿಷಯಗಳನ್ನು ಇಟ್ಟುಕೊಂಡು ಜನರ ಮೈಂಡ್ ಡೈವರ್ಟ್ ಮಾಡಿಕೊಂಡು ಭಾವನಾತ್ಮಕವಾಗಿ ಸೆಳೆಯಲು ಕ್ಸಿ ಜಿಂಪಿಂಗ್ ಬಳಸಿಕೊಂಡರು. ಸಿನ್ಜಿಯಾಂಗ್, ಮಂಚೂರಿಯಾ, ಹಾಂಗ್‍ಕಾಂಗ್, ಟಿಬೆಟ್, ಚೆಂಗ್ಡು, ಝಂಗ್ಝುಂಗ್ ಮತ್ತು ಶಾಂಘೈ ಚೀನಾದಿಂದ ಸ್ವತಂತ್ರ ಬಯಸಿ ಪ್ರತ್ಯೇಕ ರಾಷ್ಟ್ರಗಳಾಗಬೇಕೆಂದು ಮೊದಲಿನಿಂದಲೂ ಪ್ರಯತ್ನಿಸುತ್ತಲೇ ಇದೆ. ಅದಕ್ಕಾಗಿ ದೋಕಲಂ ವಿಚಾರವನ್ನು ಮುಂದಿಟ್ಟುಕೊಂಡು ದೇಶದ ಜನರನ್ನು ಭಾವನಾತ್ಮಕವಾಗಿ ಸೆಳೆಯಿತು ಎಂದೂ ತಜ್ಞರ ವಿಶ್ಲೇಷಣೆ..

ಪೂರ್ವ ಪ್ರಜಾಪ್ರಭುತ್ವ ದೇಶವು ಸುದೀರ್ಘ ಯುದ್ಧಕ್ಕೆ ಸಿದ್ಧವಿರುತ್ತದೆ. ಚೀನಾ 1989 ರಲ್ಲಿ ಮಾಡಿದಂತೆಯೇ ಮತ್ತೊಂದು ಕ್ರಾಂತಿಯೊಂದಕ್ಕೆ ತಯಾರಾಗುತ್ತಿದೆ. ಚೀನೀ ಕಮ್ಯುನಿಸ್ಟ್ ಪಕ್ಷದ ಮುಖ್ಯ ಉದ್ದೇಶವೆಂದರೆ ಸಂಪೂರ್ಣ ಏಕಸ್ವಾಮ್ಯವನ್ನು ಹೊಂದುವುದು. ಇದರ ನಡುವೆಯೇ ಸರಕಾರದಿಂದ ಕಂಗೆಟ್ಟವರು 2000ದಲ್ಲೇ ಕ್ರಾಂತಿಗೆ ಮುಂದಾಗಿದ್ದರು. ಆದರೆ ಅದನ್ನು ಶಮನಗೊಳಿಸುವಲ್ಲಿ ಚೀನಾ ಯಶಸ್ವಿಯಾಗಿತ್ತು. ಇದೀಗ ಕ್ರಾಂತಿಕಾರಿಗಳು ಪೂರ್ವ ತಯಾರಿಯಿಂದಲೇ ಮತ್ತೊಂದು ಕ್ರಾಂತಿಗೆ ಮುಂದಾಗಿದ್ದಾರೆ. ಮಾನವ ಹಕ್ಕುಗಳನ್ನು ಬಲಪಡಿಸುವ ಕಾರ್ಯವೂ ಭರದಿಂದ ಸಾಗುತ್ತಿದೆ. ಇವರ ಮೇಲೆ ಅನ್ಯ ರಾಷ್ಟ್ರದ ಬೆಂಬಲವೂ ಇದೆ. ಕ್ಸಿ ಜಿಂಪಿಂಗ್ ನೇತೃತ್ವದ ಕಮ್ಯುನಿಸ್ಟ್ ಪಕ್ಷ ಮತ್ತು ಜನರ ನಡುವಿನ ತಿಕ್ಕಾಟವೂ ಜೋರಾಗಿದ್ದು, ಇದಕ್ಕಾಗಿ ಸಾಕಷ್ಟು ಆರ್ಥಿಕ ವೆಚ್ಚವಾಗಿರುವುದರಿಂದ ಆರ್ಥಿಕ ಭಿಕ್ಕಟ್ಟನ್ನೂ ಅನುಭವಿಸುತ್ತಿದೆ.

ಮೂಲ : ವಿಜಯವಾಣಿ

-ಪವಿತ್ರ

Tags

Related Articles

Close