ಪ್ರಚಲಿತ

ಡಿಕೆಶಿಯ ಈ ನಿರ್ಲಕ್ಷ್ಯದಿಂದ ಮುಂದಿನ ದಿನಗಳಲ್ಲಿ ಕರ್ನಾಟಕ ಗಾಢಾಂಧಕಾರದಲ್ಲಿ ಮುಳುಗಲಿದೆಯೇ?!

ಇಂಧನ ಇಲಾಖೆಗೆ ಇದೀಗ ಸಂಕಷ್ಟ!!

ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ನಡುವಿನ “ಕೋಲ್’ ತಿಕ್ಕಾಟದಿಂದಾಗಿ ವಿದೇಶಿ ಕಲ್ಲಿದ್ದಲಿನ ಮೊರೆ ಹೋಗಲು ಚಿಂತನೆ ನಡೆಸಿದ್ದ ಇಂಧನ ಇಲಾಖೆಗೆ ಇದೀಗ ಸಂಕಷ್ಟವೊಂದು ಎದುರಾಗಿದೆ. ರಾಜ್ಯದಲ್ಲಿನ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಶೇಕಡಾ.20 ರಿಂದ ಶೇಕಡಾ.50 ರಷ್ಟು ಮಾತ್ರ ವಿದೇಶಿ ಕಲ್ಲಿದ್ದಲು ಬಳಸಬಹುದಾಗಿದ್ದು, ದೇಶೀಯ ಕಲ್ಲಿದ್ದಲೇ ಅನಿವಾರ್ಯವೆನಿಸಿದೆ! ಕೇಂದ್ರ ಸರಕಾರದೊಂದಿಗೆ ರಾಜ್ಯ ಸರಕಾರ ಕೋಲ್ ಖರೀದಿಯ ಬಗ್ಗೆ ಯಾವುದೇ ಒಪ್ಪಂದವನ್ನು ಮಾಡದೇ ಈಗ ವಿದ್ಯುತ್ ಕೊರತೆಯಾದಾಗ ತನ್ನ ಎಲ್ಲಾ ತಪ್ಪನ್ನು ಸುಖಾಸುಮ್ಮನೆ ಕೇಂದ್ರ ಸರಕಾರಕ್ಕೆ ಹೊರಿಸುತ್ತಿದ್ದೀರಲ್ಲವೇ ನಿಮಗೆ ಇದು ನ್ಯಾಯವೆಂದು ಅನಿಸುತ್ತಿದೆಯೇ? ರಾಜ್ಯ ಸರಕಾರವನ್ನು ನಂಬಿದರೆ ಈ ಬಾರಿಯೂ ಕತ್ತಲ ಭಾಗ್ಯ ಅಂತಾ ಖಾತ್ರಿಯಾಯಿತು ಬಿಡಿ!..

ರಾಜ್ಯದ ಉಷ್ಣ ವಿದ್ಯುತ್ ಸ್ಥಾವರಗಳು ಗರಿಷ್ಠ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸಲು ನಿತ್ಯ ಸುಮಾರು 70,000 ಟನ್ ದೇಶೀಯ ಕಲ್ಲಿದ್ದಲು ಅಗತ್ಯವಿದ್ದು, ಸದ್ಯ 26,000 ಟನ್ ಕಲ್ಲಿದ್ದಲು ಮಾತ್ರ ಪೂರೈಕೆಯಾಗುತ್ತಿದೆ. ವಿದೇಶಿ ಕಲ್ಲಿದ್ದಲ್ಲಿನಿಂದ ತುರ್ತು ಪರಿಸ್ಥಿತಿ ನಿಭಾಯಿಸಬಹುದೆ ಹೊರತು ವರ್ಷವಿಡೀ ವಿದ್ಯುತ್ ಉತ್ಪಾದನೆಗೆ ದೇಶೀಯ ಕಲ್ಲಿದ್ದಲು ಅನಿವಾರ್ಯ. ಹಾಗಾಗಿ ಕೇಂದ್ರ ಸರಕಾರದೊಂದಿಗೆ ಸಂಘರ್ಷಕ್ಕಿಳಿಯದೆ ಸೌಹಾರ್ದದಿಂದಲೇ ಹಂಚಿಕೆಯಾದಷ್ಟು ಕಲ್ಲಿದ್ದಲು ಪಡೆಯುವುದು ರಾಜ್ಯ ಸರ್ಕಾರಕ್ಕೆ ಅನಿವಾರ್ಯ ಎಂಬ ಮಾತು ಕೇಳಿಬಂದಿದೆ.

ರಾಜ್ಯದ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಹಂಚಿಕೆಯಾದ ಕಲ್ಲಿದ್ದಲು ಗಣಿಗಳಿಂದ ಪೂರ್ಣ ಪ್ರಮಾಣದಲ್ಲಿ ಕಲ್ಲಿದ್ದಲು ಪೂರೈಕೆಯಾದರೆ ಗರಿಷ್ಠ ಉತ್ಪಾದನೆ ಸಹಜವಾಗಿ ನಡೆಯುತ್ತದೆ. ಆದರೆ ಕೆಲ ತಿಂಗಳಿನಿಂದ ರಾಜ್ಯಕ್ಕೆ ಶೇ.40ರಷ್ಟು ಕಲ್ಲಿದ್ದಲು ಮಾತ್ರ ಪೂರೈಕೆಯಾಗುತ್ತಿರುವುದರಿಂದ ಉತ್ಪಾದನೆ ಕುಸಿದಿದ್ದು, ವಿದ್ಯುತ್ ಕಣ್ಣಾಮುಚ್ಚಾಲೆ ಕಾಣಿಸಿಕೊಳ್ಳಲಾರಂಭಿಸಿದೆ.

ಕೇಂದ್ರ ಸರಕಾರಿ ಸ್ವಾಮ್ಯದ ಸಿಂಗರೇಣಿ ಕೊಲಿರೀಸ್ ಕಂಪನಿ (ಎಸ್‍ಸಿಸಿಎಲ್), ವೆಸ್ಟರ್ನ್ ಕೋಲ್ ಫೀಲ್ಡ್ (ಡಬ್ಲ್ವೂಸಿಎಲ್) ಹಾಗೂ ಮಹಾನದಿ ಕೋಲ್ ಫೀಲ್ಡ್ (ಎಂಸಿಎಲ್) ಸಂಸ್ಥೆಗಳೊಂದಿಗೆ ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿಎಲ್) ಒಡಂಬಡಿಕೆ ಮಾಡಿಕೊಂಡಿದ್ದು, ಆರ್‍ಟಿಪಿಎಸ್ ಘಟಕಕ್ಕೆ ವಾರ್ಷಿಕ 80 ಲಕ್ಷ ಟನ್ ಕಲ್ಲಿದ್ದಲು ಪೂರೈಸಬೇಕಿದೆ. ಎಸ್‍ಸಿಸಿಎಲ್, ಎಂಸಿಎಲ್ ಶೇ.100ರಷ್ಟು ಕಲ್ಲಿದ್ದಲು ಪೂರೈಸುತ್ತಿದ್ದು, ಡಬ್ಲ್ಯುಸಿಎಲ್ ಸಂಸ್ಥೆ ಶೇ.25ರಷ್ಟು ಮಾತ್ರ ಪೂರೈಸುತ್ತಿರುವುದು ಸಮಸ್ಯೆ ಉಲ್ಪಣಕ್ಕೆ ಕಾರಣವಾಗಿದೆ. ಬಿಟಿಪಿಎಸ್ ಘಟಕಕ್ಕೆ ನಾನಾ ಕಾರಣಕ್ಕೆ ಕಲ್ಲಿದ್ದಲು ಪೂರೈಕೆ ಮೂಲವೇ ಇಲ್ಲದಂತಾಗಿದ್ದು, ಆರ್‍ಟಿಪಿಎಸ್‍ಗೆ ಪೂರೈಕೆಯಾಗುವ ಕಲ್ಲಿದ್ದಲಿನಲ್ಲೇ ಸ್ವಲ್ಪ ಬಳಸಿ ಒಂದೆರಡು ಘಟಕಗಳಲ್ಲಿ ವಿದ್ಯುತ್ ಉತ್ಪಾದಿಸಲಾಗುತ್ತಿದೆ.

ತನ್ನ ತಪ್ಪನ್ನು ಕೇಂದ್ರದ ಮೇಲೆ ಹೊರೆಸಿರುವ ಡಿಕೆಶಿ

ರಾಜ್ಯದ ಉಷ್ಣ ಸ್ಥಾವರಗಳಿಗೆ ಅಗತ್ಯವಿರುವ ಕಲ್ಲಿದ್ದಲಿನಲ್ಲಿ ಶೇಕಡಾ 40ರಷ್ಟು ಮಾತ್ರ ಪೂರೈಕೆಯಾಗುತ್ತಿದೆ. ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಅಡಚಣೆ, ರೈಲ್ವೆ ಸಂಪರ್ಕದಲ್ಲಿ ವ್ಯತ್ಯಯವಾಗಿದ್ದರೆ ಇತರೆ ರಾಜ್ಯಗಳಿಗೂ ಕಲ್ಲಿದ್ದಲು ಪೂರೈಕೆಯಲ್ಲಿ ವ್ಯತ್ಯಯವಾಗಬೇಕಿತ್ತು. ಆದರೆ ದೇಶದ ಉಷ್ಣ ಸ್ಥಾವರಗಳಲ್ಲಿನ ಕಲ್ಲಿದ್ದಲು ದಾಸ್ತಾನು ಕುರಿತಂತೆ ಕೇಂದ್ರ ವಿದ್ಯುತ್ ಪ್ರಾಧಿಕಾರದ ಅಂಕಿಅಂಶ ಗಮನಿಸಿದರೆ ದಾಸ್ತಾನಿನಲ್ಲಿ ವ್ಯತ್ಯಯವಿರುವುದು ಕಂಡುಬರುತ್ತದೆ. ತನ್ನ ಎಲ್ಲಾ ತಪ್ಪುಗಳನ್ನು ಕೇಂದ್ರ ಸರಕಾರ ಮೇಲೆ ಹೊರೆಸಿರುವುದು ಎಷ್ಟರ ಮಟ್ಟಿಗೆ ಸರಿ?

ಮಹಾರಾಷ್ಟ್ರದ 14 ಸ್ಥಾವರಗಳಲ್ಲಿ ನಾಲ್ಕು ಪ್ರಮುಖ ಸ್ಥಾವರಗಳಲ್ಲಿ 16, 15, 13, 11 ಹಾಗೂ ಎರಡು ಸ್ಥಾವರಗಳಲ್ಲಿ 9 ದಿನಕ್ಕೆ ಸಾಕಾಗುವಷ್ಟು ಕಲ್ಲಿದ್ದಲು ದಾಸ್ತಾನು ಇದೆ. ನೆರೆಯ ತೆಲಂಗಾಣದಲ್ಲಿ ಒಂದು ಸ್ಥಾವರದಲ್ಲಿ ಮೂರು ದಿನದ ದಾಸ್ತಾನು ಹೊರತುಪಡಿಸಿದರೆ ಉಳಿದ ಮೂರು ಸ್ಥಾವರಗಳಲ್ಲಿ 14, 18, 33 ದಿನಕ್ಕಾಗುವಷ್ಟು ಕಲ್ಲಿದ್ದಲು ದಾಸ್ತಾನು ಇದೆ. ತಮಿಳುನಾಡಿನಲ್ಲಿ ಮೂರು ಪ್ರಮುಖ ಸ್ಥಾವರಗಳಲ್ಲಿ 14, 15 ದಿನದ ದಾಸ್ತಾನು ಇರುವುದು ಕಂಡುಬಂದಿದೆ. ಆದರೆ ರಾಜ್ಯದ ಆರ್‍ಟಿಪಿಎಸ್, ಬಿಟಿಪಿಎಸ್ ಘಟಕಗಳಲ್ಲಿ ಎರಡು ದಿನಕ್ಕಾಗುವಷ್ಟು ಕಲ್ಲಿದ್ದಲು ದಾಸ್ತಾನು ಮಾತ್ರಯಿದ್ದು, ಸೂಪರ್ ಕ್ರಿಟಿಕಲ್ ಸ್ಥಿತಿಯಲ್ಲಿವೆ.

ಕೇಂದ್ರ ಸರಕಾರ ರಾಜ್ಯಕ್ಕೆ ಕಲ್ಲಿದ್ದಲು ಪೂರೈಕೆಯಲ್ಲಿ ತಾರತಮ್ಯ ತೋರುತ್ತಿದೆ ಆರೋಪಿಸಿರುವ ಇಂಧನ ಸಚಿವ ಡಿ.ಕೆ.ಶಿವಕುಮಾರ್ ವಿದೇಶದಿಂದ 10 ಲಕ್ಷ ಟನ್ ಕಲ್ಲಿದ್ದಲು ಆಮದು ಮಾಡಿಕೊಂಡು ಪರಿಸ್ಥಿತಿ ನಿಭಾಯಿಸುವುದಾಗಿ ಹೇಳುವ ಮೂಲಕ ಕೇಂದ್ರಕ್ಕೆ ಸೆಡ್ಡು ಹೊಡೆಯುವ ಚಿಂತನೆಯಲ್ಲಿದ್ದಂತಿದೆ. ಆದರೆ ವಿದೇಶಿ ಕಲ್ಲಿದ್ದಲನ್ನೇ ಪೂರ್ಣವಾಗಿ ನೆಚ್ಚಿಕೊಂಡು ವಿದ್ಯುತ್ ಉತ್ಪಾದಿಸುವ ಸ್ಥಿತಿಯಲ್ಲಿ ರಾಜ್ಯದ ಉಷ್ಣ ಸ್ಥಾವರಗಳಿಲ್ಲ ಎಂಬುದು ವಾಸ್ತವ.

ಶೇಕಡಾ.20ರಷ್ಟು ಮಾತ್ರ ಬಳಕೆ ಸಾಧ್ಯ

ಆರ್‍ಟಿಪಿಎಸ್ ಘಟಕವು ರಾಜ್ಯದ ಹಳೆಯ ಉಷ್ಣ ಸ್ಥಾವರವೆನಿಸಿದ್ದು, ದೇಶೀಯ ಕಲ್ಲಿದ್ದಲನ್ನೇ ಪ್ರಧಾನವಾಗಿ ಬಳಸುವ ವ್ಯವಸ್ಥೆ ಇದೆ. ಆರ್‍ಟಿಪಿಎಸ್‍ನ ಎಂಟು ಘಟಕ ಹಾಗೂ ಬಿಟಿಪಿಎಸ್‍ನ ಎರಡು ಘಟಕಗಳಲ್ಲಿ ಗರಿಷ್ಠ ಶೇ.20ರಷ್ಟು ವಿದೇಶ ಕಲ್ಲಿದ್ದಲು ಬಳಸಲು ಅವಕಾಶವಿದ್ದು, ಉಳಿದ ಶೇ.80ರಷ್ಟು ದೇಶೀಯ ಕಲ್ಲಿದ್ದಲನ್ನೇ ಬಳಸಬೇಕು.

ಬಿಟಿಪಿಎಸ್‍ನ ಮೂರನೇ ಘಟಕ ಹಾಗೂ ವೈಟಿಪಿಎಸ್ ಸ್ಥಾವರವನ್ನು ವೈಜ್ಞಾನಿಕ ತಂತ್ರಜ್ಞಾನದಡಿ ಇತ್ತೀಚೆಗೆ ನಿರ್ಮಿಸಿರುವುದರಿಂದ ಗರಿಷ್ಠ ಶೇ.50ರಷ್ಟರವರೆಗೆ ವಿದೇಶಿ ಕಲ್ಲಿದ್ದಲು ಬಳಸಲು ಅವಕಾಶವಿದೆ. ಇಲ್ಲಿಯೂ ಶೇ.50ರಷ್ಟು ದೇಶೀಯ ಕಲ್ಲಿದ್ದಲು ಬಳಕೆ ಅನಿವಾರ್ಯವಾಗಿದೆ. ಹಾಗಾಗಿ ವಿದೇಶಿ ಕಲ್ಲಿದ್ದಲಿನಿಂದ ತಾತ್ಕಾಲಿಕವಾಗಿ ಸಮಸ್ಯೆ ಪರಿಹರಿಸಿಕೊಳ್ಳಬಹುದ್ದು, ದೇಶೀಯ ಕಲ್ಲಿದ್ದಲಿನ ಸಮರ್ಪಕ ಪೂರೈಕೆಯೊಂದೇ ಸಮಸ್ಯೆಗೆ ಕಾಯಂ ಪರಿಹಾರವೆನಿಸಿದೆ ಎಂದು ಇಂಧನ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಆರ್‍ಟಿಪಿಎಸ್ ಸ್ಥಾವರ ಸ್ಥಾಪನೆಯಾದ ಸಂದರ್ಭದಲ್ಲಿ ವಿದೇಶಿ ಕಲ್ಲಿದ್ದಲು ಬಳಕೆಯ ಪರಿಕಲ್ಪನೆಯೇ ಇರಲಿಲ್ಲ. ಆಗ ದೇಶದ ಎಲ್ಲ ಉಷ್ಣ ಸ್ಥಾವರಗಳಿಗೆ ಅಗತ್ಯ ಪ್ರಮಾಣದಲ್ಲಿ ಕಲ್ಲಿದ್ದಲು ಪೂರೈಕೆ ಸಾಮರ್ಥಯವಿತ್ತು. ಹಾಗಾಗಿ ದೇಶೀಯ ಕಲ್ಲಿದ್ದಲು ಬಳಕೆಗೆ ಪೂರಕವಾಗಿ ಸ್ಥಾವರ ವಿನ್ಯಾಸಗೊಂಡಿದೆ. ವಿದೇಶಿ ಕಲ್ಲಿದ್ದಲನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಬೇಕಾದರೆ ಬೃಹತ್ ಬಾಯ್ಲರ್‍ಗಳನ್ನು ಬದಲಾಯಿಸಿ ಹೊಸ ತಂತ್ರಜ್ಞಾನ ಅಳವಡಿಸಬೇಕಾಗುತ್ತದೆ. ಇದು ದುಬಾರಿಯಾಗಿದ್ದು, ವಿದೇಶಿ ಕಲ್ಲಿದ್ದಲನ್ನೇ ನೆಚ್ಚಿಕೊಂಡು ತಂತ್ರಜ್ಞಾನ ಬದಲಿಸುವುದು ಕಾರ್ಯಸಾಧುವಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.

ಹೈದರಾಬಾದ್‍ನಲ್ಲಿರುವ ಎಸ್‍ಸಿಸಿಎಲ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರನ್ನು ಕಳೆದ ನವೆಂಬರ್‍ನಲ್ಲಿ ಭೇಟಿ ಮಾಡಿದ್ದ ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಜಿ.ಕುಮಾರನಾಯಕ್ ಅವರು ಕಲ್ಲಿದ್ದಲು ಪೂರೈಕೆ ಹೆಚ್ಚಿಸಿ ಸ್ಪಂದಿಸುವಂತೆ ಕೋರಿದ್ದರು. ಅದರಂತೆ ತಕ್ಷಣಕ್ಕೆ ಒಂದು ರೈಲ್ವೆ ಲೋಡ್‍ನಷ್ಟು ಕಲ್ಲಿದ್ದಲು ಪೂರೈಕೆ ಹೆಚ್ಚಿಸುವುದಾಗಿ ಹೇಳಿದ್ದ ಸಂಸ್ಥೆ ಡಿಸೆಂಬರ್‍ನಿಂದ ಮತ್ತೂಂದು ರೈಲ್ವೆ ಲೋಡ್ ಕಲ್ಲಿದ್ದಲು ಪೂರೈಸುವುದಾಗಿ ಭರವಸೆ ನೀಡಿತ್ತು. ಆದರೆ ರೈಲ್ವೆ ಸಂಪರ್ಕ, ಹೆಚ್ಚಿದ ಬೇಡಿಕೆ ಇತರೆ ಕಾರಣ ಸಬೂಬು ಹೇಳುತ್ತಿರುವುದು ಆತಂಕ ಮೂಡಿಸಿದೆ. ಆ ಹಿನ್ನೆಲೆಯಲ್ಲಿ ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕರು ಎಸ್‍ಸಿಸಿಎಲ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿಯಾಗಿ ಮನವಿ ಮಾಡಲು ಮುಂದಾಗಿದ್ದಾರೆ.

ಜನವರಿಯಿಂದಲೇ ಲೋಡ್ ಶೆಡ್ಡಿಂಗ್?

ಸದ್ಯ ಆರ್‍ಟಿಪಿಎಸ್‍ನ ಒಂದು ಘಟಕ 120 ದಿನ ನಿರ್ವಹಣೆಗೆ (ಐದು ವರ್ಷಕ್ಕೊಮ್ಮೆ 120 ದಿನ ನಿರ್ವಹಣೆ ಕಡ್ಡಾಯ) ಒಂದೂವರೆ ತಿಂಗಳ ಹಿಂದೆ ಸ್ಥಗಿತಗೊಂಡಿದೆ. ಮತ್ತೂಂದು ಘಟಕ ತಾಂತ್ರಿಕ ದೋಷದಿಂದ ಸ್ಥಗಿತಗೊಂಡಿದ್ದು, ಉಳಿದ ಘಟಕಗಳು ಕಾರ್ಯ ನಿರ್ವಹಣೆಯಲ್ಲಿವೆ. ಜನವರಿಯಿಂದ ವಿದ್ಯುತ್ ಬೇಡಿಕೆ ತೀವ್ರ ಏರಿಕೆಯಾಗಲಿದ್ದು, ಜ.15ರ ವೇಳೆಗೆ ಎಲ್ಲ ಸ್ಥಾವರಗಳ ಘಟಕಗಳನ್ನು ಸನ್ನದ್ಧ ಸ್ಥಿತಿಯಲ್ಲಿಟ್ಟುಕೊಳ್ಳಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಇಂಧನ ಇಲಾಖೆ ಮೂಲಗಳು ತಿಳಿಸಿವೆ.

ಆದರೆ ದೇಶೀಯ ಕಲ್ಲಿದ್ದಲು ಪೂರೈಕೆ ಇದೇ ಪ್ರಮಾಣದಲ್ಲಿದ್ದರೆ ಉಷ್ಣ ವಿದ್ಯುತ್ ಉತ್ಪಾದನೆಯಲ್ಲಿ ಗಣನೀಯ ಇಳಿಕೆಯಾಗಲಿದೆ. ಬೇಸಿಗೆಯುದ್ದಕ್ಕೂ ಕುಡಿಯುವ ನೀರಿನ ನಿರ್ವಹಣೆಗೂ ಒತ್ತು ನೀಡಬೇಕಿರುವುದರಿಂದ ಜಲವಿದ್ಯುತ್ ಉತ್ಪಾದನೆಯೂ ಕನಿಷ್ಠವಾಗಿರಲಿದೆ. ಕಲ್ಲಿದ್ದಲು ಪೂರೈಕೆ ಪ್ರಮಾಣ ಸುಧಾರಿಸದಿದ್ದರೆ ಜನವರಿಯಿಂದಲೇ ಲೋಡ್ ಶೆಡ್ಡಿಂಗ್ ಅನಿವಾರ್ಯವಾಗಬಹುದು ಎಂದು ಹೇಳಿವೆ.

ಸ್ಥಾವರ ಗರಿಷ್ಠ ಉತ್ಪಾದನೆ ಗರಿಷ್ಠ ಕಲ್ಲಿದ್ದಲು ಅಗತ್ಯ ಸದ್ಯದ ಪೂರೈಕೆ
ಆರ್‍ಟಿಪಿಎಸ್ 1720 ಮೆ.ವ್ಯಾ. (8 ಘಟಕ) 28,000 ಟನ್ 19,000 ಟನ್
ಬಿಟಿಪಿಎಸ್ 1700 ಮೆ.ವ್ಯಾ. (3 ಘಟಕ) 25,000 ಟನ್ 7000 ಟನ್
ವೈಟಿಪಿಎಸ್ 800 ಮೆ.ವ್ಯಾ. (2 ಘಟಕ) 17,000 ಟನ್ 0000

ಕರ್ನಾಟಕದಲ್ಲಿ ದಕ್ಷ ರೀತಿಯಲ್ಲಿ ಕೆಲಸ ಮಾಡಿದ್ದೇ ಆಗಿದ್ದರೇ ಇಂದು ಕರ್ನಾಟಕ ವಿದ್ಯುತ್ ಸ್ವಾವಲಂಬಿ ಆಗಿರುತ್ತಿತ್ತು. ಒಂದು ವೇಳೆ ಇದೆಲ್ಲಾ ಆಗಿದಿದ್ದರೆ ಖಂಡಿತಾ ಹೆಚ್ಚುವರಿ ವಿದ್ಯುತನ್ನು ಕರ್ನಾಟಕದಿಂದ ಮಾರಬಹುದಿತ್ತು. ಆದರೆ ರಾಜ್ಯಸರಕಾರದ ತಪ್ಪು ನಿರ್ಧಾರ, ಸೋಮಾರಿತನದಿಂದಾಗಿ ಈ ಬಾರಿ ಮತ್ತೆ ಹಣ ಕೊಟ್ಟು ವಿದ್ಯುತ್ ಖರೀದಿಸುವಂತಾಗಿದೆ. ಹಾಗಾದರೆ ಈ ಬಾರಿಯೂ ಕತ್ತಲೆ ಭಾಗ್ಯ ಇದೆ ಎನ್ನುವುದನ್ನು ಸಾಬೀತುಪಡಿಸಿದಿರಿ… ಶಹಬ್ಬಾಸ್….

-ಪವಿತ್ರ

Tags

Related Articles

Close