ರಾಹುಲ್ ಗಾಂಧಿ… ಕಾಂಗ್ರೆಸ್ ಮಹಾರಾಜ… ತಾನು ಹೋದಲ್ಲೆಲ್ಲಾ ಸೋಲನ್ನೇ ಅನುಭವಿಸುತ್ತಾ, ಗೆಲುವಿಗೆ ಎಷ್ಟು ಪ್ರಯತ್ನ ಪಟ್ಟರೂ ಅದು ಪ್ರಾಪ್ತಿಯಾಗದೆ ಸೋಲಿನ ಮೇಲೆ ಸೋಲನ್ನು ಅನುಭವಿಸುತ್ತಿರುವ ರಾಷ್ಟ್ರ ರಾಜಕಾರಣಿ. ತನ್ನ ಕುಟುಂಬದ ಪವರ್ನಿಂದ ರಾಜಕೀಯಕ್ಕೆ ಧುಮುಕಿ, ತನ್ನ ಕುಟುಂಬ ಸ್ಪರ್ಧಿಸುತ್ತಿದ್ದ ಕ್ಷೇತ್ರದಲ್ಲೇ ಸ್ಪರ್ಧಿಸಿ, ಕುಟುಂಬದವರ ಹೆಸರು ಹೇಳಿ ಜಯ ಗಳಿಸಿ, ಈಗ ಅದೇ ಕುಟುಂಬ ರಾಜಕಾರಣದ ಸಹಕಾರದಿಂದ ರಾಷ್ಟ್ರ ಕಾಂಗ್ರೆಸ್ನ ಚುಕ್ಕಾಣಿಯನ್ನು ಹಿಡಿದ ವಿಫಲ ನಾಯಕ ರಾಹುಲ್ ಗಾಂಧಿ.
ಹೋದಲ್ಲೆಲ್ಲಾ ಸೋಲನ್ನೇ ಅನುಭವಿಸಿದ ವಿಫಲ ನಾಯಕ!
ಕಳೆದ ಲೋಕಸಭಾ ಚುನಾವಣೆಯ ವೇಳೆಯಲ್ಲಿ ರಾಹುಲ್ ಗಾಂಧಿಗೆ ಪಟ್ಟ ಕಟ್ಟಿದ ಕಾಂಗ್ರೆಸ್ ಪಕ್ಷ ಆಡಳಿತ ಪಕ್ಷವಾಗಿದ್ದ ಕಾಂಗ್ರೆಸ್ ಸರ್ಕಾರವನ್ನು ಕೇವಲ 44ರ ಸ್ಥಾನಕ್ಕೆ ತಂದು ನಿಲ್ಲುವಂತೆ ಮಾಡಿದ್ದರು. ಅಂದು ಕಾಂಗ್ರೆಸ್ ಪಕ್ಷದ ಹಿರಿಯ ಕಟ್ಟಾಳು ಆಗಿದ್ದ ಪ್ರಣಬ್ ಮುಖರ್ಜಿಯವರನ್ನು ಪ್ರಧಾನಿ ಅಭ್ಯರ್ಥಿ ಮಾಡಿದ್ದಿದ್ದರೆ ಸ್ವಲ್ಪಾನಾದರೂ ಕಾಂಗ್ರೆಸ್ ಪಕ್ಷ ತನ್ನ ನೆಲೆಯನ್ನು ಸ್ಥಾಪಿಸಬಹುದಿತ್ತೋ ಏನೋ. ಆದರೆ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಆಗಬೇಕೆನ್ನುವ ದುರಾಲೋಚನೆಯಿಂದ ವಿತ್ತ ಸಚಿವರಾಗಿದ್ದ ಪ್ರಣಬ್ ಮುಖರ್ಜಿಯವರನ್ನು ರಾಷ್ಟ್ರಪತಿ ಮಾಡಿ ರಾಹುಲ್ ಗಾಂಧಿಯ ಹಾದಿಯನ್ನು ಸುಗಮಗೊಳಿಸಿದ್ದರು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ.
ನಂತರ ನಡೆದದ್ದೇ ಇತಿಹಾಸ. ರಾಹುಲ್ ಗಾಂಧಿ ಹೋದಲ್ಲೆಲ್ಲಾ ಸೋಲು ಎಂಬ ಸತ್ಯ ಅವರನ್ನು ಸ್ವಾಗತಿಸುತ್ತಾ ಬಂದಿತ್ತು. ಅಂದು ನಡೆದ 2014ರ ಲೋಕಸಭಾ ಚುನಾವಣೆ ಮಾತ್ರವಲ್ಲದೆ ನಂತರ ನಡೆದ ಸುಮಾರು 20 ರಾಜ್ಯಗಳ ವಿಧಾನ ಸಭಾ ಚುನಾವಣೆಗಳಲ್ಲೂ ಕಾಂಗ್ರೆಸ್ ಪಕ್ಷ ಸೋತು ಸುಣ್ಣವಾಗಿ ಹೋಗಿದೆ. ಉತ್ತರ ಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ ಸಹಿತ ಮೊನ್ನೆ ಮೊನ್ನೆ ನಡೆದ ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ಚುನಾವಣೆಗಳಲ್ಲೂ ರಾಹುಲ್ ಗಾಂಧಿ ಸೋತು ಕಾಂಗ್ರೆಸ್ ಪಕ್ಷವನ್ನು ಮಖಾಡೆ ಮಲಗಿಸಿದ್ದಾರೆ.
ಸ್ವಕ್ಷೇತ್ರದಲ್ಲಿಯೇ ರಾಹುಲ್ಗೆ ಪ್ರತಿಭಟನೆಯ ಸ್ವಾಗತ..!!!
ರಾಹುಲ್ ಗಾಂಧಿ ಪ್ರತಿನಿಧಿಸುವ ಲೋಕಸಭಾ ಕ್ಷೇತ್ರ ಉತ್ತರ ಪ್ರದೇಶದ ಅಮೇಥಿ. ಹಿಂದಿನಿಂದಲೂ ಅದು ನೆಹರೂ ಕುಟುಂಬದ ಕ್ಷೇತ್ರ. ಅದರಲ್ಲಿ ನೆಹರೂ ಕುಟುಂಬದ ಯಾವ ವ್ಯಕ್ತಿ ಸ್ಪರ್ಧಿಸಿದರೂ ಅಲ್ಲಿ ಕಾಂಗ್ರೆಸ್ಗೆ ಜಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಬೇರೆ ಯಾವ ಕ್ಷೇತ್ರದಲ್ಲೂ ಗೆಲ್ಲಲು ಅಸಾಧ್ಯವಾದ ರಾಹುಲ್ ಗಾಂಧಿಯನ್ನು ಅದೇ ಅಮೇಥಿ ಕ್ಷೇತ್ರದಲ್ಲಿ ಗೆಲ್ಲಿಸುತ್ತಾರೆ ಕಾಂಗ್ರೆಸ್ನ ರಾಷ್ಟ್ರೀಯ ನಾಯಕರು. ಆದರೆ ಅಲ್ಲಿ ಅಭಿವೃದ್ಧಿ ಮಾತ್ರ ಕುಂಠಿತ. ಕೇವಲ ಅಲ್ಲಿನ ಒಂದು ಬಸ್ ನಿಲ್ದಾಣ ಅಮೇಥಿಯ ಅಭಿವೃದ್ಧಿಯನ್ನು ಸೂಚಿಸುತ್ತದೆ. ರೈಲು, ವಿಮಾನ, ಹೆದ್ದಾರಿ ಸೇರಿದಂತೆ ಯಾವುದೇ ಕ್ಷೇತ್ರಗಳಲೂ ಅಭಿವೃದ್ಧಿಯನ್ನೇ ಕಾಣದ ಅಮೇಥಿ ಕ್ಷೇತ್ರ ಅಲ್ಲಿನ ಸಂಸದನ ನಿಜಮುಖವನ್ನು ಅನಾವರಣಗೊಳಿಸುತ್ತದೆ.
ಇಂದು ಅಮೇಥಿಯಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ರ್ಯಾಲಿಯನ್ನು ಆಯೋಜಿಸಿತ್ತು. ಈ ರ್ಯಾಲಿಯಲ್ಲಿ ಕಾಂಗ್ರೆಸ್ ಮಹರಾಜ ರಾಹುಲ್ ಗಾಂಧಿ ಭಾಗವಹಿಸಿದ್ದರು. ಕಾಂಗ್ರೆಸ್ ದೊರೆ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಸುಸೂತ್ರದಲ್ಲಿ ನಡೆಯಬೇಕಾಗಿದ್ದ ಈ ರ್ಯಾಲಿಯಲ್ಲಿ ಭಿನ್ನಮತ ಭುಗಿಲೆದ್ದಿತ್ತು. ರಾಹುಲ್ ರ್ಯಾಲಿಗೂ ಮುನ್ನವೇ ಅಲ್ಲಿ ಪ್ರತಿಭಟನೆಯ ಬಿಸಿ ತಾರಕಕ್ಕೇರಿತ್ತು. ಅಲ್ಲಿ ಕಾಂಗ್ರೆಸ್ನ ಒಳಗಿರುವ ವ್ಯಕ್ತಿಗಳೇ ರಾಹುಲ್ ಗಾಂಧಿಯನ್ನು ವಿರೋಧಿಸಿ ಧಿಕ್ಕಾರ ಕೂಗಿದ್ದರು ಎಂದು ಹೇಳಲಾಗುತ್ತಿದೆ.
ಯಾತಕ್ಕಾಗಿ ಪ್ರತಿಭಟನೆ?
ರಾಹುಲ್ ಗಾಂಧಿಯ ಸ್ವಕ್ಷೇತ್ರ ಅಮೇಥಿಯಲ್ಲಿ ರಾಹುಲ್ ಗಾಂಧಿ ಸಂಸದರಾದ ನಂತರ ಅಲ್ಲಿ ಏನು ಮಾಡಿದ್ದಾರೆ ಅನ್ನೋದೇ ಯಕ್ಷ ಪ್ರಶ್ನೆ. ಸಂಸದರಾದ ನಂತರ ರಾಹುಲ್ ಗಾಂಧಿ ರಾಷ್ಟ್ರ ಕಾಂಗ್ರೆಸ್ ಪಕ್ಷದ ಪ್ರಚಾರವನ್ನು ಮಾತ್ರವೇ ಮಾಡುತ್ತಾರೆ. ಅಮೇಥಿ ಜನರ ಕೈಗೆ ಸಿಗೋದಿಲ್ಲ ಎಂಬ ವಾದ ಅಲ್ಲಿನ ಜನರದ್ದು. ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷರಾದ ರಾಹುಲ್ ಗಾಂಧಿಯವರು ಇಲ್ಲಿನ ಜನರ ಹಿತವನ್ನು ಮರೆತಿದ್ದಾರೆ. ಜನರ ಅವಹಾಲು ಹಲವಾರು ಇದೆ. ಅದನ್ನೆಲ್ಲಾ ನಾವು ಯಾವಾಗ ಅವರಿಗೆ ಸಲ್ಲಿಸೋದು. ಜಿಲ್ಲೆಯ ಜನರಿಗೆ ಅವರ ಸಂದರ್ಶನಕ್ಕೆ ಸಮಯ ಸಿಗೋದೇ ಕಷ್ಟ ಎಂಬಂತಾಗಿದೆ ಎಂದು ಅಲ್ಲಿನ ಜನರು ಪರಿತಪಿಸುತ್ತಿದ್ದಾರೆ.
ಹೀಗಾಗಿ ಅಲ್ಲಿನ ಜನರು ಇಂದು ರಾಹುಲ್ ಗಾಂಧಿ ಅಮೇಥಿಯಲ್ಲಿ ನಡೆಸಲು ಆಯೋಜಿಸಿದ್ದ ರ್ಯಾಲಿಯಲ್ಲಿ ಆರಂಭಕ್ಕೂ ಮುನ್ನವೇ ವಿಘ್ನ ಎದುರಾಗಿದೆ. ರಾಹುಲ್ ಗಾಂಧಿ ಅಮೇಥಿಯಲ್ಲಿ ನಡೆಯುವ ರ್ಯಾಲಿಗೆ ಆಗಮಿಸುವ ಹೊತ್ತಿಗೆ ಜನರು ರೊಚ್ಚಿಗೆದ್ದು ಪ್ರತಿಭಟನೆ ಮಾಡಿದ್ದಾರೆ. “ಜಿಲ್ಲೆಯ ಅಭಿವೃದ್ಧಿಯನ್ನು ಕಡೆಗಣಿಸಿದ ನೀವು ಕೇವಲ ಕಾಂಗ್ರೆಸ್ ರ್ಯಾಲಿಗಳಿಗೆ ಮಾತ್ರ ಆಗಮಿಸುತ್ತಿದ್ದೀರಿ. ನಮ್ಮ ಸಮಸ್ಯೆಗಳನ್ನೂ ಕೇಳಿ” ಎಂದು ಧಿಕ್ಕಾರ ಕೂಗುತ್ತಾ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪ್ರತಿಭಟನಾಕಾರರನ್ನು ಚದುರಿಸಿ ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ಮಾಡಿದರು.
ಒಟ್ಟಾರೆ ರಾಷ್ಟ್ರವನ್ನು ಆಳುತ್ತೇನೆ ಎಂದು ಬೊಗಳೆ ಬಿಡುತ್ತಿರುವ ಈ ವಿಫಲ ನಾಯಕ ರಾಹುಲ್ ಗಾಂಧಿ ತನ್ನ ಕ್ಷೇತ್ರವನ್ನೇ ನೆಟ್ಟಗೆ ಆಳಲು ಸಾಧ್ಯವಾಗದೆ ಪ್ರತಿಭಟನೆಯನ್ನು ಎದುರಿಸುವಂತಾಗಿದೆ. ಅತ್ತ ಚುನಾವಣೆಗಳಲ್ಲೂ ಸೋತು ಸುಣ್ಣವಾಗಿರುವ ರಾಹುಲ್ ಗಾಂಧಿ ಇತ್ತ ತನ್ನ ಸ್ವಕ್ಷೇತ್ರ ಅಮೇಥಿಯಲ್ಲೂ ತನ್ನ ಮಾನವನ್ನು ಕಳೆದುಕೊಂಡಿದ್ದಾರೆ.
-ಸುನಿಲ್ ಪಣಪಿಲ