ಹೆಣ್ಣು ಮಕ್ಕಳ ರಕ್ಷಣೆ ಮತ್ತು ಹೆಣ್ಣು ಮಕ್ಕಳ ಶಿಕ್ಷಣ, ಲಿಂಗ ಅನುಪಾತ, ಮಹಿಳಾ ಸಬಲೀಕರಣ ಮತ್ತು ಹೆಣ್ಣು ಭ್ರೂಣಹತ್ಯೆ ತಡೆಗಟ್ಟುವುದರ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ನರೇಂದ್ರ ಮೋದಿ ಸರಕಾರ ಬೇಟಿ ಬಚಾವೋ- ಬೇಟಿ ಪಡಾವೋ(ಹೆಣ್ಣು ಮಗುವನ್ನು ಉಳಿಸಿ-ಹೆಣ್ಣು ಮಗುವನ್ನು ಓದಿಸಿ)ಎಂಬ ಘೋಷ ವಾಕ್ಯದೊಂದಿಗೆ ಈ ಯೋಜನೆಯನ್ನು ಆರಂಭಿಸಿದೆ!!
‘ಸ್ವಚ್ಛ ಭಾರತ’ ದಂತಯ ಜನಪ್ರಿಯ ಅಭಿಯಾನವನ್ನು ಜಾರಿಗೆ ತಂದಿರುವ ಪ್ರಧಾನಿ ನರೇಂದ್ರ ಮೋದಿ, ಬೇಟಿ ಬಚಾವೋ, ಬೇಟಿ ಪಡಾವೋ ಅಭಿಯಾನಕ್ಕೆ ಜ.22, 2015ರಂದು ಚಾಲನೆ ನೀಡಿದ್ದು, ಹೆಣ್ಣುಮಕ್ಕಳ ವಿದ್ಯಾಭ್ಯಾಸ ಮತ್ತು ಸಾಮಾಜಿಕ ಭದ್ರತೆಗಳನ್ನು ಉತ್ತೇಜಿಸುವುದೇ ಈ ಯೋಜನೆಯ ಮೂಲ ಉದ್ದೇಶವಾಗಿದೆ!!! ಅಷ್ಟೇ ಅಲ್ಲದೇ, ಹೆಣ್ಣು ಮಕ್ಕಳ ಶಿಕ್ಷಣ, ಅವರ ರಕ್ಷಣೆ, ಭ್ರೂಣ ಹತ್ಯೆ ತಡೆ ಸೇರಿದಂತೆ ಹೆಣ್ಣು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಬೇಟಿ ಬಚಾವೋ, ಬೇಟಿ ಪಡಾವೋ ಅಭಿಯಾನವನ್ನು ಹಮ್ಮಿಕೊಂಡಿದೆ.
ಮೊದಲ ಹಂತದಲ್ಲಿ ದೇಶದ ಹಿಂದುಳಿದ 100 ಜಿಲ್ಲೆಗಳಲ್ಲಿ ಇದು ಚಾಲ್ತಿಗೆ ಬಂದಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರ ಬಜೆಟ್ನಲ್ಲಿ ಈ ಯೋಜನೆಗಾಗಿ ನೂರು ಕೋಟಿ ಹಣ ಮೀಸಲಿಟ್ಟಿತ್ತು. 2017ರ ವೇಳೆಗೆ ಹೆಣ್ಣು ಮಕ್ಕಳ ಶಿಕ್ಷಣ, ಪೌಷ್ಠಿಕಾಂಶದ ಕೊರತೆ ನೀಗಿಸುವುದು, ಭ್ರೂಣ ಹತ್ಯೆ ತಡೆ ಸೇರಿದಂತೆ ಕೆಲವು ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಅಷ್ಟೇ ಅಲ್ಲದೇ, ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಪುರುಷರಿಗೆ ಸರಿಸಮನಾಗಿ ಬೆಳೆಸುವಂತೆ ನೋಡಿಕೊಳ್ಳುವುದು, ಹೆಣ್ಣು ಮಕ್ಕಳ ಬಗ್ಗೆ ಸಮಾಜದಲ್ಲಿರುವ ಧೋರಣೆಯನ್ನು ಹೋಗಲಾಡಿಸುವುದು, ಅವರನ್ನು ಸಬಲೆಯನ್ನಾಗಿ ಮಾಡುವುದು ಇದರ ಮುಖ್ಯ ಗುರಿಯಾಗಿದೆ!!!
ಬೇಟಿ ಬಚಾವೋ-ಬೇಟಿ ಪಡಾವೋ ಯೋಜನೆ ಉದ್ಘಾಟನೆ ವೇಳೆ ಪ್ರಧಾನಿ ನರೇಂದ್ರ ಮೋದಿಯವರ ಮನದಾಳದ ಮಾತುಗಳು!!!
* ಊಟದ ವೇಳೆ ಮಗಳಿಗೆ ಒಂದು ಚಮಚ ತುಪ್ಪ, ಮಗನಿಗೆ ಎರಡು ಚಮಚ ತುಪ್ಪ ಹಾಕುತ್ತೀರ. ಏಕೆ ಎಂದು ಕೇಳಿದರೆ ಮಗಳು ಬೇರೆ ಮನೆಗೆ ಹೋಗುವವಳು ಎಂಬ ಉತ್ತರ ಬರುತ್ತದೆ. ಬೇರೆ ಮನೆಗೆ ಹೋಗುವ ಆಕೆ ಅದನ್ನು ತನ್ನ ಮನೆಯೆಂದು ಭಾವಿಸುತ್ತಾಳೆ. ಅಲ್ಲಿ ಆಕೆ ತೋರುವ ಉತ್ತಮ ನಡೆತೆಯಿಂದ ಹೆಸರು ಬರುವುದು ಆಕೆಯ ತಂದೆ ತಾಯಿಗೆ. ಹೀಗಿರುವಾಗ ಮಗ ಹೆಚ್ಚು ಮಗಳು ಕಡಿಮೆ ಎಂಬ ಧೋರಣೆ ಏಕೆ?
* ವೃದ್ಧಾಪ್ಯದಲ್ಲಿ ಗಂಡು ಮಕ್ಕಳು ನೋಡಿಕೊಳ್ಳುತ್ತಾರೆ ಎಂಬ ಭ್ರಮೆಯಿಂದ ಹೊರಗೆ ಬನ್ನಿ. ಒಂದು ವೇಳೆ ಅದು ನಿಜವಾಗಿದ್ದಿದ್ದರೆ ಇಷ್ಟೊಂದು ವೃದ್ಧಾಶ್ರಮಗಳಿರುತ್ತಿರಲಿಲ್ಲ. ಸುಖದಿಂದ ಬಾಳುತ್ತಿರುವ ಮಗ ಅಪ್ಪ-ಅಮ್ಮನನ್ನು ವೃದ್ಧಾಶ್ರಮಕ್ಕೆ ಕಳಿಸುತ್ತಾನೆ. ಆದರೆ ಮಗಳು ಶಿಕ್ಷಕಿಯಾಗಿ, ಟೈಲರಿಂಗ್ ಮಾಡುತ್ತಾ ಅಪ್ಪ-ಅಮ್ಮನ ಸುಖಕ್ಕಾಗಿ ಬದುಕುತ್ತಾಳೆ.
* ಕಲ್ಪನಾ ಚಾವ್ಲಾರಂಥ ನಾಡಿನಲ್ಲಿ ಕೋಟ್ಯಾಂತರ ಕಲ್ಪನಾ ಚಾವ್ಲಾರನ್ನು ಹೊಟ್ಟೆಯಲ್ಲೇ ಕೊಲ್ಲಬೇಡಿ.
* ನಾವು 21ನೇ ಶತಮಾನದಲ್ಲಿ ಬದುಕುತ್ತಿದ್ದೇವೆ ಎನ್ನುವ ಅರ್ಹತೆ ನಮಗಿಲ್ಲ. ನಾವಿನ್ನೂ 18ನೇ ಶತಮಾನದಲ್ಲಿ ಬದುಕುತ್ತಿದ್ದೇವೆ. ಆಗಿನ ಕಾಲದಲ್ಲಿ ಹೆಣ್ಣು ಮಗುವನ್ನು ಹಾಲಿನಲ್ಲಿ ಮುಳುಗಿಸಿ ಸಾಯಿಸುತ್ತಿದ್ದರು. ನಾವು ಅವರಿಗಿಂತ ಕ್ರೂರರಾಗಿದ್ದೇವೆ. ಮಗು ತಾಯಿಯ ಮುಖ ನೋಡುವ ಮೊದಲೇ ಭ್ರೂಣದಲ್ಲೇ ಆಕೆಯನ್ನು ಕೊಲ್ಲುತ್ತಿದ್ದೇವೆ.
* ಕೆಲವು ವರ್ಷಗಳ ಹಿಂದೆ ಬಾಲಕನೊಬ್ಬ ಕೊಳವೆ ಬಾವಿಗೆ ಬಿದ್ದಾಗ ಇಡೀ ದೇಶವೇ ಊಟ ಬಿಟ್ಟು ಟಿವಿ ಮುಂದೆ ಕೂತಿತ್ತು. ಪ್ರಿನ್ಸ್(ಕೊಳವೆಗೆ ಬಿದ್ದ ಬಾಲಕ) ಹೊರಗೆ ಬರುವವರೆಗೂ ದೇಶ ಸಂವೇದನಾಶೀಲವಾಗಿತ್ತು. ಆದರೆ ಪಕ್ಕದ ಮನೆಯಲ್ಲಿ ಭ್ರೂಣ ಹತ್ಯೆಯಾದರೂ ಮಾತನಾಡುವುದಿಲ್ಲ.
* ಮಾನಸಿಕ ಸಂತುಲನ ಕಳೆದುಕೊಂಡವರಷ್ಟೇ ಭ್ರೂಣ ಹತ್ಯೆ ಮಾಡುತ್ತಾರೆ.
* ಶಿಕ್ಷಣ, ಆರೋಗ್ಯ, ಕೃಷಿ, ಪಶುಸಂಗೋಪನೆ ಮತ್ತು ಸೇವಾ ಕ್ಷೇತ್ರಗಳಲ್ಲಿ ಮಹಿಳೆಯರೇ ಮುಂದಿದ್ದಾರೆ.
* ಸಾವಿರ ಗಂಡು ಶಿಶುವಿಗೆ ಸಾವಿರ ಹೆಣ್ಣು ಶಿಶು ಬೇಕೇ ಬೇಕು. ಇಲ್ಲದಿದ್ದರೆ ಸಮಾನದಲ್ಲಿ ಅಶಾಂತಿ ತಲೆದೋರುತ್ತದೆ. ಈಗಿರುವ ಪರಿಸ್ಥಿತಿಯಲ್ಲಿ ಸಾವಿರಕ್ಕೆ ಸುಮಾರು 150ಕ್ಕೂ ಹೆಚ್ಚು ಜನರು ಅವಿವಾಹಿತರಾಗೇ ಉಳಿಯಬೇಕಾಗುತ್ತದೆ. ಭ್ರೂಣ ಹತ್ಯೆ ಸಂಪೂರ್ಣ ಸ್ಥಗಿತಗೊಂಡರೆ ಲಿಂತಾನುಪಾತ ಅಸಮತೋಲನ ಹೊಡೆದು ಹಾಕಲು ಮುಂದಿನ 100 ವರ್ಷಗಳ ಕಾಲಾವಕಾಶ ಬೇಕು.
* ಹೆಣ್ಣು ಮಕ್ಕಳನ್ನು ಸಾಯಿಸಲೆಂದೇ ಅಪೌಷ್ಠಿಕತೆಯಿಂದ ನರಳುವಂತೆ ಮಾಡುತ್ತಾರೆ. ಪೆÇೀಷಕರು ಕಟುಕರಾಗಬಾರದು.
* ನಿಜ ಹೇಳಿ. ನಿಮಗೆ ಅನಾರೋಗ್ಯವಾದಾಗ ಶುಶ್ರೂಷೆ ಮಾಡುವುದು ಮಗನೋ? ಮಗಳೋ?
* ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿರುವ ವೈದ್ಯರೇ, ಪ್ರಾಣ ಉಳಿಸಲು, ಜನರ ರೋಗ ನಿವಾರಣೆ ಮಾಡಲು ನೀವು ಶಿಕ್ಷಣ ಪಡೆದಿದ್ದೀರಿ. ನಿಮಗೆ ಹಣ ಮಾಡಲು ಸಿಕ್ಕಿದ್ದು ಭ್ರೂಣ ಹತ್ಯೆ ಕಾಯಕವೇ? ಈ ಪಾಪ ಕೃತ್ಯದ ಮೂಲಕ ಸಮಾಜಕ್ಕೆ ದ್ರೋಹವೆಸಗುತ್ತಿದ್ದೀರಿ. ನಿಮ್ಮ ಅತ್ತೆ ಮಾವಂದಿರು ಹೆಣ್ಣು ಭ್ರೂಣ ಹತ್ಯೆ ಮಾಡಿಸಿಕೊಂಡಿದ್ದಿದ್ದರೆ ನೀವು ರಾತ್ರಿ ಕೆಲಸ ಮುಗಿಸಿ ಮನೆಗೆ ಹೋದಾಗ ಊಟ ನೀಡಲು ನಿಮ್ಮ ಪತ್ನಿ ಇರುತ್ತಿರಲಿಲ್ಲ.
* ನಿಮ್ಮ ಸೊಸೆಯಾಗಿ ಬರುವವಳು ವಿದ್ಯಾವಂತಳಾಗಿರಬೇಕೆಂದು ಬಯಸುತ್ತೀರ. ಆದರೆ ನಿಮ್ಮದೇ ಮಗಳನ್ನು ಶಿಕ್ಷಣದಿಂದ ವಂಚಿತಳನ್ನಾಗಿಸುವುದು ಯಾವ ನ್ಯಾಯ?
* ಈ ದೇಶದ ಪ್ರಧಾನಿ ಭಿಕ್ಷುಕನಾಗಿ ನಿಮ್ಮ ಮುಂದೆ ನಿಂತು ಬೇಡುತ್ತಿದ್ದೇನೆ, ಹೆಣ್ಣು ಭ್ರೂಣ ಹತ್ಯೆ ಮಾಡಬೇಡಿ!!! ಎಂದಿದ್ದಾರೆ….
ಇನ್ನು ಮಕ್ಕಳ ಲಿಂಗಾನುಪಾತ ಹಾಗೂ ಮಹಿಳಾ ಸಬಲೀಕರಣದ ಸಮಸ್ಯೆಗಳಿಗೆ ಈ ಯೋಜನೆ ಉತ್ತರ ಕಂಡುಕೊಳ್ಳಲಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಮಾನವ ಸಂಪನ್ಮೂಲಾಭಿವೃದ್ಧಿ ಇಲಾಖೆಗಳ ಜಂಟಿ ಚಿಂತನೆಯ ಫಲವಾಗಿ ಈ ಯೋಜನೆ ರೂಪಿತವಾಗಿದೆ. ಇನ್ನು ತರಬೇತಿ, ವಿಚಾರದ ಅರಿವು, ಜಾಗೃತಿ ಕಾರ್ಯಕ್ರಮಗಳು ಮತ್ತು ತಳಮಟ್ಟದಲ್ಲಿ ಸಮುದಾಯಗಳನ್ನು ಒಗ್ಗೂಡಿಸುವ ಮೂಲಕ ಜನರ ಮನಸ್ಸಿನಲ್ಲಿಯೇ ಬದಲಾವಣೆ ತರುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.
ಎನ್ ಡಿ ಎ ಸರಕಾರವು, ಹೆಣ್ಣು ಮಕ್ಕಳ ಬಗೆಗಿನ ಸಮಾಜದ ದೃಷ್ಟಿಕೋನವನ್ನು ಬದಲಾಯಿಸುವ ಉದ್ದೇಶ ಹೊಂದಿದ್ದು, ಪುತ್ರಿಯೊಂದಿಗೆ ಸೆಲ್ಫಿ ಅಭಿಯಾನ ಆರಂಭಿಸಿದ ಹರಿಯಾಣದ ಬಿಬಿಪುರದ ಸರಪಂಚನನ್ನು ಪ್ರಧಾನ ಮಂತ್ರಿ ಮೋದಿಯವರು ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಹೊಗಳಿದ್ದರು. ಇದಾದ ಬಳಿಕ ಪ್ರಧಾನ ಮಂತ್ರಿಯವರು ದೇಶದ ಎಲ್ಲಾ ತಂದೆಯಂದಿರಿಗೂ ಮಗಳ ಜೊತೆ ಸೆಲ್ಫಿ ತೆಗೆಸಿಕೊಳ್ಳುವಂತೆ ಕರೆ ನೀಡಿದ್ದರು. ಇದಕ್ಕೆ ಭಾರೀ ಪ್ರತಿಕ್ರಿಯೆ ಲಭ್ಯವಾಗಿತ್ತು. ಕೇವಲ ಭಾರತವಷ್ಟೇ ಅಲ್ಲ, ವಿದೇಶಗಳಿಂದಲೂ ಜನರು ತಮ್ಮ ಮಗಳ ಜೊತೆ ಸೆಲ್ಫಿ ತೆಗೆಸಿಕೊಂಡಿದ್ದರು. ಅಲ್ಲದೆ, ಇದು ಹೆಣ್ಣು ಮಕ್ಕಳನ್ನು ಹೊಂದಿರುವ ತಂದೆಯಂದಿರಿಗೆ ಹೆಮ್ಮೆಯ ಕ್ಷಣವೂ ಆಗಿತ್ತು.
ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯನ್ನು ಆರಂಭಿಸಿದ ಬಳಿಕ ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಬಹುಸ್ತರೀಯ ಜಿಲ್ಲಾ ಕಾರ್ಯ ಯೋಜನೆಯನ್ನು ಜಾರಿಗೆ ತರಲಾಗಿದೆ. ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಹೆಚ್ಚಿನ ತರಬೇತಿ ನೀಡುವ ಉದ್ದೇಶದಿಂದ, ತರಬೇತುದಾರರಿಗೆ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈಗಾಗಲೇ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 9 ಹಂತದ ತರಬೇತಿಗಳನ್ನು ನಡೆಸಿದೆ.
ಸಮುದಾಯಗಳನ್ನು ದೊಡ್ಡ ಮಟ್ಟದಲ್ಲಿ ತಲುಪಲು, ಯೋಜನೆಯ ಮಾಹಿತಿಯನ್ನು ಜನರಿಗೆ ತಿಳಿಸಲು ಬಾರೀ ಪ್ರಮಾಣದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶಾಲೆಗಳು, ಸೇನಾ ಶಾಲೆಗಳು ಮತ್ತು ಸರಕಾರಿ ಇಲಾಖೆಗಳನ್ನು ಬಳಸಿಕೊಂಡು ಹಲವು ಸಮಾವೇಶಗಳನ್ನು ಆಯೋಜಿಸಲಾಗಿದೆ. ಈಗಿನ ಜನತೆ ಒಡಲೊಳಗಿರುವ ಭ್ರೂಣ ಹೆಣ್ಣೆಂದು ತಿಳಿದೊಡನೆ ತೆಗಿಸಿಬಿಡುವ ಮನಸ್ಥಿತಿ ಹೊಂದಿದ್ದಾರೆ. ಆದರೆ ಇದೇ ಕೆಲಸ ತನ್ನ ಅಜ್ಜ ಮಾಡಿದ್ದರೆ ತನಗೆ ಶ್ರೇಷ್ಠ ತಾಯಿ ಸಿಗುತ್ತಿರಲಿಲ್ಲಾ ಎಂದು ಯಾವತ್ತು ಯೋಚಿಸುವುದಿಲ್ಲ! ಅಷ್ಟೇ ಅಲ್ಲದೇ, ಇದೇ ಕೆಲಸ ತನ್ನ ತಂದೆ ಮಾಡಿದ್ದರೆ ಮುದ್ದಿನ ಅಕ್ಕ/ ತಂಗಿಯರು ಸಿಗುತ್ತಿರಲಿಲ್ಲಾ ಎಂದಲ್ಲದೇ, ಗಂಡಿನ ಆಶ್ರಯವಿಲ್ಲದೆ ಹೆಣ್ಣಿನ ಬದುಕು ಪರಿಪೂರ್ಣವಾಗುತ್ತದೆಯೋ ಇಲ್ಲವೊ ನನಗೆ ತಿಳಿದಿಲ್ಲಾ ಆದರೆ ಹೆಣ್ಣಿನ ಆಶ್ರಯ(ಪ್ರೀತಿ ಮಮತೆ ಮಮಕಾರ. ..ಇತ್ಯಾದಿ)ವಿಲ್ಲದೆ ಯಾವ ಗಂಡಿನ ಬದುಕು ಪರಿಪೂರ್ಣವಾಗಲು ಸಾದ್ಯವೇ ಇಲ್ಲಾ ಎನ್ನುವುದನ್ನು ತಿಳಿದುಕೊಳ್ಳುವುದು ಅತೀ ಮುಖ್ಯ!!!
-ಅಲೋಖಾ